ನಾನೂ ನನ್ನ ಬಾಸೂ ೪ ತಲೆಯ ಮೇಲಿನ ಬಂಡೆ

ನಾನೂ ನನ್ನ ಬಾಸೂ ೪ ತಲೆಯ ಮೇಲಿನ ಬಂಡೆ

ನಾನೂ ನನ್ನ ಬಾಸೂ   ೪          

                                              ಬೆಳಿಗ್ಗೆ ಎಂದಿನಂತೆ ಸೂರ್ಯತಡವಾಗಿ ಬಾನಿಗೇರಿದ್ದರಿಂದ ನಾನು ಕಣ್ಣು ತೆರೆಯುವುದು ತಡವಾಯ್ತು. ಅದರಿಂದಾಗಿ ನನ್ನೆಲ್ಲಾ ದೈನಂದಿನ ಕೆಲಸಗಳೂ ತಡವಾಗಿ ನಾನು ಆಫೀಸಿಗೆ ಬರೇ ಒಂದೂವರೆ ಗಂಟೆ ತಡವಾಗಿಯೇ ಹೊರಟೆ. ಎರಡನೇ ಕಿಲೋಮೀಟರಿನಲ್ಲಿ ನೀಲಿ ಕೈಕೊಟ್ಟಳು. ಜಾಫರನ  ಹತ್ತಿರ ಹೋದರೆ ಕಳೆದ ಸಾರಿಯಂತೆ ಇಡೀ ಸೌರಾಷ್ಟ್ರ ದೇಶದ ಕಥೆಯೆಲ್ಲಾ ಹೇಳಿ ತಲೆ ತಿಂತಾನೆ, ನಾನೇ ರಿಪೇರಿ ಮಾಡಲು  ಕುಳಿತೆ.. ಪ್ಲಗ್ ಕ್ಲೀನ್ ಮಾಡಿ ಕರೆಂಟ್  ಚೆಕ್ ಮಾಡಿದೆ ಬರ್ತಾ ಇತ್ತು. ಪೆಟ್ರೋಲ್ ನೋಡಿದೆ ಥುತ್!!  ರಿಸರ್ವಿಗೆ ಬಂದಾಗಿತ್ತು. ಆಫೀಸಿಗೆ ತಲುಪುವಾಗ ಪುನಹ ಅರ್ಧ ಗಂಟೆ ತಡ. ಆಫೀಸ್ ಗೇಟಲ್ಲೇ ಪುನಃ ನಿಂತಳು ನೀಲಿ, ಈ ಸಾರಿ ಹಾಳಾಗಿ ಅಲ್ಲ, ಬದಲು ಕಾಲೋನಿಯ ಎಲ್ಲರೂ ಗೇಟ್ ನ ಮುಂಬಾಗದಲ್ಲೇ ನೆರೆದಿದ್ದಾರೆ ಹೆಂಗಸರು, ಮಕ್ಕಳು ಎಲ್ಲರೂ ಘೇರಾವ್!!!. ನನ್ನ ಬಾಸ್  ಮತ್ತು ರುದ್ರ ಕೂಡಾ ಅಲ್ಲಿಯೇ ಇದ್ದರು. ಗೇಟ್ ಮುಚ್ಚಲಾಗಿತ್ತು. ಅಂದರೆ ಯಾರೂ ಒಳ ಹೋಗದಂತೆ ತಡೆಯುತ್ತಿದ್ದಾರಾ? ಬಾಸ್ ಮುಖ ಕೆಂಪು ಕೆಂಪಾಗಿತ್ತು. ನನ್ನ ಕಡೆ ಕಲ್ಲೂರಾಮ್ ನೋಡಿದ ನೋಟದಲ್ಲಿ ಶಿವನಾಗಿದ್ದರೆ ಓಹ್ ನಾನೂ ನೀಲಿ ಇಬ್ಬರೂ ಒಮ್ಮೆಲೇ ಭಸ್ಮವಾದೇವು ಅನ್ನಿಸಿತ್ತು. ದೃಷ್ಟಿ ತಪ್ಪಿಸಿದೆ. ಒಮ್ಮೆಲೇ ಹೊಳೆಯಿತು!! ಆದರೆ ನನ್ನ ಮರೆವಿಗೆ ನನಗೇ ನನ್ನ ಮೇಲೆ ಸಿಟ್ಟು ಬಂತು.

