ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಒಂದು ಹಾಡಿನ ಭಾವ ವಿಸ್ತರಣೆ

ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಒಂದು ಹಾಡಿನ ಭಾವ ವಿಸ್ತರಣೆ

 ಕಾರ್ತಿಕ ಶುದ್ಧ ಪೌರ್ಣಿಮೆ, ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಜನ್ಮ ದಿನ. ಅವರ ಜೀವನ, ವ್ಯಕ್ತಿತ್ವ, ಸಾಧನೆಗಳ ಸುದೀರ್ಘ ವಿವರಣೆ ಈ ಲೇಖನದ ಉದ್ದೇಶವಲ್ಲ. ’ಶ್ರೀಪ್ರಸನ್ನತೀರ್ಥರೇನು, ಅಪರೋಕ್ಷಜ್ಞಾನಿಗಳೇ?’ ಎಂಬ ಪಂಡಿತೋತ್ತಮರ ತಾತ್ಸಾರದ ಮೇಧಾವಿತ್ವಕ್ಕೆ ಉತ್ತರಿಸುವ ಆಶಯವೂ ಇಲ್ಲಿಲ್ಲ. ಸ್ವಾಮಿಗಳ ಸುಮಾರು ಮುನ್ನೂರು ಹಾಡುಗಳ ಪೈಕಿ ಒಂದು ಹಾಡಿನ ಭಾವಬಂಧುರತೆಯನ್ನು ಮಾತ್ರಾ ಇಲ್ಲಿ ಸಹೃದಯರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.
 ’ಮನವು ನೆಮ್ಮದಿಯಾಗಲಿ’ ಎಂಬ ಅಪ್ರಚಲಿತ ಹಾಡು, ಅದು. ನುದಿನವು ತಮ್ಮ ಆರಾಧ್ಯ ದೈವವನ್ನು ಮನಸರ ಪೂಜಿಸಲಾಗದೆ ಹಾಗೊಮ್ಮೆ ಹೀಗೊಮ್ಮೆ ತೊಳಲಾಡಿದ ಪ್ರಾಮಾಣಿಕ ಭಕ್ತನ ಅರಂಭಿಕ ಬೇಗೆ ಉದ್ವೇಗಗಳನ್ನು ಸ್ವಾಮಿಗಳು ಈ ಹಾಡಿನಲ್ಲಿ ತೋಡಿಕೊಂಡಿದ್ದಾರೆ. ಸ್ವಾಮಿಪಟ್ಟದವರೊಬ್ಬರ ಸಾಂಪ್ರದಾಯಕ ವೇದಿಕೆ ಉಪದೇಶ-ಉಪನ್ಯಾಸಕ್ಕೆ ಮೀರಿದ ಪ್ರಾಂಜಲತೆ ಇಲ್ಲಿ ಹೃದ್ಭೇದಕವಾಗಿ ಒಡಮೂಡಿಬಂದಿದೆ. ಅವರ ಬೇರೆ ಹಾಡುಗಳನ್ನು ಹೃತ್ಪೂರ್ವಕವಾಗಿ ಅವಲೋಕಿಸಿದಾಗ, ಇದರಲ್ಲಿ ಅವರ ಸ್ವಾನುಭವದ ಸಂವೇದನೆ ಗಾಢವಾಗಿ ಕಂಡುಬರುತ್ತದೆ. ’ಹೀನ ಜನರು ಅವಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ; ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲವೀಯುವ ಅಂಬುಜನಾಭನ’ ಕರುಣೆಯನ್ನು, ಮುಂದೊಮ್ಮೆ, ವ್ಯಕ್ತಿತ್ವದೊಳಗಿನಿಂದ ಅನುಭವಿಸಿದವರು, ಅವರು. ’ನರಿಗಳ ಕೂಗಿಗೆ ಹರಿ (ಸಿಂಹ) ಅಂಜದಂತೆ; ಬಿರುಗಾಳಿಗೆ ದೊಡ್ಡ ಗಿರಿ ನಡುಗದಂತೆ’ ಶ್ರೀ ನರಹರಿಯ ಕರುಣೆಗೆ ’ಸಾಕ್ಷಿ’ಯಾದ ಅವರು ಆರಂಭಿಕ ದಿನಗಳಲ್ಲಿ, ಅವರ ಮನಸ್ಥಿತಿ, ದೃಢತೆ ಸಾಧಿಸುವ ತಪದಲ್ಲಿ ಬೇಯುತ್ತಿತ್ತು. ಆ ಸಾಧಕತನದ ಪ್ರಾಮಾಣಿಕತೆಯನ್ನು, ಸ್ವಾಮಿಗಳು ಇಲ್ಲಿ ಬಿಚ್ಚಿಟ್ಟಿದ್ದಾರೆ.
