ಹಸಿವು

ಹಸಿವು

 ಹಸಿವು
--- ಜಯಂತ ಮಹಾಪಾತ್ರ (Hunger)

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,
ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.
ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು.

ನನ್ನ ತೋಳುಗಳಗುಂಟ ಮೌನ; ಅವನ ದೇಹ ಸಮುದ್ರದಿಂದ
ಬಲೆಯೊಳಗೆ ಹಿಡಿದುತಂದ ನೊರೆಗಳನ್ನು ಪರಚುತ್ತಿತ್ತು.
ಮಿಣುಕು ಬೆಳಕಲ್ಲಿ ಗಾಯದಂತೆ ಅವನ ಬಿಡಾರ ತೆರೆದುಕೊಂಡಿತು.
ನಾನೇ ಗಾಳಿ ಒಳಗೆ, ಹಾಗೂ ಮುಂಚಿನ ದಿನಗಳು ರಾತ್ರಿಗಳು.
ಸೋಗೆ ತೊಗಲನ್ನು ಸೋಕಿದವು. ಬಿಡಾರದೊಳಗೆ
ಎಣ್ಣೆಬತ್ತಿಯೊಂದು ಗೋಡೆಯ ಮೇಲೆ ತಾಸುಗಳನ್ನು ಕಿಸಿದಿತ್ತು.
ಮತ್ತೆ ಮತ್ತೆ ಜಿಗುಟು ಮಸಿ ಮನಸಿನವಕಾಶವ ತುಂಬಿತ್ತು.
ಅವನು ಹೇಳುತ್ತಿದ್ದ: ಬೇಗ ಬರ್ತೇನೆ, ನಿನ್ನ ಬಸ್ಸು ಒಂಬತ್ತಕ್ಕೆ.
ಬಾನು ಬಿತ್ತು ನನ್ನ ಮೇಲೆ ಹಾಗೂ ಅಪ್ಪನೊಬ್ಬನ ದಣಿದ ಕಪಟತನ.
ಉದ್ದಕ್ಕೆ ಸಪೂರವಿದ್ದ ಅವಳ ವಯಸ್ಸು ರಬ್ಬರಿನಂತೆ ತಣ್ಣಗಿತ್ತು.
ಹುಳುವಿನಂತ ಕಾಲಗಲಿಸಿದಳು. ಅಲ್ಲಿನ ಹಸಿವು ಅರಿತೆ,
ಆ ಇನ್ನೊಂದು ಹಸಿವು, ಮೀನಂತೆ ತಿಣುಕುತ್ತ ಒಳತಿರುಗಿತು.

ಜಯಂತ ಮಹಪಾತ್ರ ಇಂಗ್ಲೀಷಿನಲ್ಲಿ ಬರೆಯುವ ಒರಿಯಾ ಕವಿ. ತಮ್ಮ ಸೂಕ್ಷ್ಮ ಸಂವೇದಿ ಕವನಗಳಿಗೆ ಪ್ರಸಿದ್ಧರು. ಇವರ ಕವನಗಳಲ್ಲಿ ಓರಿಸ್ಸಾದ ನದಿನಾಡು-ನಡೆನುಡಿ-ನಾಡಿಮಿಡಿತವಾಗಿ ಬರುತ್ತವೆ. ತಡವಾಗಿ ಬರೆಯಲು ಶುರುಮಾಡಿದ ಜಯಂತ ಶೀಘ್ರ ಭಾರತದ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ಹೆಸರಾದರು. ಭಾಷೆಯ ಚತುರ ಪ್ರಯೋಗ, ಸಾಮಾನ್ಯ ಜೀವನದ ಬಗೆ ಬಗೆಯ ನವೆಗಳನ್ನು ಚುರುಕು ತಾಗುವಂತೆ ಬರೆವ ಜಯಂತ ತಮ್ಮ ಕಾವ್ಯವನ್ನು ಅಂತಸ್ಸಾಕ್ಷಿಯ ಒರೆಗಲ್ಲಾಗಿ ಉಪಯೋಗಿಸುತ್ತಾರೆ. ನಮ್ಮ ಪರಿಸರದೊಳಗೆ ಕಾಣುವ ನಾನಾ ಕೀಟಲೆಯ ನಿತ್ಯಬದುಕಿನ ಬಗ್ಗೆ, ಬಡತನದ ಬೇಗೆಯಲ್ಲಿ ಸಿಲುಕಿ ನಲುಗಿದ ಒಂದಿಡೀ ತಲೆಮಾರಿನ ಬಗ್ಗೆ ಅವರ ಕವನಗಳಲ್ಲಿ ಸೂಕ್ಷ್ಮ ಪರೀಕ್ಷೆ ಇರುತ್ತದೆ.
ಈ ಕವನದಲ್ಲಿ ಹಸಿವು ಶಬ್ದದ ಎರಡೂ ಅರ್ಥಗಳು ಪರಿಣಾಮಕಾರಿಯಾಗಿ ಬಂದಿವೆ. ಬಡತನದಿಂದ ಸೊರಗಿದ ತಂದೆಯೊಬ್ಬ ತನ್ನ ಮಗಳ ದೇಹಮಾರಿ ಹೊಟ್ಟೆಪಾಡು ಮಾಡುತ್ತಲಿದ್ದಾನೆ. ಕಾಮದ ಹಸಿವಿನ ತೃಪ್ತಿಗಾಗಿ ಹುಡುಕುತ್ತಿರುವ ಪ್ರವಾಸಿಗನೊಬ್ಬ ಇಲ್ಲಿ ನಿರೂಪಕ. ತಂದೆಯೇ ತನ್ನ ಆಡುವ ವಯಸ್ಸಿನ ಮಗಳನ್ನು ಸೂಳೆಯಾಗಿಸುವ, ಹಾಗೂ ಹಾಗೆ ಮಾಡಿ ಹಸಿವನ್ನು ಎದುರಿಸುವ ಭಯಾನಕ ಚಿತ್ರದೆದುರು ಆತನ ಕಾಮುಕತೆ ನಲುಗಿಬಿಡುತ್ತದೆ.
ಮಾರ್ಮಿಕವಾದ ಈ ಕವನದಲ್ಲಿ ಒದಗುವ ಸಾಮಾಜಿಕ ಟೀಕೆ ಎಷ್ಟು ಸೂಕ್ಷ್ಮವಾಗಿ ಬಂದಿದೆ ನೋಡಿ.

Rating
No votes yet