ಲಕ್ಷ್ಮಣ ಫಲ ಮತ್ತು ಸೀತಾಫಲ

ಲಕ್ಷ್ಮಣ ಫಲ ಮತ್ತು ಸೀತಾಫಲ

ಪುಸ್ತಕದ ಲೇಖಕ/ಕವಿಯ ಹೆಸರು
ಮುನಿಯಾಲ್ ಗಣೇಶ್ ಶೆಣೈ
ಪ್ರಕಾಶಕರು
ನಾಲಂದಾ ಸಾಹಿತ್ಯ, ಖಾರ್ವಿಕೇರಿ ರಸ್ತೆ, ಕುಂದಾಪುರ -೫೭೬೨೦೧
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ೨೦೧೫

ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

ಲಕ್ಸ್ಮಣ ಫಲ, ಸೀತಾಫಲ, ರಾಮಫಲ ಮುಂತಾದುವುಗಳು ಬಹು ಆರೋಗ್ಯಕರ ಹಾಗೂ ರುಚಿಕರ ಹಣ್ಣುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. “ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗೆ ಪರಿಣಾಮಕಾರಿ ಔಷಧಿಯೆಂದು ಪ್ರಚಾರವನ್ನು ಗಳಿಸಿರುವ ಲಕ್ಷ್ಮಣ ಫಲ ಮತ್ತು ಬಲು ಹಿಂದಿನಿಂದಲೂ ಜಗತ್ತಿನಾದ್ಯಂತ ಬಳಕೆಯಲ್ಲಿರುವ ಸೀತಾಫಲ - ಈ ಎರಡು ಹಣ್ಣುಗಳು ಸ್ವಾದಿಷ್ಟವೂ, ಔಷಧೀಯ ಗುಣಗಳಿಂದ ಸಮೃದ್ಧವೂ ಆಗಿವೆ. ಇವನ್ನು ಬಹುಸುಲಭವಾಗಿ ಬೆಳೆಸಿ ಪ್ರಯೋಜನವನ್ನು ಹೊಂದಬಹುದು.” ಎನ್ನುವುದು ಬೆನ್ನುಡಿಯಲ್ಲಿ ಕಂಡ ಬರಹ.

ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಅವರು ‘ಸಸ್ಯ ಸಂಪದ' ಪರಿಕಲ್ಪನೆಯ ಬಗ್ಗೆ ಹೇಳುವುದು ಹೀಗೆ..." ಕಳೆದ ಮೂರು ದಶಕಗಳಿಂದ ನಾನು ಗಿಡಮರಗಳ ಕುರಿತು ಆಸಕ್ತಿ ತಾಳಿದ್ದೇನೆ. ನಮ್ಮ ಸುತ್ತಲೂ ಇರುವ ಸಾವಿರಾರು ಬಗೆಯ ಗಿಡಮರ ಬಳ್ಳಿಗಳು ಒಂದೊಂದು ಹೊಸ ಜಗತ್ತನ್ನು ತೆರೆದಿಟ್ಟಿವೆ. ನಮ್ಮ ದೇಶದ ಒಂದೊಂದು ಪ್ರದೇಶದಲ್ಲೂ ನೂರಾರು ವರ್ಷಗಳಿಂದ ಬೆಳೆದು ಬಂದಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಲವಾರು ಗಿಡಗಳನ್ನು ಬಳಸುತ್ತ ಬಂದಿದ್ದಾರೆ. ಈಗಲೂ ಆಧುನಿಕ ವೈದ್ಯಕೀಯ ಭರಾಟೆಯ ನಡುವೆಯೂ ಹಳ್ಳಿ ಮದ್ದುಗಳು ಅಪಾರ ಜನಪ್ರಿಯತೆಯನ್ನು ಗಳಿಸಿರಲು ಗಿಡಮರಗಳ ಕೊಡುಗೆ ಅನನ್ಯವಾದುದು.

ಒಂದೊಂದು ಗಿಡವೂ ಅಪಾರ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುತ್ತವೆ. ಈ ಸಸ್ಯಗಳ ಕುರಿತು ಇರುವ ಸಸ್ಯ ವೈಜ್ಞಾನಿಕ ಮಾಹಿತಿ, ಅವುಗಳ ಕೃಷಿ ವಿಧಾನ, ಆರ್ಥಿಕವಾಗಿ ಅವುಗಳ ಮಹತ್ವ, ಔಷಧವಾಗಿ ಅವುಗಳ ಬಳಕೆ, ಆಯುರ್ವೇದದಲ್ಲಿ ಇಂತಹ ಗಿಡಗಳ ಮಹತ್ವ, ಆಧುನಿಕ ಸಂಶೋಧಕರ ದೃಷ್ಟಿಯಲ್ಲಿ ಈ ಸಸ್ಯಗಳ ಪಾತ್ರ - ಇಂತಹ ಸಂಗತಿಗಳ ಬಗೆಗೆ ಅಧ್ಯಯನವನ್ನು ಮಾಡುತ್ತ ಬಂದಿರುವ ನಾನು ಇವನ್ನೆಲ್ಲ ಪುಸ್ತಕಗಳ ರೂಪದಲ್ಲಿ ನಿಮ್ಮ ಕೈಗಿಡುವ ಪ್ರಯತ್ನ ಮಾಡುತ್ತಿದ್ದೇನೆ.”

