ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ- ಮತ್ತು ಅಣ್ಣಾ ಹಜಾರೆ
ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ "ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ "ಜನ್ ಲೋಕ್ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂ ಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿ ಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನಮ್ಮದೂ ಒಂದು ದನಿ ಇರಲಿ. ಅಣ್ಣಾ ಅವರನ್ನು ಬೆಂಬಲಿಸಿ, ಕೂಡಲೇ ಜನ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ಮುಂದಾಗುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸೋಣ.
ನೀವು ಕೈ ಜೋಡಿಸಿ: ಅನುಕೂಲವಿದ್ದವರು ಬೆಂಗಳೂರಿನಲ್ಲೂ ಏಪ್ರಿಲ್ 5ರಿಂದ 10ರವರೆಗೆ ಸ್ವಾತಂತ್ರ್ಯ ಉದ್ಯಾನವನ (Freedom park)ಅಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು. ಭ್ರಷ್ಟಾಚಾರ ವಿರುದ್ಧ ಏ.5ರಿಂದ ನಡೆದಿರುವ ಈ ಹೋರಾಟಕ್ಕೆ ಲೋಕ್ ಸತ್ತಾ, ಫಾರ್ವರ್ಡ್ 150, ಬನವಾಸಿ ಬಳಗ, ಪ್ರಜಾ, ಎಸ್ ಎನ್ ಎನ್ ಎ, ಅವಿರತ, ಎಡಿಆರ್, ಸ್ವರಾತ್ಮ, ನಮ್ಮ ಬೆಂಗಳೂರು ಪ್ರತಿಷ್ಠಾನ, ದಕ್ಷ್, ಥರ್ಮಲ್ ಅಂಡ್ ಎ ಕ್ವಾರ್ಟರ್, ಎಂಪವರ್ಡ್ ಬೆಂಗಳೂರು, ಸ್ಮಾರ್ಟ್ ವೋಟ್.ಇನ್, ಐ ಪೇಯ್ಡ್ ಬ್ರೈಬ್, ಐ ವೊಂಟ್ ಗೀವ್/ಟೆಕ್ ಬ್ರೈಬ್, ಯುಎನ್ ಒಡಿಸಿ, ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಸ್ವಾಮಿ ವಿವೇಕಾನಂದ ಯುವ ಸಂಘ ಮೈಸೂರು, ಡಬ್ಲ್ಯೂ ಎ ವೈಇ, ಯುವ ಬೆಂಗಳೂರು, ಸಾಕು.ಇನ್ ಸೇರಿದಂತೆ ನಗರದ ಅನೇಕ ಸಂಘ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.