‘ಮಿತ್ತಬೈಲ್ ಯಮುನಕ್ಕೆ' ಎಂಬ ತುಳು ಕಾದಂಬರಿ

‘ಮಿತ್ತಬೈಲ್ ಯಮುನಕ್ಕೆ' ಎಂಬ ತುಳು ಕಾದಂಬರಿ

‘ಪಿಲಿಪತ್ತಿಗಡಸ್', ಧರ್ಮತ್ತಿಮಾಯೆ’ (ನಾಟಕಗಳು), ‘ಕರಿಯವಜ್ಜೆರೆನ ಕತೆಕುಲು' ಕೃತಿಗಳ ಲೇಖಕ ಆನಂದಕೃಷ್ಣರು ತುಳುವಿನಲ್ಲಿ ಬರೆಯುತ್ತಿರುವ ಪ್ರಮುಖ ಲೇಖಕರಲ್ಲೊಬ್ಬರು. ‘ಮಿತ್ತಬೈಲ್ ಯಮುನಕ್ಕೆ' ಆನಂದಕೃಷ್ಣರ ಮೊದಲ ಕಾದಂಬರಿ. ಹತ್ತೊಂಬತ್ತನೆಯ ಶತಮಾನ ಹಾಗೂ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ನಡೆಯುವ ಘಟನೆಗಳೆ ಈ ಕಾದಂಬರಿಯಲ್ಲಿವೆ. ಕಾಸರಗೋಡು ಸಹಿತವಾದ ತುಳುನಾಡು ಈ ಕಾದಂಬರಿಯ ಕ್ರಿಯಾಕೇಂದ್ರವಾಗಿದೆ. ಆದರೆ ಈ ಕಾದಂಬರಿಯ ಒಂದು ಪಾತ್ರ ಸುಬ್ಬಯಣ್ಣ ಗಾಂಧೀಜಿಯ ಆಶ್ರಮಗಳಿಗೆ, ದಿಲ್ಲಿ, ಕೋಲ್ಕತ್ತಾಗಳಿಗೆ ಹೋಗಿ ಬರುತ್ತಾನೆ.

ಈ ಕಾದಂಬರಿಯ ಮೂರು ಮುಖ್ಯ ಪಾತ್ರಗಳಾದ ಮಂಜಣ್ಣೆ, ಸುಬ್ಬಯಣ್ಣೆ, ಯಮುನಕ್ಕೆ ಮಿತ್ತಬೈಲ್ ಗುತ್ತಿನ ಮುಖ್ಯ ವ್ಯಕ್ತಿಗಳು. ಸಂಕಮಕ್ಕನ ಮಕ್ಕಳಾದ ಮಂಜಣ್ಣೆ-ಕಿಂಕೆನೆ ಮಿತ್ತಬೈಲಿನಲ್ಲಿ ದುಡಿದು ಕೃಷಿ ಮಾಡಿ ಯಶಸ್ಸು ಗಳಿಸುತ್ತಾರೆ. ಮಂಜಣ್ಣ ಮಾಯಿಪ್ಪಾಡಿ (ಕುಂಬಳೆ) ಅರಮನೆಯ ಸೇನೆ ಸೇರಿ ದಣ್ಣಾಯಕನಾಗುತ್ತಾನೆ. ಕಲ್ಯಾಣಪ್ಪನ ಕಾಟಕಾಯಿ (೧೮೩೭) ಯ ಸಂದರ್ಭದಲ್ಲಿ ಮಾಯಿಪ್ಪಾಡಿಯ ಅರಸ ಬ್ರಿಟೀಷರ ಪರವಾಗಿರುತ್ತಾನೆ. ಮಂಜಣ್ಣ-ದುರ್ಗಾರ ದಾಂಪತ್ಯೇತರ ಸಂಬಂಧವನ್ನು ಲೇಖಕರು ಚಿತ್ರಿಸಿದ್ದಾರೆ. ಆದರೆ ಮಂಜಣ್ಣನ ಪತ್ನಿಯ ಪಾತ್ರ ಮಾತ್ರ ಅಲಕ್ಷ್ಯಕ್ಕೀಡಾಗಿದೆ.

