ಲಾರ್ಡ್ ರಿಪ್ಪನ್ ಭೇಟಿ ಕಾರಣದಿಂದ ಬಂದ ಹೆಸರು ರಿಪ್ಪನ್ ಪೇಟೆ

ಲಾರ್ಡ್ ರಿಪ್ಪನ್ ಭೇಟಿ ಕಾರಣದಿಂದ ಬಂದ ಹೆಸರು ರಿಪ್ಪನ್ ಪೇಟೆ

     .ಹೀಗೆಯೆ ಸುಮ್ಮನೆ ವಿದ್ಯುಚ್ಛಕ್ತಿ ಕೈಕೊಟ್ಟ ಸಮಯದಲ್ಲಿ ಒಂಟಿಯಾಗಿ ಕುಳಿತವನು ಯೋಚಿಸುತ್ತ ಹೋದಂತೆ ರಿಪ್ಪನಪೇಟೆಗೆ ನನ್ನ ಮೊದಲ ಭೇಟಿ ಅದು ನನ್ನ ಮೇಲೆ ಮಾಡಿದ ಪರಿಣಾಮ, ರಿಪ್ಪನಪೇಟೆ ಎಂಬ ಹೆಸರು ಈ ಊರಿಗೆ ಬರಲು ಇದ್ದಿರ ಬಹುದಾದ ಸಂಧರ್ಭ ಕುರಿತು ಹಾಗೆಯೆ ಯೋಚಿಸುತ್ತ ಹೋದೆ. ಅದೇ ರೀತಿ ಈ ಊರಿನ ಹೆಸರು ಸಂಪದಿಗರಲ್ಲಿ ಉಂಟು ಮಾಡಿದ ಕುತೂಹಲ ನನ್ನನ್ನು ಸೆಳೆಯಿತು. ಈ ಕುರಿತು ರಿಪ್ಪನಪೇಟೆ ಕುರಿತು ನನ್ನ ಅನಿಸಿಕೆಗಳನ್ನು ಯಾಕೆ ದಾಖಲಿಸಬಾರದು ಎಂಬ ತುಡಿತ ಉಂಟಾಯಿತು. ಅದರ ಫಲ ಶೃತಿಯೆ ಈ ಲೇಖನ.  


     ನಾನೂ ಒಂದೂರಿನಲ್ಲಿ ಹುಟ್ಟಿದೆ ಮತ್ತೊಂದು ಊರಲ್ಲಿ ಬೆಳೆದೆ ಬೇರೊಂದೂರಿನಲ್ಲಿ ನೆಲೆ ನಿಂತಿದ್ದೆನೆ ಅದರ ಹೆಸರು ರಿಪ್ಪನ್ ಪೇಟೆ. ಇದು ಹೊಸನಗರ ತಾಲೂಕಿನ ಹೋಬಳಿ ಮಟ್ಟದ ಒಂದು ಗ್ರಾಮ. ಅಲ್ಲದೆ  ಇದು ಮಾವಿನ ಮಿಡಿಗೆ ಹೆಸರಾದ ಊರು  ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ವತ್ತು ಕಿಲೋ ಮೀಟರ್ ಗಳ ದೂರದಲ್ಲಿದೆ. ವಿನಾಯಕ ವೃತ್ತ ಈ ಗ್ರಾಮದ ಕೇಂದ್ರಸ್ಥಾನ. ಇದು ಮೆರವಣಿಗೆ, ಪ್ರತಿಭಟನೆ ಮತ್ತು ಪ್ರತಿಕೃತಿಗಳ  ದಹನಕ್ರಿಯೆಗಳ ಕೇಂದ್ರ ಸ್ಥಾನವೂ ಕೂಡ. ಹೀಗಾಗಿ ಬೆಳಗಿನ ಜಾವದಿಂದ ಮಧ್ಯರಾತ್ರಿ ವರೆಗೆ ಇದೊಂದು ಚಟುವಟಿಕೆಯ ತಾಣ ಮೊದಲು ಈ ಗ್ರಾಮದ ಸ್ಥಿತಿ ಹೀಗಿರಲಿಲ್ಲ.


     ಸುಮಾರು ಮೂರುವರೆ ದಶಕಗಳ ಹಿಂದಿನ ಮಾತು ಅಂದರೆ 1977ರ ದಿನಮಾನಗಳವು. ಒಮ್ಮೆ ಕಾರ್ಯ ನಿಮತ್ತ ರಿಪ್ಪನಪೇಟೆಗೆ ಬರುವ ಪ್ರಸಂಗ ಬಂದಿತ್ತು . ಇಲ್ಲಿನ ಪಂಚಾಯ್ತಿಯ ಹೊರ ಹಜಾರದಲ್ಲಿ ವಾಸ್ತವ್ಯ. ಒಮ್ಮೆ ಒಂದು ದಿನ ರಾತ್ರಿ 9 ಗಂಟೆಗೆ ಹಸಿವು ತಣಿಸಲು ಊಟಕ್ಕೆಂದು ಇಲ್ಲಿನ ವೃತ್ತದಲ್ಲಿದ್ದ ಹೋಟೆಲೊಂದಕ್ಕೆ ಹೋದರೆ ಊಟ ಇಲ್ಲವೆಂಬ ಉತ್ತರ. ಬರಿ ನೀರು ಕುಡಿದು ಆಕಾಶ ನೋಡುತ್ತ ಮಲಗಿದ ದಿನಗಳವು. ಹಾಗೇಯೆ ಊರನ್ನೊಮ್ಮೆ ಗಮನಿಸಿದರೆ ಊರು ಪ್ರಶಾಂತವಾಗಿ ರಾತ್ರಿಯ ವಿಶ್ರಾಂತಿಗೆ ಜಾರಿತ್ತು. ಆದರೆ ಈಗ ! ಮಧ್ಯರಾತ್ರಿಯ ವರೆಗೂ ಜಾಗೃತ ಸ್ಥಿತಿ ಯಲ್ಲಿರುವ ಊರು. ಸರಿ ರಾತ್ರಿ ವರೆಗೂ ಬಸ್ ಸಂಚಾರ ವಿರಳವಾದ ಜನ ಸಂಚಾರ ಈಗ ಮಾಮೂಲು. ಇಲ್ಲಿ ಗ್ರಾಮದಲ್ಲಿ ಅನೇಕ ಸಂಘಟನೆ ಹೋರಾಟಗಳು ನಡೆದಿವೆ. ಶಾಂತವೇರಿ ಗೋಪಾಲಗೌಡರು ನಡೆದಾಡಿದ ಹೋರಾಟದ ಬೀಜ ಬಿತ್ತಿದ ಆತ್ಮೀಯ ಅನುಯಾಯಿ ಗಳನ್ನು ಹೊಂದಿದ್ದ ಪ್ರಜ್ಞಾವಂತರಿದ್ದ ಊರು ಇದು. ಇಲ್ಲಿ ಸಿನೆಮಾ ಥಿಯೆಟರ್ ಒಂದಿತ್ತು ಪ್ರೇಕ್ಷಕರ ಕೊರತೆಯ ಕಾರಣದಿಂದ ಅದು ಮುಚ್ಚಿ ವರ್ಷಗಳೆ ಕಳೆದಿವೆ. ಈ ಗ್ರಾಮದ ಸುತ್ತ ಮುತ್ತ ' ಮೈಸೂರು ಮಲ್ಲಿಗೆ ', ' ಉಂಡೂ ಹೋದ ಕೊಂಡೂ ಹೋದ ' ಮುಂತಾದ ಹಲವು ಸಿನೆಮಾಗಳ ಮತ್ತು ಶಂಕರನಾಗ ನಿರ್ದೇಶನದ ' ಮಾಲ್ಗುಡಿ ಡೇಸ್ ' ಧಾರಾವಾಹಿಯ ಚಿತ್ರೀಕರಣಗಳು ಇಲ್ಲಿನ ಸುತ್ತ ಮುತ್ತಲ ಪ್ರದೇಶದಲ್ಲಿ ನಡೆದಿವೆ.


