‘ಸುವರ್ಣ ಸಂಪುಟ' (ಭಾಗ ೯೫) - ಸುಮತೀಂದ್ರ ನಾಡಿಗ

‘ಸುವರ್ಣ ಸಂಪುಟ' (ಭಾಗ ೯೫) - ಸುಮತೀಂದ್ರ ನಾಡಿಗ

ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಹೆಸರುವಾಸಿಯಾದ ಸುಮತೀಂದ್ರ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ಇವರ ಜನ್ಮ ದಿನಾಂಕ ಮೇ ೪, ೧೯೩೫. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದ ನಾಡಿಗರು ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಅಮೇರಿಕಾದ ಫಿಲಡೆಲ್ಫಿಯಾ ವಿಶ್ವವಿದ್ಯಾನಿಲಯಗಳಿಂದ ಇಂಗ್ಲೀಷ್ ಎಂ ಎ ಪದವಿಯನ್ನು ಪಡೆದಿದ್ದರು. ೧೯೮೫ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವು ನಾಡಿಗರ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿ ಗೌರವಿಸಿದೆ. ನಾಡಿಗರು ತಮ್ಮ ಪ್ರಬಂಧಕ್ಕೆ ಆಯ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು'. ಗೋಪಾಲಕೃಷ್ಣ ಅಡಿಗ ಹಾಗೂ ಕೆ ಎಸ್ ನರಸಿಂಹಸ್ವಾಮಿ ಇವರುಗಳ ಬಗ್ಗೆ ಸುಮತೀಂದ್ರ ನಾಡಿಗರು ವಿಶೇಷ ಅಧ್ಯಯನ ಮಾಡಿದ್ದಾರೆ.

ತಮ್ಮ ಅಧ್ಯಾಪನ ವೃತ್ತಿಯ ಜೊತೆಗೆ ಸಾಹಿತ್ಯ ಕೃಷಿಯನ್ನೂ ನಿರಂತರವಾಗಿ ಮಾಡಿಕೊಂಡು ಬಂದ ನಾಡಿಗರು ಕಾವ್ಯ, ಸಣ್ಣ ಕತೆ, ವಿಮರ್ಶೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಅಮೂಲ್ಯವಾದ ಕೃತಿಗಳನ್ನು ಹೊರತಂದಿದ್ದಾರೆ. ನಾಡಿಗರ ಪ್ರಮುಖ ಕವನ ಸಂಕಲನಗಳು ಹೀಗಿವೆ : ಜಡ ಮತ್ತು ಚೇತನ, ಪಂಚಭೂತಗಳು, ನಟರಾಜ ಕಂಡ ಕಾಮನಬಿಲ್ಲು, ಕುಹೂ ಗೀತ, ತಮಾಷೆ ಪದ್ಯಗಳು, ದಾಂಪತ್ಯ ಗೀತ, ಭಾವಲೋಕ, ಉದ್ಘಾಟನೆ, ಕಪ್ಪು ದೇವತೆ ಇತ್ಯಾದಿ.

ನಾಡಿಗರ ಸಾಹಿತ್ಯ ವಿಮರ್ಶೆಗಳು : ಮೌನದಾಚೆಯ ಮಾತು, ನಾಲ್ಕನೆಯ ಸಾಹಿತ್ಯ ಚರಿತ್ರೆ, ಮತ್ತೊಂದು ಸಾಹಿತ್ಯ ಚರಿತ್ರೆ, ಅಡಿಗರು ಮತ್ತು ನವ್ಯಕಾವ್ಯ, ವಿಮರ್ಶೆಯ ದಾರಿಯಲ್ಲಿ, ಇನ್ನೊಂದು ಸಾಹಿತ್ಯ ಚರಿತ್ರೆ ಇತ್ಯಾದಿ. ಕಥಾ ಸಂಕಲನಗಳೆಂದರೆ ಗಿಳಿ ಮತ್ತು ದುಂಬಿ, ಕಾರ್ಕೋಟಕ, ಸ್ಥಿತಪ್ರಜ್ಞ ಇತ್ಯಾದಿ. ನಾಡಿಗರು ಮಕ್ಕಳಿಗಾಗಿ ‘ಡಕ್ಕಣಕ್ಕ ಡಕ್ಕಣ’,ಧ್ರುವ ಮತ್ತು ಪ್ರಹ್ಲಾದ, ದಿಡಿಲಕ್ ದಿಡಿಲಕ್, ಗೂಬೆಯ ಕಥೆ, ಇಲಿ ಮದುವೆ, ಗಾಳಿಪಟ, ಹನ್ನೊಂದು ಹಂಸಗಳು (ಮಕ್ಕಳ ನಾಟಕ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯಾಸಕ್ತರಿಗಾಗಿ ‘ಕಾವ್ಯವೆಂದರೇನು?’ ಮತ್ತು ಕವಿತೆ ಬರೆಯುವುದು ಹೇಗೆ? ಎಂಬ ಉಪಯುಕ್ತ ಕೃತಿಗಳನ್ನು ಹೊರತಂದಿದ್ದಾರೆ. 

