ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ

ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ

ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿರ ತಿಳಿಯುವ ಸುಗಂಧಭರಿತ ತಾಣ .

ಅಲ್ಲಿ ಸುಖಿಸುತ್ತಿರುವ ಹಲವು ಚೇತನಗಳಿವೆ. ಹಾಗೆಯೇ ಹೊರಗೆ ದುಃಖಿಸುತ್ತಿರುವ ಮನಸ್ಸುಗಳೂ ಇವೆ. ದ್ವಾರಪಾಲಕರಿಗೆ ನೇರವಾಗಿ ಆದೇಶವಾಗಿದೆ "ಕಪ್ಪುಪಟ್ಟಿ ಧರಿಸಿ ಬರೋರನ್ನ ಒಳ ಬಿಡಬೇಡಿ". ಆ ಪಟ್ಟಿಯನ್ನು ಯಾರೂ ಆಂಟಿಸಿದ್ದಲ್ಲ. ಬೇಡ ಎಂದು ಕಿತ್ತುಹಾಕೋಕು ಬರುವುದಿಲ್ಲ .

ಸುಂದರ ಭೂಮಿಯಲ್ಲಿ ಬದುಕನ್ನು ತೊರೆದು, ಎದುರಿಸಲಾಗದೇ, ಆತ್ಮವನ್ನು ಬೇರ್ಪಡಿಸಿ ಹೊರಟವರಿಗೆ ಕಪ್ಪುಪಟ್ಟಿ ತಾನಾಗಿಯೇ ಅಂಟುತ್ತದೆ. ಗುರಿಗೆ, ಸಾಧನೆಗೆ ಅವಸರವನ್ನು ಒಪ್ಪಬಹುದು .

ಸಾವಿಗೇಕೆ ಅವಸರ. ಸತ್ತು ಸಾಧಿಸುವುದೇನು ? ಬದುಕಿ ತೋರಿಸಲಾಗದೆ ಹೇಡಿ ಮರಣವ ಬೆಂಬಲಿಸುವವರಾರಿಲ್ಲ. ಭಗವಂತ ಮುತುವರ್ಜಿಯಿಂದ ಸಮಯ ಕೊಟ್ಟು ಬದುಕ ನೀಡಿ ರೂಪಿಸಿ ನಮ್ಮ ಕಳಿಸಿರುವಾಗ ಭೂಮಿಗೆ, ಅವ ನಮ್ಮೊಳಗೆ ಸ್ಥಾಯಿಯಾಗಿರುವ.

ಜೀವವನ್ನ ತೊರೆದು ಓಡಿಸುವ ಇರಾದೆ ಏಕೋ ಗೊತ್ತಿಲ್ಲ ? ಆ ಬಾಗಿಲೊಳಗೆ ದೇವ ದುಃಖಿಸಿದ್ದಾನೆ. ಭೂಮಿಗೆ ಕಳುಹಿಸಿದ ಕಾರಣವ ತೊರೆದು ಬಂದಾಗ ಒಳ ಸೇರಿಸದೇ ಹೊರಗಿಟ್ಟಿದ್ದಾನೆ. ಅವನೊಳಗೆ ಸಾಗಲು ಕಾಲ ಬರಲಿ, ಅವನೇ ಕರೆಯಲಿ, ಕರೆ ಬರದೇ ನಾವೇ ಸೃಷ್ಟಿಸಿದರೆ ಹೊರಗಡೆ ಕಾಯುತ್ತಲೇ ಇರಬೇಕಾಗುತ್ತದೆ.

-ಧೀರಜ್ ಬೆಳ್ಳಾರೆ 

ಇಂಟರ್ನೆಟ್ ಚಿತ್ರ ಕೃಪೆ