     ಈ ಗ್ರಾಮದ ಐತಿಹ್ಯದ ಪರಚಯವಿಲ್ಲದವರಿಗೆ ಇದೊಂದು ಬೆಂಗಳೂರಿನ ಫ್ರೇಜರ್ ಟೌನ್ , ಕಾಟನ್ ಪೇಟೆ ಗಳಂತೆ ಇದೂ ಒಂದು ಭಾಗವಿರಬಹುದು ಎಂದು ಊಹಿಸುವ ಹೊರಗಿನ ಜನರೂ ಇದ್ದಾರೆ. ಆದರೆ ಇದೊಂದು ಅಪ್ಪಟ ಗ್ರಾಮೀಣ ಪ್ರದೇಶ. ಇದು ಬರುವೆ, ಗವಟೂರು ಮತ್ತು ಕೆರೆಹಳ್ಳಿಗಳನ್ನು ಒಳಗೊಂಡ ಪ್ರದೇಶ. ಹೊಸನಗರ ಕಡೆಗೆ ಹೊಗುವ ಮಾರ್ಗಕ್ಕೆ ಹೊಂದಿಕೊಂಡಂತಿದ್ದ ಪ್ರದೇಶಕ್ಕೆ ದೊಡ್ಡಿನಕೊಪ್ಪ ಎಂಬ ಹೆಸರಿತ್ತು. ಕಳೆದ ಶತಮಾನದ ಮೂರನೆ ದಶಕದಲ್ಲಿ ಈ ಪ್ರದೇಶದಲ್ಲಿ ಜನಸಂಖ್ಯೆ ಅತಿ ವಿರಳವಾಗಿದ್ದು  ನಾಲ್ಕೈದು ಮನೆಗಳಿದ್ದಿರಬಹುದು. ಸುತ್ತ ಮುತ್ತ ದಟ್ಟಡವಿ ವ್ಯಾಪಿಸಿತ್ತು ಚಿರತೆ ಮತ್ತು ಕತ್ತೆಕಿರುಬಗಳು ದನಗಳ ಕೊಟ್ಟಿಗೆಗೆ ನುಗ್ಗಿ ಸಣ್ಣ ಸಣ್ಣ ದನಕರುಗಳನ್ನು ಮತ್ತು ನಾಯಿಗಳನ್ನು ಬೇಟೆಯಾಡುವುದು ಸಾಮಾನ್ಯ ವಾಗಿತ್ತು. ಹೀಗಾಗಿ ಕಾಡು ಪ್ರಾಣಿಗಳು ಬರದಿರಲೆಂದು ದನದ ಕೊಟ್ಟಿಗೆಯ ಉಣುಗೋಲಿಗೆ ದೊಡ್ಡ ಲಾಟೀನನ್ನು ಹಚ್ಚಿ ತೂಗು ಬಿಡುತ್ತಿದ್ದರು.  ಆಗ ಈಗಿನ ಪಂಚಾಯತಿ ಎದುರಿಗೆ ಹೋಗುವ ರಸ್ತೆಯಲ್ಲಿ ಕಪ್ಪು ನಾಡ ಹಂಚಿನ ಹೊದಿಕೆಯ ಒಂದು ಗೆಸ್ಟ್ ಹೌಸ್ ಇತ್ತು. ಬ್ರಿಟೀಶ್ ಅಧಿಕಾರಿಗಳು ಕಾರ್ಯ ನಿಮಿತ್ತ ಬಂದವರು ಉಳಿದು ಹೋಗಲು ನಿಮರ್ಿಸಿದ ಗೆಸ್ಟ್ಹೌಸ್ ಅದಾಗಿತ್ತು.


     . ಈ ಪ್ರದೇಶಕ್ಕೆ ರಿಪ್ಪನ್ ಪೇಟೆ ಎಂಬ ಹೆಸರು ಬಂದದ್ದು ಒಬ್ಬ ಆಂಗ್ಲ ವ್ಹಾಯಿಸ್ ರಾಯ್ ನ ಕಾರಣದಿಂದ. 1930 ರಿಂದ 1935 ರ ಕಾಲ. ಭಾರತದ ವ್ಹಾಯಿಸ್ ರಾಯ್ ಲಾರ್ಡ್ ರಿಪ್ಪನ್ ಒಮ್ಮೆ ಈ ಪ್ರದೇಶಕ್ಕೆ ಬೇಟೆಯಾಡಲು ಬಂದವನು ಇಲ್ಲಿನ ಆ ಗೆಸ್ಟಹೌಸ್ ನಲ್ಲಿ ತಂಗಿ ಹೋಗಿದ್ದ. ಅಲ್ಲದೆ ಈಗಿನ ವಿನಾಯಕ ವೃತ್ತದಲ್ಲಿ ಆಗ ಹ್ಯಾಂಡ್ ಪೋಸ್ಟ್ ಒಂದಿದ್ದು ಅಲ್ಲಿ ಆತ ಕೆಲ ಸಮಯ ಇಳಿದಿದ್ದ ಎಂಬ ಕಾರಣಕ್ಕೆ ಈ ಸ್ಥಳಕ್ಕೆ ರಿಪ್ಪನಪೇಟೆ ಎಂಬ ಹೆಸರಿನ ಬಳಕೆ ಪ್ರಾರಂಭವಾಯಿತು ಎಂದು ಹಳೆಯ ತಲೆಗಳು ಹೇಳುತ್ತಿದ್ದವು. ಮುಂದೆ ಶಾಂತವೇರಿ ಗೋಪಾಲಗೌಡರ ಹೋರಾಟದ ಕಾಲದಲ್ಲಿ ಇಲ್ಲಿಯ ಅವರ ಅನುಯಾಯಿ ಶಿವಪ್ಪಗೌಡರು ತಮ್ಮ ಸಹ ಮನಸ್ಕರೊಂದಿಗೆ ಸೇರಿ ರಿಪ್ಪನಪೇಟೆ ಎಂದು ಬರೆದಿದ್ದ ನಾಮ ಫಲಕಕ್ಕೆ ಬಣ್ಣ ಬಳಿದು ಸರ್ದಾರ ವಲ್ಲಭ ಭಾಯಿ ನಗರವೆಂದು ಬರೆದು ಮರು ನಾಮಕರಣ ಮಾಡಿದ್ದರು. ಆದರೆ ನಾವು ರಾಜ ಮಹಾರಾಜರಿಂದ ದೊರೆಗಳಿಂದ ಆಳಿಸಿಕೊಂಡವರಲ್ಲವೆ? ಬಿಳಿಯರೂ ಸಹ ನಮಗೆ ದೊರೆಗಳೆ ಆಗಿದ್ದರು. ಆ ಸ್ವಾಮಿಭಕ್ತಿಯ ಕಾರಣದಿಂದ ರಿಪ್ಪನ್ ಪೇಟೆ ಎಂಬ ಹೆಸರನ್ನು ಜನ ಮಾನಸದಿಂದ ಅಳಿಸಲಾಗಲಿಲ್ಲ. ಹೀಗಾಗಿ ಅದೇ ಹೆಸರೆ ಇಂದೂ ಶಾಶ್ವತವಾಗಿ ಜನ ಮಾನಸದಲ್ಲಿ ಬೇರೂರಿದೆ. ಇಲ್ಲಿಗೆ ನಲ್ಕು ಕಿಲೋಮೀಟರ್ಗಳ ದೂರದಲ್ಲಿ ಅರಸಾಳು ರೇಲ್ವೆ ನಿಲ್ದಾಣವಿತ್ತು ಈಗ ಇಲ್ಲ. ಒಂದು ಕಾಲದಲ್ಲಿ ಆ ನಿಲ್ದಾಣದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಭಟ್ಟಿ ಇದ್ದಿಲು ರಫ್ತಾಗುತ್ತಿತ್ತು. ಈ ಕಾರಣದಿಂದಾಗಿ ಅತಿ ಹೆಚ್ಚಿನ ಪ್ರಮಾಣದ ರೆವಿನ್ಯೂ ರೇಲ್ವೆ ಇಲಾಖೆಗೆ ಬರುತ್ತಿದ್ದುದು ಒಂದು ದಾಖಲೆಯಾಗಿತ್ತು.


