‘ಸಂಪದ' ನಗೆ ಬುಗ್ಗೆ - ಭಾಗ ೪೦

ಕಾರಣ
ಡಾಕ್ಟರ್ ಗಾಂಪನ ಮಾವ ಫುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್ ಗಳೂ ಅವರು ಬದುಕುವ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ದರು. ಅಲ್ಲದೆ, ಪೇಷಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾಕ್ಟರ್ ಗಳೂ ಕೂಡ ಆಪರೇಷನ್ ಮಾಡಲು ಮುಂದೆ ಬರಲಿಲ್ಲ. ಅಳಿಯ ಗಾಂಪ ಸ್ವತಃ ಡಾಕ್ಟರ್ ಆಗಿದ್ದುದರಿಂದ ಏನೇ ಆಗಲಿ ಒಂದು ಕೈ ನೋಡಿಯೇ ಬಿಡೋಣ ಎಂದು ಆಪರೇಷನ್ ಮಾಡಲು ತಯಾರಾದ. ಆಪರೇಷನ್ ಮಾಡುವ ಮುಂಚೆ ಮಂಚದ ಮೇಲೆ ಮಲಗಿದ್ದ ಗಾಂಪನ ಮಾವ ಆಪರೇಷನ್ ಥಿಯೇಟರ್ ನಲ್ಲಿ ಗಾಂಪನನ್ನು ನೋಡಿ ಸನ್ನೆ ಮಾಡಿ ನಿನ್ನ ಬಳಿ ಏನೋ ಹೇಳಬೇಕು ಹತ್ತಿರ ಬಾ ಅಂತ ಕರೆದರು. ಗಾಂಪ ಹೋದ. ಗಾಂಪನ ಕಿವಿಯಲ್ಲಿ ಅವನ ಮಾವ ಏನೋ ಹೇಳಿದರು. ಸರಿ, ಆಪರೇಷನ್ ಶುರುವಾಯಿತು. ಸತತ 4 ಗಂಟೆಗಳ ಕಾಲ ಆಪರೇಷನ್ ನಡೆಯಿತು. ಏನೇ ಆದರೂ ರೋಗಿ ಬದುಕಲ್ಲ ಅಂದಿದ್ದ ಡಾಕ್ಟರ್ ಗಳಿಗೆಲ್ಲ ಅಚ್ಚರಿ ಎಂಬಂತೆ ಆಪರೇಷನ್ ಸಕ್ಸಸ್ ಫುಲ್, ಇದೊಂದು ವೈದ್ಯಲೋಕದ ವಿಸ್ಮಯ ಎಂದರು ಅವರೆಲ್ಲ. ಎಲ್ಲರೂ ನಿರಾಳವಾಗಿ ಆಪರೇಷನ್ ಕೋಣೆಯಿಂದ ಹೊರಬಂದ ಬಳಿಕ ಗಾಂಪ ಹತ್ತಿರ " ಇದೆಲ್ಲಾ ಹೇಗಾಯಿತು? ನಿಮ್ಮ ಮಾವ ಆಪರೇಷನ್ ಗೆ ಮುಂಚೆ ನಿಮ್ಮ ಕಿವಿಯಲ್ಲಿ ಏನೋ ಹೇಳಿದರಂತೆ, ಏನು ಹೇಳಿದರು?" ಅಂತ ಕೇಳಿದರು ಆಸ್ಪತ್ರೆಯ ಇತರೆ ಡಾಕ್ಟರ್ ಗಳು. ಅದಕ್ಕೆ ಗಾಂಪ ಹೇಳಿದ ' ಮಾವ ಹೇಳಿದ್ದು ಇಷ್ಟೇ, ನೋಡಪ್ಪ ಅಳಿಮಯ್ಯ, ನಾನು ನಿಮ್ಮ ಮಾವ ಅಂತ ನರ್ವಸ್ ಆಗಬೇಡ. ಧೈರ್ಯವಾಗಿ ನನ್ನ ಆಪರೇಷನ್ ನೀನು ಮಾಡು., ಉಳಿದದ್ದು ದೇವರಿಗೆ ಬಿಟ್ಟದ್ದು. ಆದರೆ ಒಂದು ಮಾತು ನೆನಪಿಟ್ಟುಕೋ, ನಿಮ್ಮ ಅತ್ತೆಗೆ ನನ್ನ ಬಿಟ್ಟರೆ ಯಾರೂ ಇಲ್ಲ. ನಾನು ಹೆಚ್ಚು ಕಮ್ಮಿ ಆಗಿ ಸತ್ತು ಹೋದರೆ, ಅವಳು ನಿಮ್ಮ ಮನೆಯಲ್ಲಿ ಇರುತ್ತಾಳೆ, ಆಗ ಅವಳನ್ನು ಚೆನ್ನಾಗಿ ನೋಡಿಕೊಳ್ಳಪ್ಪಾ'!
