ಶ್ರೀನಾಥರ ಪೆದ್ರಸ ... ಸ್ವಯಂವೈದ್ಯ.... ಹಾಗು ಪಶ್ಚಾತಾಪ

ಶ್ರೀನಾಥರ ಪೆದ್ರಸ ... ಸ್ವಯಂವೈದ್ಯ.... ಹಾಗು ಪಶ್ಚಾತಾಪ

ಆಗಿನ್ನು ಬೆಂಗಳೂರಿಗೆ ಬಂದ ಹೊಸದು. ಜಯನಗರದಲ್ಲಿ ನೆಲೆಸಿದ್ದೆ. ಮಗಳು ಇನ್ನು ಪುಟ್ಟವಳು ಅಂದರೆ ಒಂದು ವರ್ಷಕ್ಕಿಂತ ಕಡಿಮೆಯೇನೊ ೧೦ - ೧೨ ತಿಂಗಳ ಮಗು. ಬೆಂಗಳೂರಿನ ವಾತಾವರಣ ಅವಳಿಗೆ ಪದೆ ಪದೆ ಶೀತವಾಗುತ್ತಿತ್ತು,ರಾತ್ರಿ ಮಲಗುವಾಗ ಉಸಿರಾಡಲು ತೊಂದರೆಯಾಗುವ ರೀತಿಯಲ್ಲಿ. ಡಾಕ್ಟರ ಹತ್ತಿರ ಎಲ್ಲ ವೈದ್ಯವು ಆಗಿತ್ತು, ನಮ್ಮ ಸೋದರಮಾವ ಯಾವುದೊ ಗಿಡದ ರಸವನ್ನು ಒಮ್ಮೆ ಕುಡಿಸಿದ್ದರು.
  ಒಮ್ಮೆ ನಮ್ಮ ಆಫೀಸ್ ನಲ್ಲಿ ಮಾತನಾಡುವಾಗ ಏಕೊ ಈ ವಿಷಯ ಬಂದಿತು. ಆಗ ಗೆಳೆಯನೊಬ್ಬ "ಏ ಅದಕ್ಕೆಲ್ಲ ಏನ ಸಾರ್, ರಾತ್ರಿ ಮಲಗುವಾಗ ಸ್ವಲ್ಪ ರಮ್ ಕುಡಿಸಿಬಿಡಿ ದೇಹ ಬಿಸಿಯಾಗ ಶೀತ ಕಡಿಮೆಯಾಗುತ್ತೆ ನಿದ್ದೆ ಚೆನ್ನಾಗಿ ಬರುತ್ತೆ ಅಂದ " ನಾನು ಅದನ್ನು ಅಮಾಯಕನಂತೆ ನಂಬಿಬಿಟ್ಟೆ, ಆದರೆ ನನಗೆ ಯಾವುದು ತರಬೇಕು ಅದೆಲ್ಲ ಗೊತ್ತಿರಲಿಲ್ಲ ಅವನಿಗೆ ಕೇಳಿದೆ.ಆ ಮನುಷ್ಯ ಮಿಲಟರಿಯಲ್ಲಿದ್ದು ರಿಟೈರ್ ಆಗಿ ಕೆಲಸಕ್ಕೆ ಸೇರಿದವನು  ಅವನು ಅದಕ್ಕೇಕೆ ಯೋಚನೆ ನಮ್ಮ ಮನೆಯಲ್ಲಿರುವುದೆ ಸ್ವಲ್ಪ ತರುತ್ತೇನೆ ಬಿಡಿ" ಅಂದ. ನಾನು ಸುಮ್ಮನಾದೆ. ಮರುದಿನ ಮನುಷ್ಯ ನಿಜವಾಗಿ ಚಿಕ್ಕ ಬಾಟೆಲ್ ಒಂದರಲ್ಲಿ ಸ್ವಲ್ಪ   ರಂ ತಂದಿದ್ದ (ಯಾವುದು ಅಂತ ಇಂದಿಗು ಗೊತ್ತಿಲ್ಲ) , ನನ್ನ ಕೈಗೆ ಕೊಟ್ತ, ನಾನು ಮಗುವಿಗೆ ಎಷ್ಟು ಹಾಕಬೇಕು ಅಂತೆಲ್ಲ ಕೇಳಿದೆ ಅದಕ್ಕವನು ಒಂದು ಚಮಚ ಹಾಕಿ ಸಾಕು ಅಂತ ನಿರಾಳವಾಗಿ ಹೊರಟುಹೋದ.


