'ಕೌನ್ ಬನೇಗಾ ಕಾಮಿಡಿಪತಿ' ಕ್ವಿಜ್ !

'ಕೌನ್ ಬನೇಗಾ ಕಾಮಿಡಿಪತಿ' ಕ್ವಿಜ್ !

ಬೊಗಳೂರು, ಜ.2- KBC (ಕೌನ್ ಬನೇಗಾ ಕಾಮಿಡಿಪತಿ) ಸ್ಪರ್ಧೆಯಲ್ಲಿ ಲಾಕ್ ಮಾಡುವವರು ಬದಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಚಿತ್ರ ವಿದ್ಯಮಾನಗಳೂ ನಡೆಯುತ್ತಿದ್ದು, ಕೆಬಿಸಿಯಲ್ಲಿ ಕೇಳಬಹುದಾದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ಈ ಪ್ರಶ್ನೆ ಪತ್ರಿಕೆ ಬೊಗಳೆ ರಗಳೆ ಕೈಗೆ ಸಿಕ್ಕಿದ್ದು, ಅದನ್ನು ಓದುಗರಿಗಾಗಿ ಇಲ್ಲಿ ಬಯಲು ಮಾಡಲಾಗುತ್ತಿದೆ. ( http://bogaleragale.blogspot.com/ )
ಕ..ಕ..ಕ..ಕ...ಕೌನ್ ಬನೇಗಾ ಕ...ಕ...ಕ...ಕ...ಕಾಮಿಡಿಪತಿ ಪ್ರಶ್ನೆ ಪತ್ರಿಕೆಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿರುತ್ತವೆ.

1. ಕ್ಲೂ: ಇದು ಎಡಪಕ್ಷಗಳಿಗೆ ಕೇಳಲಾಗುವ ಪ್ರಶ್ನೆ.
ಮುಷ್ಕರ ಅಂದರೇನು?
ಎ) ವೇತನಸಹಿತ ರಜಾದಿನ
ಬಿ) ಉಸಿರಿನಷ್ಟೇ ನೈಸರ್ಗಿಕವಾದ ಒಂದು ಕ್ರಿಯೆ
ಸಿ) ಇದನ್ನು ಮಮತಾ ಬ್ಯಾನರ್ಜಿಯಂಥವರು ನಕಲಿ ಹೊಡೆದರೆ ಅದನ್ನೇ ನಾಚಿಕೆಗೇಡಿನ ಸಂಗತಿ ಎಂದು ಹೇಳಲಾಗುತ್ತದೆ.
ಡಿ) ನೀವು ಯಾವತ್ತೂ ಮಾಡುತ್ತಿರುವುದನ್ನು ಜನತೆ ಮಾಡುವಂತೆ ಪ್ರೇರೇಪಿಸುವುದು. (ಅಂದರೆ ಏನೂ ಇಲ್ಲ!)
ಯಾವ ಮಿತ್ರನಿಗೆ ಫೋನ್ ಕರೆ ಮಾಡಲು ಬಯಸುತ್ತೀರಿ?
ಮನಮೋಹನ್ ಸಿಂಗ್‌ಗೆ ಖಂಡಿತಾ ಬೇಡ ಎಂಬ ಉತ್ತರ.
2. ಜನತಾ ದಳ ಎಂಬ ವಿದಳನಾ ಪಕ್ಷಕ್ಕೆ ಕೇಳುವ ಪ್ರಶ್ನೆ.
ಪಕ್ಷ ಎಂದರೇನು?
ಎ) ಅವಕಾಶಕ್ಕಾಗಿ ಹಾತೊರೆಯುತ್ತಾ ಅದು ಸಿಕ್ಕಿದ ತಕ್ಷಣ ಒಡೆದು ಚೂರಾಗುವುದು.
ಬಿ) ಅಧಿಕಾರಕ್ಕಾಗಿ ಚೌಕಾಶಿಯ ಪ್ರಧಾನ ಅಸ್ತ್ರ
ಸಿ) ಪರಮಾಣುವಿಗಿಂತಲೂ ಕಿರಿದಾದ ಗಾತ್ರದಷ್ಟಕ್ಕೆ ಒಡೆಯಬಲ್ಲ ಒಂದು ವೈಜ್ಞಾನಿಕ ಅದ್ಭುತ
ಡಿ) ಚುನಾವಣೆಗಳು ಬಂದಾಗ ರಾಜಕಾರಣಿಗಳು ಅತ್ಯಂತ ಇಷ್ಟಪಡುವ ವಸ್ತು
ಯಾವ ಮಿತ್ರನಿಗೆ ಕರೆ ಮಾಡಲು ಬಯಸುತ್ತೀರಿ?
ರಾಜಕೀಯದಲ್ಲಿ ಯಾರು ಕೂಡ ಯಾವಾಗ ಬೇಕಾದರೂ ಮಿತ್ರರಾಗಬಹುದು, ಶತ್ರುಗಳೂ ಆಗಬಹುದು. ಹಾಗಿರುವುದರಿಂದ ಯಾರಿಗೆ ಬೇಕಾದರೂ ಕರೆ ಮಾಡುತ್ತೇವೆ!

3. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಗೆ ಪ್ರಶ್ನೆ.
ತಮಿಳು ಅಂದರೇನು?
ಎ) ಚಿತ್ರೋದ್ಯಮಕ್ಕೆ ತೆರಿಗೆ ಉಳಿಸುವ ಒಂದು ಅಸ್ತ್ರ
ಬಿ) ಅಕ್ಷರಗಳು, ಉಚ್ಚಾರಣೆಗಳು ಕಡಿಮೆ ಇದ್ದರೂ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ಅರ್ಹವಾದ ಸಂಗತಿ
ಸಿ) ಆಂಗ್ಲ ಹೆಸರುಳ್ಳ ತಮ್ಮ ಕೌಟುಂಬಿಕ ಒಡೆತನದ ಚಾನೆಲ್‌ನಲ್ಲಿ ಕಡಿಮೆ ಬಳಸಲಾಗುವ ಭಾಷೆ
ಡಿ) ತಮಿಳುನಾಡಿನಾದ್ಯಂತ ಇದೇ ಚಾನೆಲನ್ನೇ ಬಲವಂತವಾಗಿ ನೋಡಬೇಕಾಗಿರುವುದರಿಂದ ತಮಿಳು ಬಗ್ಗೆ ಯೋಚಿಸಲು ಯಾರಿಗಾದರೂ ಸಮಯವೆಲ್ಲಿದೆ?
ಯಾರಿಗೆ ಫೋನ್ ಮಾಡಲು ಬಯಸುತ್ತೀರಿ?
ತಮಿಳು ಕುರಿತಾಗಿ ವಿಶೇಷಣ ಸೇರಿಸಿ ಮಾತನಾಡುವ ಯಾರಿಗಾದರೂ ಸೈ!

Rating
No votes yet

Comments