 ನಾಡಿನ ವಿಖ್ಯಾತ ವಕೀಲರುಗಳ ಪೈಕಿ ಒಬ್ಬರಾಗಿದ್ದ ವೆಂಕಟನರಸಿಂಹಾಚಾರ‍್ಯರು, ಮುನ್ಸಿಫ್ ಮ್ಯಾಜಿಸ್ಟ್ರೇಟ್ ಅಭ್ಯರ್ಥಿಗಳ ಪೈಕಿ ಶಾರ್ಟ್ ಲಿಸ್ಟ್ ಆಗಿದ್ದವರು; ಯಾವುದೇ ಘಳಿಗೆಯಲ್ಲೂ ನೇಮಕಾತಿ ಪತ್ರಕ್ಕಾಗಿ ಎದುರು ನೋಡುತ್ತಿದ್ದವರು; ಲೌಕಿಕದಿಂದ ವಿರಕ್ತರೇನೂ ಆಗಿದ್ದವರಲ್ಲ; ಆಗಿನ ಅವರ ಪ್ರಾಯವೂ ಅಂಥದಾಗಿರಲಿಲ್ಲ. ಮೇಲಾಗಿ ಮಠ-ಮಾನ್ಯಗಳ ಪೀಠಾಧಿಪತ್ಯ, ಈಗಿನಂತೆ ಧನಭೋಗಾಸಕ್ತ ಕ್ಷುದ್ರ ಜೀವಿಗಳ ಕನಸಿನ ಹುದ್ದೆಯಾಗಿದ್ದಿರಲಿಲ್ಲ. ಇವರಿಗೆ ಪೀಠದ ಉತ್ತರಾಧಿಕಾರತ್ವ ವಹಿಸಿಕೊಡುವ ನಿರ್ಧಾರವನ್ನೇನೋ ಶ್ರೀವಿದ್ಯಾವಾರಿಧಿತೀರ್ಥ ಸ್ವಾಮಿಗಳು ಬಹಳ ಮುಂಚಿತವಾಗಿಯೇ ಪ್ರಕಟಿಸಿದ್ದರು. ಆದರೆ ಆ ಸನ್ನಿವೇಶ ಧುತ್ತೆಂದು ಬರುವುದಾಗಿ ವಕೀಲ ವೆಂಕಟನರಸಿಂಹಾಚಾರ‍್ಯರು ನಿರೀಕ್ಷಿಸಿರಲಿಲ್ಲ. ಸನ್ನಿವೇಶಕ್ಕಾಗಿ ಸಾಮ್ಯತೆಗಾಗಿ ಮಾತ್ರಾ ಮಾತ್ರಾ ಈ ಉಪಮೆ ಹೇಳುತ್ತೇನೆ; ವೆಂಕಟನರಸಿಂಹಾಚಾರ‍್ಯರು ಸಹ ಜಯತೀರ್ಥರಂತೆ, ರಾಘವೇಂದ್ರ ಯತಿಗಳಂತೆಯೇ ಸಂನ್ಯಾಸತ್ವ ವಹಿಸಿಕೊಳ್ಳಬೇಕಾಯಿತು.
 ಆ ಗುರುಸಾರ್ವಭೌಮರುಗಳದೇನೋ ಎಲ್ಲ ಆಸ್ತಿಕರೂ ಬಲ್ಲ ಕತೆಯಾಗಿದೆ. ಆದರೆ ಪ್ರಸನ್ನತೀರ್ಥ ಸ್ವಾಮಿಗಳು, ಆ ಯತಿಪ್ರೌಢರು ಸಹ ಅನುಭವಿಸಿರಬಹುದಾದ, ಆ ಕ್ಷಣದ ತುಡಿತ-ತೊಳಲಾಟಗಳನ್ನು, ಈ ಹಾಡಿನಲ್ಲಿ ಸ್ವಾನುಭವದಿಂದ ಪ್ರತ್ಯಕ್ಷೀರಿಸಿದ್ದಾರೆ.
