ಸಮಾಜ ಸೇವೆಗಾಗಿ ಸಮೂಹ ಮಾಧ್ಯಮ ವೇದಿಕೆ

ಸಮಾಜ ಸೇವೆಗಾಗಿ ಸಮೂಹ ಮಾಧ್ಯಮ ವೇದಿಕೆ

ಬರಹ

ಎರಡು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿ ಮತ್ತು ಇನ್ನಿತರ ಕಲಾ ಪ್ರಾಕಾರಗಳ, ನಾನಾ ರಂಗಗಳಲ್ಲಿ ಸಕ್ರೀಯವಾಗಿದ್ದ ಗೆಳೆಯರ ಗುಂಪು, ಒಂದೆಡೆ ಸೇರಿ ಹುಟ್ಟು ಹಾಕಿರುವ ತಂಡ "ಅಂಬಾರಿ".

ಕೊಂಬೆಗಳು ಹಲವಾದರು, ಬೇರು ಒಂದೆ. ವಿಭಿನ್ನ ಪ್ರತಿಭೆಗಳು. ವಿಭಿನ್ನ ಆಲೋಚನೆಗಳು, ಆದರೆ ಗುರಿ ಮಾತ್ರ ಒಂದೆ. ಕಲಾ ಮಾಧ್ಯಮದಲ್ಲಿ ತಮ್ಮ ಛಾಪನ್ನು ಅಚ್ಚೊತ್ತಲು ಸಾಗಿರುವ "ಅಂಬಾರಿ"ಯ ಏಕೈಕ ಉದ್ದೇಶ. ಸಮಾಜಸೇವೆ. ಅದಕ್ಕಾಗಿ ನಾವಿಂದು ಆಯ್ದು ಕೊಂಡಿರುವ ಹಾದಿ ಕಲಾ ಮಾಧ್ಯಮ.

ಮನೋಭೂಮಿಕೆಯಲ್ಲಿ ಕಲೆಯ ತುಡಿತ, ಅದರ ಜೊತೆಗೆ ನೊಂದವರ, ಅಸಹಾಯಕರ ಬಾಳ ಬೆಳಗುವ ಹಣತೆಯಾಗುವ ಹಂಬಲ, ಈ ದಿಕ್ಕಿನಲ್ಲಿ ಸಾಗುತ್ತಿದೆ "ಅಂಬಾರಿ" ತಂಡ. ಯೋಚಿಸುವ ಮೊದಲು ಅರ್ಪಿಸುವ ಜವಾಬ್ದಾರಿಯನ್ನರಿತು, ಪ್ರತಿ ತಿಂಗಳು, ಸಮಾಜ ಸೇವೆಗೆಂದೆ, ತಮ್ಮ ದುಡಿತದ ಕೊಂಚ ಭಾಗವನ್ನು ನೀಡುತ್ತಾ ಸೇವಾ ಕೈಂಕರ್ಯಕ್ಕೆ ತೊಡಗಿದೆ "ಅಂಬಾರಿ" ತಂಡ, ಪ್ರಯತ್ನದ ಆರಂಭದಲ್ಲೆ, ನಮ್ಮ ಅರಿವಿಗೆ ಬಂದದ್ದು, ಸಂಪನ್ಮೂಲದ ಕೊರತೆ. ಯಾಚಿಸುವ ಕಂಗಳು ಸಹಸ್ರಾರು, ಅದರ ಜೊತೆಗೆ ಅರ್ಪಿಸುವ ಕೈಗಳು ಸಹಸ್ರಾರು.

ಯಾಚನೆ ಮತ್ತು ಅರ್ಪಣೆಯ ನಡುವೆ ವೇದಿಕೆಯಾಗಳು ಸಂಕಲ್ಪಿಸಿ, ಆ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ.

ನಾಟಕ, ರಂಗಗೀತೆ, ಸಾಕ್ಷ್ಯಚಿತ್ರ, ಜಾಹೀರಾತು ಮತ್ತು ಕಾರ್ಪೊರೇಟ್ ಚಿತ್ರಗಳ ನಿರ್ಮಾಣಗಳಲ್ಲಿ ತೊಡಗಿ ಅದರಿಂದ ಬರುವ ಲಾಭಾಂಶವನ್ನು ಸಮಾಜಸೇವೆಗೆ ತೊಡಗಿಸುವ ದಿಕ್ಕಿನಲ್ಲಿ ಸಾಗುತ್ತಿದೆ "ಅಂಬಾರಿ" ತಂಡ.

ಇದರ ಜೊತೆಜೊತೆಗೆ, ನಮ್ಮ ಸದುದ್ದೇಶವನ್ನು ಮನಗಂಡ ಅನೇಕ ಮಿತ್ರರು, ಅಂಬಾರಿಯ ಮೂಲಕ ಸಮಾಜಸೇವೆಗೆ ಉದಾರ ಮನಸ್ಸಿನಿಂದ ಒಪ್ಪಿ ಅದರಂತೆ ಸಕ್ರೀಯವಾಗುತ್ತಿದ್ದಾರೆ.

ಕಂಗಳಲ್ಲಿ ಕನಸು ತುಂಬಿಕೊಂಡು, ಮನದಲ್ಲಿ ಜವಾಬ್ದಾರಿ ಅರಿತು ಮುನ್ನುಗ್ಗುತ್ತಿದ್ದೇವೆ. ನಮ್ಮ ಉತ್ಸಾಹಕ್ಕೆ, ಪ್ರೋತ್ಸಾಹದ ಚಿಲುಮೆಯಾಗಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.