     ಈ ಗ್ರಾಮದ ಆ ಕಾಲದ ಹಿರಿಯ ತಲೆಗಳ ಪ್ರಯತ್ನದ ಫಲವಾಗಿ ಅರವತ್ತು ವರ್ಷಗಳ ಹಿಂದೆ ಇಲ್ಲಿನ ಮುಖ್ರರಸ್ತೆಯಲ್ಲಿ ವಿನಾಯಕದ ದೇವಸ್ಥಾನ ತಲೆ ಎತ್ತಿದ್ದು ಇಲ್ಲಿನ ಜನಗಳ ಶ್ರದ್ದಾಕೇಂದ್ರವಾಗಿ ಬೆಳೆದು ನಿಂತಿದೆ. ಅದೇ ರೀತಿ ಇಲ್ಲಿ ಚರ್ಚ ಮಸೀದಿಗಳ ಭವ್ಯ ಇಮಾರತುಗಳಿವೆ. ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳಿವೆ. ಸರ್ಕಾರಿ ಹೈಸ್ಕೂಲ್, ಜೂನಿಯರ್ ಕಾಲೇಜ ಗಳಿವೆ. ಅವಲ್ಲದೆ ಚರ್ಚ ಕಾನ್ವೆಂಟ್ ಸೇರಿದಂದು ಖಾಸಗಿ ಇಂಗ್ಲೀಷ್ ಮಾಧ್ಯಮ ಮತ್ತು ಕನ್ನಡ ಮಧ್ಯಮದ ಪ್ರಾಥಮಿಕ ಶಾಲೆಗಳು, ಹೈಸ್ಕೂಲು ಮತ್ತು ಜ್ಯೂನಿಯರ್ ಕಾಲೇಜಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಕರ್ರಿ ಶಾಲೆಯ ಅನೇಕ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ.  ಪರಿಸ್ಥಿತಿ ಹೀಗೆಯೆ ಮಂದುವರಿ ದರೆ ಮುಂದೊಂದು ದಿನ ಅವು ಮುಚ್ಚಿ ಹೊಗಬಹುದಾದ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿಗೆ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಬಂದು ಗ್ರಾಮೀಣ ಪರಿಸರದ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಾಧ್ಯವಾಗಿದೆ. ಈಗ ಊರು ಬೆಳೆದಿದೆ ಸರ್ಕಾರಿ ಕಛೇರಿಗಳು ಬಂದಿವೆ ಶಾಲೆ ಕಾಲೇಜುಗಳ ಕಾರಣದಿಂದ . ಜನ ವಿದ್ಯಾವಂತ ರಾಗಿದ್ದ್ದಾರೆ


    ಇಲ್ಲಿ ಹಿಂದೂ ಮಹಾಸಭಾ ಗಣಪತಿ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ಅನೇಕ ದಶಕಗಳ ಕಾಲದಿಂದ ನಡೆದು ಬಂದಿದೆ. 1993 ರಲ್ಲಿ ' ಕಲಾ ಕೌಸ್ತುಭ ಕನ್ನಡ ಸಂಘ ' ಸ್ಥಾಪಿತವಾಗಿದ್ದು ಪ್ರತಿ ವರ್ಷ ನವಂಬರ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಶತಮಾನದ ಕೊನೆಯ ದಶಮಾನದಲ್ಲಿ ಇಲ್ಲಿಂದ ' ಜೈ ಕರುನಾಡು ಕಲಾ ' ಮತ್ತು ' ಕಮಲವಾಣಿ ' ಎಂಬ ಎರಡು ವರ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದವು. ಆಫ್ಸೆಟ್ ಪ್ರಿಂಟಿಂಗ್ ಇರದ ಆ ಕಾಲದಲ್ಲಿ ತನ್ನ ಸುಂದರ ವಿನ್ಯಾಸಕ್ಕಾಗಿ ಜೈ ಕತರುನರು ಕಲಾ ಪತ್ರಿಕೆ ಹೆಸರು ಮಾಡಿತ್ತು. ಇನ್ನು ನಾಲ್ಕು ಪುಟಗಳಲ್ಲಿ ಹೊರ ಬರುತ್ತಿದ್ದ ತ.ಮ.ನರಸಿಂಹ ಸಂಪಾದಕತ್ವದ ' ಕಮಲವಾಣಿ ' ವಾರಪತ್ರಿಕೆ ಒಂದು ಪುಟವನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಿತ್ತು. ಆ ಕಾರಣದಿಂದಾಗಿ ಸುಮಾರು 15 ಜನ ಬರಹಗಾರರು ಪತ್ರಿಕೆಯ ಮೂಲಕ ಬೆಳಕಿಗೆ ಬರಲು ಕಾರಣವಾಯಿತು. ನಾನೂ ಸಹ ಆ ಪತ್ರಿಕೆಯ ಮೂಲಕ ಬರಹಗಾರನಾಗಿ ಬೆಳೆಯಲು ಅನುಕೂಲವಾಯಿತು. ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ರೋಟರಿ ಕ್ಲಬ್ ಮತ್ತು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತುಗಳು ಅಸ್ತಿತ್ವಕ್ಕೆ ಬಂದು ಕಾರ್ಯೋನ್ಮುಖವಾಗಿವೆ. ಇಲ್ಲಿ ಸ್ವಸ್ತಿಕ್ ಚಿತಮಂದಿರವಿತ್ತು, ಮೂರು ದಶಕಗಳಿಗೂ ಮಿಗಿಲಾಗಿ ಜನಕ್ಕೆ ಮನರಂಜನೆ ಒದಗಿಸಿದ್ದ ಅದು ಪ್ರೇಕ್ಷಕರ ಕೊರತೆಯಿಂದ ಅನಿವಾರ್ಯವಾಗಿ ಕೆಲ ವರ್ಷಗಳ ಹಿಂದೆ ಮುಚ್ಚಿತು.


