ಸವಿ ಸವಿ ನೆನಪು ಸಾವಿರ ನೆನಪು !
ಹೀಗೇ ಇತ್ತೀಚೆಗೆ ಟಿ.ವಿ.ಯಲ್ಲಿ ಹಾಡು ನೋಡುತ್ತಿದ್ದೆ ... ಸುದೀಪ್ ಅಭಿನಯದ "ಮೈ ಆಟೋಗ್ರಾಫ್" ಚಿತ್ರದ ಈ ಹಾಡು ನನ್ನ ಜೀವನದ ನೆನಪುಗಳನ್ನು ಬಡಿದೂ ಬಡಿದು ಎಬ್ಬಿಸಿತು ... ಅದೇನದು "ಬಡಿದೂ ಬಡಿದು" ಅಂದಿರಾ? ನನ್ನದು ಒಂದು ರೀತಿ ಎಮ್ಮೆ ಚರ್ಮ ... ಒಂದು ಸಾರಿ ಬಡಿದರೆ ಸಾಲೋಲ್ಲ !!
ಆ ಹಾಡು ನನ್ನೆದೆಯನ್ನು ಅಲುಗಾಡಿಸಿರಲು, ನನ್ನ ಹಳ್ಳಿಗೆ ಒಂದು ಭೇಟಿ ಕೊಡಲೇಬೇಕು ಎಂದು ನಿರ್ಧಾರ ಮಾಡಿಯೇ ಬಿಟ್ಟೆ!!
ಒಂದು ಹಿಡಿಯುಳ್ಳ ಬ್ಯಾಗಿನಲ್ಲಿ, ಒಂದಷ್ಟು ಬಟ್ಟೆ ತುರುಕಿಕೊಂಡು, ಬತ್ತಳಿಕೆಯಂತೆ ಏರಿಸಿಕೊಂಡು, ಪವರ್ ಇಲ್ಲದ ಕನ್ನಡ ಧರಿಸಿ, ಇಲ್ಲದ ತಲೆಗೂದಲು ತೀಡಿಕೊಂಡು, ಬೆಳೆದಿದ್ದ ಗಡ್ಡ ಶೇವಿಸದೆ, ಹಿಂದಿನ ತಿಂಗಳು ಖರೀದಿಸಿದ್ದ ಹೊಸ ನೈಕಿ ಶೂ ಧರಿಸಿ, ನನ್ನಲ್ಲಿದ್ದ ಹಳೇ ಕೋಟಿನ ಎರಡೂ ಕೈಗಳನ್ನು ಕತ್ತರಿಸಿ ಸ್ಲೀವ್ಲೆಸ್ ಮಾಡಿಕೊಂಡು ಹೆಚ್ಚು ಕಡಿಮೆ ಸುದೀಪ್ ಸ್ಟೈಲಿನಲ್ಲೇ ಹೊರಟೆ ಅನ್ನಿ ...
ನಮ್ಮೂರ ಬಸ್ ಹಿಡಿದು, ಇಡೀ ರಾತ್ರಿ ಕುಲುಕಾಟದ ಪ್ರಯಾಣ ಮಾಡಿ ಬೆಳಗಿನ ಜಾವ ಹಳ್ಳಿ ತಲುಪಿ ಇಳಿದೆ. ಆಹ್ಲಾದಕರ ಗಾಳಿ ... ಮೊದಲು ಸ್ವಲ್ಪ ಮುಖ ತೊಳೆದು, ಹಲ್ಲುಜ್ಜಿ ನಂತರ ಊರೊಳಗೆ ಹೋಗೋಣ ಎಂದುಕೊಂಡೆ ... ಅಲ್ಲೇ ಮರಗಿಡಗಳ ಬಳಿ ಹೋಗಿ, ನನ್ನೊಂದಿಗೆ ಬಾಟ್ಲಿಯಲ್ಲಿ ತಂದಿದ್ದ ನೀರಿನಲ್ಲಿ ಮುಖ ತೊಳೆದು, ಬಾಯಲ್ಲಿ ಒಂದಿಷ್ಟು ನೀರು ಸುರಿದುಕೊಂಡು ಉಗಿದೆ ....
ಶರವೇಗದಲ್ಲಿ ಪೊದೆಯಿಂದ ಮತ್ತೊಂದು ಉಗಿತ ಬಂತು "ಏ ! ಮೂದೇವಿ !! ಕಣ್ ಕಾಣಾಕಿಲ್ವಾ? ತೊಲಗಾಚೆ !!! ಲೇ ಮುದ್ದಾ, ನೋಡ್ಲಾ ಅದು ಯಾವ್ನಂತಾ" ಅಂತ ಯಾವುದೋ ಹೆಣ್ಣಿನ ದನಿ ...