   ರಾತ್ರಿಯೆ ನನ್ನ ಪತ್ನಿಗೆ ಹೇಳಿ ಆ ಪ್ರಯೋಗಕ್ಕೆ ಸಿದ್ದನಾದೆ ಊಟವೆಲ್ಲ ಆದ ನಂತರ ಮಗುವನ್ನು ತೊಡೆಯ ಮೇಲೆ ಮಲಗಿಸಿ ಅದು ಬೇಡವೆಂದು ಅಳುತ್ತಿದ್ದರು ಒಂದು ಚಮಚದಷ್ಟೆ ಅವನು ಕೊಟ್ಟ ದ್ರವವನ್ನು ಬಾಯಲ್ಲಿ ಹಾಕಿದೆವು.
 ದೇವರೆ ! ಅದೇನು ಆಯಿತೊ ಗೊತ್ತಿಲ್ಲ ಮಗು ಕಿಟಾರನೆ ಕಿರುಚಿತು, ನಮ್ಮ ಕೈ ಬಿಡಿಸಿಕೊಂಡು, ಚಾಪೆಯ ಮೇಲೆ ಮಲಗಿ ಒದ್ದಾಡುತ್ತಿತ್ತು, ಏನು ಮಾಡಿದರು ಅಳು ನಿಲ್ಲುತ್ತಿಲ್ಲ, ನಮ್ಮಿಬ್ಬರಿಗೆ ಆಗ ಅರಿವಾಗಿತ್ತು ಏನೊ ತಪ್ಪು ಮಾಡಿದ್ದೇವೆ ಎಂದು ಆದರೆ ಏನು ಗೊತ್ತಿಲ್ಲ. ನಂತರ ಮಗು ಹಾಲು ಕುಡಿಯುತ್ತಿಲ್ಲ. ಮುಖವೆಲ್ಲ ಕೆಂಪಾಗಿ ಜ್ವರವೇರಿದಂತಿದೆ. ಆ ರಾತ್ರಿಯಲ್ಲಿ ಯಾರನ್ನು ಕೇಳುವುದು, ಹೇಗೊ ಸಾಹಸ ಪಟ್ಟ ನಂತರ ಮಗು ಮಲಗಿತು. ನಂತರ ಎರಡು ಮೂರು ದಿನ ಏನು ಮಾಡಿದರು ಏನನ್ನು ತಿನ್ನುತ್ತಿಲ ಕುಡಿಯುತ್ತಿಲ್ಲ.