     ಇಲ್ಲಿಯ ಪಂಚಾಯ್ತಿ ಹಿಂದುಗಡೆ ಇರುವ ಖಾಸಗಿ ಒಡೆತನದ ಜಾಗದಲ್ಲಿಯ ತೆಂಗು ಹಲಸು ಮತ್ತು ಮಾವಿನ ಮರಗಳಲ್ಲಿ ನೇಕ ವರ್ಷಗಳಿಂದ ಮಳೆಗಾಲದಲ್ಲಿ ಬರುವ ಬೆಳ್ಳಕ್ಕಿ ಮತ್ತು ನೀರ್ಕಾಗೆಗಳು ಬಂದು ಬೀಡು ಬಿಟ್ಟು ಮರಿ ಮಾಡಿಕೊಂಡು ನವಂಬರ್ ನಲ್ಲಿ ಮರು ಪ್ರಯಾಣ ಹೊರಡುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಆ ಮರಗಳ ಉದ್ದನೆಯ ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಕಿದ್ದು ಅವುಗಳು ಬೋನ್ಸಾಯಿ ಮರಗಳಾಗಿವೆ. ಆ ಪಕ್ಷಿಗಳ ವಲಸೆ ಕ್ಷೀಣಿಸುತ್ತಿದೆ. ಇಲ್ಲೊಂದು ಸಾರ್ವಜನಿಕ ಮೂತ್ರಾಲಯವಿದೆ. ಅತಿ ಬಳಕೆಯಿಂದ ಅಲ್ಲಿ ಮಡುಗಟ್ಟಿಕೊಂಡಿರುವ ದುರ್ವಾಸನೆ ಅಸಹನೀಯ. ಇಲ್ಲಿ ಪಗಡಿ ಪಟ್ಟದಂತಿರುವ ನಾಲ್ಕು ರಸ್ತೆಗಳು ಉದ್ದಕ್ಕೆ ಚಾಚಿ ಕೊಂಡಿವೆ. ಒಂದು ಕಾಲದಲ್ಲಿ ದಟ್ಟಡವಿಯ ಪ್ರದೇಶವಾಗಿದ್ದ ಇದು ಇಂದು ಬಯಲುನಾಡಾಗಿ ಪರಿವರ್ತನೆ ಹೊಂದುತ್ತಿದೆ. ಈ ಆತಂಕ ಇಲ್ಲಿ ಯಾರನ್ನೂ ಕಾಡುತ್ತಿಲ್ಲ. ರಬ್ಬರ್ ತೋಟಗಳು ಬಹಳ ರಭಸದಿಂದ ತಲೆಯೆತ್ತುತ್ತಿವೆ. ಕೊಳವೆ ಬಾವಿಗಳು ಎಲ್ಲೆಂದರಲ್ಲಿ ಕೊರೆಯಲ್ಪಡುತ್ತಿವೆ. ಇಂತಹ ನಿರ್ಮಿತಿಗಳಿಗೆ ಯಾವುದೆ ಲಾಜಿಕ್  ಇರುವಂತಿಲ್ಲ. ನೆಲದ ಬೆಲೆ ಇಲ್ಲಿ ಗಗನಕ್ಕೇರಿ ಕುಳಿತಿದೆ. ಸಿರಿತನ ಮತ್ತು ಬಡತನಗಳ ಅಂತರ ಇಲ್ಲಿಯೂ ಸಹ ಹೆಚ್ಚುತ್ತಲೆ ನಡೆದಿದೆ. ಈ ಭಾಗದ ಮೆಟ್ರೊಪೊಲಿಟನ್ ನಗರವೆಂದು ಇದನ್ನು ತಮಾಷೆಯಿಂದ ಕರೆಯುತ್ತಾರೆ. ಅನೇಕ ಬೇಕು ಬೇಡಗಳ ಸಂಗಮ ಈ ಊರು  ಎನ್ನಲಡ್ಡಿಯಿಲ್ಲ. ಹೇಳುತ್ತ ಹೋದರೆ ಅನೇಕ ವಿಷಯಗಳು ನಾ ಮುಂದು ತಾ ಮುಂದು ಮುನ್ನುಗ್ಗುತ್ತಲಿವೆ. ಎಲ್ಲ ಊರುಗಳು ಹೆಚ್ಚು ಕಡಿಮೆ ಇದೇ ರೀತಿಯಲಿದ್ದಿರಬಹುದು ಅಲ್ಲವೆ?


     ಇಲ್ಲಿ ಜನಪರ ಹೋರಾಟಗಾರ ಮತ್ತು ತಿ.ರಾ.ಕೃಷ್ಣಪ್ಪ ಇದ್ದಾರೆ. ಆನಪರ ಚಿಂತನೆಗಳನ್ನು ಸಾಕಾರಗೊಲಿಸುವ ಇವರು ಬಡವರಿಗೆ ಅನ್ಯಾಯವಾಗುತ್ತದೆ ಎಂದರೆ ಸಿಡಿದು ನಿಲ್ಲುತ್ತಾರೆ. ಆ ಅನ್ಯಾಯವನ್ನು ಸರ್ಪಡಿಸುವ ವರೆಗೆ ಅವರು ವಿಶ್ರಮಿಸುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಗುರುತಿಸಿ ಗೌರವಿಸುವ ' ಮಂಜುನಾಥ ಷಣ್ಮುಗಮ್ ಟ್ರಸ್ಟ್ 'ಈ ಹೋರಾಟಗಾರನ ಸಂಪೂರ್ಣ ಮಾಹಿತಿ ಪಡೆದು ಅವರನ್ನು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು. ಈ ಪುರಸ್ಕಾರಕ್ಕೆ ಪುತ್ರರಾದ ರಾಷ್ಟ್ರಮಟ್ಟದ ಎಂಟು ಜನರಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದವರು ಇವರೊಬ್ಬರು ಮಾತ್ರ. ಇಲ್ಲಿಗೆ ಹೆರಿಗೆ ಆಸ್ಪತ್ರೆ ಮತ್ತು ಕಾಲೇಜುಗಳನ್ನು ತರುವಲ್ಲಿ ಯಶಸ್ವಿಯಾದ ಅವರ ಶ್ರಮ ಅನುಕರಣೀಯ. ಇವರೊಬ್ಬ ಅತ್ಯುತ್ತಮ ವಾಲಿಬಾಲ್ ಪಟು. ಅವರು ಇಲ್ಲಿ ಒಂದು ವ್ಯಾಲಿಬಾಲ್ ತಂಡವನ್ನು ಸಹ ಮನಸ್ಕರೊಂದಿಗೆ ಸೇರಿ ಕಟ್ಟಿ ಬೆಳೆಸಿದರು. ಅದು ಸುಮಾರು ಒಂದು ದಶಕ ಕಾಲ ಅತ್ಯುತ್ತಮ ಸಾಧನೆ ಮಾಡಿತ್ತು. 62 ವರ್ಷ ಪ್ರಾಯದ ಅವರು ಇಂದೂ ಯುವಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿದ್ದಾರೆ.