ಆ ಮುದ್ದ ಬರೋಕ್ಕೆ ಮುಂಚೆ, ಸೈಲೆಂಟಾಗಿ ಮುದ್ದಾಗಿ ಜಾಗ ಖಾಲಿ ಮಾಡಿದೆ ... ಬರೋ ಆತುರದಲ್ಲಿ ಬ್ರಷ್-ಪೇಸ್ಟ್ ಮರೆತಿದ್ದರಿಂದ ಅಲ್ಲೇ ಇದ್ದ ಬೇವಿನ ಮರದಿಂದ ಒಂದು ಕಡ್ಡಿಯನ್ನು ಕಿತ್ತಿ, ಹಲ್ಲುಜ್ಜಲು ಶುರು ಮಾಡಿದೆ ... ಬೇವು ಅಂತ ನಾನು ಅಂದುಕೊಂಡಿದ್ದೆ ... ಯಾವ ಗಿಡವೋ ಪರಮಾತ್ಮನಿಗೇ ಗೊತ್ತು ! ಹಲ್ಲುಜ್ಜುವಿಕೆಯ ಆರ್ಭಟ ಮುಗಿದ ಮೇಲೆ ಅಲ್ಲೇ ಮೂಲೆ ಅಂಗಡಿಯ ಕಾಕ ಕೇಳಿದ ’ಎನ್ನ ಸಾರ್, ಸೆನ್ಸೋಡೈನ್ ಟೂತ್ ಪೇಸ್ಟ್ ಕೊಡ್ಲಿನಾ? ಫಾರಿನ್’ದು ಸಾರ್’
ಅಯ್ಯಾ, ಮೂದೇವಿ ... ಆಗ್ಲೇ ಕೇಳಬಾರದಿತ್ತಾ? ’ಬೇಡ ಬಿಡಪ್ಪ’ ಅಂದೆ .... ’ಇಲ್ಲೆ ಸಾರ್ ತೊಗೊಳ್ಳಿ’ ಅಂದ .. ’ಬೇಡ ಬಿಡಯ್ಯ ... ಬಾಯಿ ಫ್ರೆಶ್ ಆಗಿದೆ’ ಅಂದೆ ... ’ಇಲ್ಲೆ, ಸಾರ್ ನಿಮ್ ಹಲ್ಲೆಲ್ಲಾ, ಪಾಚಿ ಮಾದರಿ ಬಣ್ಣ ಆಗಿದೆ’ ಅನ್ನೋದೇ? ಒಳ್ಳೇ ಕರ್ಮ ಆಯ್ತಲ್ಲ?
ಅವನಲ್ಲಿ ಬ್ರಶ್-ಪೇಸ್ಟ್ ಕೊಂಡು, ಹಸಿರನ್ನು ಹಳದಿ ಮಾಡೋ ಅಷ್ಟರಲ್ಲಿ ಸಾಕಾಯ್ತು ... ಅಷ್ಟರಲ್ಲಿ ಕಾಕ ಎರಡು ಮೀಟರ್ ಚಾಯ ಸಿದ್ದ ಮಾಡಿದ್ದ ... ಕೇಳದೇ ಇದ್ದರೂ ... ಕೊಳ್ಳುವ ಇರಾದೆ ಇಲ್ಲದೇ ಇದ್ದರೂ ಕುಡಿಯುವ ಮನಸ್ಸು ತಾನಾಗೇ ಆಯಿತು ... ಒಂದು ಕಪ್ ಚಾಯ ಕುಡಿದು ಎದ್ದೆ ... ಅಷ್ಟರಲ್ಲೇ, ಒಳಗಿನಿಂದ ಘಂ ಎಂದು ಸಾಂಬಾರ್ ವಾಸನೆ ಬಂತು. ರಾತ್ರಿ ಬೇಗ ಊಟ ಮಾಡಿದ್ದು. ಹಸಿವು ಕೆರಳದೆ ಏನು ಮಾಡುತ್ತೆ? "ಒರು ಪ್ಲೇಟ್ ಇಡ್ಲಿ-ವಡೆ-ಸಾಂಬಾರ್ ಹಾಕ್ಲಾ ಸಾರ್" ಅಂದ ... ಭಲೇ ಕಾಕ ಇವನು. ಅದೂ ನೆಡೆದೇ ಹೋಗಲಿ ಸಮಾರಾಧನೆ ಎಂದು ತಿಂದು ಮುಗಿಸಿದೆ. ಬೆಳಿಗ್ಗೆ ಬೆಳಿಗ್ಗೆ ಅವನಿಗೂ ಬೋಣಿ ಆಯ್ತು.
ಕೊನೆಗೂ, ಊರೊಳಗೆ ಹೊರಟೆ ...
ದೂರಕ್ಕೆ ಕಣ್ಣು ಹಾಯಿಸಿದಷ್ಟೂ ಹಸಿರೋ ಹಸಿರು. ಯಾವ್ಯಾವುದೋ ಮರ ಗಿಡಗಳು, ಕೆಳಗೆ ಬಿದ್ದ ಕಾಯಿಗಳು, ಒಣಗಿದ ಎಲೆ, ಕಸ ಕಡ್ಡಿಗಳು ... ಆ ಬದಿ ಈ ಬದಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹೊಲ ಗದ್ದೆ ... ಸ್ವಲ್ಪ ಮುಂದೆ ಹೋಗಲು ಒಂದು ಸಣ್ಣ ಸೇತುವೆ ... ಊರ ಮಧ್ಯದಿ ದೊಡ್ಡ ಮರ ... ಇನ್ನೂ ಹಗಲಾದ್ದರಿಂದ ಕಟ್ಟೆಯ ಮೇಲೆ ಯಾರೂ ಇರಲಿಲ್ಲ ... ಹಲವಾರು ಮನೆಯ ಮುಂದೆ ರಂಗವಲ್ಲಿ ನಗುತ್ತಿದ್ದಳು ... ಹಕ್ಕಿಗಳ ಕಲರವವಂತೂ ಮಂಗಳ ವಾದ್ಯದಂತೆ ಮೊಳಗುತ್ತಲೇ ಇದ್ದವು.
