ಹಸಿವು ನಿವಾರಿಸುವ ಔಷಧಿ...

ಹಸಿವು ನಿವಾರಿಸುವ ಔಷಧಿ...

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತಾರೆ.....

ಡಾಕ್ಟರ್ ಅಷ್ಟೇ ಏಕೆ, ಮಾನವೀಯ ಕಾಳಜಿಯ ಪ್ರತಿಯೊಬ್ಬರ ಮನಕಲಕುವ ದೃಶ್ಯವಿದು. ಗಾಳಿ ನೀರಿನ ನಂತರ ಅತ್ಯವಶ್ಯಕ ಅಂಶ ಆಹಾರ. ಆತ ರಾಜನಾಗಿರಲಿ, ಯೋಗಿಯಾಗಿರಲಿ, ಭಿಕ್ಷುಕನಾಗಿರಲಿ, ಕಳ್ಳನೋ, ಸುಳ್ಳನೋ ಊಟ ಮಾತ್ರ ಬೇಕೇ ಬೇಕು.

ಸೂಡಾನ್, ಇಥೋಪಿಯಾ, ಸಿರಿಯಾ ಇತ್ಯಾದಿ ಗಲಭೆಗ್ರಸ್ತ ಅತ್ಯಂತ ಹಿಂದುಳಿದ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿರುವ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಊಹಿಸಿಕೊಳ್ಳಬಹುದು. ಅದು ವಿಷಾದಕರ. ಆದರೆ ಭಾರತದಂತಹ ಅತ್ಯಂತ ಸಂಪದ್ಭರಿತ ನೈಸರ್ಗಿಕ ಸಂಪನ್ಮೂಲ ಗಳನ್ನು ಹೊಂದಿರುವ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ದೇಶದಲ್ಲಿ ಈ ಸ್ಥಿತಿ ಮುಂದುವರೆದಿರುವುದು ನಿಜಕ್ಕೂ ನಾಚಿಕೆಗೇಡು.

ಹೌದು, ಈಗಿನ ನಗರ ಕೇಂದ್ರೀತ 1990 ರ ನಂತರ ಹುಟ್ಟಿದ ಬಹುತೇಕ ಯುವಜನತೆಗೆ ಹಸಿವಿನ ಅನುಭವ ಅಷ್ಟಾಗಿ ಕಾಡಿರುವುದಿಲ್ಲ. ಆದರೆ ಈ ಕ್ಷಣಕ್ಕೂ ದಿನನಿತ್ಯದ ಊಟಕ್ಕಾಗಿ ಪರಿತಪ್ಪಿಸುತ್ತಿರುವ ಲಕ್ಷಾಂತರ ಕುಟುಂಬಗಳು  ನಮ್ಮ ಸಮಾಜದಲ್ಲಿ ನಮ್ಮ ನಡುವೆಯೇ ವಾಸಿಸುತ್ತಿವೆ.

ಇನ್ನೊಂದು ವಿಷಯ ಗಮನವಿರಲಿ. ಅವರು ಕಷ್ಟ ಪಡುತ್ತಿರುವುದು ಪೌಷ್ಟಿಕ ಆಹಾರಕ್ಕಾಗಿ ಅಲ್ಲ. ಹೊಟ್ಟೆ ತುಂಬಿಸಿ ಕೊಳ್ಳಲು ಸಿಕ್ಕ ಸಿಕ್ಕ ಆಹಾರ ತಿನ್ನಲು. ಅನ್ನ, ಮುದ್ದೆ, ರೊಟ್ಟಿಗಾಗಿ. ಅವರಿಗೆ ನಿಮ್ಮ ಸಂವಿಧಾನ, SMART CITY, FDI, GLOBAL LEADER, BULLET TRAIN, ಆಧ್ಯಾತ್ಮ , 4G, 5G ಏನೂ ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