***
ಪರವಾಗಿಲ್ಲ…
ಗಾಂಪ ಪ್ರವಾಸಕ್ಕೆಂದು ಒಂದು ದೇವಸ್ಥಾನಕ್ಕೆ ಹೋಗಿದ್ದ. ಅಲ್ಲಿ ತನ್ನ ಬೆಲೆಬಾಳುವ ಶೂ ಕಳಚಿಟ್ಟು ಅಲ್ಲಿದ್ದ ಒಬ್ಬ ವ್ಯಕ್ತಿಗೆ, ದಯವಿಟ್ಟು ನನ್ನ ಶೂ ನೋಡಿಕೊಳ್ತೀರಾ? ನಾನು ಬೇಗ, ಅಂದ್ರೆ ಎರಡೇ ನಿಮಿಷಗಳಲ್ಲಿ ಬರ್ತೀನಿ' ಅಂದ. ಆ ವ್ಯಕ್ತಿಗೆ ಕೋಪ ಬಂತು.
‘ನನ್ನನ್ನು ಚಪ್ಪಲಿ ನೋಡಿಕೊಳ್ಳಲು ಹೇಳುವಿಯಲ್ಲ, ನಾನು ಯಾರು ಗೊತ್ತಾ?’
‘ಗೊತ್ತಿಲ್ಲ, ಯಾರು?’
‘ನಾನು ಈ ನಗರದ ಮೇಯರ್'
‘ಪರವಾಗಿಲ್ಲ, ಗಾಂಪ ಅಂದ, ‘ನಾನು ನಿಮ್ಮನ್ನು ನಂಬುತ್ತೇನೆ.’
***
ನಾಲ್ಕಲ್ಲ, ಐದು
ಗಾಂಪ ಅಗಸನ ಕೆಲಸ ಮಾಡುತ್ತಿದ್ದ. ಅವನಿಗೆ ನಾಲ್ಕು ಕತ್ತೆಗಳ ಅಗತ್ಯತೆ ಬಿತ್ತು. ಅದಕ್ಕಾಗಿ ಆತ ಹತ್ತಿರದ ಗ್ರಾಮಕ್ಕೆ ಹೋಗಿ ನಾಲ್ಕು ಕತ್ತೆಗಳನ್ನು ಖರೀದಿಸಿ, ಒಂದರ ಮೇಲೆ ಕುಳಿತುಕೊಂಡು ಮರಳಿ ತನ್ನ ಮನೆಗೆ ಬರುತ್ತಿದ್ದ. ದಾರಿಯಲ್ಲಿ ಆತ ತನ್ನ ಜೊತೆ ಇದ್ದ ಕತ್ತೆಗಳನ್ನು ಎಣಿಸಿದ. ಮೂರೇ ಕತ್ತೆಗಳಿದ್ದವು.
'ನನ್ನ ಒಂದು ಕತ್ತೆ ಕಳೆದು ಹೋಗಿದೆ. ಯಾರಾದರೂ ಹುಡುಕಿ ಕೊಡಿ' ಎನ್ನುತ್ತಾ ಆತ ಅಳಲು ಶುರು ಮಾಡಿದ. ಅವನು ತಾನು ಕುಳಿತಿದ್ದ ಕತ್ತೆಯನ್ನು ಎಣಿಕೆ ಮಾಡಿಯೇ ಇರಲಿಲ್ಲ. ಈ ಕಾರಣಕ್ಕೆ ಆತನ ಮೊರೆಯನ್ನು ಯಾರೂ ಆಲಿಸಲೇ ಇಲ್ಲ.