ಶುದ್ದ ಮಣ್ಣಿನ ರಸ್ತೆ .. ನಿಂತ ಕೊಚ್ಚೆ ನೀರು ... ಎಳೆ ಬಿಸಿಲು ಕಾಯಿಸಿಕೊಳ್ಳುತ್ತ ಹಿಂದಿನ ರಾತ್ರಿ ತಮ್ಮಲ್ಲಿ ಎಷ್ಟು ಜನ ಸತ್ತರು ತಾವು ಎಷ್ಟು ರಕ್ತ ಕುಡಿದೆವು ಎಂಬ ಕಾನ್ಫೆರೆನ್ಸ್’ನಲ್ಲಿದ್ದ ಸೊಳ್ಳೆಗಳು ... ಯಾರು ಬಂದಿದ್ದು, ಏನಂತೆ ಎಂಬ ಆಲೋಚನೆ ಬಂದರೂ ದೊಡ್ಡವರ ವಿಷಯ ನಮಗ್ಯಾಕೆ ಎಂದುಕೊಂಡು ತಲೆ ಬಗ್ಗಿಸಿಕೊಂಡು ಆ ಕಡೆ ಹಾದು ಹೋದ ಕುರಿಗಳು ...
ಅಲ್ಲಲ್ಲೇ ಕೊಟ್ಟಿಗೆಗಳು ... ಎಲ್ಲೆಲ್ಲೂ ಸೆಗಣಿ, ಗಂಜಲ, ಸೊಂಟಕ್ಕೆ ಸೆರಗನ್ನು ಬಿಗಿದು ಕೊಟ್ಟಿಗೆ ಸೆಗಣಿಯನ್ನು ತೆಂಗಿನ ಪರಕೆಯಿಂದ ಬಳಿಯುವ ಹೆಣ್ಣಾಳು ... ತಮ್ಮ ಮೈಮೇಲೆ ಕುಳಿತ ನೊಣಗಳನ್ನು ತಮ್ಮ ಬಾಲವನ್ನೇ ಕತ್ತಿಯಂತೆ ಬಳಸುವ ದನಗಳು, ಹಾಲು ತುಂಬಿಸಲು ಪಾತ್ರೆ ಹಿಡಿದುಕೊಂಡು ಬಂದು ಪ್ರೀತಿಯಿಂದ ದನದ ಬೆನ್ನನ್ನು ನೇವರಿಸುವ ಹೆಂಗಸು, ಬಾಯಿಂದ ಎರಡು ಮೀಟರ್ ಜೊಲ್ಲು ಸುರಿಸುತ್ತ ದಿಟ್ಟ ನೋಟದಿಂದ ನನ್ನನ್ನೇ ನೋಡುತ್ತ ಕಣ್ಣು ಮಿಟುಕಿಸಿ ’ಅಂಬಾ’ ಎಂದ ಎತ್ತುಗಳು, ಬಾಲವನೆತ್ತಿ ಸುರಿಸೋ ಗಂಜಲಕ್ಕೆ ಎಲ್ಲೆಂದಲೋ ಓಡಿ ಬಂದು ತಲೆ ಅಡ್ಡ ಹಿಡಿದ ಪೋರ ಹೀಗೆ. ಅಲ್ಲಲ್ಲೇ ಮೂಲೆಯಲ್ಲಿ ಬಿದ್ದುಗೊಂಡಿದ್ದ ಬೀದಿ ನಾಯಿಗಳು ನನ್ನನ್ನು ನೋಡಿ, ಬೊಗಳುವುದು ವೇಸ್ಟು ಎಂದುಕೊಂಡು ಹಾಗೇ ಕಣ್ಣು ಮುಚ್ಚಿ ಎಳೇ ಬಿಸಿಲನ್ನು ಆನಂದಿಸುತ್ತಿತ್ತು.
ಯಾವುದೋ ಮನೆಯ ಒಳಗಿನಿಂದ ಬಾಗಿದ ಬೆನ್ನಿನ ಕಣ್ಣು ಕಾಣದ ಮುದುಕ, ಬಾಗಿಲಲ್ಲೇ ಮಲಗಿದ್ದ ನಾಯಿಯ ಬಾಲವನ್ನು ತುಳಿದಾಗ ’ಕುಯ್ ಕುಯ್’ ಎನ್ನುತ್ತ ಬಾಲವನ್ನು ಹಿಂಗಾಲುಗಳ ಮಧ್ಯೆ ಸಿಕ್ಕಿಸಿಕೊಂಡು, ಮುದುಕನನ್ನು ಬಿ.ಟಿ.ಎಸ್ ಡ್ರೈವರ್’ನಂತೆ ನೋಡಿ ಪಕ್ಕಕ್ಕೆ ಹೋಯಿತು. ’ಮನೇಲಿ ಹೇಳಿ ಬಂದಿದ್ದೀಯಾ ತಾನೇ?’ ಎಂಬಂತಿತ್ತು ಆ ನೋಟ.
ಯಾವುದೋ ಮನೆಯ ಹಿಂದೆ, ತಮ್ಮ ಎಡಗಾಲನ್ನೆತ್ತಿ ಪಕ್ಕದಲ್ಲಿರೋ ಕಲ್ಲ ಮೇಲಿಟ್ಟುಕೊಂಡು, ಹಲ್ಲುಗಳನ್ನು ಬಚ್ಚಲಿನಂತೆ ಕಡ್ಡಿಯಲ್ಲಿ ಉಜ್ಜುತ್ತ ನನ್ನ ಮುಖ ನೋಡಿ ಆ ಕಡೆ ಉಗಿದನೊಬ್ಬ ... ನನ್ನನ್ನು ನೋಡಿ ಹಾಗೆ ಮಾಡಿದನೋ ಅಥವಾ ಸ್ವಾಭಾವಿಕವಾಗಿಯೇ ಮಾಡಿದನೋ ಅರ್ಥವಾಗಲಿಲ್ಲ.