     ಎಲ್ಲ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಕೂವೆಗಳು ಇಲ್ಲಿವೆ. ದಶಮಾನಗಳ ಹಿಂದಿನ ಕಾಲದ ಗ್ರಾಮ ನೈರ್ಮಲ್ಯ ಈಗಿಲ್ಲ. ಅಡಳಿತದ ವಿಕೇಂದ್ರೀಕರಣವಾಗಿ ಆಡಳಿತ ಗ್ರಾಮೀಣ ಜನತೆಯ ಕೈಗಳಿಗೆ ಬಂದಿದೆ. ಇಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗಿಂತ ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರೆ ಹೆಚ್ಚಾಗಿದ್ದಾರೆ ಎಂದು ಜನ ತಮಾಷೆಗಾಗಿ ಮಾತನಾಡುತ್ತಿರುತ್ತಾರೆ. ಆದರೂ ಗ್ರಾಮದ ನೈರ್ಮಲ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ.  ಚರಂಡಿಗಳು ಪ್ಲಾಸ್ಟಿಕ್ ಗುಟಕಾ ಚಿಟ್ ಗಳು ಎಳನೀರ ಬುರುಡೆಗಳು ಮತ್ತು  ಕಸ ಕಡ್ಡಿಗಳಿಂದ ತುಂಬಿ  ಗಬ್ಬೆದ್ದು ನಾರುತ್ತಿವೆ. ಹೆಚ್ಚು ಮಳೆ ಬಿದ್ದರೆ ಚರಂಡಿಯ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಊರ ಹೊರಗಿನ ಕೆರೆ ಊರಿನ ತಿಪ್ಪೆಗುಂಡಿಯಾಗಿದೆ. ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ಅಧಿಕಾರಸ್ಥರಿಗೆ ಜನಪ್ರತಿನಿಧಿಗಳಿಗೆ ಮತ್ತು ನಮಗೆ ಇವಾವವೂ ಗೋಚರಕ್ಕೆ ಬರಲು ಸಾಧ್ಯವಿಲ್ಲ. ಧಾವಂತದ ಬದುಕಿನ ನಾಗಾಲೋಟದಲ್ಲಿರುವ ಸಂಪತ್ತಿನ ಗಳಿಕೆಯ ಬೆನ್ನು ಹತ್ತಿರುವ ಜನತೆಗೆ ಇವೆಲ್ಲವುಗಳನ್ನು ಗಮನಿಸಲು ಪುರಸೊತ್ತಿಲ್ಲದೆ ಇರಬಹುದು ಕೂಡ. ಹೀಗಾಗಿ ಇಲ್ಲಿ ಹೋರಾಟವೆಂಬ ಪದ ಅರ್ಥ ಕಳೆದುಕೊಂಡು ಬಹಳ ಕಾಲವೆ ಆಯಿತೆನ್ನಬಹುದು. ಇಲ್ಲಿ ಹೋರಾಟಗಾರ ಮತ್ತು ಹೋರಾಟವೆನ್ನುವ ಪದ ನಗಣ್ಯವಾಗಿದೆ. ಇಂತಹ ಅನೇಕ ಗ್ರಾಮಗಳು ರಾಜ್ಯ ದೇಶದ ತುಂಬೆಲ್ಲ ವ್ಯಾಪಿಸಿವೆ. ಅವುಗಳ ಸುಧಾರಣೆ ಹೇಗೆ ? ಉತ್ತರದಾಯಿತ್ವ ನಮ್ಮೆಲ್ಲರ ದಾಗಿದೆ. ಇಲ್ಲದಿದ್ದರೆ ಕಾಲವೆ ನಮಗೆಲ್ಲ ಪಾಠ ಕಲಿಸಲಿದೆ.


                                        *****



 

Rating
Average: 3 (2 votes)

Comments

Submitted by makara Sat, 05/04/2013 - 20:09

ಹನುಮಂತ ಪಾಟೀಲರಿಗೆ ವಂದನೆಗಳು. ಬಹಳ ದಿನಗಳ ನನ್ನ ಮನಸ್ಸಿನಲ್ಲಿಯೂ ಕೊರೆಯುತ್ತಿದ್ದ ಈ ರಿಪ್ಪನ್ ಪೇಟೆಯ ಇತಿಹಾಸದ ಏಳು-ಬೀಳುಗಳೊಂದಿಗೆ ಜನರ ನೈತಿಕ ಅಧಃಪತನದ ಕುರಿತೂ ಚೆನ್ನಾಗಿ ಬಿಂಬಿಸಿದ್ದೀರ. ಅಲ್ಲಿ ಆಗುತ್ತಿರುವ ಪರಿಸರ ನಾಶ, ಸಾರ್ವತ್ರಿಕ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ ಹೊರತೂ ಯಾರಿಗೂ ಅದರ ಬಗ್ಗೆ ಕಾಳಜಿ ಇಲ್ಲ ಎನ್ನುವುದೇ ಖೇದದ ಸಂಗತಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by hema hebbagodi Sat, 05/04/2013 - 22:07

In reply to by makara

ಸರ್‍ ಒಂದು ಊರಿನ ಬಗ್ಗೆ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ. ಪ್ರತಿ ಊರಿಗೂ ಒಂದು ವ್ಯಕ್ತಿತ್ವವಿರುತ್ತದೆ. ಅಂತಹ ವ್ಯಕ್ತಿತ್ವದ ಕಾರಣದಿಂದಲೇ ಅದು ವಿಶಿಷ್ಟವಾಗಿರುತ್ತದೆ. ನಿಮ್ಮ ಲೇಖನಕ್ಕೆ ಧನ್ಯವಾದಗಳು. - ಹೇಮಾ

Submitted by H A Patil Sun, 05/05/2013 - 17:48

In reply to by makara

ಶ್ರೀದರ ಬಂಡ್ರಿಯವರಿಗೆ ವಂದನೆಗಳು
ಈ ಲೇಖನ ಕುರಿ ತಮ್ಮ ನಪ್ರತಿಕ್ರಿಯೆ ಓದಿದೆ. ಇನ್ನೂ ಬರೆಯ ಬೇಕಾದ ವಿಷಯ ಸಹ ಇತ್ತು. ಈ ಊರಿನ ಪರಿಚಯಾತ್ಮಕ ಲೇಖನ ಇಷ್ಟು ಸಾಕು ಎನಿಸಿತು. ನೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by partha1059 Sun, 05/05/2013 - 22:21

ರಿಪ್ಪನ್ ಪೇಟೆಯ ಇತಿಹಾಸ ಚೆನ್ನಾಗಿ ತಿಳಿಸಿರುವಿರಿ, ಹಾಗೆ ತುಮಕೂರಿನ ಹತ್ತಿರದ ದಾಬಸ್ ಪೇಟೆ ಸಹ, ಅಲ್ಲಿಯು ಅದೆ ಕತೆ, ಅಂಗ್ಲ ಸೇನಾದಿಪತಿ, ಕರ್ನಲ್ ಡಾಬ್ಸ್ ಎನ್ನುವನ ಸಮಾದಿ ಇದೆಯಂತೆ, ಹಾಗಾಗಿ ಆ ಊರಿಗೆ ಆ ಹೆಸರು ಅನ್ನುವರು. ಅಂಗ್ಲರ ಒಬ್ಬ ಸೇನಾದಿಪತಿ, ಒಬ್ಬ ನಾಯಕನಿಂದ ಊರಿಗೆ ಹೆಸರಿಡುವ ಪದ್ದತಿ ಭಾರತದಲ್ಲಿ ಏಕೆ ಅನಿವಾರ್ಯವಾಯಿತು ತಿಳಿಯಲಿಲ್ಲ. ಮಹಾತ್ಮಗಾಂಧಿ, ಲಂಡನಿನ್ನ ದುಂಡು ಮೇಜಿನ ಪರಿಷತ್ತಿಗೆ ಹೋಗಿದ್ದರು ಆದರು ಲಂಡನ್ ಗಾಂದಿನಗರ ವಾಗಲಿಲ್ಲ. ವಿವೇಕಾನಂದರು ಚಿಕಾಗೊ ನಗರಕ್ಕೆ ಹೋದರು ಆದರೆ ಅದು ವಿವೇಕನಗರವಾಗಲಿಲ್ಲ, ಆದರೆ ಇಲ್ಲಿ ಏಕೊ ಒಬ್ಬ ಅಧಿಕಾರಿ ಒಬ್ಬ ವ್ಯಕ್ತಿ ಕಾರಣಕ್ಕೆ ಊರ ಹೆಸರೆ ಬದಲಾಗಬೇಕಾದರೆ, ನಮ್ಮಲ್ಲಿ ವ್ಯಕ್ತಿ ಪೂಜೆಯ ಪರಿಣಾಮವೆನ್ನಬಹುದೆ ???

