ಯುಗಾದಿಯ ಹೊಸ ಭಾವ !
ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ ಇಳಿಯತೊಡಗಿದ. ಬೆಳಗ್ಗಿನಿಂದ ತಿನ್ನುವುದು , ಕುಳಿತು ಹರಟುವುದು ಬಿಟ್ಟು ಮತ್ತೇನನ್ನು ಮಾಡದಿದ್ದ ಕಾರಣಕ್ಕೆ ದೇಹ ಬಾರವಾಗಿ ಮನಸ್ಸನ್ನು ಜಡತ್ವ ಆಕ್ರಮಿಸುತ್ತಿತ್ತು. ಹಾಗಿರುವಾಗ ಗೆಳೆಯರಿಂದ ಕರೆ ಬಂತು. ಅವರು ಅದೆ ಹೇಳಿದರು. ಬೆಳಗಿನಿಂದ ತಿಂದು ಹೆಬ್ಬಾವಿನಂತೆ ಮಲಗಿರುವೆ , ಹೊರಗೆ ಬಂದರೆ ಒಂದು ಗಂಟೆಯಾದರು ಕಾಲಾಡಿಸಿದರೆ ಸ್ವಲ್ಪ ತಿಂದಿದ್ದು ಕರಗಬಹುದು ( ಮತ್ತು ರಾತ್ರಿ ಪುನಃ ತುಂಬಿಸಬಹುದು ? ) ಅಂತ ಸೂಚಿಸಿದರು. ಮನೆಯಲ್ಲಿ ಒಂದಿಬ್ಬರು ನೆಂಟರಿದ್ದರು ಅವರಿಗೆ ಕೆಲಸದ ನೆಪ ಹೇಳಿ ಈಗ ಬಂದು ಬಿಡುತ್ತೇನೆ, ಕುಳಿತಿರಿ ಅಂತ ಹೇಳಿ ಹೊರಟೆ.
ಗಾಡಿಯಲ್ಲಿ ಗಿರಿನಗರದ ಪಾರ್ಕ ಹತ್ತಿರ ಬಂದು ನಿಲ್ಲಿಸುವಾಗಲೆ, ರಾವ್ ಹಾಗು ಶಿವಕುಮಾರ್ ಕಾಯುತ್ತಿದ್ದರು. ಪರಸ್ಪರ ಹಬ್ಬದ ಶುಭಾಷಯಗಳ ವಿನಿಮಯವಾಯಿತು. ಪಾರ್ಕ ಒಳಗೆ ವಾಕಿಂಗ್ ಬೇಸರ ತುಂಬಾ ಜನರಿದ್ದು ಕಾಲು ಕಾಲಿಗೆ ಸಿಗುತ್ತಿರುತ್ತಾರೆ, ಹಾಗಾಗಿ ಹೊರಗೆ ಪಾರ್ಕಿನ ಸುತ್ತ ಅನ್ನುವಂತೆ ನಡೆಯಲು ತೊಡಗಿದೆವು.
ಸ್ವಲ್ಪ ದೂರ ಹೋಗುವಾಗ ಅವರಿಬ್ಬರು ಏನನ್ನು ಮಾತನಾಡುತ್ತಿದ್ದರು ನನ್ನ ಗಮನವೇಕೊ ಅವರ ಮಾತಿನ ಮೇಲಿರಲಿಲ್ಲ. ಅತ್ತ ಇತ್ತ ನೋಡುತ್ತಿದ್ದೆ, ಪಾರ್ಕಿನ ಒಂದು ತಿರುವಿನಲ್ಲಿ ಗಮನಿಸಿದೆ, ಒಂದು ತಮಿಳು ಕೆಲಸಗಾರರ ಸಂಸಾರವಿದ್ದಂತಿತ್ತು, ಗಂಡ ಹೆಂಡತಿ ಹಾಗು ಇಬ್ಬರು ಪುಟ್ಟ ಮಕ್ಕಳು ಒಂದು ಹೆಣ್ಣು ಹಾಗು ಒಂದು ಗಂಡು ಮಗು ಆರು ಹಾಗು ಎಂಟು