ಚೆಲುವಿನ ಚಿತ್ತಾರ....

ಚೆಲುವಿನ ಚಿತ್ತಾರ....

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.

ಟಿ. ನರಸೀಪುರದಲ್ಲಿ ಕಥೆ ಆರಂಭಗೊಳ್ಳುತ್ತದೆ... ಮಾದೇಶ ಎಂಬ ಬಡ ಮೆಕ್ಯಾನಿಕ್ ಹುಡುಗ(ಗಣೇಶ್) ಮತ್ತು ಐಶ್ವರ್ಯ (ಅಮೂಲ್ಯ) ಎಂಬ ಶ್ರೀಮಂತ ಬಾಲೆಯ ಭೇಟಿ ಬೈಕ್ ಢಿಕ್ಕಿಗೊಳ್ಳುವ ಪ್ರಕರಣದೊಂದಿಗೆ ಆರಂಭವಾಗಿ, ಆ ಭೇಟಿ ಜಗಳವಾಗಿ, ಆ ಜಗಳವೇ ನಂತರ ಪ್ರೀತಿಯಾಗಿ ಮಾರ್ಪಡುತ್ತದೆ. ಐಶ್ವರ್ಯಳ ಮದುವೆ ಪ್ರಸ್ತಾಪ ಆಕೆಯ ಮಾವನ ಮಗನೊಂದಿಗೆ ನಡೆಯುತ್ತದೆ... ಹೆದರಿದ ಐಶ್ವರ್ಯ ಮತ್ತು ಮಾದೇಶ ಬೇರೆ ಗತಿಯಿಲ್ಲದೆ ಬೆಂಗಳೂರಿಗೆ ಓಡಿ ಹೋಗುತ್ತಾರೆ.ಅಲ್ಲಿ ಸ್ನೇಹಿತನೊಬ್ಬನ (ಕೋಮಲ್) ಸಹಾಯದಿಂದ ಮದುವೆಯಾಗಿ ಬಾಡಿಗೆ ಮನೆಯೊಂದನ್ನು ಹಿಡಿಯುತ್ತಾರೆ... ಅಷ್ಟರಲ್ಲಿ ಐಶ್ವರ್ಯಳ ಗೆಳತಿಯಿಂದ ಆಕೆ ಓಡಿ ಹೋಗಿರುವ ವಿಷಯ ತಿಳಿದ ಐಶ್ವರ್ಯಳ ಮನೆಯವರು ಬೆಂಗಳೂರಿಗೆ ಬಂದು ಅವರನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಆಗಿದ್ದಾಯಿತು, ಮನೆಗೆ ಬನ್ನಿ, ಎಲ್ಲರೊಂದಿಗೆ ಮಾತಾಡಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಸುತ್ತೇವೆ ಎಂದು ನಂಬಿಸಿ ಅವರನ್ನು ವಾಪಾಸ್ ಮನೆಗೆ ಕರೆ ತರುತ್ತಾರೆ... ಆದರೆ ವಾಪಸ್ ಬಂದ ಮೇಲೆ ಅಲ್ಲಿ ನಡೆಯುವ ಘಟನೆಗಳೇ ಬೇರೆ... ಈ ಯುವ ಪ್ರೇಮಿಗಳ ಪರಿಸ್ಥಿತಿ ಹೃದಯ ವಿದ್ರಾವಕವಾಗುತ್ತದೆ... ಚಿತ್ರದ ಅಂತ್ಯ ವಿಭಿನ್ನವಾಗಿದೆ.. ಸತ್ಯ ಕಥೆಯೆಂದು ಮೊದಲೇ ಹೇಳಿರುವುದರಿಂದ ಈ ರೀತಿಯ ಅಂತ್ಯವನ್ನು ಸ್ವೀಕರಿಸಲೇ ಬೇಕಾದುದು ಅನಿವಾರ್ಯವಾಗಿದೆ... ಪೊರ್ವಾರ್ಧ ಸಂಪೂರ್ಣ ಹಾಸ್ಯಮಯ, ಪ್ರೇಮಮಯ, ಲವಲವಿಕೆಯ ಆಗರ... ಉತ್ತರಾರ್ಧ ಪ್ರೇಮಿಗಳು ಪಡುವ ಪಾಡು ಹಾಗೂ ಗೋಳಿನ ಸಾಗರ...

ವಿಭಿನ್ನ ಪಾತ್ರವಾದರೂ ಅಭಿನಯದಲ್ಲಿ ಗಣೇಶ್ ಮಿಂಚುತ್ತಾರೆ.. ಕೋಮಲ್ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ... ಹೊಸ ನಟಿ ಅಮೂಲ್ಯ ಪೂರ್ವಾರ್ಧದಲ್ಲಿ ಲವಲವಿಕೆಯಿಂದ ನಟಿಸಿ ಮನ ಗೆಲ್ಲುತ್ತಾಳೆ.. ಆದರೆ ದುಃಖದ ಸನ್ನಿವೇಶಗಳಲ್ಲಿ ಆಕೆಯ ಅಪ್ರಭುದ್ಧತೆ ಎದ್ದು ಕಾಣುತ್ತದೆ. ಆದರೆ ನಾಯಕಿಯಾಗಿ ಮೊದಲ ಚಿತ್ರವಾಗಿದ್ದರೂ ಹಲವಾರು ಸನ್ನಿವೇಶಗಳನ್ನು ಅಮೂಲ್ಯಳಿಂದ ಉತ್ತಮವಾದ ಅಭಿನಯವನ್ನು ಹೊರತೆಗೆಯುವಲ್ಲಿ ನಾರಾಯಣ್ ಯಶಸ್ವಿಯಾಗಿದ್ದಾರೆ.

ಮನೋಮೂರ್ತಿ ಸಂಗೀತ ಇಂಪಾಗಿದೆ. ಎರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಪೋಷಕ ನಟರೆಲ್ಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಕಥೆಯಲ್ಲಿ ಅಂತ ಹೊಸತನವೇನೂ ಇಲ್ಲದಿದ್ದರೂ ಚಿತ್ರಕಥೆ ಎಲ್ಲೂ ಹಳಿ ತಪ್ಪುವುದಿಲ್ಲ. ಮಹಿಳಾ ಪ್ರೇಕ್ಷಕರನ್ನು ಆಕರ್ಷಿಸುವ ಎಲ್ಲ ಮಸಾಲಗಳನ್ನು ಚಿತ್ರ ಒಳಗೊಂಡಿರುವುದರಿಂದ ಹಾಗೂ ಒಂದೆರಡು ಹಾಡುಗಳು ಚೆನ್ನಾಗಿರುವುದರಿಂದ ಚಿತ್ರ ಯಶಸ್ವಿಯಾದರೆ ಯಾವುದೇ ಆಶ್ಚರ್ಯವಿಲ್ಲ.

Rating
No votes yet