Submitted by ಗಣೇಶ Sun, 05/05/2013 - 23:59

In reply to by partha1059

ಪಾರ್ಥರೆ, ನಮ್ಮಲ್ಲಿ ಊರಿಗೆ ಹೆಸರಿಡುವ ರೀತಿನೇ ಭಿನ್ನ. ಬಳೇ ವ್ಯಾಪಾರ ಮಾಡುವ ಸ್ಥಳ, ಬಳೆಪೇಟೆ.ಹೀಗೇ ಅಕ್ಕಿಪೇಟೆ ಇತ್ಯಾದಿ ಹೇಳಲು ಸುಲಭವಾಗುವಂತೆ ಹೆಸರಿಡುವರು. ಹಾಗೇ ತುಮಕೂರಿನ ಸಮೀಪದ ಒಂದು ಊರಿನ ಬಗ್ಗೆ ಹೇಳುವಾಗ ಜನರಿಗೆ ಬೇಗ ಗೊತ್ತಾಗಲು " ಆ ಡಾಬಸ್ ಸಮಾಧಿಯಿದೆಯಲ್ಲವಾ ಆ ಪೇಟೆಗೆ ಹೋಗಿದ್ದೆ..ಅಂತಾ ಅಂತಾ...ಡಾಬಸ್ ಪೇಟೆ ಆಯಿತು. ಇದರಲ್ಲಿ ವ್ಯಕ್ತಿ ಪೂಜೆ ಇಲ್ಲ. ಆದರೆ ಈಗೀಗ ಅದು ಶುರುವಾಗಿದೆ- ಇಂದಿರಾನಗರ, ರಾಜೀವ ನಗರ...

Submitted by swara kamath Mon, 05/06/2013 - 18:13

In reply to by partha1059

ನಮಸ್ಕಾರ ಪಾರ್ಥ ಅವರೆ. ದಾಬಸ್ ಪೇಟೆಯ ಚರಿತ್ರೆ ತಿಳಿಯಿತು. ಅದೇ ರೀತಿ ರಾಬರ್ಟ ಸನ್ ಪೇಟೆ ಯ ಹೆಸರು ಸಹ ಹುಟ್ಟಿರ ಬಹುದೆಂದು ನನ್ನ ಊಹೆ! ವಂದನೆಗಳು. .........ರಮೇಶ್ ಕಾಮತ್

Submitted by H.A.Patil. Tue, 05/07/2013 - 20:46

In reply to by partha1059

ಪಾರ್ಥ ಸಾರಥಿಯವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ಆಂಗ್ಲರ ಒಬ್ಬ ಸೇನಾಧಿಪತಿ ಮತ್ತು ಒಬ್ಬ ನಾಯಕನಿಂದ ಊರಿಗೆ ಹೆಸರಿಡುವ ಪದ್ಧತಿ
ಭಾರತದಲ್ಲಿ ಏಕೆ ಅನಿವಾರ್ಯವಾಯಿತು ? ಎಂಬುದು ತಮ್ಮ ಪ್ರಶ್ನೆ ಜೊತೆಗೆ ಗಾಂಧೀಜಿಯವರ ಲಂಡನ್ ಭೇಟಿ ಮತ್ತು ವಿವೇಕಾನಂದರ ಚಿಕ್ಯಾಗೋ ಬೇಟಿ ಕಾರಣಗಳಿಂದಾಗಿ ಪಾಶ್ಚಾತ್ಯರು ಏಕೆ ಅವರ ಹೆಸರುಗಳನ್ನು ಇಡಲಿಲ್ಲ. ಬಹಲ ಮಹತ್ವವಾದ ಜೊತೆಗೆ ತಾತ್ವಿಕವಾದ ಪ್ರಶ್ನೆ ಕೂಡ. ಭಾರತೀಯರದು ಒಂದು ತರಹದ ದಾಸ್ಯತ್ವಕ್ಕೆ ಮತ್ತು ಬಿಳಿಯ ಬಣ್ಣವನ್ನು ಮೆಚ್ಚುವ ಮತ್ತು ಆರಾಧಿಸುವ ಮನೋಧರ್ಮದವರು. ಪಾಶ್ಚತ್ಯ ದೇಶ ಮತ್ತು ಪಾಶ್ಚಾತ್ಯ ಸಂಸ್ಕೃತಿ ಮೇಲೆ ನಮಗೆ ವಿಪರೀತ ವ್ಯಾಮೋಹ, ಭಾರತೀಯ ವಿದ್ಯಾವಂತ ಇಲ್ಲವೆ ಅವಿದ್ಯಾವಂತ ಯಾರೆ ಇರಲಿ ಅದು ನಮ್ಮ ಮಾನಸಿಕ ಸ್ಥಿತಿ. ಹೀಗಾಗಿ ಇಲ್ಲಿ ಆರಾಧನಾ ಮನೋಭಾವ ಜಾಸ್ತಿ. ಬ್ಯಾಂಗಲೋರ್ ನ್ನು ಬೆಂಗಳೂರು ಮಾಡಿದರು, ಮದ್ರಾಸ ಹೆನ್ನೈ ಆಯಿತು, ಬಾಂಬೆ ಮುಂಬೈ ಆಯಿತು ಆದರೆ ಎಲ್ಲಡೆಗೆ ಈ ಬದಲಾವಣೆಗಳಾಗಲಿಲ್ಲ. ತಮ್ಮ ಅನಿಸಿಕೆ ಸರಿ ನಿಸ್ಸಂಶಯ ವಾಙಗಿ ಇದು ವ್ಯಕ್ತಿ ಪೂಜೆಯ ಪರಮಾವಧಿ ಎನ್ನಬಹುದು. ಧನ್ಯವಾದಗಳು.

Submitted by ಗಣೇಶ Mon, 05/06/2013 - 00:01

"ಸರ್ದಾರ್ ವಲ್ಲಭಭಾಯಿ ನಗರ"ಕ್ಕೆ ಹಿಂದೆ ರಿಪ್ಪನ್ ಪೇಟೆ ಅನ್ನುತ್ತಿದ್ದರಲ್ವಾ?ಪಾಟೀಲರೆ, ಅದಕ್ಕೂ ಮೊದಲು ಆ ಊರಿನ ಹೆಸರೇನು?

