‘ಮಯೂರ' ಹಾಸ್ಯ - ಭಾಗ ೩೪

‘ಮಯೂರ' ಹಾಸ್ಯ - ಭಾಗ ೩೪

ವಜ್ರಾಸನ

ನನ್ನ ನಾದಿನಿ ಮಗ ಚಿನ್ಮಯನಿಗೆ ಯೋಗಾಸನದ ಮಹತ್ವ ತಿಳಿಸಿ ಹೇಳಲಾಗುತ್ತಿತ್ತು. ಉದಾಹರಣೆಗೆ ವೃಕ್ಷಾಸನ ಮಾಡುವುದರಿಂದ ಏಕಾಗ್ರತೆ, ಸೂರ್ಯ ನಮಸ್ಕಾರದಿಂದ ಎಲ್ಲಾ ಅಂಗಗಳಿಗೂ ರಕ್ತ ಸಂಚಾರ, ವಜ್ರಾಸನದಿಂದ ದೇಹ ವಜ್ರದಷ್ಟು ಧೃಢವಾಗುತ್ತದೆ, ಜೊತೆಗೆ ತಿಂದ ಆಹಾರ ಜೀರ್ಣವಾಗುತ್ತದೆ...ಎಂದು.

ಮಾರನೇ ದಿನ ಚಿನ್ಮಯ ಮಾವನ ಜೊತೆ ವಾಕಿಂಗ್ ಮುಗಿಸಿಕೊಂಡು ಬರುವಾಗ ಬಿಸ್ಕತ್, ಚಾಕೋಲೆಟ್, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದಿದ್ದ. ತಿಂಡಿಯಾದ ಮೇಲೆ ಎಲ್ಲವನ್ನೂ ಇಟ್ಟುಕೊಂಡು ವಜ್ರಾಸನದಲ್ಲಿ ಕುಳಿತು ತಿನ್ನಲು ಶುರು ಮಾಡಿದ ‘ಈಗ ತಾನೇ ತಿಂಡಿ ಮಾಡಿದ್ದೀಯಾ. ಇವುಗಳನ್ನು ತಿನ್ನಬೇಡ.’ ಎಂದೆ. ‘ನೀವೇ ಹೇಳಿದ್ರಿ? ವಜ್ರಾಸನದಿಂದ ಜೀರ್ಣವಾಗುತ್ತೆ ಅಂತ... ನೋಡಿ, ನಾನು ವಜ್ರಾಸನದಲ್ಲಿ ಕುಳಿತೇ ತಿನ್ನುತ್ತಿದ್ದೇನೆ.’ ಎಂದ.

-ಬಿ.ಎಸ್.ರಾಜಲಕ್ಷ್ಮಿ 

***

‘ಪ್ರಾಣಾಮಾಯಾ’

ಅಮೇರಿಕದಿಂದ ನನ್ನ ಮಗಳು ಹಾಗೂ ಮೊಮ್ಮಕ್ಕಳಾದ ಜಾನಿ ಮತ್ತು ವಿಭು ಬಂದಿದ್ದರು. ಅವರು ಬರುವ ದಿನಾಂಕದಲ್ಲಿ ಸ್ವಲ್ಪ ವ್ಯತ್ಯಾಸವಾದ್ದರಿಂದ ನಾನು ಯಥಾಪ್ರಕಾರ ನನ್ನ ಪ್ರಾಣಾಯಾಮ ತರಗತಿಗಳನ್ನು ಹಾಕಿಕೊಂಡಿದ್ದೆ. ಅವರು ಬಂದ ಮೇಲೆಯೂ ನಿಲ್ಲಿಸುವ ಹಾಗಿರಲಿಲ್ಲ. ೨-೩ ದಿನಗಳಲ್ಲಿ ಮುಗಿಸಿ ಬಿಟ್ಟರೆ ಆಯಿತು ಎಂದು ಪ್ರತೀ ದಿನ ಕ್ಲಾಸು ತೆಗೆದುಕೊಳ್ಳುತ್ತಿದ್ದೆ. ಮೊಮ್ಮಕ್ಕಳು ‘ಅಜ್ಜಿ, ವರ್ಷಕ್ಕೊ, ಎರಡು ವರ್ಷಕ್ಕೊ ಒಮ್ಮೆ ಬರುತ್ತೇವೆ. ನಮ್ಮ ಜೊತೆ ಇರೋದು ಬಿಟ್ಟು ಕ್ಲಾಸಿನಲ್ಲಿ ಕಾಲ ಕಳೆಯೋದಾ? ಪ್ಲೀಸ್ ಅಜ್ಜಿ, ಪ್ರಾಣಾಮಾಯಾ ಬೇಡ' ಎಂದು ಗಲಾಟೆ ಶುರು ಮಾಡಿದರು. ‘ಏನ್ರೋ ಹಂಗಂದ್ರೆ? ಪ್ರಾಣಾಮಾಯಾನಾ?’ ಎಂದು ಆಶ್ಚರ್ಯದಿಂದ ಕೇಳಿದೆ. 'ಅದೇ ಅಜ್ಜಿ, ನೀನು ಕ್ಲಾಸ್ ಮಾಡ್ತಿಯಲ್ಲ, ಪ್ರಾಣಾಮಾಯಾ...' ಎಂದರು. ಭಗವಂತ..ಪ್ರಾಣಾಯಾಮ ನನ್ನ ಮೊಮ್ಮಕ್ಕಳ ಬಾಯಲ್ಲಿ ಪ್ರಾಣಾಮಾಯಾ ಆಯ್ತಲ್ಲ... ಅಂದುಕೊಂಡೆ. 

