ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ

ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ

ದೇಶದ ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಕೋಟ್ಯಾಂತರ ಪ್ರಕರಣಗಳು ಬಾಕಿ ಇರುವ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸ್ಥಾಪನೆಯ ೭೫ನೇ ವರ್ಷದ ನೆನಪಿಗಾಗಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರಪತಿ, ಹಲವು ಮಹತ್ವದ ಸಂಗತಿಗಳ ಬಗ್ಗೆ ಗಮನ ಸೆಳೆದಿದ್ದಾರೆ. ‘ಪ್ರಕರಣಗಳ ವಿಚಾರಣೆಯನ್ನು ದೀರ್ಘಾವಧಿಗೆ ಮುಂದೂಡುವ ಪದ್ಧತಿ ಕೊನೆಗೊಳ್ಳಬೇಕು. ಈ ಮುಂದೂಡುವ ಸಂಸ್ಕೃತಿ ಜನರಲ್ಲಿ ಕಾನೂನು ಪ್ರಕ್ರಿಯೆ ಕುರಿತಾಗಿ ಒತ್ತಡ ಮೂಡಿಸುತ್ತಿದೆ. ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ನೆನೆಗುದಿಗೆ ಬಿದ್ದಿರುವುದು ನಮಗೆಲ್ಲ ದೊಡ್ಡ ಸವಾಲಾಗಿದೆ. ನ್ಯಾಯದ ರಕ್ಷಣೆ ಮಾಡುವುದು ಎಲ್ಲ ನ್ಯಾಯಾಧೀಶರ ಜವಾಬ್ದಾರಿಯಾಗಿದೆ.’ ಎಂದೂ ಹೇಳಿದ್ದಾರೆ. ‘ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತವಾಗಿ ತೀರ್ಪು ಪ್ರಕಟವಾಗಬೇಕು. ಇದರಿಂದ ಅವರಲ್ಲಿ ಸುರಕ್ಷೆಯ ಭಾವನೆ ಹೆಚ್ಚುತ್ತದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಬೆನ್ನಲ್ಲೇ, ರಾಷ್ಟ್ರಪತಿ ಕೂಡ ಶೀಘ್ರ ನ್ಯಾಯದಾನದ ಅಗತ್ಯತೆಯನ್ನು ಮರು ಉಚ್ಛರಿಸಿದ್ದಾರೆ. 

ನಮ್ಮಲ್ಲಿ ಅದೆಷ್ಟೋ ಪ್ರಕರಣಗಳು ದಶಕಗಳಿಂದ ಬಾಕಿ ಇವೆ. ಇದರಿಂದ ಅರ್ಜಿದಾರರು ನ್ಯಾಯಪ್ರಾಪ್ತಿಯ ನಿರೀಕ್ಷೆಯಲ್ಲೇ ದಿನ ಕಳೆಯುವಂತಾಗಿದೆ. ಸುಪ್ರೀಂ ಕೋರ್ಟ್ ನ ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ ( ಎನ್ ಜೆ ಡಿ ಜಿ) ದಾಖಲಿಸಿರುವ ಮಾಹಿತಿಯ ಪ್ರಕಾರ, ದೇಶಾದ್ಯಂತ ೪.೪೬ ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇವೆ. ಇದರಲ್ಲಿ ೧.೦೯ ಕೋಟಿ ಸಿವಿಲ್ ಕೇಸ್ ಗಳು, ೩.೩೬ ಕೋಟಿ ಕ್ರಿಮಿನಲ್ ಕೇಸ್ ಗಳು ಇವೆ. ಈ ಪೈಕಿ ಶೇಕಡ ೮೦ಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳಲ್ಲೇ ಬಾಕಿ ಇವೆ ಎಂಬುದು ಗಮನಾರ್ಹ. ಒಟ್ಟು ಪ್ರಕರಣಗಳ ಪೈಕಿ ೫.೩೨ ಲಕ್ಷ ಕೇಸ್ ಗಳು ಕಳೆದ ಇಪ್ಪತ್ತು - ಮೂವತ್ತು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಇದಕ್ಕೆ ನ್ಯಾಯಾಂಗವೊಂದನ್ನೇ ಹೊಣೆ ಮಾಡಲು ಆಗದು. ಇದರಲ್ಲಿ ಸರ್ಕಾರಗಳ, ಸಾರ್ವಜನಿಕರ, ಅಧಿಕಾರಿಗಳು -ವಕೀಲರು ಮುಂತಾದವರ ಪಾತ್ರವೂ ಇದೆ. ಪ್ರಕರಣಗಳು ಬಾಕಿ ಉಳಿಯುವುದನ್ನು ಮುಂದುವರಿಸಲು ಬಿಡದೆ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಒಂದಿಷ್ಟು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಮತ್ತು ಇಷ್ಟು ದೊಡ್ದ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರಲು ಕಾರಣಗಳನ್ನು ಪತ್ತೆ ಮಾಡಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ನ್ಯಾಯಾಲಯಗಳು ಇತೀಚಿನ ದಿನಗಳಲ್ಲಿ ಆಧುನೀಕರಣಕ್ಕೆ ತೆರೆದುಕೊಂಡಿದ್ದು, ಕೃತಕ ಬುದ್ಧಿಮತ್ತೆ ಹಾಗೂ ಇತರ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ, ಇದೆಲ್ಲದರ ಫಲವಾಗಿ, ರಾಷ್ಟ್ರಪತಿ ಹೇಳಿರುವಂತೆ ತ್ವರಿತವಾಗಿ ನ್ಯಾಯದಾನವಾಗಬೇಕು. ವಿಳಂಬ ಪ್ರವೃತ್ತಿ ಕೊನೆಗೊಳ್ಳಬೇಕು. ಏಕೆಂದರೆ, ‘ನ್ಯಾಯದಾನದ ವಿಳಂಬವು ನ್ಯಾಯವನ್ನೇ ನಿರಾಕರಿಸಿದಂತೆ' ಎಂಬ ಪ್ರಸಿದ್ಧ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ. ೦೨-೦೯-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