ಮಾಂಕರಾಲನ ಕಾಲದಲ್ಲಿ ಮಿತ್ತಬೈಲ್ ಗುತ್ತು ಅಧಃಪತನದ ಹಾದಿ ಹಿಡಿಯುತ್ತದೆ. ನಿಗೂಢ ಎಳೆಯಂತಿರುವ ಮಾಂಕರಾಲ್-ಅಚಕ್ಕರ ದಾಂಪತ್ಯೇತರ ಸಂಬಂಧ ಕಾದಂಬರಿಯ ಕೊನೆಯಲ್ಲಿ ಅನಾವರಣಗೊಳ್ಳುತ್ತದೆ. ಮಿತ್ತಬೈಲಿನ ಸುಬ್ಬಯಣ್ಣ ಗಾಂಧೀಜಿಯ ನಿಕಟವರ್ತಿಯಾಗುತ್ತಾನೆ. ರಂಗೂನಿನಲ್ಲಿದ್ದಾಗ ‘ಅಜಾದ್ ಹಿಂದ್' ಸೇನೆಯವರಿಗೆ ಸಹಾಯ ಮಾಡುತ್ತಾನೆ. ದೇಶವಿಭಜನೆಯ ಕಾಲದಲ್ಲಿ ಗಾಂಧೀಜಿಯ ಜತೆಯಲ್ಲಿದ್ದು ಗಾಂಧೀಜಿ ಕೊಲೆಯಾದ ಮೇಲೆ ಮಿತ್ತಬೈಲಿಗೆ ಬರುತ್ತಾನೆ. ನಿಗೂಢವಾಗಿ ಮಂಕರಾಲ್ ನ ಕೊಲೆಯಾಗಿ, ಯಮುನಕ್ಕ ಗುತ್ತಿನ ಅಧಿಕಾರ ಸೂತ್ರ ಹಿಡಿಯುತ್ತಾಳೆ. ಗುರಿಯಷ್ಟೇ ದಾರಿ ಶುದ್ಧವಾಗಿರುವುದು ಮುಖ್ಯ ಎಂಬ ಗಾಂಧೀವಾದಿ ಸುಬ್ಬಯಣ್ಣನ ಸಲಹೆ ಯಮುನಕ್ಕೆಗೆ ಹಿಡಿಸುವುದಿಲ್ಲ. ಬಾರೆಬೈಲು ಆಸ್ತಿಯನ್ನು ಯಮುನಕ್ಕೆ ಖರೀದಿಸಿದ್ದರಿಂದ ಅಚಕ್ಕನ ಮಗ ತ್ಯಂಪಣ್ಣ ಮಿತ್ತಬೈಲಿನ ಗೇಣಿದಾರನಾಗಬೇಕಾಗುತ್ತದೆ. ತ್ಯಾಂಪಣ್ಣ ವಕೀಲರಿಂದ ನೋಟೀಸು ನೀಡಿಸಿದಾಗ ಯಮುನಕ್ಕೆ ತನ್ನವರೊಂದಿಗೆ ಬಾರೆಬೈಲಿಗೆ ದಾಳಿ ಮಾಡಿ ಮನೆ ಸುಡಿಸುತ್ತಾಳೆ. ತ್ಯಾಂಪಣ್ಣನ ಕೊಲೆಯಾಗುತ್ತದೆ. ಬಂಧನಕ್ಕೊಳಗಾಗಿ, ಶಿಕ್ಷೆ ಇಲ್ಲದೆ ಬಿಡುಗಡೆಗೊಂಡು ಬಂದ ಯಮುನಕ್ಕೆ ಪಶ್ಚಾತ್ತಾಪದಿಂದ ಕೊರಗಿ ಸಾಯುತ್ತಾಳೆ.

ಹಿಂಸೆಯಿಂದ ಅಹಿಂಸೆಯತ್ತ ಚಲಿಸುವ, ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವ ಪಾತ್ರಗಳು ಈ ಕಾದಂಬರಿಯಲ್ಲಿವೆ. ಇಚ್ಲಂಪಾಡಿ ಮನೆಯಲ್ಲಿ ರುಕ್ಮಿಣಿಯಮ್ಮನ ಕಿವಿ ಮಾತು ಕೇಳಿದ ಕಲ್ಯಾಣ ಸ್ವಾಮಿ ತನ್ನ ತಪ್ಪು ತಿದ್ದಿಕೊಳ್ಳುತ್ತಾನೆ. ಕೊಲೆ, ಗೂಂಡಾಗಿರಿಯನ್ನು ಸಮರ್ಥಿಸುತ್ತಿದ್ದ ಯಮುನಕ್ಕೆ ಕೊನೆಯಲ್ಲಿ ಪಶ್ಚಾತ್ತಾಪ ಪಡುತ್ತಾಳೆ. ಹಿಂಸೆಯ ಸಂಕೇತವಾಗಿದ್ದ ಬೀರಣ್ಣನ ಬೆತ್ತ ಸುಬ್ಬಯಣ್ಣನ ಮೂಲಕ ಗಾಂಧೀಜಿಯ ಕೈಸೇರುವುದು ಸಾಂಕೇತಿಕವಾಗಿದೆ. ಅಸ್ಪ್ರಶ್ಯತೆಯ ವಿರುದ್ಧ ತನ್ನ ಹೋರಾಟದಲ್ಲಿ ಗಾಂಧೀವಾದಿ ಸುಬ್ಬಯಣ್ಣ ಸ್ವಲ್ಪ ಯಶಸ್ಸುಗಳಿಸುತ್ತಾನೆ.

