‘ಸಂಪದ' ನಗೆ ಬುಗ್ಗೆ - ಭಾಗ ೮೫

ಸ್ವಾಗತ
ಗಾಂಪ ಅತಿ ಸುಂದರವಾದ ಪ್ರವಾಸೀ ತಾಣವನ್ನು ತಲುಪಿದ. ಮರುದಿನ ಅವನ ಹೆಂಡತಿ ಶ್ರೀಮತಿ ಅಲ್ಲಿಗೆ ಬರುವವಳಿದ್ದಳು. ತಮಗಿಬ್ಬರಿಗಾಗಿ ಪಂಚತಾರಾ ಹೋಟೇಲಿನಲ್ಲಿ ಕೊಠಡಿ ಕಾದಿರಿಸಿದ. ಈ ವಿಷಯವನ್ನು ಶ್ರೀಮತಿಗೆ ವಾಟ್ಸಾಪ್ ಮೂಲಕ ತಿಳಿಸಲು ಸಿದ್ಧನಾದ. ಅಷ್ಟರಲ್ಲಿ ಅವನಿಗೆ ಬಂದ ಫೋನ್ ಕರೆಯೊಂದು ಅವನ ಪರಮಾಪ್ತ ಗೆಳೆಯ ತೀರಿಕೊಂಡನೆಂಬ ಸುದ್ದಿಯನ್ನು ಹೇಳಿತು. ಗಾಂಪ ತುಂಬಾ ದುಃಖಿತನಾದ.
ದುಃಖ ಶಮನವಾದ ಮೇಲೆ ಗಾಂಪ ಶ್ರೀಮತಿಗೆ ವಾಟ್ಸಾಪ್ ಮಾಡಲು ಸಂದೇಶವನ್ನು ಟೈಪ್ ಮಾಡಿದ. “ಪ್ರಿಯೇ, ನಾನಿಲ್ಲಿಗೆ ಸುಖವಾಗಿ ಬಂದು ತಲುಪಿದ್ದೇನೆ. ನೀನು ಕೂಡ ನಾಳೆ ಇಲ್ಲಿಗೆ ಬಂದು ಸೇರಿಕೋ. ನಿನ್ನ ಸ್ವಾಗತಕ್ಕೆ ಇಲ್ಲಿ ಅದ್ದೂರಿ ವ್ಯವಸ್ಥೆ ಮಾಡಿಸಿದ್ದೇನೆ. ಇತೀ ನಿಮ್ಮೊಲುಮೆಯ ಪತಿ…
ಆದರೆ ಮೃತನಾದ ಗೆಳೆಯನ ಗುಂಗಿನಲ್ಲೇ ಇದ್ದ ಗಾಂಪ ಈ ಸಂದೇಶವನ್ನು ಕಳುಹಿಸಿದ್ದು ತನ್ನ ಹೆಂಡತಿಗಲ್ಲ. ಅಚಾತುರ್ಯದಿಂದ ಪರಮಾಪ್ತ ಗೆಳೆಯನ ಪತ್ನಿಯ ವಾಟ್ಸಾಪ್ ಸಂಖ್ಯೆಗೆ !
***
ಕೋರಿಕೆ
ಗಾಂಪ ಮತ್ತು ಶ್ರೀಮತಿ ಅರವತ್ತರ ಹರಯ ದಾಟಿದ ದಂಪತಿ. ಒಂದು ಸಂಜೆ ಇಬ್ಬರೂ ತಂಗಾಳಿಗೆ ಮೈಯೊಡ್ಡಿಕೊಂಡು ಮನೆಯ ಹೊರಗೆ ಕೂತಿದ್ದರು. ಆಗ ಶ್ರೀಮತಿ, “ದೇವರು ನಿಜವಾಗಿಯೂ ಇದ್ದಾನೆಂದಾದರೆ ನಾನು ಅವನಲ್ಲಿ ನನ್ನ ಕೋರಿಕೆಯನ್ನು ಹೇಳಿಕೊಳ್ಳಲು ಬಯಸುತ್ತೇನೆ. ನನಗೆ ನನ್ನ ಪ್ರೀತಿಯ ಪತಿಯೊಂದಿಗೆ ವಿಶ್ವ ಪರ್ಯಟನೆ ಮಾಡಲು ಆಸೆಯಾಗಿದೆ. ದೇವರೇ, ಈ ಬೇಡಿಕೆಯನ್ನು ಈಡೇರಿಸುವೆಯಾ?” ಕೇಳಿದಳು.