ಲಕ್ಷ್ಮಣ ಫಲ ಮತ್ತು ಸೀತಾಫಲ ಪುಸ್ತಕದ ಪ್ರಸ್ತಾವನೆಯಲ್ಲಿ ಲೇಖಕರು “ ಇತೀಚೆಗೆ ಕನ್ನಡದ ಕೆಲವು ಪತ್ರಿಕೆಗಳಲ್ಲಿ ಲಕ್ಷ್ಮಣ ಫಲವನ್ನು ಕುರಿತು ಲೇಖನಗಳು ಬಂದವು. ಕ್ಯಾನ್ಸರ್ ರೋಗಿಗಳಿಗೆ ಇದು ಪ್ರಯೋಜನಕಾರೊಯೆಂದು ಈ ಲೇಖನಗಳಲ್ಲಿ ತಿಳಿಸಲಾಗಿತ್ತು. ಇದು ಲಕ್ಷಾಂತರ ಜನರಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿತು. ಏಕೆಂದರೆ ಈ ಹಿಂದೆ ತೀರಾ ಅಪರೂಪದ ನಿದರ್ಶನವಾಗಿದ್ದ ಕ್ಯಾನ್ಸರ್ ಎಂಬುದು ಈಗ ಸರ್ವೇ ಸಾಮಾನ್ಯವಾಗಿದೆ. ಬಡವ ಬಲ್ಲಿದನೆಂಬ ಭೇಧವಿಲ್ಲದೆ ಎಲ್ಲರಲ್ಲೂ ಕಾಡುವ ಈ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರು ವೈದ್ಯರಿಂದ ವೈದ್ಯರಲ್ಲಿ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಾರೆ. ಹೀಗೆ ಸುತ್ತಾಡುತ್ತಾ ಇದ್ದ ಹಣ ಖಾಲಿ ಮಾಡಿಕೊಂಡು ಸಾಕಷ್ಟು ಸಾಲವನ್ನು ಮಾಡಿದ ನಂತರ ವೈದ್ಯರು ಕೈಚೆಲ್ಲುತ್ತಾರೆ. ‘ಹೆಚ್ಚೆಂದರೆ ಆರು ತಿಂಗಳು' ಎಂದು ವೈದ್ಯರು ಹೇಳಿದಾಗ ಕಂಗಾಲಾದ ರೋಗಿ ಮತ್ತು ರೋಗಿಯ ಸಂಬಂಧಿಕರು ಯಾರದೋ ಮಾತು ಕೇಳಿ ಗಿಡಮೂಲಿಕಾ ವೈದ್ಯ ಅಥವಾ ಆಯುರ್ವೇದದ ಕಡೆಗೆ ಗಮನ ಹರಿಸುತ್ತಾರೆ.

ಕ್ಯಾನ್ಸರ್ ನಿವಾರಕ ಗುಣವಿರುವ ಹಣ್ಣು ಲಕ್ಷ್ಮಣ ಫಲ ಒಂದೇ ಅಲ್ಲ. ನಾವು ಈ ಈಗಾಗಲೇ ಬಳಸುತ್ತಿರುವ ನೂರಾರು ಸಸ್ಯಜನ್ಯ ವಸ್ತುಗಳಲ್ಲಿ ಕ್ಯಾನ್ಸರ್ ನಿವಾರಕ ಗುಣವಿದೆ. ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಅರಶಿನ ಅಧ್ಬುತ ಕ್ಯಾನ್ಸರ್ ನಿವಾರಕ ಗುಣವನ್ನು ಹೊಂದಿದೆ. ಅನೇಕ ತರಕಾರಿಗಳು, ಹಣ್ಣು ಹಂಪಲು ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುತ್ತವೆ. ” ಎಂದಿದ್ದಾರೆ.

ಈ ಕೃತಿಯಲ್ಲಿ ಲೇಖಕರು ಲಕ್ಷ್ಮಣ ಫಲದ ಸಸ್ಯ ಪರಿಚಯ, ಕೃಷಿ, ಉಪಯೋಗಗಳು, ಸಂಶೋಧನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಸೀತಾಫಲ ಸಸ್ಯದ ಕುರಿತಾದ ಸಸ್ಯ ಪರಿಚಯ, ಕೃಷಿ, ಉಪಯೋಗಗಳು, ಔಷಧೀಯ ಗುಣಗಳು ಮತ್ತು ಸಂಶೋಧನೆಗಳಕುರಿತಾದ ಮಾಹಿತಿಗಳೂ ಈ ಕೃತಿಯಲ್ಲಿವೆ. ಪುಸ್ತಕದಲ್ಲಿ ಲೇಖನಕ್ಕೆ ಪೂರಕಾವಾಗಿರುವ ಛಾಯಾಚಿತ್ರಗಳು ಇವೆ. ಸುಮಾರು ೭೦ ಪುಟಗಳ ಈ ಪುಸ್ತಕ ಎರಡು ಹಣ್ಣುಗಳ ಬಗ್ಗೆ ಸಮಗ್ರ ಮಾಹಿತಿ ಹಾಗೂ ಅವುಗಳ ಔಷಧೀಯ ಗುಣಗಳ ಬಗ್ಗೆ ವಿವರಗಳನ್ನು ತೆರೆದಿಡುತ್ತದೆ.