Submitted by H.A.Patil. Tue, 05/07/2013 - 20:52

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ರಿಪ್ಪನಪೇಟೆಗೆ ಆ ಹೆಸರಿನ ಮೊದಲು ದೊಡ್ಡಿನಕೊಪ್ಪ ಎನ್ನುತ್ತಿದ್ದರು. ಅದನ್ನು ಈಗ ಬರುವೆ ಎಂತಲು ಕರೆಯುತ್ತಾರೆ. ಈ ಬರುವೆ, ಗವಟೂರು ಮತ್ತು ಕೆರೆಹಳ್ಳಿ ಪ್ರದೇಶಗಳು ಒಟ್ಟು ಸೇರಿ ರಿಪ್ಪನ್ ಪೇಟೆ ಎಮದು ಈಗ ಗುರುತಿಸಲ್ಪಡುತ್ತಿವೆ. ಪ್ರತಿಕ್ರಿಯೆ ಧನ್ಯವಾದಗಳು.

Submitted by lpitnal@gmail.com Mon, 05/06/2013 - 06:27

ಹಿರಿಯರಾದ ಪಾಟೀಲರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ರಿಪ್ಪನ್ ಪೇಟೆಯ ಮೂಲಕ ಭಾರತೀಯ ಹಳ್ಳಿಗಳ ಬದುಕಿನ ಚಿತ್ರಣ, ಅಮೋಘವಾಗಿ ಕಟ್ಟಿ ಕೊಟ್ಟಿರುವಿರಿ, ಶಂಕರನಾಗ್ ಆರ್ ಕೆ ನಾರಾಯಣ ರ 'ಮಾಲ್ಗುಡಿ ಡೇಸ್' ಕಟ್ಟಿದ ತರಹ. ಹೂತು ಹೋಗುತ್ತಿರುವ ಸಂಸ್ಕೃತಿಯ ಪರಂಪರೆಯ ಭಾಗವಾಗಿ ಏನೂ ಮಾಡದ ಸ್ಥಿತಿಯಲ್ಲಿ ಶ್ರೀಸಾಮಾನ್ಯನಿದ್ದಾನೆ. . ಅದೇ ಈ ನಾಡಿನ ದುರಂತ. ಬರಹ ಆಪ್ತವಾಗಿದೆ. ಧನ್ಯವಾದಗಳು

Submitted by H.A.Patil. Tue, 05/07/2013 - 21:00

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿಎ, ತಾ ವು ರಿಪ್ಪನ್ ಪೇಟೆ ಮೂಲಕ ಭಾರತೀಯ ಹಳ್ಳಿಗಳನ್ನು ಗಮನಿಸುವ ಮತ್ತು ಗ್ರಹಿಸುವ ಕ್ರಮ ನಿಮ್ಮ ಸೂಕ್ಷ್ಮ ಗ್ರಹಿಕೆಯ ಮತ್ತು ಚಿಂತನೆಯ ಪ್ರತೀಕ. ಏನೂ ಮಾಡದ ಸ್ಥಿತಿಯಲ್ಲಿ ನಮ್ಮ ದೇಶದ ಶ್ರೀ ಸಾಮಾನ್ಯನಿರುವುದು ನಿಜ, ಆದರೆ ಈ ವ್ಯವಸ್ಥೆ ವಿರುದ್ದ ಆತ ಸಿಡಿದೇಳದೆ, ಗಂಭೀರವಾಗಿ ಯೋಚಿಸದೆ ಹೋದರೆ ಇನ್ನೂ ಶತಮಾನಗಳು ಗತಿಸಿದರೂ ನಮ್ಮದು ಇದೇ ಸ್ಥಿತಿ. ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by swara kamath Mon, 05/06/2013 - 18:03

ಪಾಟೀಲರಿಗೆ ನಮಸ್ಕಾರ. ಅಂತೂ ನಮ್ಮ ರಿಪ್ಪನ್ ಪೇಟೆ ಯ ಚರಿತ್ರೆಯನ್ನು ಪ್ರಕಟಿಸಿ ಜಗತ್ವಿಖ್ಯಾತ ಗೊಳಿಸಿದಿರಿ. ತುಂಬಾ ಸಂತೋಷ ವಾಯಿತು. ಆದರೆ ಒಂದು ವಿಷಯ ನೀವು ತಪ್ಪಾಗಿ ಗ್ರಹಿಸಿದ್ದೀರಿ. ನಮ್ಮೂರಿನ ಬಸ್ ಸ್ಟಾಪ್ ಬಳಿ ಇರುವ ಮೂತ್ರಾಲಯವನ್ನು ಎರಡು ವರುಷಗಳ ಹಿಂದೆ ನವಿಕರಿಸಿ ಹೈಟೆಕ್ ಮಾಡಿ ಅದನ್ನು ಉಪಯೋಗಿಸುವರ ಹತ್ತಿರ ಶುಲ್ಕವನ್ನು ಪಡೆಯುತ್ತಿರುವುದು ತಾವು ಗಮನಿಸಿಲ್ಲವೆಂದು ಕಾಣುತ್ತದೆ. ರಿಪ್ಪನ್ ಪೇಟೆ ಹೆಸರನ್ನು ಬದಲಿಸಿ ಸರ್ದಾರ್ ವಲ್ಲಭಾಯ್ ನಗರ ಎಂದು ಕರೆಯಲು ತಿರ್ಮಾನಿಸಿ ಪಂಚಾಯತು ಕಛೆರಿಯಲ್ಲಿ ಠರಾವು ಹೊರಡಿಸಲು ಕೆಲವು ಸಂಘಟನೆಗಳು ಪ್ರಯತ್ನಿಸಿದ್ದು ನಿಜ .ಆದರೆ ಆ ಆರಂಭ ಶೂರತ್ವತನ ಮುಂದುವರೆಸಲು ಈಗಿನಂತೆ ಕನ್ನಡ ಸಂಘಗಳು ಆಗ ಇರಲಿಲ್ಲ.
ರಿಪ್ಪನ್ ಪೇಟೆ ಎಂಬ ಹೆಸರು ಜನರು ಕರೆಯುವ ಮೊದಲು ನಮ್ಮ ಊರಿಗೆ ದೊಡ್ಡಿನ ಕೊಪ್ಪ ಎಂದು ಕರೆಯುತ್ತಿದ್ದರು. ನಮ್ಮ ಹಿರಿಯರು ಆ ರೀತಿ ಕರೆಯುತ್ತಿದದು ನಾನು ಕೇಳಿದ್ದೇನೆ. ಊರಿನ ಕುರಿತು ತಮ್ಮ ಲೇಖನಕ್ಕೆ ಇನ್ನೊಮ್ಮೆ ಧನ್ಯವಾದಗಳು.

Submitted by H.A.Patil. Tue, 05/07/2013 - 21:05

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ. ನಮ್ಮ ಊರಿನ ಮೂತ್ರಾಲಯವನ್ನು ಎರಡು ವರ್ಷಗಳ ಹಿಂದೆ ನವೀಕರಿಸಿದ್ದು ನಿಜ, ಆದರೆ ಅದರ ನೈಜ ಪರಿಸ್ಥಿತಿಯ ಅರಿವು ತಮಗೆ ಇಲ್ಲವೆಂದು ಕಾಣುತ್ತದೆ. ಲೇಖನದ ಮೆಚ್ಚುಗೆಗೆ ಧನ್ಯವಾದಗಳು.