                                          ಮೂರು ದಿನದ ಹಿಂದೆಯಷ್ಟೇ ಗೊತ್ತಾಗಿತ್ತದು, ಯಾರೋ ನನ್ನ  ತಲೆಮೇಲೆ ಕಲ್ಲು ಹೊತ್ತು ಹಾಕುವ ಕೆಲ್ಸ ಮಾಡ್ತಾ ಇದ್ದಾರೆ ಅಂತ. ಅಂದರೆ ಇಡೀ ಕಾಲೋನಿಯಲ್ಲಿ ( ಅಂದರೆ ನಮ್ಮ ಕಂಪೆನಿಯ ಕೆಲಸಗಾರರು, ಆಫೀಸರರು, ಎಲ್ಲಾಸೇರಿ ಇರುವಜಾಗ- ಅಲ್ಲಿಯೇ ) ನೀರಿನ ಟ್ಯಾಂಕ್ ಪಂಪ್ ಹೌಸ್ ಇದ್ದು ಕಾಲೋನಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿ ನನ್ನದಾಗಿತ್ತು. ಈ ಹಿಂದೆ ಅದು ನನ್ನ ಕಲೀಗ್ ರುದ್ರನ ಕೆಲಸವಾಗಿತ್ತು. ಆದರೆ ಇತ್ತೀಚೆಗಷ್ಟೇ ನನಗೆ ವಹಿಸಿ ಕೊಡಲಾಗಿತ್ತು. ಅದಕ್ಕೆ ಸರಿಯಾಗಿ , ಕ್ಲುಪ್ತ  ಸಮಯಕ್ಕೆ ಸರಿಯಾಗಿ ನೀರು ಬಿಡುವ ವ್ಯಕ್ತಿ ಬಡ್ಕೂ( ಅದು ನಿಜವಾದ ಹೆಸರಲ್ಲ, ಅವನು ಎಲ್ಲರೆದುರಿಗೂ ಏನೇನೋ ಬಡಬಡಿಸ್ತಾ ಇರೋದ್ರಿಂದ - ಅದೂ ಮಧ್ಯ ಜಲ ಒಳಗಿಳಿದಾಗ ಮಾತ್ರ- ಎಲ್ಲರೂ ಆತನಿಗೆ ಆ  ಹೆಸರನ್ನು ಇಟ್ಟಿದ್ದರು). ಅವನಲ್ಲಿನ  ಒಂದೇ ದೋಷವೆಂದರೆ ಮೃಗಜಲ ಅಲ್ಲಲ್ಲ ಮಧ್ಯ ಜಲ ಏರಿಸೋದು. ಸುಮಾರು ೪೦-೫೦ ವರ್ಷದ ಆತ ಆ "ಇದು" ಏರಿಸಿದನೆಂದರೆ ಒಮ್ಮೆಲೇ ಇಪ್ಪತೈದಕ್ಕೆ ಇಳಿದು ಬಿಡುತ್ತಾನೆ. ಈ "ಇಳಿದ" ವಯಸ್ಸಿನಲ್ಲೇ ಆತ ಆ ಇಪ್ಪತೈದು ಮೀಟರ್ ಎತ್ತರದ ನೀರಿನ ಹೌದಿಯನ್ನು ಚಕಚಕನೆ ಏರಿಬಿಡುತ್ತಾನೆ. ಮತ್ತು ಮಾಡಬೇಕಾದ ಕೆಲಸಗಳನ್ನೆಲ್ಲಾ ಚಾಚೂ ತಪ್ಪದೇ ಮಾಡಿಬಿಡುತ್ತಾನೆ. ಆದರೆ ಆ "ಇದು" ಇಲ್ಲದಿದ್ದರೆ ಮಾತ್ರ ನಾಲ್ಕೈದು ಮೆಟ್ಟಲು ಹತ್ತಲೂ ಅವನಿಂದಾಗೋದಿಲ್ಲ. ತನ್ನ ಮಗಳ ಮದುವೆಯ ತಲೆಬಿಸಿಯಲ್ಲಿ ಆತ ರಜೆಯಲ್ಲಿ ಹೋಗಿದ್ದ. ಆ ಸಮಯದಲ್ಲಿ ಇಲ್ಲಿನ  ಕೆಲಸ ವಹಿಸಿಕೊಂಡವ ಜೋಗ. ನನಗೆ ಜೋಗನ ಮೇಲೆ ನಂಬಿಕೆ ಇದೆ. ಆದರೆ ವಾಸ್ತವ ಬೇರೆಯೇ ಇತ್ತು. ನೀರೇ ಬರಲಿಲ್ಲವೋ ಅಥವಾ ಹೌದಿಯ ನೀರೇ ಖಾಲಿಯಾಯ್ತೋ ಗೊತ್ತಿಲ್ಲ. ಬೆಳಿಗ್ಗೆ ಬಿಡಲು ನೀರೇ ಇಲ್ಲ. ನೀರು ಬಾರದೇ ಇರಲು ಸಾಧ್ಯವೇ ಇಲ್ಲ. ಅಂದರೆ ಹ್ಯಾಗೋ ನೀರು ಖಾಲಿಯಾಗಿರಬೇಕು.ಹೀಗಾದದ್ದು ಈ ವಾರದಲ್ಲಿ ಇದು ಮೂರನೆಯ ಬಾರಿ. ಅದಕ್ಕೇ ಈ ಘೆರಾವ್. ಇವತ್ತಿಂದ ರಾತ್ರೆ ನಮ್ಮ ಕಡೆಯ  ಚೌಕಿದಾರ್ ಬಿಡಲೇ ಬೇಕು.
                       