‘ಉರಿ ಉಷ್ಣದ ಮಾಯೆ' ಅಧ್ಯಾಯದಲ್ಲಿ ಯಮುನಕ್ಕೆ ತನ್ನನ್ನು ಅಲಕ್ಷಿಸಿದ ಬಸ್ ಡ್ರೈವರ್ ಗೆ ಹೊಡೆಸುವ ಘಟನೆ ಇದೆ. (ಈ ಅಧ್ಯಾಯದ ಕನ್ನಡ ಅನುವಾದ ‘ದೇಶ ಕಾಲ' ತ್ರೈಮಾಸಿಕ ಅಕ್ಟೋಬರ್ ೨೦೦೫ರ ಸಂಚಿಕೆಯಲ್ಲಿದೆ) ಈ ಘಟನೆಯಲ್ಲಿ ಹಾಗೂ ತ್ಯಾಂಪಣ್ಣನ ಮನೆ ಸುಡುವ ಪ್ರಸಂಗದಲ್ಲಿನ ಗುತ್ತಿನ ವ್ಯವಸ್ಥೆಯ ಕ್ರೌರ್ಯದ ಸಾರ್ಥಕ ಚಿತ್ರಣವಿದೆ. ಗುತ್ತಿನ ಯಮುನಕ್ಕೆ ವಿರುದ್ಧ ಸಾಕ್ಷಿಗಳೇ ಇಲ್ಲದ್ದರಿಂದ ಅವಳ ಬಿಡುಗಡೆಯಾಗುತ್ತದೆ.

ಮಿತ್ತಬೈಲಿ ಗುತ್ತಿನ ಮಾಂಕರಾಲ್ ನ ದಾಂಪತ್ಯೇತರ ಸಂಬಂಧಗಳಿಂದಾಗಿ ಗುತ್ತಿನವನ ಮನುಷ್ಯ ಸಂಬಂಧಗಳು ಸಂಕೀರ್ಣವಾಗಿವೆ. ತ್ಯಾಂಪಣ್ಣನನ್ನು ಕುರಿತ ಯಮನಕ್ಕೆಯ ದ್ವೇಷಕ್ಕೆ ಅವನು ಮಾಂಕರಾಲ್ ನ ದಾಂಪತ್ಯೇತರ ಸಂಬಂಧದ ಮಗ ಎಂಬುದೂ ಕಾರಣವಾಗಿದೆ.

“ಈ ಕಾದಂಬರಿ ಐತಿಹಾಸಿಕ ಅಲ್ಲ, ಐತಿಹಾಸಿಕ ಸತ್ಯವನ್ನು ಹುಡುಕ ಹೊರಟರೆ ಅಥವಾ ಐತಿಹಾಸಿಕ ವ್ಯಕ್ತಿಗಳನ್ನು ಗುರುತಿಸ ಹೊರಟರೆ ಅವು ನಿರಾಸೆಯ ನೀರಸ ಕತೆಗಳಾದಾವು. ಅದರ ಬದಲು ಇತಿಹಾಸವನ್ನು ಒಂದು ಬರೀ ಮರದ ತುಂಡು ಎಂದು ಗುರುತಿಸಿ ಅದರಲ್ಲಿ ಕೆತ್ತಿರುವ ಚಿತ್ರಗಳನ್ನು ನೋಡಿ ಸಂತೋಷಪಡಬೇಕೆಂದು ನನ್ನ ಅರಿಕೆ" ಎನ್ನುತ್ತಾರೆ ಆನಂದ ಕೃಷ್ಣ. ‘ಕಾಟಕಾಯಿ' ಖ್ಯಾತಿಯ ಸ್ವಾತಂತ್ರ್ಯ ಯೋಧ ಕಲ್ಯಾಣಸ್ವಾಮಿ, ಗುಲ್ಲು ಸುಬ್ರಾಯ, ಪಾರ್ತಿಸುಬ್ಬನ ಶಿಷ್ಯ ಕೆಂಗಣ್ಣ ನಾಯ್ಕ, ಗೋವಿಂದ ಪೈ ಇಂಥ ಕೆಲವು ಐತಿಹಾಸಿಕ ವ್ಯಕ್ತಿಗಳು ಈ ಕಾದಂಬರಿಯಲ್ಲಿದ್ದಾರೆ. ಗೋವಿಂದ ಪೈಗಳನ್ನು ಗಾಂಧೀಜಿ ‘ಕನ್ನಡದ ಸೂರದಾಸ' ಎಂದು ಗೌರವಿಸುತ್ತಾರೆ. ಮಂಜಣ್ಣ, ಉರ್ಗಮ್ಮ, ಯಮುನಕ್ಕೆ, ಸುಬ್ಬಯಣ್ಣೆ, ಮಾಂಕರಾಲ್, ಪಾತ್ರಗಳಂತೆ ಕಂಗೊಳಿಸುವುದು ಕಾದಂಬರಿಯ ಯಶಸ್ಸಿಗೆ ಸಾಕ್ಷಿಯಾಗಿದೆ. ಕಂಪೆನಿಯವರು ಕಲ್ಯಾಣಸ್ವಾಮಿಯನ್ನು ಗಲ್ಲಿಗೆ ಹಾಕಿದ ಘಟನೆ ಎರಡು ವಾಕ್ಯಗಳ ವರದಿಯಲ್ಲಿ ಮುಗಿದುಹೋಗಿದೆ. 

