‘ಸಂಪದ’ ನಗೆ ಬುಗ್ಗೆ - ಭಾಗ ೮೪

ಬುದ್ಧಿವಂತ ಮಾಲೀಕ
ಸುಮಾರು ನೂರು ಜನ ಸಿಬ್ಬಂದಿ ಇರುವ ಕಂಪೆನಿಯ ಮಾಲೀಕನಾದ ಗಾಂಪನನ್ನು ಪತ್ರಕರ್ತ ಸಂದರ್ಶನ ಮಾಡಲು ಬಂದ.”ಸರ್, ನಿಮ್ಮ ಸಿಬ್ಬಂದಿ ಕರಾರುವಕ್ಕಾಗಿ ಕೆಲಸದ ವೇಳೆಗೆ ಹಾಜರಾಗುತ್ತಾರೆಂದು ತಿಳಿದು ಬಂತು. ಈ ಕ್ರಮಕ್ಕೆ ಪ್ರೇರಣೆ ಏನು?” ಎಂದು ಪ್ರಶ್ನಿಸಿದ. ಮಾಲೀಕ ಗಾಂಪ, “ವೆರಿ ಸಿಂಪಲ್...ನಮ್ಮ ಕಂಪೆನಿಯಲ್ಲಿ ನೂರು ಜನ ಕೆಲಸ ಮಾಡುತ್ತಾರೆ. ನಾನು ಕೇವಲ ಐವತ್ತು ಜನರಿಗೆ ಆಗುವಷ್ಟು ಮಾತ್ರ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇನೆ. ಯಾರು ಮೊದಲು ಬರುತ್ತಾರೋ ಅವರಿಗೆ ಉಚಿತ ಪಾರ್ಕಿಂಗ್, ನಂತರ ಬಂದವರು ದಿನಕ್ಕೆ ನೂರು ರೂಪಾಯಿ ಪಾರ್ಕಿಂಗ್ ಫೀ ಕೊಡಬೇಕೆಂದು ಸೂಚಿಸಿದ್ದೇನೆ.” ಎಂದು ಉತ್ತರಿಸಿದ.
***
ಸರ್ವರ್ ಇಲ್ಲ !
ಹೋಟೇಲ್ ಮಾಲೀಕ ಗಾಂಪ ಹತ್ತು ಲಕ್ಷ ಪಡೆಯಲು ಬ್ಯಾಂಕ್ ಒಂದಕ್ಕೆ ಹೋಗಿದ್ದ. ಹಣ ಪಡೆಯಲು ಚೆಕ್ ಬರೆದು ಕ್ಯಾಶ್ ಕೌಂಟರ್ ಗೆ ಕೊಟ್ಟ. ಕ್ಯಾಶಿಯರ್, “ಕರೀತೀನಿ ಕೂತಿರಿ ಸರ್" ಎಂದರು. ಕೂತು ಸುಮಾರು ಹೊತ್ತಾದರೂ ಕರೆಯಲೇ ಇಲ್ಲ. ಹತ್ತಾರು ನಿಮಿಷ ಕಾದು ಕಾದು ಸುಸ್ತಾದ ಗಾಂಪ ಕೌಂಟರ್ ಬಳಿ ಹೋಗಿ “ಸಾರ್ , ಕರೀತೀನಿ ಅಂದ್ರಿ, ಕರಿಲೇ ಇಲ್ಲ?” ಅಂತ ಹೇಳಿದ. ಕ್ಯಾಶಿಯರ್ “ಬೆಳಿಗ್ಗೆಯಿಂದಲೇ ಸರ್ವರ್ ಇಲ್ಲ. ಸರ್ವರ್ ಬಂದ ಕೂಡಲೇ ಕರೀತೀನಿ"ಎಂದರು ಮತ್ತೊಮ್ಮೆ. ಆಗ ಗಾಂಪ, “ನಮ್ಮ ಹೋಟೇಲ್ನಲ್ಲಿ ಆರು ಜನ ಸರ್ವರ್ ಗಳು ಇದ್ದಾರೆ. ಅವರಲ್ಲಿ ಒಬ್ಬರನ್ನು ಕರೆಸ್ಲಾ ಸರ್?” ಎಂದು ಕೇಳಿದ. ಮೊದಲೇ ಸರ್ವರ್ ಸಮಸ್ಯೆಯಿಂದ ತಲೆಕೆಟ್ಟಿದ್ದ ಬ್ಯಾಂಕ್ ಕ್ಯಾಶಿಯರ್ ಸರ್ವರ್ ಬಗ್ಗೆ ಬಿಡಿಸಿ ಹೇಳುವ ಮೂಡ್ ನಲ್ಲಿ ಇರಲಿಲ್ಲ. !