-ಸಾವಿತ್ರಿ, ನಂಜನಗೂಡು

***

ಮೇಲೆ ಹೋದಳೇನೊ…

ದೀನನಾಥ ಕಾಕಾ ನಮ್ಮ ನೆರೆಮನೆಯವರು. ತುಂಬಾ ಒಳ್ಳೆಯ ವ್ಯಕ್ತಿ. ಆದರೆ ಅವರ ಪತ್ನಿ ಜಗಳಗಂಟಿ. ಸದಾ ಸಿಡುಕುತ್ತ ಮನೆಯ ಶಾಂತಿಯನ್ನು ಕದಡುತ್ತಿದ್ದಳು. ಹೃದಯಾಘಾತದಿಂದ ಅವರು ತೀರಿಕೊಂಡರು. ದೀನನಾಥ ಕಾಕಾ ನೆರೆಮನೆಯವರೊಂದಿಗೆ ಎಲ್ಲಾ ಕಾರ್ಯಗಳನ್ನು ಮುಗಿಸಿ ಮನೆಗೆ ಬಂದರು. ಅಷ್ಟರಲ್ಲಿ ಜೋರು ಗುಡುಗು, ಸಿಡಿಲು, ಮಳೆ ಆರಂಭವಾಯಿತು. ದೀನನಾಥ ಕಾಕಾ ಅಂಗಳಕ್ಕೆ ಬಂದು ಆಕಾಶದತ್ತ ನೋಡುತ್ತ, ‘ಮೇಲೆ ಹೋದಳೂಂತ ಕಾಣುತ್ತೆ' ಎಂದು ಗುನುಗಿದರು. 

-ಶೋಭಾ ಪ್ರಮೋದ್

***

ಕೈ ನೋಯಿಸಿಕೊಂಡೆ

ನಮ್ಮ ದೊಡ್ಡಮ್ಮನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಮೈಸೂರಿನಲ್ಲಿ ನೆರವೇರಿತ್ತು. ಕಾರ್ಯಕ್ರಮಕ್ಕೆ ನಮ್ಮ ಮಾವನವರೂ ಬಂದಿದ್ದರು. ನಿಶ್ಚಿತಾರ್ಥದ ನಂತರ ಗಂಡಿನವರು ಹೆಣ್ಣಿನವರ ಮನೆ ನೋಡಲು ದೊಡ್ಡಮ್ಮನ ಮನೆಗೆ ಬಂದಿದ್ದರು. ಕಾಫಿ, ತಿಂಡಿ, ಮಾತು ಮುಗಿದ ಮೇಲೆ ಗಂಡಿನ ಕಡೆಯವರು ಹೊರಟು ನಿಂತರು. ನಾವೆಲ್ಲರೂ ಅವರನ್ನು ಬೀಳ್ಕೊಡಲು ಹೊರಗೆ ಹೋದೆವು. ಬಸ್ಸಿನಲ್ಲಿ ಹತ್ತಿ ಕುಳಿತ ಮೇಲೂ ವರ ಮತ್ತೆ ಮತ್ತೆ ನಮ್ಮ ಮಾವನವರ ಕಡೆ ಕೈ ಬೀಸಿ ಟಾಟಾ ಮಾಡುತ್ತಲೇ ಇದ್ದ. ಮಾವನವರೂ ಸಹ ಬಸ್ಸು ಕಣ್ಮರೆಯಾಗುವವರೆಗೂ ಖುಷಿಯಿಂದ ಕೈ ಬೀಸುತ್ತಲೇ ಇದ್ದರು. ನಂತರ ಹಿಂದಿರುಗಿ ನೋಡಿದರೆ ಮಾವನ ಹಿಂದೆ ವಧು ನಿಂತಿದ್ದಳು. ‘ಅಯ್ಯೋ, ನನ್ನ ಹಿಂದೆ ಮದುಮಗಳು ನಿಂತಿದ್ದಾಳೆ ಅಂತ ನನಗೆ ಗೊತ್ತೇ ಇರಲಿಲ್ಲ. ಹುಡುಗ ನನಗೇ ಟಾಟಾ ಮಾಡುತ್ತಿದ್ದಾನೆ ಅಂದುಕೊಂಡು ಕೈ ಬೀಸಿ ಬೀಸಿ ಸುಮ್ಮನೆ ಕೈ ನೋಯಿಸಿಕೊಂಡೆ' ಎಂದರು. ನಮಗೆಲ್ಲ ನಕ್ಕು ಸಾಕಾಯ್ತು.

-ಸಿಂಧು ಬಿ.ಎಸ್.

***

(‘ಮಯೂರ' ಫೆಬ್ರವರಿ ೨೦೧೮ರ ಸಂಚಿಕೆಯಿಂದ)