ಮಿತ್ತಬೈಲಿನ ಮಂಜಣ್ಣ ಬ್ರಿಟೀಷರಿಂದ ಪ್ರಶಸ್ತಿ ಪಡೆದವನು. ಆದರೆ ಕಾದಂಬರಿಕಾರರು ವಸಾಹತುಶಾಹಿ ಆಳ್ವಿಕೆಯನ್ನು ಆರಾಧಿಸಿಲ್ಲ.

‘ಮಿತ್ತಬೈಲ್ ಯಮುನಕ್ಕೆ' ಒಂದು ಗುತ್ತಿನ ಕತೆ. ಗುತ್ತಿನ ಪಾತ್ರಗಳೇ ಇಲ್ಲಿ ಮುಖ್ಯವಾಗುತ್ತವೆ. ಆಂತರಿಕ ವಿಮರ್ಶಕರಾಗಿ ಗುತ್ತಿನ ಸಂಸ್ಕೃತಿ-ಅಪಸಂಸ್ಕೃತಿ, ಆಚಾರ-ಅನಾಚಾರ, ಮೌಲ್ಯ-ಅಪಮೌಲ್ಯ, ಆರೋಹಣ-ಅವರೋಹಣಗಳನ್ನು ಚಿತ್ರಿಸುವುದು ಆನಂದಕೃಷ್ಣರಿಗೆ ಸಾಧ್ಯವಾಗಿದೆ.

ಚೋಮಕ್ಕನ ದುಡ್ಡಿಗೆ ಪ್ರಾಮಾಣಿಕವಾಗಿ ಬಡ್ಡಿಕೊಡುವ ಉಳ್ಳಾಲದ ಸ್ಯಾಬು, ಇಚ್ಲಂಪಾಡಿ ಮನೆಯಲ್ಲಿ ಕಲ್ಯಾಣಸ್ವಾಮಿಗೆ ಬುದ್ಧಿ ಹೇಳುವ ರುಕ್ಮಿಣಿಯಮ್ಮ, ವಿಷಮ ದಾಂಪತ್ಯದ ಜೋಡಿ ಆಚಕ್ಕ-ಉದಾರ್ ಗತ್ತುವ ಗಡಿಪತ್ತಿನಾರ್, ಮಂಜಣ್ಣನನ್ನು ಪ್ರೀತಿಸುವ ದುರ್ಗಾ-ಇಂತ ಚಿಕ್ಕ ಪಾತ್ರಗಳು ಕೂಡ ನೆನಪಿನಲ್ಲಿ ಉಳಿಯುತ್ತವೆ.

ಆನಂದಕೃಷ್ಣರ ‘ಮಿತ್ತಬೈಲ್ ಯಮುನಕ್ಕೆ' ತುಳು ಸಾಹಿತ್ಯದ ಬೆರಳೆಣಿಕೆಯ ಪ್ರಥಮ ದರ್ಜೆಯ ಕಾದಂಬರಿಗಳ ಸಾಲಿಗೆ ಸೇರುತ್ತವೆ. ಆನಂದಕೃಷ್ಣರು ತಮ್ಮ ಚೊಚ್ಚಲ ಕಾದಂಬರಿಯಲ್ಲೆ ‘ಮೂಜಿ ಅಚ್ಚರದ ಮಾಣಿ ಮಾಯಾದ್, ಆಜಿ ಅಚ್ಚರದ ಮಾಣಿ ಆಯೆರ್' (ಮೂರು ಅಕ್ಷರದ ಮಾಣಿ ಮಾಯವಾಗಿ, ಆರು ಅಕ್ಷರದ ಮಾಣಿ ಆದರು ಎಂಬ ತುಳುವಿನ ಹೊಗಳಿಕೆ)

-ಮುರಳೀಧರ ಉಪಾಧ್ಯ ಹಿರಿಯಡಕ 

(ಕೃಪೆ: ಅನಿಕೇತನ ತ್ರೈಮಾಸಿಕ, ಜುಲೈ-ಸೆಪ್ಟೆಂಬರ್ ೨೦೦೬)