ನಾಡಿಗರು ಉತ್ತಮ ಅನುವಾದಕರೂ ಹೌದು. ಚಾರ್ಲ್ಸ್ ಡಿಕನ್ಸ್, ಅರಿಷ್ಟೋಫೇನ್, ರಸ್ಕಿನ್, ಅಯೋನೆಸ್ಕೋನ ಮೊದಲಾದ ಖ್ಯಾತ ಸಾಹಿತಿಗಳ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇಂಗ್ಲೀಷ್ ಭಾಷೆಯಲ್ಲೂ ನಾಡಿಗರು ಹಲವಾರು ಕೃತಿಗಳನ್ನು ರಚನೆ ಮಾಡಿದ್ದಾರೆ. ನಾಡಿಗರ ಸಾಹಿತ್ಯ ಸೇವೆಗೆ ಹಲವಾರು ಪುರಸ್ಕಾರಗಳೂ ಸಂದಿವೆ. ಇವರು ಆಗಸ್ಟ್ ೭, ೨೦೧೮ರಲ್ಲಿ ನಿಧನ ಹೊಂದಿದರು.

ಸುವರ್ಣ ಸಂಪುಟದಲ್ಲಿ ಸುಮತೀಂದ್ರ ನಾಡಿಗರ ಒಂದು ಕವನವನ್ನು ಆರಿಸಿ ಪ್ರಕಟಿಸಿದ್ದಾರೆ. ಆ ಕವನವನ್ನು ನಿಮ್ಮ ಓದಿಗಾಗಿ ಇಲ್ಲಿ ನೀಡುತ್ತಿದ್ದೇವೆ. ಕವನವು ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

ನಿಮ್ಮ ಪ್ರೇಮಕುಮಾರಿಯ ಜಾತಕ

ರಾಯರೆ, ಲಗ್ನ ಕುಂಡಲಿ ಮತ್ತು ಅಂಶಕುಂಡಲಿ ಹಾಕಿ

ಹಿಂದು ಮುಂದಿನದೆಲ್ಲ ವಿಷದವಾಗಿ

ಬರೆದಿಟ್ಟಿರುವೆ ಕೇಳಿ ದೃಗ್ ಸಿದ್ಧಾಂತ ಮುಂತಾದ

ಮಹಮಹಾಗ್ರಂಥಗಳ ಆಧಾರದಿಂದ,

ಇದು ನಿಮ್ಮ ಪ್ರೇಮಕುಮಾರಿಯ ಜಾತಕ.

ಎಷ್ಟೋ ಮಕ್ಕಳ ಹಾಗೆ ಇವಳಲ್ಲಿ ಋಣಪಾತಕ

 

ಬಿದ್ದ ಕೂಡಲೆ ಕೆಳಗೆ ಅತ್ತು, ಅಂಗಾತಮಲಗಿಸಲು  

ಮೊಗ್ಗೆ ನಗು ನಕ್ಕವಳು ನಿಮಿಷದೆಲ್ಲೆ, ತೊಟ್ಟಿಲಲ್ಲಿದ್ದಂತೆ

ಬಳಿಕ ಹಾಸಿಗೆಯಲ್ಲು ಹಗುರವಾಗಿ ಮಲಗುವಳು ಈಗೆ ಅಂಗಾತ.

ಆ ಹೊತ್ತು ಖಾಲಿಸೀಸೆಯ ತುಂಬ ಗಾಳಿಹರಡಿದ್ದಂತೆ

ಮೈಯೆಲ್ಲ ನಕ್ಕಳಿವಳು, ರೋಜಪಕಳೆಯ ಬಣ್ಣ ತೂಕದವಳು.

