ಸಂಘೇ ಶಕ್ತಿ ಕಲೌಯುಗೇ ...

ಸಂಘೇ ಶಕ್ತಿ ಕಲೌಯುಗೇ ...

 

 
 
ಕಲಿಯುಗದಲ್ಲಿ ಮನುಷ್ಯನು ತನ್ನ ಉದ್ದಾರವನ್ನು ಸಂಘ ಶಕ್ತಿಯಿಂದ ಮಾತ್ರ ಸಾಧಿಸಬಹುದು.  ಕಲಿಯುಗಕ್ಕಿಂತ ಮೊದಲಿನ ಕಾಲದಲ್ಲಿ ಮಹಾಪುರುಷರು ತಮ್ಮ ತಪೋ ಬಲದಿಂದ ಅಂದಿನ ಸಮಾಜವನ್ನು ಉದ್ದರಿಸಿದ್ದನ್ನು ನಾವು ಪುರಾಣಗಳಲ್ಲಿ ಓದುತ್ತೇವೆ.  ಇವೆಲ್ಲಾ ಕತೆಗಳೆಂದು ತಿಳಿಯುವುದಾದರೂ ಸಹ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಘ ಶಕ್ತಿ ಅಥವ ಸಂಘಟನೆಯಿಂದ ಮಾತ್ರ ಮಾನವ ಕುಲಕೋಟಿಯ ಉದ್ದಾರ
ಮತ್ತು ಕ್ಷೇಮಾಭಿವೃದ್ಧಿಯನ್ನು ಸಾಧಿಸಲು ಸಾದ್ಯ ಎನ್ನುವುದಂತು ಸತ್ಯ.
 
ಸಂಘಟನೆಯಿಂದ ಒದಗಿ ಬರುವ ಶಕ್ತಿಯನ್ನು ನಾವು ಹೇಗೆ ಮತ್ತು ಏತಕ್ಕಾಗಿ ಬಳಸಿಕೊಳ್ಳಬೆಕು ಎನ್ನುವುದು
ಆಯಾ ಕಾಲದ ಸಮಾಜಕ್ಕೆ ಬಿಟ್ಟ ವಿಚಾರ.  ನಾವು ಭಾರತೀಯರು ದಾಸ್ಯದಿಂದ ಮುಕ್ತಿ ಪಡೆಯುವುದು ತುಂಬಾ ಅವಶ್ಯಕವಾದಾಗ ಸಂಘಟನೆಯಿಂದ ನಾವು ಬ್ರಿಟೀಷರನ್ನು ಓಡಿಸಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಠೆಯನ್ನು ಸ್ಥಾಪಿಸಿಕೊಂಡೆವು. ಹಲವು ಬಿನ್ನಾಭಿಪ್ರಾಯಗಳು ಆಗಾಗ ತಲೆದೋರಿದಾಗ್ಯೂ ಸಹ ಸ್ವಾತಂತ್ರ್ಯದ ಒಂದೇ ಗುರಿ ಸಾಧಿಸುವ ಛಲದಿಂದ ಸಂಘಟನೆ ಶಕ್ತಿಯಾಗಿ ರೂಪುಗೊಂಡು ಫಲ ನೀಡಿತು.
 
ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಘಟನೆಯಿಂದ ನಾವು ಸಾಧಿಸಿದ್ದೇನು ಎನ್ನುವ ಪ್ರಶ್ನೆ ನಮ್ಮನ್ನೆಲ್ಲಾ ಕಾಡುತ್ತಿರುತ್ತದೆ.  ಏಕೆಂದರೆ ಕಳೆದ ಆರು ದಶಕಗಳಲ್ಲಿ ಸಂಘಟನೆಗೇನು ಕೊರತೆಯಿರಲಿಲ್ಲ, ಆದರೆ ಒಟ್ಟು ಸಮಾಜದ ಏಳಿಗೆಗಾಗಿ ಸಂಘಟನೆಯಿಂದ ಆದದ್ದು ಮಾತ್ರ ಕಡಿಮೆಯೇ ಸರಿ.  ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವಿಶಿಷ್ಠ ಸಾಮಾಜಿಕ ವ್ಯವಸ್ಥೆಯ ನೆಲ.  ಹಾಗಾಗಿ ವಿವಿಧ ಸಂಘಟನೆಗಳು ಇಲ್ಲಿ ಉದಯಿಸಿದವು.  
ಒಂದೇ ರೀತಿಯ ಉದ್ಯೋಗ ಮಾಡುವವರ, ಒಂದೇ ಭಾಷೆ ಮಾತಾಡುವವರ, ಒಂದೇ ರೀತಿಯ ವಿಚಾರ ಯೋಚಿಸುವವರ, ಒಂದೇ ಜಾತಿಯವರ,     ಒಂದೇ ಧರ್ಮದವರ ಸಂಘಟನೆಗಳು ಇಲ್ಲಿ ಬೆಳೆದು ನಿಂತಿವೆ.
 