ಹಾಗೇ ಮುಂದೆ ಹೋಗಲು, ನಾನು ಈ ಊರಿನಲ್ಲಿ ಇದ್ದಷ್ಟು ದಿನವೂ, ನಮ್ ಗೌಡರ, ಟೈರಿನಲ್ಲಿ ಗಾಳಿ ಇಲ್ಲದ ಫಿಯಟ್ ಕಾರು, ಇಂದಿಗೂ ಅದೇ ಮೂಲೆಯಲ್ಲಿ ನಿಂತಿತ್ತು. ವ್ಯತ್ಯಾಸ ಅಂದರೆ, ಇನ್ನೂ ಹೆಚ್ಚು ಗಟ್ಟಿ ಕಂದು ಬಣ್ಣಕ್ಕೆ ತಿರುಗಿತ್ತು. ಒಂದಿಂಚೂ ಬಿಡದಂತೆ ತುಕ್ಕು ಹಿಡಿದಿತ್ತು. ತುಕ್ಕು ಹೋಗಲೆಂದೇ ನಾಯಿಯೊಂದು ಗಾಡಿಗೆ ಕಾಲೆತ್ತಿಕೊಂಡು ನಿಂತಿತ್ತು. ನನ್ನನ್ನು ನೋಡಿದ ಕೂಡಲೆ ನಾಚಿಕೆಯಿಂದ ತಲೆ ಬಗ್ಗಿಸಿಕೊಂಡು ಹೋಯಿತು ಎಂದು ನನಗೆ ಅನ್ನಿಸಿದ್ದು!
ಅಲ್ಲಾ, ಇಷ್ಟು ದೂರ ಬಂದರೂ ಜನ, ದನ ಬಿಡಿ ಒಂದು ನಾಯಿಗೂ ನಾನ್ಯಾರು ಅಂತ ತಿಳೀಲಿಲ್ಲವಲ್ಲ?
ಸ್ವಲ್ಪ ಮುಂದೆ ಹೋಗಲು ಕಣ್ಣಿಗೆ ಬಿದ್ದಿದ್ದು ನಮ್ಮೂರ ಶಾಲೆ. ಹಚ್ಚನೆ ಹಸಿರಾಗಿದ್ದ ಶಾಲಾ ಕಟ್ಟಡ ಇಂದು ಪಾಳು ಬಿದ್ದಿದೆ. ಹಚ್ಚನೆ ಹಸಿರು ಅಂದರೇನು ಅಂದಿರಾ? ಏನಿಲ್ಲ, ಅಂದು ಶಾಲಾ ಗೋಡೆಗಳ ಮೇಲೆ ಇದ್ದ ಪಾಚಿಯ ಬಗ್ಗೆ ಹೇಳುತ್ತಿದ್ದೆ, ಅಷ್ಟೇ !
ಶಾಲೆಯನ್ನು ನೋಡಿದ ಕೂಡಲೆ ಹಳೆಯ ನೆನಪುಗಳು ಒದ್ದುಗೊಂಡು ಬಂದು ಕಣ್ಣಲ್ಲಿ ನೀರು ಬಂತು. ಹೌದು, ಪ್ರತಿ ದಿನ ತಪ್ಪದೆ ತಡವಾಗಿ ಹೋಗುತ್ತಿದ್ದಾಗ, ಮೇಷ್ಟರ ಬೆತ್ತದ ರುಚಿ ನೋಡುತ್ತಿದ್ದೆ. ಆ ಹೊಡೆತ ನೆನಪಾದರೆ ಈಗಲೂ ಕಣ್ಣಲ್ಲಿ ನೀರು ಬರುತ್ತೆ.
ಶಾಲೆಯ ಹೊರಗಿದ್ದ ದೊಡ್ಡ ಸ್ಟೇಜ್ ನೋಡಿದ ಕೂಡಲೆ, ಪಿ.ಟಿ ಮೇಷ್ಟ್ರು ನೆನಪಾದರು ... ಕರಿಬಸಪ್ಪ ಅಂತ ಅವರ ಹೆಸರು ... ಹುಟ್ಟಿನಿಂದ ಅವರ ಹೆಸರು ’ಬಸಪ್ಪ’ ಅಂತ ... ಕೆಂಪು ಸೂರ್ಯ, ಬಿಳಿ ಕೊಕ್ಕರೆ, ಹಸಿರು ಗಿಣಿ, ಅಂತೆಲ್ಲ ಹೇಳ ಹೊರಟಾಗ ’ಕರಿ’ ಬಸಪ್ಪ ಕೂಡ ಆ ಸಾಲಿನಲ್ಲಿ ನಿಲ್ತಾರೆ ... ಕೊನೆಯಲ್ಲಿ ... ಇವರಾದ ಮೇಲೆ ಮತ್ಯಾರೂ ಇಲ್ಲ ... he is beyond all comparisons, you know
ನಾನು ಒಂದು ಚೂರು ಬೆಳ್ಳಗಿದ್ದೆ ಅನ್ನೋ ಹೊಟ್ಟೇ ಕಿಚ್ಚಿಗೆ, ಹುಡುಗರೆಲ್ಲ ಸಾಮೂಹಿಕವಾಗಿ ಮಾಡಿದ ತಪ್ಪಿಗೆ, ಎಲ್ಲರನ್ನೂ ಕ್ಷಮಿಸಿ, ನನ್ನನ್ನು ಮಾತ್ರ ಇಡೀ ದಿನ ಬಿಸಿಲಲ್ಲಿ ನಿಲ್ಲಿಸಿದ್ದರು ಕಣ್ರೀ. ನಿಜ ಹೇಳ್ತೀನಿ ಕೇಳಿ, ಅವತ್ತು ನನ್ನ ನೋಡಿ ಆ ಬಿಸಿಲಿಗೂ ಬೇಸರ ಮೂಡಿ, ಮೋಡ ಹುಡುಕ್ತಿತ್ತು. ಬೇಸಿಗೆಯಲ್ಲಿ ಮೋಡ ಎಂಥಾದ್ದು ಬಿಡಿ. ಇರಲಿ, ಅಂದು ಕಳೆದುಕೊಂಡ ಬಣ್ಣ, ಹಳ್ಳಿ ಬಿಟ್ಟು ಬೆಂಗಳೂರಿಗೆ ಹೋದಾಗ, ಗಾಡಿಗಳ ಹೊಗೆಯಿಂದ ಇನ್ನೂ ಕರ್ರಗಾಯ್ತೇ ವಿನಹ, ಮತ್ತೆ ಬಿಳುಪು ಬರಲೇ ಇಲ್ಲ !!