ಮನೆಗೆ ಬಂದ ಗಾಂಪ ಅಳುತ್ತಲೇ ತನ್ನ ಹೆಂಡತಿಗೆ ‘ಶ್ರೀಮತಿ, ನಾನು ನಾಲ್ಕು ಕತ್ತೆಗಳನ್ನು ಕೊಂಡೆ. ದಾರಿಯಲ್ಲಿ ಒಂದು ಕತ್ತೆ ಕಳೆದು ಹೋಗಿ, ಈಗ ಮೂರೇ ಉಳಿದಿದೆ. ಏನು ಮಾಡಲಿ?’ ಅಂದ.
ಕತ್ತೆಗಳನ್ನು ಲೆಕ್ಕ ಹಾಕಿದ ನಂತರ ಶ್ರೀಮತಿ ಅಂದಳು ‘ಮೂರಲ್ಲ, ನನಗೀಗ ಐದು ಕತ್ತೆಗಳು ಕಾಣಿಸುತ್ತಿವೆ.!’
***
ಸ್ವರ್ಗ-ನರಕ
ಒಂದು ದಿನ ಶ್ರೀಮತಿ ತೀರಿಕೊಂಡಳು. ಅವಳು ಸ್ವರ್ಗದ ಬಾಗಿಲಿಗೆ ಹೋದಾಗ ದ್ವಾರಪಾಲಕ ‘ನೀವು ಒಂದು ಬಾರಿ ನರಕ ಮತ್ತು ಸ್ವರ್ಗಗಳಲ್ಲಿ ತಿರುಗಾಡಿ ಬನ್ನಿ. ನಿಮಗೆ ಎಲ್ಲಿ ಇರಬೇಕೆಂದು ಅನಿಸುತ್ತದೆಯೋ ಅಲ್ಲಿ ಇರಬಹುದು.’ ಎಂದ. ಶ್ರೀಮತಿ ಸ್ವರ್ಗಕ್ಕೆ ಹೋದಳು, ನಂತರ ನರಕಕ್ಕೂ ಹೋದಳು. ಎರಡು ಕಡೆಯೂ ಕುದಿಯುವ ಎಣ್ಣೆಯಲ್ಲಿ ಕೆಲ ಪ್ರಾಣಗಳನ್ನು ಕುದಿಸುತ್ತಿರುವುದನ್ನು ಕಂಡು ಅಚ್ಚರಿಯಿಂದ ಕೇಳಿದಳು ‘ಇದೇಕೆ ಹೀಗೆ?’
‘ಓಹ್, ಅದಾ ಎಂದ. ‘ನರಕದಲ್ಲಿ ಎಣ್ಣೆಯ ಅಭಾವ ಇದೆ' ದ್ವಾರಪಾಲಕ ಉತ್ತರಿಸಿದ. ಶ್ರೀಮತಿ ನರಕವನ್ನೇ ಆರಿಸಿಕೊಂಡಳು.
***
ಕನ್ನಡಕ
ವೈದ್ಯ: ಕನ್ನಡಕ ಹಾಕಿರಿ. ಏನು ಬೇಕಾದ್ರೂ ಓದ ಬಹುದು.
ಗಾಂಪ: ಇಂಗ್ಲೀಷ್ ಓದಬಹುದೇ ಡಾಕ್ಟ್ರೇ?
ವೈದ್ಯ: ಇಂಗ್ಲೀಷ್ ಏನು, ಕನ್ನಡ, ತಮಿಳು, ತೆಲುಗು ಯಾವುದು ಬೇಕಾದ್ರೂ ಓದಬಹುದು.
ಗಾಂಪ: ಅಯ್ಯೋ ಶಿವನೇ !, ಈ ಪುಣ್ಯಕ್ಕೆ ಶಾಲೆಗೆ ಹೋಗಿ ಏಕೆ ಕಷ್ಟ ಪಡಬೇಕು?!
***
(ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