ಆಲಿಕೆಯ ಸೀಸೆಯೊಳಗಿಟ್ಟು ಸುರುವಿದ ಹಾಗೆ

ತುಂಬಿಕೊಳ್ಳುವುದಿವಳ ಮೂಲಪ್ರವೃತ್ತಿ.

ನೆಲ ಬಿಲ ಗೂಡು ಮನೆ ನೀರಿಗೂ ಇಂಥ

ಸ್ವಾರಾಧನೆಯ ಕೊಟ್ಟವಳು ತಾಯಿ ಪ್ರಕೃತಿ.

 

ವರ್ಷತುಂಬಿರಲಿಲ್ಲ ಅಲ್ಲವೇ ರಾಯರೆ,

ಕೇಳಿ ನಕ್ಕಿರಿ ಇವಳ ಪುಟ್ಟ ತೊದಲು,

ನಾಲ್ಕನೆಯ ವರ್ಷಕ್ಕೆ ಮೊಣಕಾಲ ಕೆಳಗೆಳೆದು

ಲಂಗಸುಕ್ಕನ್ನೊರೆಸಿ ಮುದ್ದುಮಾತಿಗೆ ಬಂತು ರೆಕ್ಕೆ ಮೊದಲು,

ಸೀರೆಯನ್ನುಟ್ಟಾಗ ಸಿಲ್ಕಿನ ಸೀರೆ ಹರಿದಂತೆ,

ಎದೆಮುಚ್ಚಿ ಸೆರಗೆಳೆದು ಕಟ್ಟಿದರೆ

ಅಲಕಾವತಿಯ ವಿಧಿಯ ಭಾಂಡ ಬೈತಿಟ್ಟಂತೆ.

ಕಣ್ಣುಗಳು ಹೊರಳಿದರೆ ವಿದ್ಯುಲ್ಲತೆ ಲಕಲಕಿಸಿದಂತೆ.

ಕ್ರಮೇಣ ಅರಳುತ್ತ ಹೂವುಗಳ ತೋಟಕ್ಕೆ 

ಇವಳ ಆರೋಗ್ಯ ಸವಾಲು, ಇದೆಲ್ಲ ಮಾಮೂಲು ;

ದುಂಬಿಗಳಿಗೂ ಅಲ್ಲಿ ಹರಿವ ವಿದ್ಯುತ್ತಂತಿ

ಹಗಲಿರುಳು ಕಾವಲು, ಆದರೂ ದುಂಬಿದುಂಬಾಲು.

ಹುಟ್ಟಿದ್ದೆ ತಡ, ಇತ್ತನೋಡೆನ್ನುವುದೆ ಮುಖ್ಯಮಂತ್ರ

ಉಚ್ಛಾಸ ನಿಶ್ವಾಸವೂ ಒಂದು ಕಣ್ಸೆಳೆಯುವ ತಂತ್ರ,

ಹುಟ್ಟಿದ್ದ ಹಾಗೆ ಮೆರೆಯುವವರೆಗೆ ಕಾತರ

ಬೆಳೆಯಲಿ ಬಿಡಿ, ಫಲಬಿಟ್ಟರೂ ನಿಮಗೆ ಫಲವಿಲ್ಲ.

 

ಇವಳ ಬದುಕಲ್ಲಿ, ಚಿಗುರಲ್ಲಿ, ಹಸುರಲ್ಲಿ 

ಸುಗ್ಗಿ ಕಾಲಿಟ್ಟಾಗ, ಜುಮುಜುಮು ಜುಮುಜುಮು

ಏನೊ ಯಾತನೆಯಲ್ಲಿ ಕಿರಿಕಿರಿಯಪಟ್ಟಾಗ

ಮೊಗ್ಗು ಪಟ್ಟನೆ ಹೂವು ಗಾಳಿಗಮ್ಮೆಂದಾಗ

ಈ ಸುಭಗೆ ಫಲ್ಲನೆ ಒಮ್ಮೆ ಲಜ್ಜಾನ್ವಿತೆ

ಅನಂಗನಾರೋಗಣೆಗೆ ಕಾದ ಪೂತೆ.