                                                                                       ************  ***********************      ***********
          

                                                 ನಾನು ಆಫೀಸಿನ ಒಳಹೊಗ್ಗುವಾಗ  ಬಾಗಿಲಲ್ಲೇ ಇದ್ದ ಮೂವರೂ ಗಹನವಾಗಿ ಒಂದು ಕಾಗದ ಇದಿರಿಟ್ಟುಕೊಂಡು ಚರ್ಚಿಸುತ್ತಿದ್ದರು. ನಾನು ಬಂದುದನ್ನು ನೋಡಿದ ಮೋಹನ್ ಲಾಲ್ " ಸಾರ್ ಬಂದ್ರಲ್ಲ, ಇವರಿಗೆ ಗೊತ್ತಿರುತ್ತೆ, ಕೇಳೋಣ" ಎಂದ . ಇತ್ತೀಚೆಗೆ ಈತ  ನನ್ನ ಚೇಲಾ  ಅಗ್ತಾ ಇದ್ದಾನೆ." ಸುಮ್ನಿರಯ್ಯಾ, ಇದು ಇವ್ರದ್ದಲ್ಲ, ಇವ್ರಿಗೇನ್ಗೊತ್ತಾಗುತ್ತೆ, ಆ ವೇಲಾಯುಧನ್ ಸಾಹೇಬ್ರದ್ದಿರಬೇಕಿದು" ಎಂದ ಕನ್ಯಾಲ್. ಇವ್ರಿಗೆ ಎಲ್ಲಾ ಭಾಷೇನೂ ಬರುತ್ತೆ ಗೊತ್ತಾ?, ಇವರು ಬೆಂಗಳೂರಿನೋರಲ್ವಾ?" ಅಂದ ಮೋಹನ್ಲಾಲ್.  "ಏಯ್ ಎನೂಂತ ಹೇಳ್ತೀರೋ, ಅಥವಾ ಹಾಗೇ ಬಡಬಡಿಸ್ಕೊಂಡು ಕೂತಿರ್ತೀರೋ?" ಜೋರಾಗಿ ಕೇಳಿದೆ ನಾನು." ಸಾರ್ ನಿನ್ನೆ ಶೇಟಿ ಕಸ ಗುಡಿಸುತ್ತಿರುವಾಗ ಈ ಕಾಗ್ದ ಸಿಕ್ತು, ನಿನ್ನೆ ನೀವು ರೂಮೆಲ್ಲಾ  ಹುಡುಕಾಡ್ತಾ ಇದ್ರಲ್ಲಾ, ನಿಮ್ದೇ ಇರಬೇಕು" ಎಂದ ನನ್ನ ಚೇಲ. "ಕೊಡ್ರೋ ಇಲ್ಲಿ "ಎಂದೆ ಡೌಲಿನಿಂದ.  
                            
