ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!

ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!

ವೇದಿಕೆಯ ಮೇಲಿನ ಸಂಘರ್ಷಗಳೇ ಬೇರೆ, ಬದುಕಿನ ಸೌಹಾರ್ದಗಳೇ ಬೇರೆ. ಮನುಷ್ಯತ್ವವನ್ನು ತೋರುವುದು ಕಷ್ಟವೇನಲ್ಲ ಎಂದು ತೋರಿಸುವ ನಿಜಜೀವನದ ಘಟನೆ ಇಲ್ಲಿದೆ. ಹೆಸರಾಂತ ಸಾಹಿತಿ ಮತ್ತು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ತಮ್ಮ ಹರಿತವಾದ ಬರಹ ಮತ್ತು ಮಾತುಗಳಿಂದ ಮಿತ್ರರನ್ನು ಗಳಿಸುತ್ತಿದ್ದರು. ಹಾಗೆಯೇ ಶತ್ರುಗಳನ್ನೂ ಗಳಿಸುತ್ತಿದ್ದರು. ಅವರು ಕರ್ನಾಟಕ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿದ್ದರು.

1980ರಲ್ಲಿ ಬೆಳಗಾವಿಯಲ್ಲಿ ನಡೆಯಲಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಅವರ ಹೆಸರು ಸೂಚಿತವಾಗಿತ್ತು. ಆದರೆ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿದ್ದ ಡಾ. ಹಾ.ಮಾ ನಾಯಕರು ಅವರ ಹೆಸರನ್ನು ವಿರೋಧಿಸಿದ್ದರು. ಆದರೂ ಕಟ್ಟೀಮನಿಯವರ ಹೆಸರು ಅಂಗೀಕೃತವಾಯಿತು. ಅವರು ಅಧ್ಯಕ್ಷರೂ ಆದರೂ. ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ನಿಂತು ಕಟ್ಟೀಮನಿಯವರು ಭಾಷಣ ಮಾಡುವಾಗ ಅವರು ಸಾಹಿತ್ಯ ಅಕಾಡೆಮಿಗಳನ್ನು ಖಂಡಿಸುತ್ತ ಆಡಿದ ಮಾತುಗಳು ಸಭೆಯಲ್ಲಿದ್ದ ಹಾ.ಮಾ. ನಾಯಕರಿಗೆ ಹಿಡಿಸಲಿಲ್ಲ. ಅವರು ಎದ್ದು ನಿಂತು ಪ್ರತಿಭಟಿಸಿದರು. ಬಿಸಿ ಬಿಸಿ ವಾಗ್ವಾದಗಳು ನಡೆದವು.

ಆನಂತರ ಯಾರೋ ಮಧ್ಯೆ ಪ್ರವೇಶಿಸಿ ಇಬ್ಬರಿಗೂ ಸಮಾಧಾನ ಮಾಡಿ ಸುಮ್ಮನಾಗಿಸಿದರು. ಆದರೂ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿಬಿಟ್ಟಿತ್ತು. ಇದಾದ ಕೆಲವು ತಿಂಗಳ ನಂತರ ಯಾವುದೋ ಸಭೆಯಲ್ಲಿ ಇಬ್ಬರ ಭೇಟಿಯಾಯಿತು. ಇಬ್ಬರೂ ಬೆಳಗಾವಿಯ ಘಟನೆಯ ಗುಂಗಿನಲ್ಲೇ ಇದ್ದರು. ಆದರೂ ಪರಸ್ಪರರ ಕುಟುಂಬಗಳ ಯೋಗಕ್ಷೇಮ ವಿಚಾರಿಸಿದರು. ಕಟ್ಟೀಮನಿಯವರಿಗೆ ನಾಯಕರ ಮಗಳು ಮಣಿಪಾಲದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾರೆಂದು ತಿಳಿದಾಗ, ‘ಮೈಸೂರಿನಲ್ಲೇ ಮೆಡಿಕಲ್ ಕಾಲೇಜಿರುವಾಗ ದೂರದ ಮಣಿಪಾಲಕ್ಕೆ ಏಕೆ ಮಗಳನ್ನು ಕಳುಹಿಸಿದಿರಿ? ಮೈಸೂರಿಗೇ ವರ್ಗ ಮಾಡಿಸಿಕೊಳ್ಳಬಾರದಿತ್ತೇ?’ ಎಂದು ಕೇಳಿದರು. ನಾಯಕರು ಹಲವಾರು ಬಾರಿ ಅರ್ಜಿ ಹಾಕಿದರೂ ವರ್ಗಾವಣೆ ಸಾಧ್ಯವಾಗಿಲ್ಲ ಎನ್ನುತ್ತಾ ಮಾತು ಮುಗಿಸಿದರು.

ಆನಂತರ ಆ ವಿಷಯವನ್ನು ಮರೆತೂ ಹೋದರು. ಆದರೆ 15 ದಿನಗಳಲ್ಲಿ ಸರಕಾರದಿಂದಲೇ ಅವರ ಮಗಳನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ವರ್ಗ ಮಾಡಿರುವ ಆದೇಶ ಬಂದಾಗ ನಾಯಕರಿಗೂ, ಅವರ ಮಗಳಿಗೂ ಸಂತಸವಾಯಿತು. ಆದರೆ ತಮ್ಮ ಪ್ರಯತ್ನವಿಲ್ಲದೆಯೇ ವರ್ಗಾವಣೆ ಹೇಗಾಯಿತೆಂಬ ಆಶ್ಚರ್ಯವಿತ್ತು. ಅವರ ಆಶ್ಚರ್ಯ ಪರಿಹಾರವಾಗಲು ಬಹಳ ದಿನ ಬೇಕಾಗಿಲ್ಲ. ಏಕೆಂದರೆ ಆಗಿನ ಆರೋಗ್ಯ ಸಚಿವ ಸಿದ್ಧವೀರಪ್ಪನವರು ಸಿಕ್ಕಾಗ ‘ತಮ್ಮ ಮಗಳನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ವರ್ಗ ಮಾಡಿದ ಆದೇಶ ಬಂತಲ್ಲವೇ? ಇದರ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಕಟ್ಟೀಮನಿಯವರು ನನ್ನೊಂದಿಗೆ ಮಾತನಾಡಿದ್ದರು.

ಅವರ ಮೂಲಕ ಹೇಳಿಸುವ ಬದಲು, ನೀವೇ ನನ್ನನ್ನು ನೇರವಾಗಿ ಕೇಳಬಹುದಿತ್ತಲ್ಲಾ?’ ಎಂದಾಗ, ನಾಯಕರಿಗೆ ತಮ್ಮ ಮಗಳ ವರ್ಗಾವಣೆ ಕಾರಣ ಗೊತ್ತಾಗಿ ಆಶ್ಚರ್ಯ ಇನ್ನೂ ಹೆಚ್ಚಾಯಿತಂತೆ. ತಕ್ಷಣ ನಾಯಕರು ಕಟ್ಟೀಮನಿಯವರಿಗೆ ಫೋನ್ ಮಾಡಿ ‘ಕಟ್ಟೀಮನಿಯವರೇ ತಮಗೆ ಧನ್ಯವಾದಗಳು. ಆದರೆ ನೀವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದವನು ನಾನು. ತಮ್ಮ ಅಧ್ಯಕ್ಷ ಭಾಷಣಕ್ಕೆ ಅಡ್ಡಿಯೊಡ್ಡಿ ವಾಗ್ವಾದಕ್ಕೆ ನಿಂತವನು ನಾನು. ಆದರೂ ತಾವು ನನ್ನ ಮಗಳಿಗೆ ಸಹಾಯ ಮಾಡಿದ್ದೀರಿ! ತಮಗಿದು ಹೇಗೆ ಸಾಧ್ಯವಾಯಿತು?’ ಎಂದರು.

ಆಗ ಕಟ್ಟೀಮನಿಯವರು ಗಟ್ಟಿಯಾಗಿ ನಕ್ಕು ‘ಅದು ಸೈದ್ಧಾಂತಿಕೆ ಸಂಘರ್ಷ! ಇದು ಮಾನವೀಯ ಸೌಹಾರ್ದ!’ ಎಂದರಂತೆ. ಈಗ ನಾಯಕರೂ ಇಲ್ಲ, ಕಟ್ಟೀಮನಿಯವರೂ ಇಲ್ಲ. ಇಬ್ಬರೂ ಮಹಾನುಭಾವರ ಪುಣ್ಯಸ್ಮರಣೆಗೆ ಪ್ರಮಾಣವನ್ನು ಸಲ್ಲಿಸೋಣ. ಸಾಹಿತ್ಯದ ವೇದಿಕೆಗಳಲ್ಲಿ ಸಂಘರ್ಷಗಳನ್ನು ಮಾಡುವವರು ಇಂಥ ಪ್ರಸಂಗಗಳನ್ನು ಗಮನಿಸಬಹುದಲ್ಲವೇ?    

ಕೃಪೆ: ವಿಶ್ವ ವಾಣಿ.                                     

ಸಂಗ್ರಹ: ವೀರೇಶ್ ಅರಸಿಕೆರೆ.