 ಲೌಕಿಕ ಮಹತ್ವಾಕಾಂಕ್ಷೆಯತ್ತ ಹರಿಹಾಯುವ ಮನ. ಆದರೆ ಯತ್ಯಾಶ್ರಮದ ಬೆಟ್ಟದಂತಹ ಹೊಣೆಗಾರಿಕೆ! ಓಡಿ ಹೋಗುವುದೇ? ಇಲ್ಲ! ’ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು, ಕೆಟ್ಟುಹೋಗದೆ ಸತತ ಶುದ್ಧವಿರಲಿ’ ಎಂಬ ಬಲವಂತದ ಸಮಾಧಾನ; ಸಂಯಮ! ಶ್ರೀ ವ್ಯಾಸರಾಯಮಠ ಅನ್ನದಾನಕ್ಕೆ ಪ್ರಸಿದ್ಧವಾಗಿದ್ದ ಕಾಲವದು, ಆ ಜವಾಬ್ದಾರಿ ಮನೋಭಾವ ಸ್ಫುರಿಸಿ, ’ಹೊಟ್ಟೆಪಾಡಿಗೆ ಕೊರತೆಪಡುತಿರುವ ಜನರಲ್ಲಿ ಸಿಟ್ಟು ಬಾರದೆ ಮನಕೆ ತಾಳ್ಮೆಯಿರಲಿ’ ಎಂದು ತಾಳ್ಮೆ ತಂದುಕೊಳ್ಳುತ್ತಾರೆ! ’ನೀರ ಮೇಲಣಗುಳ್ಳೆ ನಿಜವಲ್ಲ, ಹರಿಯೇ’ ಎಂದು ಪುರಂದರದಾಸರು ಯಾವ ಸನ್ನಿವೇಶದಲ್ಲಿ ಹೇಳಿದ್ದರೋ, ಗೊತ್ತಿಲ್ಲ. ಆದರೆ ನಮ್ಮ ಸ್ವಾಮಿಗಳು ಅದೇ ಭಾವವನ್ನು ಇನ್ನೂ ಮುಂದಕ್ಕೆ, ಮೂರ್ತಸ್ವರೂಪಕ್ಕೆ, ಕೊಂಡೊಯ್ದು, ಭವದ ಆಕರ್ಷಣೆ ಎಂಬ ’ನೀರ ಕಡೆದರೆ ಬೆಣ್ಣೆ ಬಾರದೆನ್ನುವ  ಕ್ಲೇಶ ದೂರವಾಗಲಿ ಮತ್ತೆ ಬಾರದಿರಲಿ’ ಎಂದು ಸಂಕಲ್ಪಿಸಿಕೊಳ್ಳುತ್ತಾರೆ. ಆಗ ಹೊಳೆಯುವ ಉದಾಹರಣೆ, ’ವೀರ ಹನುಮನು ತನ್ನ ಸಾರ ಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ?’
 ಈ ತೊಂಡಾಟ, ತೊಳಲಾಟಗಳಿಗೆ ಕಾರಣವಾದರೂ ಏನು? ಆಗ ಗೋಚರಿಸುತ್ತದೆ, ’ಗೋಪುರವ ತಾಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯ ಕ್ಲೇಶವನು ತಂದೊಡ್ಡಿತು!’ ಮೂಲೆಗೊಂಬೆಗಳ ಹೆಗಲಮೇಲೆ ನಿಂತಿದೆಯೋ ಎನ್ನುವಂತೆ, ಶಿಲ್ಪಿ ಗೋಪುರವನ್ನು ಕಟ್ಟಿರುತ್ತಾನೆ. ಇದಕ್ಕಾಗಿ ಗೊಂಬೆ ಜಂಭಪಡಬಹುದೇ?! ಅಂತೆಯೇ ಇಲ್ಲಾದರೋ ನಮ್ಮದೆಂಬ ಭ್ರಮೆಯ ಹೊಣೆಗಾರಿಕೆಯ ಗೋಪುರದ ಆ ಶಿಲ್ಪಿ ಯಾರು? ’ಶ್ರೀಪತಿಯು ಮಾಡಿ-ಮಾಡಿಸುವನೆಂಬುವ ಜ್ಞಾನ ಲೋಪ ಪೊಂದದೆ ಪ್ರಸನ್ನವಾಗಲಿ, ದೇವಾ’
 ಹೀಗೆ ಶ್ರೀವಿದ್ಯಾಪ್ರಸನ್ನತೀರ್ಥರ ಬಹುತೇಕೆ ಹಾಡುಗಳು ಕೇವಲ ತೋರಿಕೆಯಲ್ಲದೆ ಸ್ವಾನುಭವದ ತೋಡಿಕೆಯೇ ಆಗಿವೆ. ಆದರೆ ಅಂದಂದಿನ ನೈಜ ಸನ್ನಿವೇಶ-ಘಟನೆಗಳಿಗೆ ಸಾಕ್ಷಿ ಹೇಳುವ ’ತಲೆ’ಗಳು ಒಂದೊಂದಾಗಿ ಹೊರಟುಹೋಗಿವೆ; ಹಾಡುಗಳು, ಬರೀ ಪದ-ಅಕ್ಷರಗಳಾಗಿ ಉಳಿಯುತ್ತಿವೆ!
 

Comments