                                                ನಿನ್ನೆ ನನ್ನ ಮೆಡಿಕಲ್ ಬಿಲ್ಲು ಎಲ್ಲೋ ಕಳೆದು ಕೊಂಡು ಬಿಟ್ಟಿದ್ದೆ. ಅದನ್ನ ಹುಡುಕದೆ ಇದ್ದರೆ ಅನ್ಯಾಯವಾಗಿ ನನ್ನ ನೂರೈವತ್ತು ರೂಪಾಯ್ ಹಾಳಾಗುತ್ತೆ. ಆ ಕ್ಯಾಷರ್ರೂ ಬಿಲ್ಲ್ ಇಲ್ದೇ ಎನೂ ಮಾಡಲ್ಲ. ಅದೂ ಹದಿನೈದು ರುಪಾಯಿ ಕೊಟ್ಟು ಡಾಕ್ಟರ್ ಪ್ರದೀಪರಿಂದ ಬರೆಸ್ಕೊಂಡು ಬಂದಿರೋ ಬಿಲ್ಲು. ಹಾಗೇ ಹೇಗೆ ಬಿಡ್ಲೀ ಅಂತ ರೂಮೆಲ್ಲಾ ಹುಡುಕಿದ್ದೆ, ಸಿಕ್ಕಿರ್ಲಿಲ್ಲ. ಈಗ ಅದೇ ಸಿಕ್ತೇನೋ ಅಂತ ಆಸೆಯಿಂದ  ನೋಡ್ದೆ. "ಥುತ್ ಅಲ್ಲ ಕಣ್ರೋ, ಇದು ಕಂಪೌಂಡರ್ ಕಟ್ಟಿ ಕೊಟ್ಟ್ ಮಾತ್ರೇ ಚೀಟಿ ಕಣ್ರೋ, ನೀವೆಲ್ಲಾ ಕ್ರಿಕೇಟ್ ಮಂಡಳೀಲಿ ಇರಬೇಕಾಗಿತ್ತು, ಬೇಕಾಗಿರೋದ್ಯಾವ್ದೂ ನಿಮಗೆ ಸಿಕ್ಕಲ್ಲ, ಅಂತ ಹೇಳ್ಬೇಕು ಅಂದ್ಕಂಡೆ, ಆದರೆ ಹೇಳಲಿಲ್ಲ".( ಇದು  ಸದನ ಅಲ್ವಲ್ಲ!!!) ಅಷ್ಟರಲ್ಲಿ ಒಳಗಿಂದ ಬುಲಾವ್ ಬಂತು.         
 
                                               ಶೇಟಿ ಬಂದು ಹೇಳ್ದ" ಸಾಹೇಬ್ರು ಕರೀತಾ ಅವ್ರೆ" " ಏನಯ್ಯಾ ವಿಷ್ಯ?" ಕೇಳ್ದೆ. ಇವನೂ ಭುವನೇಶ್ವರ ದೇವಸ್ಥಾನದ ಅರ್ಚಕರ ಸಾಲೇ, ಕಾಸ್ಬಿದ್ರೆ ಮಾತ್ರ ತೀರ್ಥ, ಇಲ್ದೇ ಇದ್ದರೆ ಏನಿಲ್ಲ. ಕಿಸೆಯಿಂದ  ಎರಡ್ರುಪಾಯಿ ತೆಗೆದು ನೇರ ಶೇಟಿ ಕಿಸೇಲ್ ಹಾಕ್ದೆ. ಉದುರ್ತು ತೀರ್ಥ!" ಸಾಹೇಬ್ರು ಬಿಸೀಲವ್ರೆ( ಅಂದ್ರೆ ಸಿಟ್ನಲ್ಲಿ), ಸಾರ್ ರುದ್ರಪ್ಪ್ನೋರೂ ಅಲ್ಲೇ ಅವ್ರೆ ಸಾರ್"
ಆಯ್ತು, ನನಗೆ ಗೊತ್ತಾಗೋಯ್ತು. ಏನೋ ಹಿಕ್ಮತ್ತು ನಡೆಸಿರಬೇಕು ರುದ್ರ ಮತ್ತೆ. ಪ್ರಾಯಶಃ ಏನೋ ಗ್ರಹಚಾರ ಕಾದಿದೆ ನನಗೆ, ಅದಕ್ಕೆ ಮೊದಲೇ ಅಣಿಯಾಗಬೇಕಲ್ಲ. ಕೈಯಲ್ಲಿ ಡೈರಿ ಹಿಡಿದು ಸೀದಾ ಒಳನುಗ್ಗಿದೆ. ಮುಖದಲ್ಲಿ ನಗು ಬರಿಸಿ