***
ತಪ್ಪಿನ ಪುನರಾವರ್ತನೆ
೧೨ ಗಂಟೆಯ ವಾರ್ತೆಯಲ್ಲಿ ಒಂದು ಸುದ್ದಿ ತುಣುಕು ತೋರಿಸುತ್ತಿದ್ದರು. ಎತ್ತರದ ಕಟ್ಟಡ ಏರಿದ ಒಬ್ಬ ಯುವಕ, ಹಾರುತ್ತೇನೆ ಹಾರುತ್ತೇನೆ ಎಂದು ಕೆಳಗಿನ ಜನರಿಗೆ ಹೆದರಿಸುತ್ತಿದ್ದ. “ಆ ಹುಡುಗ ಹಾರ್ತಾನೆ ನೋಡು. ಬೇಕಾದರೆ ಐದು ನೂರು ರೂಪಾಯಿ ಬೆಟ್" ಎಂದ ಟಿವಿ ನೋಡುತ್ತಿದ್ದ ಗಾಂಪ. “ಹಾರಲ್ಲ, ನಾನೂ ಐದು ನೂರು ರೂಪಾಯಿ ಬೇಟ್ ಕಟ್ತೇನೆ ಎಂದ ಸೂರಿ. ಸ್ವಲ್ಪ ಹೊತ್ತಿನಲ್ಲಿ ಕಟ್ಟಡದ ಮೇಲಿಂದ ಹುಡುಗ ಹಾರಿ ಕೆಳಗೆ ಬಿದ್ದ.
ಸೂರಿ ತನ್ನ ಜೇಬಿನಿಂದ ಐದು ನೂರು ರೂಪಾಯಿ ತೆಗೆದು ಗಾಂಪನಿಗೆ ಕೊಡಲು ಹೋದಾಗ ಅದನ್ನು ನಿರಾಕರಿಸಿದ. “ಕ್ಷಮಿಸು ಸೂರಿ, ನಾನು ಒಂದು ಸುಳ್ಳು ಹೇಳಿದೆ. ನಾನು ಈ ಸುದ್ದಿಯನ್ನು ೧೦ ಗಂಟೆಯ ವಾರ್ತೆಯಲ್ಲಿ ನೋಡಿದ್ದೆ. ಹಾಗಾಗಿ ಅವನು ಹಾರೋದು ನನಗೆ ಮೊದಲೇ ಗೊತ್ತಿತ್ತು. “ ಎಂದ.
“ನಾನೂ ನೋಡಿದ್ದೆ ಮಾರಾಯ ! ಆದರೆ ಈ ಸಲ ಆದರೂ ಅವನು ಹಾರಲ್ಲ ಅಂದುಕೊಂಡಿದ್ದೆ. “ ಎಂದ ಸೂರಿ.
***
ಶವ ಸಂಸ್ಕಾರ
ಗಾಂಪ: “ಸತ್ತ ಮೇಲೆ ನನ್ನ ಶರೀರವನ್ನು ಸುಡಬೇಡಿ. ಮಣ್ಣು ಮಾಡಿ” ಅಂತ ಬರೆದಿರುವ ಗುಟ್ಟೇನು ಗುರುಗಳೇ?
ಗುರು: ಊದು ಕಡ್ಡಿಯ ಬೆಂಕಿ ಸೋಕಿದ್ರೆನೇ ನನ್ನಿಂದ ತಡೆದುಕೊಳ್ಳಲಾಗುವುದಿಲ್ಲ. ಅಂತಾದ್ರಲ್ಲಿ ಬೆಂಕಿ ಇಟ್ರೆ ತಡೆದುಕೊಳ್ಳೊಕಾಗುತ್ತಾ ?!
***
ಸುಲಭ ಕಾರ್ಯ
ಗಾಂಪನಿಗೆ ಖ್ಯಾತ ಕಾದಂಬರಿಕಾರ ಸೂರಿಯನ್ನು ಭೇಟಿ ಮಾಡುವ ಸುಯೋಗ ಒದಗಿ ಬಂತು.
ಗಾಂಪ: ಸಾರ್, ನೀವು ಹದಿನಾಲ್ಕು ಕಾದಂಬರಿಗಳನ್ನು ಹೇಗೆ ಬರೆದ್ರಿ?
ಸೂರಿ: ಅದೇನಪ್ಪಾ ಬಿಡು... ಮನಸ್ಸು ಮಾಡಿದ್ರೆ ನೀನೂ ಬರೀ ಬಹುದು.