   ನಾನು ಆಫೀಸ್ ನಲ್ಲಿ ಕೇಳಿದೆ ಆಸಾಮಿಯನ್ನು ಏನಪ್ಪ ಹೀಗೇಕಾಯಿತು ಎಂದು, ಅವನು ಆಶ್ಚರ್ಯದಿಂದ 'ಹೌದ ಹೇಗೆ ಕುಡಿಸಿದಿರಿ " ಎಂದ ನಾನು ನೀನು ಹೇಳಿದಂತೆ ಒಂದು ಚಮಚ ಕುಡಿಸಿದೆವು ಎಂದೆ. ಅದಕ್ಕವನ್ನು "ಎಷ್ಟು ನೀರು ಸೇರಿಸಿದಿರಿ? " ಅಂದ.
 ನಾನು "ನೀರು ಸೇರಿಸ ಬೇಕ ನೀನು ಹೇಳಲಿಲ್ಲವಲ್ಲ " ಅಂದೆ ಕೋಪದಿಂದ
ಅವನು " ಏನ್ಸಾರ್ ನೀರ ಸೇರಿಸದೆ ಯಾರಾದರು ಕುಡಿಸುತ್ತಾರ ? ಅದಕ್ಕೆ ಹಾಗೆ ಆಗಿದೆ" ಅಂತ ಕೈಬೀಸಿ ಹೊರಟು ಹೋದ.  ಕುಡಿತದ ಅಭ್ಯಾಸಗಳೆಲ್ಲ ಇರದಿದ್ದರಿಂದ ನಿಜಕ್ಕೆ ನನಗೆ ಅದೆಲ್ಲ ಗೊತ್ತಿರಲಿಲ್ಲ.

  ನಂತರ ಡಾಕ್ಟರ ಹತ್ತಿರ ಹೋಗಿ ಅವರಲ್ಲಿ ಸಮಸ್ಯೆ ಹೇಳಿದೆ. ಅವರಿಂದಲು ಬೈಗುಳ, ಚಿಕ್ಕ ಮಗುವಿನ ಮೇಲೆ ಯಾರೊ ಹೇಳುವ ಔಷದಿ ಪ್ರಯೋಗ ಮಾಡ್ತೀರ ಅಂತ. ಅದರಿಂದ ಗಂಟಲೆಲ್ಲ ಸುಟ್ಟಿರುವ ಸಾದ್ಯತೆ ಯಿದೆ, ಅಲ್ಲದೆ ಕರಳು ಸಹ ಸುಟ್ಟುಹೋಗುವ ಸಾದ್ಯತೆಗಳಿರುತ್ತೆ ಅಂತೆಲ್ಲ ಹೆದರಿಸಿ, ಬರಿ ಹಾಲು ಕುಡಿಸಿ ಒಂದೆರಡು ದಿನ ನೋಡೋಣ ಅಂತ ಕಳಿಸಿದರು ಯಾವುದೊ ಸಿರಪ್ ಬರೆದು. ಸದ್ಯ ಹೇಗೊ ವಾರದಲ್ಲಿ ಸರಿ ಹೋಯಿತು. ಆದರೆ ಆ ವಾರ ಪೂರ್ತಿ ನಾನು ಮತ್ತು ಮನೆಯವರು  ಅನುಭವಿಸಿದ ಮಾನಸಿಕ ಹಿಂಸೆ ಅಪಾರ. ಹೀಗೆ ಪೆದ್ರಸ ಒಮ್ಮೆ ಅಪಾಯವನ್ನು ತರಬಲ್ಲದು.

   ಆಗ ಅನ್ನಿಸಿತು ಯಾವುದೆ ಸಂದರ್ಭವಿರಲಿ ಎಂತದೆ ಚಿಕ್ಕ ಕಾಯಿಲೆ ಯಿರಲಿ ಸ್ವಯಂ ವೈದ್ಯ ಅಪಾಯಕಾರಿ, ಅದರಲ್ಲು ಚಿಕ್ಕ ಮಕ್ಕಳಿಗೆ ಅದು ಪ್ರಾಣಾಪಾಯವನ್ನು ತರಬಹುದು ಅಂತ. ಅದಕ್ಕಾಗಿ ಸಂಪದದಲ್ಲಿ ಈ ಘಟನೆ ಹಂಚಿಕೊಳ್ಳುತ್ತಿರುವೆ,

ಯಾರೆ ಆಗಲಿ ಚಿಕ್ಕ ಮಕ್ಕಳಿಗೆ  ಸ್ವಯಂ ವೈದ್ಯ ಮಾಡಲು ಹೋಗಬೇಡಿ

Rating
No votes yet

Comments