ಆದರೆ ಅಂತಹ ಜನರ ಒಳಿತಿಗಾಗಿ ಸರ್ಕಾರಗಳು ಕೋಟ್ಯಾಂತರ ಹಣ ಖರ್ಚುಮಾಡುತ್ತಿವೆ. ನನ್ನ ಅಂದಾಜಿನ ಪ್ರಕಾರ ಅಷ್ಟು ಹಣ ನಿಜವಾಗಿ ಆ ಜನರಿಗೆ ತಲುಪಿದ್ದಿದ್ದರೆ ಅವರೂ ಇಷ್ಟು ಹೊತ್ತಿಗೆ ನಮ್ಮ ನಿಮ್ಮಂತೆ 5G ಗಳೊಂದಿಗೆ FACEBOOK , WATSAPP ಗಳಲ್ಲಿ ಸಂತೋಷದಿಂದ CHATTING ಮಾಡಿಕೊಂಡಿರುತ್ತಿದ್ದರು. ಹಾಗಾದರೆ ನಾವು ದಾರಿ ತಪ್ಪಿದ್ದು ಎಲ್ಲಿ.? 

ಮುಖ್ಯವಾಗಿ ಆಡಳಿತ ಮತ್ತು ಅಧಿಕಾರ ಶಾಹಿಯ ನಿರ್ಲಜ್ಜ ಭ್ರಷ್ಟತನ ಜೊತೆಗೆ ನಮ್ಮ ನಿಮ್ಮೆಲ್ಲರ ಸ್ವಾರ್ಥ, ಉಢಾಪೆ ವರ್ತನೆ. ನನ್ನನ್ನೂ ಸೇರಿದಂತೆ ನಾವೆಲ್ಲಾ ವ್ಯವಸ್ಥೆಯನ್ನು ಬಹಳಷ್ಟು ಟೀಕಿಸುತ್ತೇವೆ. ಹಾಗೆಯೇ  ಏನೂ ಮಾಡಲಾಗದ ಅಸಹಾಯಕತೆಯನ್ನೂ ವ್ಯಕ್ತಪಡಿಸುತ್ತೇವೆ.ಇದಕ್ಕೂ ಕಾರಣವಿದೆ. ಇಡೀ ಸಮಾಜ ಹಣ ಅಧಿಕಾರವೆಂಬ ಭ್ರಮೆಯ ಹಿಂದೆ ಬಿದ್ದು "ಹೇಗೋ ನಡೆಯುತ್ತದೆ "ಎಂಬ ಉದಾಸೀನತೆಗೆ ಬಲಿಬಿದ್ದು ಶೇಕಡ 95% ರಷ್ಟು ಜನರು ಅದನ್ನೇ ಪಾಲಿಸುತ್ತಿದ್ದಾರೆ. 

ಚಿಂತನೆ, ಬದಲಾವಣೆ ಮಾಡುವ ಮನಸ್ಸುಗಳು ಅತಿ ಕಡಿಮೆ ಹಾಗೂ ಒಗ್ಗಟ್ಟಾಗುವುದಿಲ್ಲ. ಒಂದು ವೇಳೆ ಮತ ಹಾಕುವ ಜನರು ಅದೃಷ್ಟವಶಾತ್ ಒಂದಾಗಿ ವಿವೇಚನೆಯಿಂದ ವರ್ತಿಸಿದ್ದೇ ಆದರೆ ಈ ರೀತಿಯ ನೋವಿನ ಚಿತ್ರಗಳನ್ನು ನೀವು ಎಂದೆಂದಿಗೂ ಭಾರತದಲ್ಲಿ ನೋಡುವ ಸಾಧ್ಯತೆಯೇ ಇಲ್ಲ. ಹೆಣ ಸಾಗಿಸಲು ವಾಹನ ಸಿಗದಿರುವ ಸ್ಥಿತಿ ಬರುವುದೇ ಇಲ್ಲ.

ನಾವು ಬದುಕಿರುವ ಸಂದರ್ಭದಲ್ಲಿಯೇ ಹಸಿವು ಮುಕ್ತ ರಾಷ್ಟ್ರ ನಮ್ಮದಾಗಲಿ. ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಪರಿವರ್ತನೆ ಆದಲ್ಲಿ ಮಾತ್ರ ಇದು ಸಾಧ್ಯ.

ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 154 ನೆಯ ದಿನ ಬಳ್ಳಾರಿ ಜಿಲ್ಲೆಯಿಂದ ಹೊಸ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