ಸಂಘಟನೆಯಿಂದ ಸಾಮಾಜಿಕ ಶಕ್ತಿ ಹೇಚ್ಚಾಗಬೇಕಾಗಿತ್ತು, ಆದರೆ ಹಾಗಾಗಲಿಲ್ಲ.  ಏಕೆಂದಗೆ ಸಂಘಟನೆಯಿಂದ ಪ್ರತಿಭಟನೆಗಳು ಹುಟ್ಟಿಕೊಂಡವು.
ಹಿಂದೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಪ್ರತಿಭಟನೆ, ಸತ್ಯಾಗ್ರಹಗಳಿಗೆ ನಿಜವಾದ ಸಾಮಾಜಿಕ ಕಾಳಜಿಯಿದ್ದು ಅಂದಿನ ಸಮಾಜಕ್ಕೆ ಅವುಗಳ ಅವಶ್ಯಕತೆಗಳಿದ್ದಿದ್ದರಿಂದಾಗಿ ಒಳ್ಳೆಯ ಫಲವನ್ನೇ ನೀಡಿದವು. ಅವುಗಳ ಪಳಯುಳಿಕೆಯಂತಿರುವ ಇಂದಿನ ಮುಷ್ಕರಗಳು, ಪ್ರತಿಭಟನೆಗಳು, ಬಂದ್ ಗಳು, ರಸ್ತೆ ತಡೆ, ರೈಲು ತಡೆ, ಕೆಲಸದಿಂದ ವಿಮುಖರಾಗುವುದು ಮುಂತಾದವುಗಳು ಸಂಪೂರ್ಣ ಸಾಮಾಜಿಕ ಉದ್ದಾರಕ್ಕಾಗಿ ಅಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.
 
ಸಮಾಜದ ಒಂದು ವರ್ಗ ಅಥವ ಗುಂಪು[ಅಥವ ಸಂಘಟನೆ] ತನಗಾದ ಅನ್ಯಾಯವನ್ನು ಇಡೀ ಸಮಾಜಕ್ಕೇ ತೋರಿಸುವ ಆತುರದಲ್ಲಿ ಒಟ್ಟು ವ್ಯವಸ್ಥೆಗೆ
ತೊಂದರೆ ನೀಡಿ ತನ್ನ ಹಟ ಸಾಧಿಸಿಕೊಳ್ಳಲು ಸಂಘ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ. ಒಂದು ಸಂಘಟನೆ ನೀಡಿರುವ ಬಂದ್ ಅಥವ ಮುಷ್ಕರದ ಕರೆಯಿಂದಾಗಿ ಆಗುವ ತೊಂದರೆಗೆ ಸಮಾಜದ ಇತರ ಜನರು, ಸಂಘ ಸಂಸ್ಥೆಗಳು ಎಲ್ಲರೂ ಹಿಡಿ ಶಾಪ ಹಾಕುತ್ತಾರೆ.  ಆದರೆ ಬೇರೆಯವರ ಮುಷ್ಕರವನ್ನು ತೆಗಳುವವರೇ ಇನ್ನೊಂದು ಸನ್ನಿವೇಶದಲ್ಲಿ ಅದೇ ತಪ್ಪು ಮಾಡುತ್ತಾರೆ.  ಇದೊಂದು ವಿಪರ್ಯಾಸವೇ ಸರಿ !  ಇದರಿಂದ ಒಟ್ಟು ಸಮಾಜಕ್ಕೇ ಹಾನಿಯಾಗುತ್ತದೆಯೇ ವಿನಹ ಸಂಘ ಶಕ್ತಿಯಿಂದ ಕಲಿಯುಗದಲ್ಲಿ ಮನುಷ್ಯನು ಏನನ್ನೂ ಸಧಿಸಿದಂತಾಗುವುದಿಲ್ಲ.  ನಮ್ಮಲ್ಲಿರುವ ಅಪಾರವಾದ ಸಂಘ ಶಕ್ತಿಯನ್ನು ಅನ್ಯಾಯವಾಗಿ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನಿಸುತ್ತದೆ.  ನಮ್ಮ ಸಂಘಟನೆಯನ್ನು ಬ್ರಷ್ಟಾಚರ ತೊಲಗಿಸಲು, ಬಡತನ ಓಡಿಸಲು, ಪರಿಸರವನ್ನು ಉಳಿಸಿಕೊಳ್ಳಲು, ಸಂಸ್ಕೃತಿಯನ್ನು ಕಾಪಾಡಲು, ದೇಶಾಭಿಮಾನವನ್ನು ಬೆಳೆಸಿಕೊಳ್ಳಲು ಬಳಸಿದ್ದೇ ಆದರೆ ಭಾರತ 
ಪ್ರಪಂಚದಲ್ಲೇ ಉನ್ನತಿಯನ್ನು ಮತ್ತೊಮ್ಮೆ ಸಾಧಿಸುತ್ತದೆ.
 
ಇತ್ತೀಚಿನ ನ್ಯಾಯವಾದಿಗಳ ಪ್ರತಿಭಟನೆ ಹಲವರಂತೆ ನನಗೂ ಬೇಸರ ತರಿಸಿ ಇಷ್ಟೆಲ್ಲಾ ಯೋಚಿಸುವಂತೆ ಮಾಡಿತು.