ಮೇಷ್ಟರ ದರ್ಶನ ಮಾಡಿ ಬರೋಣ ಎಂದುಕೊಂಡು ಅವರ ಮನೆ ಹತ್ತಿರ ಹೋದೆ. ಎಲ್ಲೂ ಏನೂ ಬದಲಾವಣೆ ಇರಲಿಲ್ಲ. ಇದೇನು ಪಟ್ಟಣವೇ ಅಹೋರಾತ್ರಿಯಲಿ ಬದಲಾವಣೆ ಆಗಲಿಕ್ಕೆ? ಬಾಗಿಲು ತೆರೆದೇ ಇತ್ತು. ಒಳಗೆ ಕತ್ತಲೆ. "ಯಾರಾದ್ರೂ ಇದ್ದೀರಾ?" ಎಂದು ಸ್ವಲ್ಪ ಜೋರಾಗೇ ಕೂಗಿದೆ. "ಇಲ್ಲಿ ಕೂತಿರೋದು ಕಾಣಲ್ವಾ?" ಅಂತ ಪಕ್ಕದಲ್ಲೇ ಸ್ವರ ಸಿಡಿಯಿತು. ಮೇಷ್ಟ್ರು ಕತ್ತಲಲ್ಲಿ ಕಾಣಲೇ ಇಲ್ಲ! ಅಂದು ಅವರ ಬಾಯಲ್ಲಿ ಒಂದಿಷ್ಟು ಬಿಳೀ ಹಲ್ಲುಗಳಿದ್ದವು, ಟಾರ್ಚ್ ಇದ್ದಂತೆ. ಇಂದು ಅವು ಇಲ್ಲ. ಹಾಗಾಗಿ ನನಗೆ ತಿಳಿಯಲಿಲ್ಲ.
ನಾನು ಯಾರು ಅಂತ ಹೇಳಿದೆ. ಅವರಿಗೂ ಖುಷಿಯಾಗಲಿ ಅಂತ ನಾನು ಬರೀತೀನಿ ಅಂತ ಬೇರೆ ಹೇಳಿಕೊಂಡೆ. ಅದಕ್ಕೆ ಮೇಷ್ಟ್ರು ಹೇಳಿದರು "ಅಲ್ಲಾ ಕಣೋ ಮೂದೇವಿ, ಬರೆಯೋ ಕಾಲಕ್ಕೆ ಬರೆದಿದ್ದರೆ, ಇಷ್ಟು ಹೊತ್ತಿಗೆ ಸಾಹೇಬ ಆಗ್ತಿದ್ದೆ" ಅನ್ನೋದೇ? ಅವತ್ತೂ ಇವತ್ತೂ ಮೇಷ್ಟರ ಬಾಯಲ್ಲಿ ಉಗಿಸಿಕೊಳ್ಳೋದೇ ಆಯ್ತು. ಮೇಷ್ಟ್ರು ಮುಂದುವರೆಸಿದರು "ಕೊಟ್ರೇಶೀನೂ ಬಂದಿದ್ದ ... ಕಾರಿನಾಗೆ. ನನಗೆ ಶಾಲ್ವೆ ಹೊದ್ದಿಸಿ ಪೊಟೊ ಹಿಡಿಸಿಕೊಂಡು ಹೋದ. ನೀನೂ ಇದ್ದೀಯಾ, ದಂಡಕ್ಕೆ" ಅಂದರು. ಕೊಟ್ರೇಶಿ ರಾಜಕಾರಣಿ. ಪಬ್ಲಿಸಿಟಿಗೆ ಫೋಟೋ ಹಿಡಿಸಿಕೊಂಡ. ಹಳ್ಳಿಗರ ಅಮಾಯಕತೆ ಹೇಗೆ ಬಳಸಿಕೊಳ್ತಾರೆ ನೋಡಿ.
ಇರಲಿ, ಕಳೆದ ಒಂದೂವರೆ ಘಂಟೆಯಲ್ಲಿ ಸತತವಾಗಿ ಎರಡನೇ ಬಾರಿಗೆ ’ಮೂದೇವಿ’ ಅಂತ ಬೈಸಿಕೊಂಡಿದ್ದೆ. ತೆಪ್ಪಗೆ ಹೊರಗೆ ಬಂದೆ.
