ಸುಭಾಷಿಣಿ (ವಿಶ್ವಕಥಾಕೋಶ -೫)

ಸುಭಾಷಿಣಿ (ವಿಶ್ವಕಥಾಕೋಶ -೫)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಐದನೆಯ ಸಂಪುಟ ‘ಸುಭಾಷಿಣಿ'. ಸುಭಾಷಿಣಿ. ಆದರೆ ಯಾವ ಮಾತನ್ನು ಆಡಲಾರಳು. ಭಾರತ ಮತ್ತು ನೆರೆಹೊರೆ ರಾಷ್ಟ್ರಗಳ ಬೃಹತ್ ಜನಸಮುದಾಯದ ಬಹು ಭಾಗದ ಕಥೆ ಇದೇ. ಈ ಸಂಪುಟದಲ್ಲಿ ಇಪ್ಪತ್ತಮೂರು ಕಥೆಗಾರ/ಕಥೆಗಾರ್ತಿಯರು ತಮ್ಮ ಕೃತಿಯಲ್ಲಿ ಜನತೆಯ ಮೂಕಮೌನಕ್ಕೆ ಧ್ವನಿ ನೀಡಿದ್ದಾರೆ.

ಈ ಪುಸ್ತಕದಲ್ಲಿ ೨೩ ಕಥೆಗಳೆಂದರೆ. ಭಾರತ ದೇಶದ ಕಥೆಗಳಾದ ಸುಭಾ (ರವೀಂದ್ರನಾಥ ಠಾಕೂರ್), ಗಫೂರನ ಎತ್ತು (ಶರಶ್ಚಂದ್ರ ಚಟರ್ಜಿ), ಹೆಣದ ಬಟ್ಟೆ ( ಪ್ರೇಮಚಂದ್), ಬೂದಿ ಮುಚ್ಚಿದ ಕಿಡಿ (ಯಶಪಾಲ್), ದೇವರೆಲ್ಲಿ? (ರಷೀದಾ ಜಹಾನ್), ಬಾವುಟವನ್ನು ಕೈಗಿತ್ತರು (ಕೃಷನ್ ಚಂದರ್), ಸಾಹೇಬ ಭೋಜನಕ್ಕೆ ಬಂದಾಗ (ಭೀಷ್ಮ ಸಾಹನಿ), ಹುಕ್ಕ (ಲಕ್ಷ್ಮೀನಾಥ ಬೇಜಬರುವ), ಇರುವೆಗಳು (ಗೋಪೀನಾಥ ಮೊಹಂತಿ), ವಧುವಿನ ಪೋಷಾಕು (ಅಖ್ತರ್ ಮೊಹಿ-ಉದ್-ದಿನ್), ಹೆಣ್ಣು ಮತ್ತು ಮಧುಪಾತ್ರೆ (ಅಮೃತಾ ಪ್ರೀತಮ್), ಒಂದು ಪತ್ರ ( ಧೂಮಕೇತು), ಬರಬಾದ್ಯಾ ಕಂಜಾರಿ (ಅಣ್ಣಾಭಾವು ಸಾಠೆ), ಹೂವೊಂದು ಅರಳಿತು (ಚಲಂ), ಹಗಲು ಹೊತ್ತಿನ ಒಂದು ಪ್ಯಾಸೆಂಜರ್ ಗಾಡಿಯಲ್ಲಿ (ಜಯಕಾಂತನ್), ಕುರುಡನ ಸಂತೃಪ್ತಿ (ತಗಳಿ ಶಿವಶಂಕರ್ ಪಿಳ್ಳೆ), ಸುಳ್ಳುಗಾರ (ಮುಲ್ಕರಾಜ್ ಆನಂದ್).

ಪಾಕಿಸ್ತಾನ ದೇಶದ ಹುತಾತ್ಮರನು ಮಾಡಿ.. (ಸಾದತ್ ಹಸನ್ ಮಂಟೋ), ಗ್ಯಾಟೋ (ಅಶ್ಫಕ್ ಅಹ್ಮದ್). ಬಾಂಗ್ಲಾದೇಶದ ಜಲರೇಖೆ (ಸೆಲೀನಾ ಹುಸೇನ್), ಶ್ರೀಲಂಕಾದ ಬುಡಕಿತ್ತ ಗಿಡ (ಗುಣದಾಸ ಅಮರಸೇಕರ), ನೇಪಾಳ ದೇಶದ ಕಥೆ ಹುಲ್ಲುಬೆಂಕಿ (ಗುರುಪ್ರಸಾದ ಮೈನಾಲಿ), ಬರ್ಮಾ ದೇಶದ ಅವನ ಹೆಂಡತಿ (ಜಾಗ್ಯೀ)

ಇಲ್ಲಿರುವ ಕೆಲವು ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ವಿವಿಧ ಖ್ಯಾತ ಲೇಖಕರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೨೫೦ ಪುಟಗಳನ್ನು ಹೊಂದಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮುಂತಾದ ವಿದೇಶಗಳ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.