ಶರಲೇಖಹೋಮನ ಸಾಹಸಗಳು-ಅಹಿಂಸಾತ್ಮಕ ಮತ್ತು ಹಾಸ್ಯಮಯ ಪತ್ತೇದಾರಿ !!

ಶರಲೇಖಹೋಮನ ಸಾಹಸಗಳು-ಅಹಿಂಸಾತ್ಮಕ ಮತ್ತು ಹಾಸ್ಯಮಯ ಪತ್ತೇದಾರಿ !!

ಇತ್ತೀಚೆಗೆ ನನ್ನ ಊರಿಗೆ ಹೋದಾಗ 'ಶರಲೇಖಹೋಮನ ಸಾಹಸಗಳು'  ಎಂಬ ಪುಸ್ತಕ ತೆಗೆದುಕೊಂಡೆ. ಈ ಪುಸ್ತಕವನ್ನು ಓದಿ ಅಲ್ಲಿಯೇ ಬಿಟ್ಟು ಬಂದುದರಿಂದ ಬರೆದವರ ಹೆಸರು ಈಗ ಖಚಿತವಾಗಿ ಹೇಳಲಾರೆ.   ಆದರೆ ಪುಸ್ತಕ ತುಂಬ ಚೆನ್ನಾಗಿದೆ.

 

ಈ ಶರಲೇಖಹೋಮ ಇಂಗ್ಲೆಂಡಿನವನ ಶರ್ಲಾಕ್ ಹೋಮ್ ಅಲ್ಲ! ಇವನು ಬೆಂಗಳೂರಿನವನು. ಬನಶಂಕರಿಯ ಮೋನೋಟೈಪ್ ಬಳಿ ಇರುವವನು. ಇವನ ಸಂಗಾತಿ ಡಾಕ್ಟರ್ ವತ್ಸನ್. ಇವನ ಬಳಿ ಆಗಾಗ ಬರೋ ಇನ್ಸ್ ಪೆಕ್ಟರ್  ಲಸ್ತ್ರದನು  ಹುಬ್ಬಳ್ಳಿ  ಕಡೆಯವನು!. ಪುಸ್ತಕದ ಬೆನ್ನುಡಿಯಲ್ಲಿ  ಹೇಳಿರುವಂತೆ ಇವು ಅಹಿಂಸಾತ್ಮಕ  ಮತ್ತು ಹಾಸ್ಯಮಯ ಪತ್ತೇದಾರಿ ಕತೆಗಳು. ಇಲ್ಲಿ ಕೊಲೆ, ಹಿಂಸೆ, ರಕ್ತಪಾತಗಳಿಲ್ಲ. ಅಷ್ಟೇ ಏಕೆ ಅಪರಾಧಿಗಳಿಗೆ ಶಿಕ್ಷೆಯೂ ಆಗುವದಿಲ್ಲ!! ಅಪರಾಧಿಗಳು ತಪ್ಪನ್ನು ಒಪ್ಪಿಕೊಂಡು ವಿಷಯವನ್ನು  ಮುಚ್ಚಿಹಾಕಲು ಕೇಳಿಕೊಳ್ಳುತ್ತಾರೆ !!

 

ಒಂದು ಕತೆಯಲ್ಲಿ ನಮ್ಮ ಶರಲೇಖಹೋಮನು ಇಂಗ್ಲಂಡಿಗೆ ಹೋಗಿರುತ್ತಾನೆ .( ಆ ಶರ್ಲಾಕ್ ಹೋಮ್ ಭಾರತಕ್ಕೆ ಬಂದ ಹಾಗಿಲ್ಲ!) ಅಲ್ಲಿನ ಅಧಿಕಾರಿಗಳು ಇವನ ಸಹಾಯ ಕೇಳಿ ಬರುತ್ತಾರೆ. ಅಲ್ಲಿ ಡಾ||ಲು ಅಂತ ಅಣುವಿಜ್ಞಾನಿ ಅಂತೆ. ಸಂಶಯಾಸ್ಪದವಾಗಿ ಏಶಿಯನ್ನರ ನಡುವೆ ಓಡಾಡುತ್ತಿದ್ದಾನಂತೆ!  ಈ ಲೂ ಚೈನಾದವನಲ್ಲ. ಹೈದರಾಬಾದಿನವನು- ಜಿ.ವೆಂಕಟೇಶ್ವರುಲು! - ಜಿ.ವಿ.ಲು ಆಗಿದ್ದಾನೆ!! . ಅವನು ತನ್ನ ಮಗಳ ಮದುವೆಗಾಗಿ ಅವಳ ಜಾತಕ ಹಿಡಿದುಕೊಂಡು ಭಾರತೀಯರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾನೆ ಅಷ್ಟೇ!!!

 

ಇನ್ನೊಂದು ಕತೆಯ ಕೊನೆಯಲ್ಲಿ ಶರಲೇಖಹೋಮನು 'ಬೆಂಗಳೂರಿಗೆ ಅರ್ಜಂಟಾಗಿ ನಾನು ಹೋಗಬೇಕಿದೆ, ಅಲ್ಲಿ ಸರಕಾರಿ ಖಜಾನೆ ಲೂಟಿಯಂತೆ' ಅಂದು ಜಾಗ ಬಿಡುತ್ತಾನೆ.  ಆಗ ಡಾ|| ವತ್ಸನ್ ಅಂದುಕೊಳ್ಳೋದು- 'ಸರಕಾರಿ ಖಜಾನೆ ಲೂಟಿ ಎಂದಿನಿಂದಲೂ ಆಗುತ್ತ ಇರೋದೇ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇವನು ಹೋಗಿ ಏನು ಮಾಡುತ್ತಾನೆ ?! '

 

ಅಂದ ಹಾಗೆ ಇದೇ ಹೊತ್ತಿಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡಿದ್ದ ೧೯೮೯ರ ವಿನೋದ ಸಾಹಿತ್ಯ ಸಂಕಲನ ಓದಿದೆ. ಅಲ್ಲೂ ಒಂದು ಇಂತಹ ಬರಹ ಇದೆ- ಆದರೆ ಬೇರೆಯವರು ಬರೆದಿದ್ದಾರೆ. ಅಲ್ಲಿನ ಶರಲೇಖಹೋಮನಿಗೆ ಈ ಲಸ್ತ್ರದ ಮತ್ತು ವತ್ಸನ್ ಟೋಪಿ ಹಾಕುತ್ತಾರೆ. ಮೋಸ ಹೋದ ಹೋಮನನ್ನು ನೋಡಿ ಅವರ ಟಿಪ್ಪಣಿ- ಅವನಿರೋ ಬೀದಿ ಹೇಳಿಕೇಳಿ ಬಕರ ರಸ್ತೆ!

Rating
No votes yet

Comments