ಮರುಕ್ಷಣವೇ ಆಕಾಶದಿಂದ ಟಕ್ ಎಂದು ಎರಡು ವಿಮಾನದ ಟಿಕೇಟುಗಳು ಶ್ರೀಮತಿ ಪಕ್ಕದಲ್ಲಿ ಬಂದು ಬಿದ್ದವು. ನೋಡಿದೆಯಾ? ಎಂಬಂತೆ ವಿಶ್ವವನ್ನೇ ಸುತ್ತಿ ಬರುವ ಟಿಕೇಟುಗಳನ್ನು ಅವಳು ಗಾಂಪನಿಗೆ ತೋರಿಸಿದಳು.
“ಅರೇ, ವಾವ್ !” ಗಾಂಪ ಆಕಾಶದೆಡೆಗೆ ನೋಡಿದ. “ಸರ್ವಶಕ್ತನಾದ ಕರ್ತನೇ, ದಯಾಮಯಿಯೇ, ನಾನು ನನ್ನಷ್ಟೇ ವಯಸ್ಸಿನ ಹೆಂಡತಿಯೊಂದಿಗೆ ಪ್ರವಾಸವನ್ನು ಸವಿಯಲು ಇಷ್ಟ ಪಡುವುದಿಲ್ಲ. ನನಗಿಂತ ಮೂವತ್ತು ವರ್ಷ ಕಿರಿಯಳಾಗಿರುವ ಹೆಂಡತಿಯೊಂದಿಗೆ ವಿಶ್ವಪರ್ಯಟನೆ ಮಾಡುವಂತೆ ಅನುಗ್ರಹಿಸು" ಎಂದು ಕೇಳಿಕೊಂಡ.
ಮರುಕ್ಷಣ ತನ್ನ ದೇಹದಲ್ಲಿ ಏನೋ ಬದಲಾವಣೆಯಾದಂತೆ ಗಾಂಪನಿಗೆ ಅನಿಸಿತು. ಪರೀಕ್ಷಿಸಿದಾಗ ಆತನಿಗೆ ತನ್ನ ವಯಸ್ಸು ತೊಂಬತ್ತು ದಾಟಿರುವುದು ಗೊತ್ತಾಯಿತು !
***
ಎಡಗಡೆಗೋ?
ಗಾಂಪ ಅಕ್ಷರ ಕಲಿಯಲು ಶಾಲೆಗೆ ಹೋಗಿದ್ದ. ಗುರುಗಳು ಅವನಿಗೆ ೭೭ ಬರೆಯಲು ಹೇಳಿದರು. ಗಾಂಪ ತನಗೆ ಗೊತ್ತಿಲ್ಲವೆಂದು ತಲೆ ಆಡಿಸಿದ. ಗುರುಗಳು ೭ ಎಂಬ ಸಂಖ್ಯೆಯನ್ನು ಬರೆದು “ನೋಡೋ ಮುಠ್ಠಾಳ, ಇದಕ್ಕೆ ಏಳು ಸೇರಿಸಿದರೆ ಎಪ್ಪತ್ತೇಳು ಆಗುತ್ತದೆ. ತುಂಬ ಸುಲಭ ಬರೆ ನೋಡೋಣ" ಎಂದರು.
ಕೈಯಲ್ಲಿ ಪೆನ್ಸಿಲ್ ಹಿಡಿದು ಗಾಂಪ ಅನುಮಾನಿಸುತ್ತ ನಿಂತುಕೊಂಡ. ಗುರುಗಳು ಕಣ್ಣಿನಲ್ಲೇ ಬರೆ ಬರೆ ಎಂದು ಉತ್ತೇಜಿಸಿದರು. ಇನ್ನೂ ಅನುಮಾನದಿಂದಲೇ ಗಾಂಪ ಕೇಳಿದ “ಏಳನ್ನು ಇದರ ಎಡಗಡೆಗೆ ಸೇರಿಸಬೇಕೋ ಅಲ್ಲ ಬಲಗಡೆಗೋ?”
***
ಪುಣ್ಯ
ಸೂರಿ: ಒಂದು ಸಾವಿರ ಕೊಟ್ಟರೆ ನಿನಗೆ ಕಾಶಿ ವಿಶ್ವನಾಥನ ದರ್ಶನ ಆಗುತ್ತೆ. ಪುಣ್ಯ ಬರುತ್ತೆ “ ಅಂತಿದ್ದಿಯಲ್ಲಾ, ಅದು ಹೇಗೆ?