ಶನಿಮಹಾರಾಯ ದೃಷ್ಟಿಯಿಟ್ಟಿದ್ದಾನೆ ಇವಳ ಮೇಲೆ

ಕುಜರಾಹುಸಂಧಿಗೂ ಕ್ರೂರ ಸಂಧಿಯ ಕಾಲ, ಸ್ವಲ್ಪ ಕಾಲ.

ಸಂದಿ ಸಂದಿಯನೋವು, ಬಿಗಿತ ಮೈಭಾರ,

ಇವಳ ಸಿಡಿಮಿಡಿಕಂಡು ಮಿಡುಕಬೇಡಿ.

ಇಲ್ಲ ಏನೂ ಅಪಾಯ, ಗುರುವಿನಿಂದ ಸಹಾಯ. 

ಕ್ರೂರವಿದ್ದರು ಕೂಡ ಸಂಧಿಪರಿಹರಿಸುವನು ಒಬ್ಬ ಸರದಾರ

ಹದಿನಾರ ಹದಿನೆಂಟ ಕಾದುಕುಳಿತಿರಬೇಕು ಒಪ್ಪಿಸಲು ತನ್ನ ಪ್ರವರ.

 

ಅಮವಾಸ್ಯೆ ಹುಣ್ಣಿಮೆಗೊಮ್ಮೆ ಹತ್ತನೆಯ ಗ್ರಹ ತನ್ನ

ಭ್ರಮಣ ಪಥ ತಪ್ಪಿದರೆ ಈ ನಿತಂಬನಿಯ ಕಣ್ಣುಕೆಂಪಾದವು

ಗಾಳಿ ಮೈಕೈ ಸೆಟೆದು ಮಿಡುಕೀತು, ಆಗ ಆದರೆ ಮತ್ತೆ ಅಂಗಾತ

ಸ್ವಾಮಿ, ಸಲೀಸು ನಿಮ್ಮ ಪ್ರೇಮಕುಮಾರಿಯ ಜಾತಕ

ನವಮಾಸ ಕಳೆದರೆ ಸಾಕು ಹತ್ತು ದಿನ ರಿದ್ದಿ.

ಸಂತಾನ ಕುಡಿವರೆದು ವಂಶವೃದ್ಧಿ.

 

ಇವಳು ಮೀನಿನ ಹಾಗೆ, ಓಡಾಡುವ ನೀರಪರಿಧಿಯ

ಬಿಟ್ಟು ಚಲಿಸದಿದ್ದರು ಕೂಡ, ಕಾಯಿಸುವುದೇನು ಸರಿಯಲ್ಲ. 

ನೀರ ಮೇಲೇ ನನ್ನು ಮುಚ್ಚುವುದು ಕೂಡ ತರವಲ್ಲ.

ಪ್ರಣಯದುಸಿರಾಟ ನೀರಲ್ಲಿ ಕರಗಿದ ಗಾಳಿ.

ಗಾಳಿ ಕಡಿಮೆಯಾದರೆ ಇವಳು ಸತ್ತಂತೆ

(ಕ್ಷಮಿಸಿ ಗ್ರಾಮ್ಯಕ್ಕೆ)

ಆಮೇಲೆ ಒಗೆದುಬಿಡು ಹಳೆಯ ಕಂತೆ.

 

ಇದಕ್ಕೆ ಪರಿಹಾರ ಬಹಳ ಸುಲಭ. ಎಷ್ಟೆ ಆದರು ವಯಸ್ಸು

ವರ್ಷಗಳ ಕಡಿಮೆ ಏಣಿಸಿದರೇನೆ ಇವಳ ಶ್ರೇಯಸ್ಸು.

ಸಾಕು ಸಾಕೆನ್ನುವುದು ಇಲ್ಲದಿದ್ದರುಸ್ವಾಮಿ, ಬೇಕು ಬೇಕೆನ್ನುವುದ

ಪೂರೈಸುತಿರಿ ಸಾಕು ಖಂಡಿತಾ ಹೆಚ್ಚುವುದು ಇವಳ ಆಯಸ್ಸು.

 

ರಾಯರೇ ಇದು ನಿಮ್ಮ ಪ್ರೇಮಕುಮಾರಿಯ ಜಾತಕ

ಈ ಗೆರೆಯ ಮೀರಿದರೆ ಹತ್ತುದಿನ ಸೂತಕ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)