Submitted by swara kamath Wed, 05/08/2013 - 16:48

In reply to by H.A.Patil.

ಪಾಟೀಲರಿಗೆ ನಮಸ್ಕಾರಗಳು. ನಿಜ ನಾನು ಎರಡು ತಿಂಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವುದರಿಂದ ನಮ್ಮ ಊರಿನ ಸ್ತಿತಿ ಗತಿಯ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಊರಿನ ನೈರ್ಮಲ್ಯದ ಅರಿವು ನನಗಿಲ್ಲ. ನಾನು ಇಲ್ಲಿಗೆ ಬರುವ ಮುನ್ನ ದಿನದ 24 ಘಂಟೆಯು ನೀರಿನ ಸರಬರಾಜಿಗಾಗಿ ಹೊಸದಾಗಿ ಊರಿನ ಒವರ್ ಹೆಡ್ಡ್ ಟ್ಯಾಂಕ್ ನಿಂದ ಪೈಪ್ ಲೈನ್ ನ್ನು ಮೂತ್ರಾಲಯಕ್ಕೆ ಅಳವಡಿಸಿರುವುದು ನೀವು ಸಹ ಗಮನಿಸಿದ್ದೀರಿ .ಅಲ್ಲದೆ ಅದರ ನಿರ್ವಹಣೆ ಖಾಸಗಿ ಸಂಸ್ತೆಗೆ ವಹಿಸಿ, ಉಪಯೋಗಿಸುವವರ ಹತ್ತಿರ ಶುಲ್ಕ ಪಡೆಯುತ್ತಾರೆ,ಅಂದಮೇಲೆ ಮೂತ್ರಾಲಯನ್ನು ಶುಚಿ ಇಡದಿದ್ದರೆ ನಮ್ಮೂರಿನ ಪಂಚಾಯ್ತಿಯವರು ಮತ್ತು ಸಾರ್ವಜನಿಕರು ಸುಮ್ಮನಿರುತ್ತಾರೆಯೆ? ........ವಂದನೆಗಳು

Submitted by H.A.Patil. Wed, 05/08/2013 - 20:21

In reply to by swara kamath

ರಮೇಶ ಕಾಮತರಿಗೆ ವಂದ್ನೆಗಳು
ತಮ್ಮ ಮರುಪ್ರತಿಕ್ರಿಯೆ ಓದಿದೆ, ತಮ್ಮ ಅಭಿಪ್ರಾಯ ಸರಿ, ನನ್ನ ಬರಹದಲ್ಲಿ ಬರೆಯುವ ಭರದಲ್ಲಿ ಉತ್ಪ್ರೇಕ್ಷೆ ಕಾಣಿಸಿ ಕೊಂಡಿದೆಯೆ ಎನ್ನುವ ಸಂಶಯ ನನ್ನನ್ನು ಕಾಡುತ್ತಿದೆ. ನನ್ನ ಅನುಭವಕ್ಕೆ ವೇದ್ಯವಾದದ್ದನ್ನು ನಾನು ದಾಖಲಿಸಿದ್ದೇನೆ ಎನ್ನುವ ಪ್ರಾಮಾಣಿಕ ಅನಿಸಿಕೆ ನನ್ನದು, ನನ್ನ ಗ್ರಹಿಕೆಯಲ್ಲಿಯೆ ದೋಷವಿರಬಹುದು, ಮರು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by Manjunatha D G Tue, 05/07/2013 - 19:27

ಜನರ‌ ಬಾಯಲ್ಲಿ ಈ ಊರು ರಿಪ್ಪಿನ್ ಪೇಟೆ ಎ0ದಾಗಿದೆ. ಸ್ವಾತ0ತ್ರ್ಯಾ ನ0ತರ‌ ದೊಡ್ಡ‌ ದೊಡ್ಡ‌ ಊರುಗಳ‌ ಹೆಸರನ್ನು ಬದಲಿಸಿರುವಾಗ‌ ಇದೇಕೆ ಹೀಗೇ ಉಳಿದಿದೆ ಎ0ದು ನಾನು ಯೋಚಿಸಿದ್ದೆ. ಮಿಡಿ ಉಪ್ಪಿನ‌ ಕಾಯಿ ಮರಗಳಿಗೆ ಈ ಸುತ್ತ‌ ಮುತ್ತ‌ ಪ್ರಸಿದ್ದಿ. ಹೋರಾಟಗಾರ‌ ಕೃಷ್ಣಪ್ಪನವರನ್ನು ಉಲ್ಲೇಖಿಸಿದ್ದು ಸರಿಯಾಗಿದೆ. ಒಳ್ಳೆಯ‌ ಲೆಖನಕ್ಕೆ ಅಭಿನ0ದನೆಗಳು.

Submitted by venkatb83 Wed, 05/08/2013 - 15:48

In reply to by H.A.Patil.

ಹಿರಿಯರೇ
ರಿಪ್ಪನ್ ಪೇಟೆ ಗೆ ಆ ಹೆಸರು ಬಂದ ಬಗೆಯ ಇತಿಹಾಸದ ಬಗ್ಗೆ ವಿವರವಾಗಿ ತಿಳಿಸಿದಿರಿ . ನಾಡು ಆಳಿದ ಹಲವು ಆಂಗ್ಲ ಅಧಿಕಾರಿಗಳು -ವಿದ್ವಾಂಸರು -ಅವರ ಬಗೆಗಿನ ಗೌರವ ದ್ಯೋತ್ಯಕವಾಗಿ ಅವರ ನಾಮಧೇಯವನ್ನು ಹಲವು ಪಟ್ಟಣ ನಗರ ಗಲ್ಲಿ ರಸ್ತೆಗಳಿಗೆ ಇಕ್ಕಿರುವರು ಅನಿಸುತ್ತಿದೆ. ಆದರೆ ಆಂಗ್ಲರ ನೆನಪಿಂದ ಆಚೆ ಬರುವ ಎಂದು ಕೆಲವು ಕಡೆ ಆ ಹೆಸರುಗಳಿಗೆ ಪರ್ಯಾಯವಾಗಿ ಕನ್ನಡ ಹೆಸರುಗಳನ್ನೂ ಇಕ್ಕಿದರು ಆದರೂ ಅದೇ ಆಂಗ್ಲ ಹೆಸರುಗಳ ಕಾರಣವಾಗಿ ಅವೇ ಹೆಸರುಗಳು ಈಗಲೂ ಜನಪ್ರಿಯ ...!!
ರಾಯಚೂರ್ ನಲ್ಲಿ ಸೋಮವಾರ ಪೇಟೆ ಬ್ರೆಸ್ತವಾರ ಪೇಟೆ (ಬುಧವಾರ ),ಎಂದೆಲ್ಲ ಇವೆ , ಬಹುಶ ಆ ದಿನಗಳಲ್ಲಿ ಅಲ್ಲಿ ವಾರದ ಸಂತೆ ನಡೆಯುತ್ತಿದ್ದಿರ್ಬಹುದು ... !!
ವಿವರಣಾತ್ಮಕ ಬರಹಕ್ಕೆ ನನ್ನಿ

ಶುಭವಾಗಲಿ

\।

Submitted by H.A.Patil. Wed, 05/08/2013 - 19:36

In reply to by venkatb83

ಸಪ್ತಗಿರಿಯವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ತಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ, ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.