ಗಾಂಪ: ಕಾಶಿಗೆ ಹೋಗೋದಕ್ಕೆ ನನ್ನ ಹತ್ರ ಒಂದು ಸಾವಿರ ಕಮ್ಮಿ ಇದೆ. ನೀವು ಆ ಹಣವನ್ನು ನನಗೆ ಕೊಟ್ಟರೆ ನಾನು ಕಾಶಿಗೆ ಹೋಗಿ ಬರ್ತೀನಿ. ನಾನು ದರ್ಶನ ಮಾಡಿದ್ರೆ ನೀವು ಮಾಡಿದಂತೆ. ನನಗೆ ಪುಣ್ಯ ಬಂದರೆ ನಿಮಗೆ ಬಂದಂತೆ.
***
ಅಮಲು
ಗಾಂಪ ಕಂಠ ಪೂರ್ತಿ ಕುಡಿದು ಬಂದಿದ್ದ. ಗಂಟಲು ಕಿತ್ತು ಬರುವವರೆಗೆ ಕಿರುಚಾಡಿ ಬಾಗಿಲು ತಟ್ಟಿದರೂ ಹೆಂಡತಿ ಮಾತ್ರ ಬಾಗಿಲು ತೆಗೆಯಲೇ ಇಲ್ಲ. ವಿಧಿಯಿಲ್ಲದೇ ಮಧ್ಯರಾತ್ರಿಯವರೆಗೆ ಅಲ್ಲೇ ಉಳಿದ. ನಡುರಾತ್ರಿ ಕುಡಿತದ ಅಮಲು ಇಳಿಯಿತು. ಹೆಂಡತಿಯನ್ನು ಚೆನ್ನಾಗಿ ಹೊಡೆಯಬೇಕೆಂದು ಮನದಲ್ಲಿ ಕುದಿಯುತ್ತಿದ್ದ. ಸಾವರಿಸಿಕೊಂಡು ಬಾಗಿಲತ್ತ ಕಣ್ಣಾಡಿಸಿದ. ಅದು ತನ್ನ ಮನೆಯೇ ಅಲ್ಲ, ತನ್ನ ಮನೆಯಿರುವ ಬೀದಿಯೂ ಅಲ್ಲ. ಹಾಗಾಗಿ ತನ್ನ ಮನೆಯತ್ತ ಹೆಜ್ಜೆ ಹಾಕಿದ.
***
ಪಾರದರ್ಶಕ ವ್ಯವಹಾರ
ಗಾಂಪ: ನಿಮ್ಮ ಅಂಗಡಿಯಲ್ಲಿ ಬಟ್ಟೆ ತೆಗೆದುಕೊಂಡು ಶರ್ಟ್ ಹೊಲಿಸಿದರೆ ಒಳ ಮೈ ಎಲ್ಲಾ ಕಾಣುತ್ತೆ.
ಅಂಗಡಿಯವ: ನಮ್ಮ ಅಂಗಡಿಯಲ್ಲಿ ಬೆಲೆಯೂ ಪಾರದರ್ಶಕ, ಬಟ್ಟೆಯೂ ಪಾರದರ್ಶಕ.
***
ಅಧಿಕ ಸಂಬಳ
ಗಾಂಪ: ಹಾಯ್, ನೀನೇನು ಮಾಡುತ್ತಿರುವೆ?
ಸೂರಿ: ಇಂಜಿನಿಯರಿಂಗ್ ಓದು ಮುಗಿಸಿ, ಈಗ ಕಂಪೆನಿಯೊಂದರಲ್ಲಿ ನೌಕರಿಗೆ ಸೇರಿದ್ದೇನೆ.
ಗಾಂಪ: ಎಷ್ಟು ಸಂಬಳ?
ಸೂರಿ: ಹನ್ನೆರಡು ಸಾವಿರ, ಆರು ತಿಂಗಳ ನಂತರ ಇಪ್ಪತ್ತೈದು ಸಾವಿರ ಮಾಡುತ್ತಾರೆ.
ಗಾಂಪ: ಛೇ, ನೀನೊಂದು .. ಆರು ತಿಂಗಳ ನಂತರವೇ ಕೆಲಸಕ್ಕೆ ಸೇರುವುದಲ್ವಾ?!
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