ಸ್ಟೇಟಸ್ ಕತೆಗಳು (ಭಾಗ ೪೧೨) - ವಿಪರ್ಯಾಸ

ರಸ್ತೆಯಲ್ಲಿ ಬಿದ್ದಿದ್ದ ತರಗೆಲೆಗಳು ಕ್ಷಣದಲ್ಲಿ ರಸ್ತೆಬದಿಗೆ ಹಾರಿ ತಲುಪಿದವು ಕಾರು ಅಷ್ಟು ವೇಗವಾಗಿ ರಸ್ತೆಯನ್ನು ದಾಟಿ ಹೋಗುತ್ತಿತ್ತು. ರಸ್ತೆಯ ಬಿಸಿ ತಡೆಯಲಾರದೆ ಕ್ಷಣದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆನ್ನುವ ಧಾವಂತದಲ್ಲಿ ಇದ್ದ ಹಾಗೆ ಅದರ ಚಕ್ರಗಳು ತಿರುಗುತ್ತಿದ್ದವು. ವೇಗದ ಮುಳ್ಳು ತನ್ನ ಅಂತಿಮ ರೇಖೆಯನ್ನೇ ಮುಟ್ಟುತ್ತಿತ್ತು. ಗಾಡಿ ಬಿಡುತ್ತಿರುವನಿಗೆ ಈ ವೇಗದ ಅಪಾಯದ ಅರಿವಿರಲಿಲ್ಲ. ಉಬ್ಬು, ತಗ್ಗು ದಿನ್ನೆಗಳು ರಸ್ತೆಯಲ್ಲಿರುವ ಹೊಂಡಗಳು, ಓಡಾಡುವ ಜನರು, ಇದ್ಯಾವುದೂ ಗಮನಕ್ಕೆ ಬರಲಿಲ್ಲ. ಬರುತ್ತಿರುವಾಗ ಒಬ್ಬನಿಗೆ ತಾಗಿ ಮುಂದುವರಿದರೂ ನಿಲ್ಲಲಿಲ್ಲ, ಹಾಗೆ ಮುಂದೆ ಚಲಿಸುತ್ತಾ ಶಾಲೆ ಹುಡುಗನೊಬ್ಬನಿಗೆ ಹೊಡೆದು ಅವನದೇ ತಪ್ಪು ಎಂಬಂತೆ ಬೈದು ಮುಂದುವರಿದ. ಒಂದಷ್ಟು ಅವಘಡಗಳನ್ನು ಮಾಡುತ್ತಾ ಸಾಗುತ್ತಿದ್ದಾನೆ ವಿನಹ ಎಲ್ಲೂ ನಿಲ್ಲಿಸಲೇ ಇಲ್ಲ. ವೇಗದ ತೀವ್ರತೆಗೆ ಎಲ್ಲರಿಗೂ ಭಯವಾಗುತ್ತಿತ್ತು. ಇದು ಕಾರಿನ ತಪ್ಪಲ್ಲ, ಒಳಗೆ ಕುಳಿತು ಕಾರಿಗೆ ದಿಕ್ಕು ತೋರಿಸುತ್ತಿದ್ದ ಚಾಲಕನದೇ ತಪ್ಪು. ಎಲ್ಲೂ ನಿಲ್ಲದ ಗಾಡಿ ಕಾರಿನ ಮುಂದೆ ಹಾದುಹೋದ ಬೆಕ್ಕನ್ನ ನೋಡಿ ಒಂದೇ ಕ್ಷಣ ಬ್ರೇಕು ಬಡಿದು ನಿಂತುಬಿಟ್ಟಿತು. ಬೆಕ್ಕು ಅಡ್ಡ ಹೋದರೆ ಅದು ಕೆಟ್ಟ ಶಕುನ, ಕಾರಿನೊಳಗಿನವನಿಗೆ ಅಪಾಯವಿದೆ ಅನ್ನೋದು ಚಾಲಕನ ಯೋಚನೆ. ಹಾಗಾದರೆ ಹಿಂದೆ ಆ ಕಾರು ಚಲಾಯಿಸುತ್ತಿದ್ದ ಚಾಲಕ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತದ ಸಣ್ಣ ಸುಳಿವೂ ಕಾಣಲಿಲ್ಲ. ಭವಿಷ್ಯದ ಯೋಜನೆ ಇರುವವನಿಗೆ ಭೂತದಲ್ಲಾದ ಕಾರ್ಯಗಳ ಬಗ್ಗೆ ಕಿಂಚಿತ್ತು ಗಮನವಿಲ್ಲ. ನಿಲ್ಲಬೇಕಾದ ಕಡೆ ಇಲ್ಲದೆ ಉಳಿದ ಕಡೆ ಎಲ್ಲ ಸಾಗುತ್ತಲೇ ಇದೆ. ಇದಕ್ಕೆ ವಿಪರ್ಯಾಸ ಎನ್ನದೆ ಮತ್ತೆ ಏನು ಹೇಳೋಣ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