ನನ್ನ ಕ್ಲಾಸ್ ಮೇಟ್ ಆಗಿದ್ದ ನಿಂಗಿಯ ನೆನಪಾಯ್ತು. ಆ ದಿನಗಳನ್ನು ನೆನಪು ಮಾಡಿಕೊಂಡರೇ ಮೈ ಝುಮ್ ಅನ್ನುತ್ತೆ. ನನ್ನ ಕಡೆ ಕುಡಿ ನೋಟ ಬೀರುತ್ತ ಕಿಸಕ್ ಅಂತ ನಗ್ತಾ ಇದ್ದವಳು ಆ ನಿಂಗಿ. ನಮ್ಮ ಗುಂಪಿನಲ್ಲಿ ನಾನೇ ಹೀರೋ ! ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಇದೇ ಊರಿನಲ್ಲಿ ಇರ್ತಾಳೆ ಅಂತ ಏನು ಗ್ಯಾರಂಟಿ. ಆದರೂ ಪ್ರಯತ್ನ ಮಾಡೋಣ ಅಂತ ಅವಳ ಮನೆಯತ್ತ ಹೆಜ್ಜೆ ಹಾಕಿದೆ.
ದಾರಿಯಲ್ಲಿ ಸೈಕಲ್ ಶಾಪ್ ಸಿಕ್ತು. ಅರ್ರೇ! ಮಂಜ !! ಯಾಕೋ ಏನೋ ಯಾವುದೋ ಹುಡುಗನನ್ನ ಹಿಡ್ಕೊಂಡ್ ಹಿಗ್ಗಾ ಮುಗ್ಗ ಹೊಡೀತಿದ್ದ. ಮಗನೇ ಇರಬೇಕು. ಯಾಕೆ ಅಂತೀರಾ? ಮಂಜನ ಅಪ್ಪ, ಅವನನ್ನು ಇದೇ ರೀತಿ ಹಿಡ್ಕೊಂಡ್ ಹೊಡೀತಿದ್ದ !! ಹೀಗೆ ಹೊಡೆಯೋದು ಅವರ ವಂಶದಲ್ಲಿ ಬಂದಿರಬೇಕು. ನಾನು ಯಾರು ಅಂತ ಹೇಳಿಕೊಂಡೆ. ಅವನಿಗೆ ವಿಪರೀತ ಖುಷಿಯಾಯ್ತು. ಬಾಚಿ ಅಪ್ಪಿಕೊಂಡ. ಹಳ್ಳಿಯ ಗಟ್ಟಿ ಮೈಗೂ ಪೇಟೆಯ ನವಿರು ಮೈಗೂ ವ್ಯತ್ಯಾಸ ತಿಳೀತು ... ಕೆಲಸದವಳ ಗಟ್ಟಿ ಅಂಗೈಯಲ್ಲಿ ಸಿಕ್ಕ ನೀರಲ್ಲಿ ಅದ್ದಿದ ಬಾರ್ ಸೋಪಿನಂತಾಗಿದ್ದೆ !
ನಂತರ ಬಾಗಿಲ ಬಳಿ ಹೋಗಿ ಒಳಗೆಲ್ಲೋ ಇದ್ದ ಅವರಪ್ಪನಿಗೆ ಹೇಳಿದ "ಯಪ್ಪಾ ... ಈಟು ವರ್ಷ ಬಡ್ಕೋತಿದ್ಯಲ್ಲ, ನಿನ್ನ ಸಿನೇಹಿತ ನನ್ನ ಸೈಕಲ್ ಕದ್ಗೊಂಡ್ ಹೋದ ಅಂತ, ಇಗಾ ಬಂದಿದ್ದಾನೆ, ಒಸಿ ಹೊರಕ್ ಬಾ" !!! ಅವರಪ್ಪ "ಕೊಡ್ಲಾ ಇಲ್ಲಿ ಆ ಕಡ್ಡಿಯಾ ... ಎಲ್ಲವ್ನೇ ಅವ್ನೂ" ಅಂತ ಗೊರ ಗೊರ ಗೂರ್ಲಿಕೊಂಡೆ ಹೊರ ಬಂದ. ಹಳೆಯ ಸ್ನೇಹಿತನ ಭೇಟಿ ಮಾಡಿದ ಈ ಶುಭ ದಿನ, ನನ್ನ ಕೈಯಿಂದ ಇನ್ನೂರು ಹೋಯ್ತು !!!
ಮಂಜನ ಜೊತೆ ಮಾತನಾಡುತ್ತ ನಿಂಗಿ ಬಗ್ಗೆ ಕೇಳಿದೆ. "ಅವಳೂ ಗಂಡನ ಜೊತೆ ಇದೇ ಊರಿನಲ್ಲಿ ಇದ್ದಾಳೆ ಕಣ್ಲಾ" ಎಂದ. ಮದುವೆಯಾದ ಮೇಲೆ ಗಂಡ ಮಾವನ ಮನೆಯಲ್ಲೇ ಉಳಿದಿದ್ದಾನೆ ಅಂತ ಅರ್ಥವಾಯಿತು! ಜೊತೆಗೆ ಸಕತ್ ಖುಷಿಯಾಯ್ತು. ಅವನನ್ನೂ ಹೊರಡಿಸಿಕೊಂಡು ನೆಡೆದೆ. ಅವರಪ್ಪ ಏನೋ ಅಂದ. "ಏನೋ ಹೇಳ್ತಿದ್ದಾರೆ ನಿಮ್ಮಪ್ಪ, ಕೇಳ್ಕೊಂಡ್ ಬಾ" ಎಂದೆ. ಮಂಜ ಅಂದ "ಏನಿಲ್ಲ ಕಣೋ... ಕಂಡ ಕಂಡ ಮೂದೇವಿಗಳ ಜೊತೆ ಅಲೆಯೋದೇ ಆಯ್ತು ನಿನ್ನ ಜಲ್ಮ ಅಂದ ಅಷ್ಟೇಯಾ". ಬೇಕಿತ್ತ ನನಗೆ ಮೂರನೇ ಬಾರಿ ಉಗಿತ?