" ಗುಡ್ ಮಾರ್ನಿಂಗ್ ಸಾರ್"    

                                                ಬಾಸ್ ನಗೋದು ಬಿಡಿ, ನನಗೆ ಕೂತ್ಕೊಳ್ಳಲು ಖುರ್ಚೀನೂ ತೋರಿಸ್ಲಿಲ್ಲ , ಈಗಂತೂ ಅಸಾಮೀ ಚಾರ್ಲೀ ಚಾಪ್ಲಿನ್ ನ ಮೋಡರ್ನ್ ಟೈಮ್ಸ್ ತಂದು ತೋರ್ಸಿದ್ರೂ ನಗಲ್ಲ, ಅಷ್ಟೂ ಸೀರಿಯಸ್. ಪ್ರಾಯಶಃವಿಷಯ ಸೀರಿಯಸ್ಸೇ ಇರಬೇಕು.  ಅರೇ ಏನಾಯ್ತೂ,..? ನಿನ್ನೆಯ ವರೆಗೆ ಸರಿಯಾಗಿಯೇ ಇತ್ತಲ್ಲಾ ಪ್ರಾಣಿ,  ಅದರ ಮನೆಯವರೆಗೆ ಡ್ರಾಪ್ ಕೂಡಾ  ಮಾಡಿದ್ದೆ ಸಂಜೆ, ಮನೆಯ ಒಳಹೊಕ್ಕುವಾಗ
( ಕಾಫೀಗಂತೂ ಕರೆಯೋದಿರಲಿ, ಒಳಕರೆದು ನೀರೂ ತೋರ್ಸಲ್ಲ, ಅದು ಬೇರೆ ವಿಷಯ !!!)    "ರಾವ್ ಅವರೇ,  ಈಸಾರಿ ನಿಮಗೆ ಪ್ರಮೋಷನ್ ಗ್ಯಾರಂಟೀ" ಅಂತ ಕೂಡಾ ಹೇಳಿತ್ತಲ್ಲ..?
ಬೆಳಿಗ್ಗೆ ಆಫೀಸಿಗೆ ಬರೋದು ಸ್ವಲ್ಪ ತಡವಾಯ್ತು, ಅಷ್ಟರಲ್ಲೇ ಪಾರ್ಲಿಮೆಂಟೇ ಬದಲಾಯ್ತಾ ಹೇಗೆ?


                                             "ಯಾಕ್ಸಾರ್ ಏನಾಯ್ತು? ದಾರಿಯಲ್ಲಿ ಸ್ಕೂಟರ್ ಸ್ವಲ್ಪ ಕೈಕೊಡ್ತು ಸಾರ್, ಕ್ಲಚ್ ವಾಯರ್ ಕಟ್ಟಾಗಿತ್ತು!! ಸರಿ ಮಾಡ್ಕೊಂಡು ಬರೋದ್ರಲ್ಲಿ ಸ್ವಲ್ಪ ತಡವಾಯ್ತು ಸಾರ್" ಜಾಸ್ತಿಯೇ ಬೇಸರ ತಂದಿದ್ದೆನಾ ಮುಖದಲ್ಲಿ..? ರುದ್ರ ನನ್ನ ಕೈಯ್ಯನ್ನೇ ನೋಡ್ತಾ ಇತ್ತು. ಅದಕ್ಕೆ ಡೌಟಾ ? ನಾನು ಬೆಳಿಗ್ಗೆ ನಡೆದೇ ಬಂದದ್ದು ಗೊತ್ತಾಯ್ತಾ ಹೇಗೆ?

 

 

 

(ಮುಂದುವರಿಯುವುದು)   

 

 

  ನಾನೂ ನನ್ನ ಬಾಸೂ  3    http://sampada.net/blog/gopinatha/13/09/2010/27914

 
   

Rating
No votes yet

Comments