ಯಾರು ಹಿತವರು?

ಯಾರು ಹಿತವರು?

ಮತಾಂತರ ವಿವಾದ ಈಗ ದೇಶದೆಲ್ಲೆಡೆ ಕೇಳಿಬರುತ್ತಿರುವ ಕೂಗು. ಇದರಿಂದ ಕೋಮಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಒರಿಸ್ಸಾದಲ್ಲಿ ವಿಹೆಚ್‌ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಕೋಮಗಲಭೆಗೆ ಜೀವತೆತ್ತರು. ಕಳಿಂಗ ರಾಜ್ಯದ ಘಟನೆ ಜನರಲ್ಲಿ ಇನ್ನು ಮಾಸಿಲ್ಲ. ಶಾಂತಿಗೆ ಹೆಸರಾದ ಕರ್ನಾಟಕದಲ್ಲಿ ಇದೀಗ ಇಂತಹ ಕೋಮುಗಲಭೆಯಿಂದ ಕರಾವಳಿ ಜಿಲ್ಲೆ ಹೊತ್ತಿ ಉರಿಯುತ್ತಿದೆ.

ಯಾರೋ ಮಾಡಿದ ತಪ್ಪಿಗೆ ನಮ್ಮ ಮುಖ್ಯಮಂತ್ರಿ ನಿದ್ದೆಗೆಡುವಂತಾಗಿದೆ. ನಾಲ್ಕು ದಶಕಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಗಾದಿ ಮರೀಚಿಕೆಯಾಗಿತ್ತು. ಕುಮಾರಸ್ವಾಮಿ ನನಗೆ ಮಾಡಬಾರದ ಮೋಸ ಮಾಡಿದರು ಎಂದು ಜನತೆಯಲ್ಲಿ ಅಂಗಲಾಚಿ ಮುಖ್ಯಮಂತ್ರಿ ಗಾದಿ ಹಿಡಿದಿದ್ದರೂ ಅವರಿಗೆ ಅದು ಸುಖದ ಸುಪ್ಪತ್ತಿಗೆಯಾಗಿಲ್ಲ. ದಿನಬೆಳಕಾದರೆ ಒಂದರ ಮೇಲೆ ಒಂದರಂತೆ ಸಮಸ್ಯೆಗಳು ಧುತ್ತನೆ ಬಂದು ಎದುರಾಗುತ್ತಿವೆ. ಈಗ ಮತಾಂತರ ವಿವಾದ ಯಡಿಯೂರಪ್ಪ ಅವರನ್ನು ನಿದ್ರಾಹೀನರನ್ನಾಗಿಸಿದೆ.

ಭಜರಂಗದಳ, ವಿಶ್ವ ಹಿಂದೂ ಪರಿಷತ್, ಪ್ರಮೋದ್ ಮುತಾಲಿಕ್‌ ಮತ್ತು ಕ್ರಿಶ್ಚಿಯನ್ ಸಂಘಟನೆಗಳು. ಇವರಿಬ್ಬರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಿದಾಗ ಇಬ್ಬರೂ ಸಮಾನಾಂತರದಲ್ಲಿ ನಿಲ್ಲುತ್ತಾರೆ. ಇವರ ಕಾರ್ಯವೈಖರಿ ನೋಡಿದಾಗ ಇವರು ಮಾಡಿದ್ದು ಸರಿ ಅವರು ಮಾಡುತ್ತಿರುವುದು ಸರಿ ಎನಿಸದು. ಎಲ್ಲಾ ಧರ್ಮಗಳಲ್ಲೂ ಹಿಂದೂ ಧರ್ಮವೇ ಮೇಲು. ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಅಗ್ರಸ್ಥಾನ. ಉಳಿದವರು ಅವರ ಸೇವಕರಂತಿರಬೇಕು. ಹಿಂದೂಗಳನ್ನು ಮತಾಂತರ ಮಾಡುವ ಮೂಲಕ ಹಿಂದೂಸ್ಥಾನ ಭಾರತದಲ್ಲಿ ನಮ್ಮ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಹಪಹಪಿತನ ಹಿಂದೂ ಸಂಘಟನೆಗಳದ್ದು.

ವಿಶ್ವವೆಲ್ಲಾ ಒಂದೇ. ಬ್ರಹ್ಮಾಂಡದಲ್ಲಿ ಇರುವುದು ಒಂದೇ ಧರ್ಮ. ಅದು ಕ್ರಿಶ್ಚಿಯನ್‌ ಧರ್ಮ. ಜಗತ್ತಿಗೆಲ್ಲ ದೇವರು ಅಂತ ಇರುವವನು ಒಬ್ಬನೇ. ಅವನೇ ನಮ್ಮ ಏಸು ಕ್ರಿಸ್ತ. ಕ್ರಿಸ್ತನನ್ನು ನೆನದರೆ ಕಷ್ಟ ಪರಿಹಾರವಾಗುತ್ತವೆ. ಕುರುಡನಿಗೆ ಕಣ್ಣು ಬರುತ್ತದೆ ಎಂಬ ಹೈಟೆಕ್ ಹುಸಿ ಆಮೀಷ ಈ ಕ್ರೈಸ್ತ ಮಿಷನರಿಗಳದ್ದು.

(ಮುಂದುವರಿಯುತ್ತದೆ)

- ಲೋಕೇಶ್ ಅರಕಲಗೂಡು

Rating
No votes yet

Comments