೨. ದೊಡ್ಡ ಮರ ಮತ್ತು ರಾಜ

೨. ದೊಡ್ಡ ಮರ ಮತ್ತು ರಾಜ

ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ. ಉದ್ಯಾನದ ಮಧ್ಯದಲ್ಲಿದ್ದ ಹಳೆಯ ದೊಡ್ಡ ಮರವೊಂದನ್ನು ಕಂಡಾಗೆಲ್ಲ ರಾಜನಿಗೆ ಅಸಮಾಧಾನವಾಗುತ್ತಿತ್ತು. ಕೊನೆಗೊಂದು ದಿನ ಆ ಮರವನ್ನು ಕಡಿದು, ಅದು ಇರುವ ಜಾಗದಲ್ಲಿ ಕಾರಂಜಿಯನ್ನು ನಿರ್ಮಿಸಬೇಕೆಂದು ತನ್ನ ಸೇವಕರಿಗೆ ರಾಜ ಆಜ್ನಾಪಿಸಿದ.

ಅದಾಗಿ ಕೆಲವೇ ದಿನಗಳಲ್ಲಿ ಪಕ್ಷಿಗಳು, ಚಿಟ್ಟೆಗಳು ಮತ್ತು ಪ್ರಾಣಿಗಳು ಉದ್ಯಾನದಿಂದ ಕಾಣೆಯಾದವು. ರಾಜನಿಗೆ ಅಚ್ಚರಿ. ಯಾಕೆ ಅವು ಕಾಣಿಸುತ್ತಿಲ್ಲ? ಎಂದು ಮಂತ್ರಿಯನ್ನು ಪ್ರಶ್ನಿಸಿದಾಗ ಮಂತ್ರಿ ಉತ್ತರಿಸಿದ, “ಮಹಾರಾಜರೇ, ಪಕ್ಷಿಗಳು ಮತ್ತು ಪ್ರಾಣಿಗಳು ಆ ಹಳೆಯ ದೊಡ್ಡ ಮರದ ಹಣ್ಣು ಮತ್ತು ಬೀಜಗಳನ್ನು ತಿನ್ನುತ್ತಿದ್ದವು. ಚಿಟ್ಟೆಗಳು ಮತ್ತು ಜೇನ್ನೊಣಗಳು ಅದರ ಹೂಗಳ ಮಕರಂದ ಹೀರುತ್ತಿದ್ದವು. ಈಗ ಇಲ್ಲಿ ಆ ಮರ ಇಲ್ಲದಿರುವ ಕಾರಣ, ಅವೆಲ್ಲವೂ ಬೇರೆ ಉದ್ಯಾನಕ್ಕೆ ಹೋಗಿವೆ.” ಈಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಹಾಗಾಗಿ, ತನ್ನ ಉದ್ಯಾನದಲ್ಲಿ ಮತ್ತು ರಾಜ್ಯದಲ್ಲಿ ಎಲ್ಲೆಡೆ ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ರಾಜ ಆದೇಶಿಸಿದ.