ವರ್ಷದವರಿದ್ದರು. ಗಂಡ ಕೂದಲೆಲ್ಲ ಕೆದರಿ ಕಣ್ಣು ಕೆಂಪಾಗಿ ಕೈಯಲ್ಲಿ ಮೊಬೈಲ್ ಹಿಡಿದು ಏನೊ ಮಾತನಾಡುತ್ತಿದ್ದ. ಅವನ ಎದುರಿಗೆ ಅವನ ಹೆಂಡತಿಯೇನೊ ನಿಂತಿದ್ದಳು, ಸಾಮನ್ಯವಾಗಿ ಕೆಲಸಗಾರ ಹೆಂಗಸರಾದ ಅವರು ಆರೋಗ್ಯವಾಗಿ ಸುಂದರವಾಗಿರುತ್ತಾರೆ. ಆಕೆ ಅತ್ಯಂತ ಆಕರ್ಷಣೀಯವಾಗಿದ್ದಳು. ಆಕೆಯ ಗಂಡ ಮೊಬೈಲನ್ನು ಕೇಳು ಅನ್ನುವಂತೆ ಎಡಕೈಲಿ ಅವಳ ಕಿವಿಗೆ ಹಿಡಿದ. ಏನು ಸಂಭಾಷಣೆಯೊ ತಿಳಿಯದು. ಇದ್ದಕಿದ್ದಂತೆ ಅವನು ತನ್ನ ಬಲಗೈ ಎತ್ತಿ ಅವಳ ಮುಖಕ್ಕೆ ಬಾರಿಸಿದ.
ಸಾಮನ್ಯವಾಗಿ ನನಗೆ ಆಗುವಂತೆ ಹೊಟ್ಟೆಯಲ್ಲಿ ಎಂತದೊ ಹಿಂಸೆ ಬುಗಿಲೆದ್ದಿತ್ತು. ಇಲ್ಲಿ ನಮ್ಮ ಪಾತ್ರವೇನೊ ಇಲ್ಲ ನಿಜ ಆದರೇನು ನಡುರಸ್ತೆಯಲ್ಲಿ ಅಸಯಾಯಕ ಹೆಣ್ಣೊಬ್ಬಳಿಗೆ ಈರೀತಿ ಅಮಾನುಷವಾಗಿ ಹೊಡೆಯುವುದು ಅಂದರೆ ಮನುಷ್ಯತ್ವ ಬೇಡವೆ ?. ಆ ಇಬ್ಬರು ಮಕ್ಕಳು ಅವಳ ಮುಂದೆ ಬಂದು ನಿಂತು ಕಿರುಚುತ್ತ ಅವರ ಅಪ್ಪನನ್ನು ದೂರ ತಳ್ಳುತ್ತಿದ್ದರು. ಅವರ ಅಮ್ಮನ ರಕ್ಷಣೆಗೆ !. ಮನದಲ್ಲಿ ಎಂತದೊ ಹಿಂಸೆ. ಅದೆ ಸಮಯದಲ್ಲಿ ಆಕೆಯ ದೃಷ್ಟಿ ನನ್ನ ಕಡೆ ಹರಿದಿತ್ತು. ಆ ಸಂದರ್ಪದಲ್ಲಿ ನನ್ನ ಮನದಲ್ಲಿ ಎಂತದೊ ತಾಕಲಾಟ. ಸುಂದರವಾದ ಆ ಮುಖದಲ್ಲಿನ ಅರಳು ಕಣ್ಣುಗಳಲ್ಲಿದ್ದ ಭಾವನೆಯ ಪೂರ ನನ್ನ ಮನಸ್ಸನು ಆಕ್ರಮಿಸಿತು. ಆಕೆಯ ಕಣ್ಣುಗಳಲ್ಲಿದ್ದ ಭಾವನೆಯಾದರು ಎಂತದ್ದು, ತನ್ನನ್ನ ಗಂಡ ಹೊಡೆಯುವದನ್ನು ರಸ್ತೆಯಲ್ಲಿ ನಡೆಯುವ ನಾವು ನೋಡಿದ ಅವಮಾನವೆ ? , ಗಂಡ ಇಂತವನೆಂಬ ದುಖಃವೆ ? , ಗಂಡ ಹೇಗಿದ್ದರು ಅವನನ್ನು ಬಿಟ್ಟು ಹೋಗಲಾರದ ಅಸಹಾಯಕತೆಯೆ ?. ತನ್ನ ಗಂಡನಿಂದಾಗಿ ತನ್ನ ಮಕ್ಕಳು ಪಡುತ್ತಿರುವ ಪಾಡೆ ? ಎಂತಹದು. ಅಷ್ಟಾದರು ಆಕೆಯಲ್ಲಿ ಗಂಡನ ಬಗ್ಗೆ ಸ್ವಲ್ಪವಾದರು ರೋಷವಾಗಲಿ ಅಥವ ದ್ವೇಷವಾಗಲಿ ಕಾಣಿಸಲಿಲ್ಲ. ದಿವ್ಯ ನಿರ್ಲಿಪ್ತತೆ. ಎಲ್ಲ ಭಾವನೆಗಳನ್ನು ಅಡಗಿಸಿಟ್ಟು ದಿಟ್ಟೆಯಂತೆ ನಿಂತ ಅವಳ ದೃಡವಾದ ನಿಲುವು , ಅವನು ಹೊಡೆದರು ಸಹ ಇಂಚು ಕೂಡ ಕದಲದ ಅವಳ ದೇಹ ಕೈಕಾಲುಗಳು ನನ್ನಲ್ಲಿ ಎಂತದೊ ಭಾವನೆಗಳನ್ನು ಮೂಡಿಸಿದವು. ಏನೆಂದು ಗುರುತಿಸಲಾಗದ ಅವಳ ಕಣ್ಣುಗಳಲ್ಲಿದ್ದ ಶೂನ್ಯ ನನ್ನೊಳಗೆ ಬೆಳಗಿನಿಂದ ತುಂಬಿದ ಮನಸಿನ್ನ ಜಡವನ್ನು ಹೊರದೂಡಿ ಮನಸೆಲ್ಲ ಎಂತಹುದೊ ಒಂದು ಕಂಪನಕ್ಕೆ ಒಳಪಟ್ಟಿತ್ತು.
ಯುಗಾದಿ ಯಾರಿಗೆ ?ಉಳ್ಳವರಿಗೆ , ತಿಂದುಂಡು ಸುಖವಾಗಿ ಇರುವವರಿಗೆ. ಆದರೆ ದೇಶದಲ್ಲಿ ಯುಗಾದಿಯ ಸುಖವೆ ಇಲ್ಲದ ಎಷ್ಟೊ ಮಂದಿ ಈಗಲು ತಮ್ಮ ಜೀವನವನ್ನು ಸವೆಸುತ್ತಲೆ ಇರುತ್ತಾರೆ. ಅವರಿಗೆ ಜೀವನವೆಂದರೆ ಅದೆ ಹೋರಾಟ . ದುಖಃ ಅಸಹಾಯಕತೆ ಅನಿಶ್ಚಿತತೆ .. ಈ ರೀತಿಯ ಭಾವನೆಗಳೆಲ್ಲ ಮನಸನ್ನು ತುಂಬುತ್ತ ಇದ್ದಂತೆ ಬೆಳಗಿನಿಂದ ಮನಸನ್ನು ಆವರಿಸಿದ್ದ ಜಡತ್ವ ಮಾಯವಾಗುತ್ತ ಬಂದಿತು.
ಗೆಳೆಯರೆ ಯುಗಾದಿಯ ದಿನ ದೇವಾಲಯಕ್ಕೆ ಹೋಗಿಬರುವುದು ಒಂದು ಸಂಪ್ರದಾಯ ಆಗ ನಾವೆಲ್ಲ ಬರಿ ನಮಗೆ ಸುಖ ಕೊಡಪ್ಪ ಎನ್ನುವ ಬೇಡಿಕೆಯನ್ನು ಬಿಟ್ಟು ಸಮಾಜದಲ್ಲಿ ಎಲ್ಲಡೆ ಸಮಾನತೆ ಅರಳಲಿ ಎಲ್ಲರು ಯುಗಾದಿ ಆಚರಿಸುವಂತಾಗಲಿ ಎಂದೇಕೆ ಬೇಡಬಾರದು ಮತ್ತು ಅದೇ ದಿಕ್ಕಿನಲ್ಲಿ ಕೆಲಸಮಾಡಬಾರದು.
Comments
ಉ: ಯುಗಾದಿಯ ಹೊಸ ಭಾವ !
ಉ: ಯುಗಾದಿಯ ಹೊಸ ಭಾವ !
ಉ: ಯುಗಾದಿಯ ಹೊಸ ಭಾವ !