ಮಂಜನಿಗೆ ದಾರಿಯಲ್ಲಿ ಇನ್ಯಾರೋ ಸಿಕ್ಕರು. ಅವನನ್ನು ಅಲ್ಲೇ ಬಿಟ್ಟು, ನಿಂಗಿಯ ಮನೆ ಮುಂದೆ ನಿಂತೆ. ಅದೇ ಸಮಯಕ್ಕೆ, ಒಳಗಿನಿಂದ ನಿಂಗಿ ಬಂದಳು. ನನ್ನನ್ನು ಕಂಡು ಅವಕ್ಕಾಗಿ ನಿಂತು, ಮತ್ತೆ ಹಾಗೇ ತಲೆವಾಲಿಸಿ, ಕುಡಿ ನೋಟ ಬೀರುತ್ತ, ಕಿಸಕ್ ಅಂದಳು. ಇಂದಿಗೂ ನನ್ನ ನೆನಪು ಆ ಹೃದಯದಲ್ಲಿ ಹಾಗೇ ಇದೆ ಅಂದ ಹಾಗಾಯ್ತು !
ನಾನು "ಏನು ನಿಂಗಿ, ಚೆನ್ನಾಗಿದ್ದೀಯಾ" ಅಂದಿದ್ದೆ. ಅವಳು ಅದೇ ಸಮಯಕ್ಕೆ .... "ಯಾರು ಬೇಕಿತ್ತು" ಅಂದಳು ... ಅಂದರೆ ನಾನು ಯಾರು ಅಂತ ಅವಳಿಗೆ ತಿಳೀಲಿಲ್ಲ !! ನಾನೇ ಹೇಳಿಕೊಂಡೆ ...
"ನೀನು ಅವತ್ತು ಎಂಗಿದ್ಯೋ ಇವತ್ತೂ ಅಂಗೇ ಇದ್ದೀಯಾ" ಅಂತ ಕಿಸಿಕ್ ಅಂದಳು. ಖುಷಿಯಾಯ್ತು. ಅಷ್ಟರಲ್ಲಿ, ಒಳಗಿನಿಂದ ನಿಂಗಿಯ ಗಂಡ ಹೊರಗೆ ಬಂದ. ಅವನತ್ತ ನೋಡಿ, ಹಾಗೇ ತಲೆವಾಲಿಸಿ, ಕುಡಿ ನೋಟ ಬೀರುತ್ತ, ಕಿಸಕ್ ಅಂದು ಅವನಿಗೆ ನನ್ನ ಪರಿಚಯ ಮಾಡಿಕೊಟ್ಟಳು. ಪರಿಚಯ ಮಾಡಿಕೊಂಡ ಆತ ಹೊರಗೆ ಹೊರಟ. ಅಷ್ಟರಲ್ಲಿ ಮಂಜ ಒಳಗೆ ಬಂದ. ಆಗ ನಿಂಗಿ, ಹಾಗೇ ತಲೆವಾಲಿಸಿ, ಕುಡಿ ನೋಟ ಬೀರುತ್ತ, ಕಿಸಕ್ ಅಂದಳು.
ಅಂದ್ರೇ, ನಿಂಗಿ ಈ ರೀತಿ ಆಡೋಡು ಮಾಮೂಲಿ ಅಂದ ಹಾಗೆ ಆಯ್ತು. ನಾನು ಏನೇನೋ ಅರ್ಥ ಮಾಡಿಕೊಂಡು ಸುಮ್ನೆ ತಲೆ ಕೆಡಿಸಿಕೊಂಡಿದ್ದೆ !! "ಏನು ಬಂದಿದ್ದು ಊರಿಗೆ? ಕೆಲ್ಸ ಇತ್ತಾ?" ಅಂದಳು ... ದುಡಿಮೆಯಲ್ಲೇ ದೇವರನ್ನು ಕಾಣೋ ಹಳ್ಳಿಗರು ಇವರು. "ಸುಮ್ನೆ ಬಂದಿದ್ದೆ" ಅಂದ್ರೆ "ಯಾಕೆ ತಲೆ ಕೆಟ್ಟಯ್ತಾ? ಅಂದ್ರೆ ಕಶ್ಟ ಅಂತ ಏನೋ ಹೇಳಿ ಹೊರಟೆ.
ಹೋಗ್ಲಿ ಬಿಡಿ, ಅಷ್ಟು ಹೊತ್ತಿಗಾಗಲೇ ನನ್ನ ನಿರೀಕ್ಷೆಗಳೆಲ್ಲ ಟುಸ್ ಅಂದಿತ್ತು.