ಗಾಂಪ: ಹೇಳೋದು ಸುಲಭ ಸಾರ್..
ಸೂರಿ: ಇಂಟರ್ನೆಟ್ ನಿಂದ ಕಾಪಿ ಪೇಸ್ಟ್ ಮಾಡಲು ನನಗೇನೂ ಕಷ್ಟ ಅನಿಸಲಿಲ್ಲ!
***
ಮದುವೆ
ಶ್ರೀಮತಿ: ತಾರಾ, ನೀನು ಎಸ್ಸೆಸೆಲ್ಸಿಯಲ್ಲಿ ಫಸ್ಟ್ ಕ್ಲಾಸ್ ಪಾಸ್ ಆದವಳು. ಸೆಕೆಂಡ್ ಪಿಯುಸಿಯಲ್ಲಿ ಯಾಕೆ ಫೇಲಾದೆ?
ತಾರಾ: ಪಿಯುಸಿಯಲ್ಲಿ ಫೇಲಾದರೆ ಮದುವೆ ಮಾಡಿಸ್ತೀನಿ ಅಂತ ನಮ್ಮಪ್ಪ ಹೇಳ್ತಿದ್ರು. ಅದಕ್ಕೇ, ಬೇಕು ಅಂತಾನೇ ಫೇಲಾದೆ !
***
ತಿಂಡಿ
ಶ್ರೀಮತಿ: ತಿಂಡಿ ಏನ್ ಮಾಡ್ಲೀ?
ಗಾಂಪ: ಏನಾದ್ರೂ ಮಾಡು !
ಶ್ರೀಮತಿ: ಏನ್ ಮಾಡ್ಲೀ ನೀವೇ ಹೇಳಿ ?
ಗಾಂಪ: ಅವಲಕ್ಕಿ ಉಪ್ಪಿಟ್ಟು ಮಾಡು
ಶ್ರೀಮತಿ: ನಿನ್ನೆ ಬೆಳಿಗ್ಗೆ ಅದನ್ನೇ ತಾನೆ ಮಾಡಿದ್ದು?
ಗಾಂಪ: ಹಾ ಸರಿ, ರೊಟ್ಟಿ ಪಲ್ಯ ಮಾಡು
ಶ್ರೀಮತಿ: ಮಕ್ಕಳು ತಿನ್ನೋದಿಲ್ಲ!
ಗಾಂಪ: ಸರಿ, ಪೂರಿ ಸಾಗು ಮಾಡು !
ಶ್ರೀಮತಿ: ಗೋಧಿ ಹಿಟ್ಟು ಖಾಲಿಯಾಗಿದೆ.
ಗಾಂಪ: ರಾಗಿ ರೊಟ್ಟಿ ಮೊಟ್ಟೆ ಪಲ್ಯ ಮಾಡು
ಶ್ರೀಮತಿ: ಇವತ್ತು ಶುಕ್ರವಾರ
ಗಾಂಪ: ಚಿತ್ರಾನ್ನ?
ಶ್ರೀಮತಿ: ರಾತ್ರಿಯ ಅನ್ನ ಮಿಕ್ಕಿಲ್ಲ !
ಗಾಂಪ: ಹೋಟೇಲ್ ನಿಂದ ತರ್ಲಾ?
ಶ್ರೀಮತಿ: ಹೋಟೇಲ್ ತಿಂಡಿ ತಿಂದ್ರೆ ಹೊಟ್ಟೆ ಹಾಳಾಗುತ್ತೆ.
ಗಾಂಪ: ಬರೀ ಅನ್ನ, ಮೊಸರು?
ಶ್ರೀಮತಿ: ಮೊಸರು ಇಲ್ಲ
ಗಾಂಪ: ಇಡ್ಲಿ ಸಾಂಬಾರ್?
ಶ್ರೀಮತಿ: ಅದಕ್ಕೆ ಟೈಂ ಬೇಕಾಗುತ್ತೆ, ಮೊದಲೇ ಹೇಳಬೇಕಿತ್ತು ನೀವು !
ಗಾಂಪ: ಒಂದು ಕೆಲಸ ಮಾಡು, ಮ್ಯಾಗಿ ಮಾಡಿಬಿಡು !
ಶ್ರೀಮತಿ: ಹೊಟ್ಟೆ ತುಂಬುತ್ತಾ ಅದರಿಂದ?
ಗಾಂಪ: ಸರಿ ಮತ್ತೆ ಏನ್ ಮಾಡ್ತೀಯಾ?
ಶ್ರೀಮತಿ: ನೀವೇ ಹೇಳಿ !
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