ಸುದೀಪನ ಅನುಭವಕ್ಕೂ ನನ್ನ ಅನುಭವಕ್ಕೂ ಯಾವ ರೀತಿ ಮಾನದಂಡ ಹಿಡಿದರೂ ನನ್ನ ಮಾನ ದಂಡ ಆಗೋದು ಖಂಡಿತ ... ಹಲವಾರು ದಿನಗಳ ಕಾರ್ಯಕ್ರಮ ಹಾಕಿಕೊಂಡು ಬಂದಿದ್ದ ನಾನು ಮುಕ್ಕಾಲು ದಿನ ಕಳಿಯುವ ಹೊತ್ತಿಗೆ ಸಾಕಾಗಿತ್ತು. ನಾನು ಇಲ್ಲಿ ಇಲ್ಲದ ಮೇಲೆ ಜನ ನನ್ನನ್ನೇ ನೆನೆಯುತ್ತ ಕುಳಿತಿರುತ್ತಾರೆ ಅಂತ ಅಂದುಕೊಂಡಿದ್ದು ಮಹಾಪರಾಧ. ಎಲ್ಲರಿಗೂ ಅವರ ಕೆಲಸ ಇದ್ದೇ ಇರುತ್ತೆ. ಅತೀ ನಿರೀಕ್ಷೆ ಇಟ್ಟುಕೊಳ್ಳಬಾರದಿತ್ತು.
ಹೊರಡುವ ಮುನ್ನ ಕಾಕನ ಅಂಗಡಿಯಲ್ಲಿ, ಕೊನೇ ಬಾರಿ ಎಂಬಂತೆ, ಎರಡು ಮೀಟರ್ ಚಾಯ ಕುಡಿದು ಬಸ್ಸಿಗೆ ಕಾಯುತ್ತ ಕುಳಿತೆ. ಕಾಕ ನುಡಿದ "ಆ ಸಿನಿಮಾ ಬಂದ ಮೇಲೆ ನಿಮ್ ತರಹಾನೇ ಎಷ್ಟೊ ಜನ ಬಂದು ಹೋದರು. ಇಲ್ಲಿ ಎಲ್ಲರಿಗೂ ಬೇಜಾರು ಬಂದು ಬಿಟ್ಟಿದೆ" ಅಂದ !!
-------
ನಾನು ಬರೆದಿದ್ದ ಬಿಸಿ ಬಿಸಿ ಕಾಪಿಯನ್ನು ಕೈಗೆತ್ತಿಕೊಂಡು ಸಂಪೂರ್ಣ ಓದಿದ ನನ್ನಾಕೆ ಆಶ್ಚರ್ಯದಿಂದ ಕೇಳಿದಳು "ಅಲ್ರೀ, ಹುಟ್ಟಿದಾಗಿನಿಂದ ಚಾಮರಾಜಪೇಟೆ ಬಿಟ್ಟು ಬೇರೆ ಪೇಟೆ ಗೊತ್ತಿಲ್ಲ ನಿಮಗೆ. ನಿಮ್ಮ ಈ ಹಳ್ಳಿ ಯಾವುದೂ ಅಂತೀನಿ" ನಾನು ಹೇಳಿದೆ "ನನಗೂ ಗೊತ್ತಿಲ್ಲ ಕಣೆ .. ಅದಕ್ಕೇ ನೋಡು ಹಳ್ಳಿ ಹೆಸರು ಎಲ್ಲೂ ಹೇಳಲಿಲ್ಲ. ಕೆಲವೆಲ್ಲ ಸುಮ್ಮನೆ ಕಲ್ಪನೆ ಅಷ್ಟೇ". ಪ್ರತಿಯನ್ನು (ಲ್ಯಾಪ್ ಟಾಪ್ ಎಂದೂ ಓದಿಕೊಳ್ಳಬಹುದು) ಕೆಳಗಿಟ್ಟವಳು ಮತ್ತೊಮ್ಮೆ ಕೈಗೆತ್ತಿಕೊಂಡು "ಈ ನಿಂಗಿ ಬಗ್ಗೆ ಬರೆದಿರೋದು ನೋಡಿದರೆ, ಮೂಲೆ ಮನೆ ಶಾರದಮ್ಮನ ಮಗಳು ಆಡೋ ರೀತೀನೇ ಇದೆ. ಈ ವಿಷಯ ಅವಳ ಬಗ್ಗೇನೇ ಬರೆದಿದ್ದಾ?" "ಅದನ್ನೇ ಕಣೆ ನಾನು ಆಗಲೇ ಹೇಳಿದ್ದು ... ಕೆಲವೆಲ್ಲ ಕಲ್ಪನೆ ಅಷ್ಟೇ ... " "ಅಂದ್ರೇ, ನಿಂಗಿ ವಿಷಯ ಕಲ್ಪನೆ ಅಲ್ಲಾ ಅನ್ನಿ"
ಇನ್ನೆಷ್ಟು ಹತ್ತಿ ಬಿಡಿಸಿದ ಹಾಗೆ ಬಿಡಿಸಿ ಬಿಡಿಸಿ ಹೇಳಲಿ ನೀವೇ ಹೇಳಿ? ಅದಕ್ಕೇ ಅದನ್ನ ಅವಳ ಕಲ್ಪನೆಗೆ ಬಿಟ್ಟು ಬಿಟ್ಟಿದ್ದೀನಿ !
Comments
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by Jayanth Ramachar
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by Chikku123
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by gopaljsr
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by ಸುಮ ನಾಡಿಗ್
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by sasi.hebbar
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by partha1059
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by kamath_kumble
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by Aravind M.S
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by RAMAMOHANA
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by nagarathnavina…
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by MADVESH K.S
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by saraswathichandrasmo
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by ಗಣೇಶ
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by vikraaditya
ಉ: ಸವಿ ಸವಿ ನೆನಪು ಸಾವಿರ ನೆನಪು !
ಉ: ಸವಿ ಸವಿ ನೆನಪು ಸಾವಿರ ನೆನಪು !
In reply to ಉ: ಸವಿ ಸವಿ ನೆನಪು ಸಾವಿರ ನೆನಪು ! by manju787
ಉ: ಸವಿ ಸವಿ ನೆನಪು ಸಾವಿರ ನೆನಪು !