ಹಾಸ್ಯರ್ಷಿ ಬೀchi ಯವರೊಡನೆ ಒಂದೆರಡು ರಸಘಳಿಗೆ.......
ಬಹಳಷ್ಟು ವರ್ಷಗಳ ಹಿಂದೆ ನಮ್ಮವರು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಬೀಚಿಯವರನ್ನು ಆಹ್ವಾನಿಸಿದ್ದರು. ಅಷ್ಟೊತ್ತಿಗೆ ಅವರು ರಷ್ಯಾ ಪ್ರವಾಸ ಮುಗಿಸಿಕೊಂಡು ಬಂದಿದ್ದರು. "ದೇವರಿಲ್ಲದ ಗುಡಿ" ಎನ್ನೋ ಪುಸ್ತಕ ಬರೆದಿದ್ದರು. ಆಗ ಅವರ ಆರೋಗ್ಯವೂ ಅಷ್ಟು ಸರಿ ಇರಲಿಲ್ಲ. ಅವರನ್ನು ಕಾಲೇಜಿನ ಗೆಸ್ಟ್ ಹೌಸ್ ನಲ್ಲಿ ಇಳಿಸಿದ್ದರು. ನಮ್ಮವರು ಆಗ ಯಾವುದೋ ಕೆಲಸದ ಮೇಲೆ ಮದ್ರಾಸಿಗೆ (ಚೆನ್ನೈ) ಹೋಗಿದ್ದರು. ವಿಷಯ ತಿಳಿದ ನಾನು ಅವರನ್ನು ನಮ್ಮ ಮನೆಗೆ ಆಹ್ವಾನಿಸಲು ಗೆಸ್ಟ್ ಹೌಸ್ ಗೆ ಹೋದೆ. ಮಾರನೇ ದಿನದ ಕಾರ್ಯಕ್ರಮದ ಬಗ್ಗೆ ಮಾತನಾಡಲು ಕಾಲೇಜಿನ ಪ್ರಿನ್ಸಿಪಾಲರೂ, ಕೆಲವು ಪ್ರೊಫೆಸರ್ ಗಳೂ ಅವರ ಜೊತೆಯಲ್ಲಿದ್ದರು. ಪ್ರಿನ್ಸಿಪಾಲರು ನನ್ನನ್ನು ಒಳಗೆ ಕರೆದು ಬೀಚಿಯವರೊಡನೆ,
"ಇವರೂ ನಿಮ್ಮ ಊರಿನವರೇ.... ಇಂದುಮತಿ ರಾಮಮೂರ್ತಿ ಅಂತಾ. ಇವರ ಪತಿ ನಮ್ಮ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ" ಎಂದು ಪರಿಚಯ ಮಾಡಿಕೊಟ್ಟರು.
"ಓ, ಹೌದಾ, ಬಾರವ್ವಾ... ನಮ್ಮೂರು ಅಂದ್ರೆ ಯಾವುದು ? ಹರಪನಹಳ್ಳೀನಾ ....ಹೊಸಪೇಟೆನಾ....ಬಳ್ಳಾರಿನಾ ?" ಎಂದು ಕೇಳಿದರು.
"ಅತ್ತೆಮನೆ ಹರಪನಹಳ್ಳಿ...ತವರುಮನೆ ಹೊಸಪೇಟೆ ಮತ್ತು ನನ್ನ ಬಾಲ್ಯ ಬಳ್ಳಾರಿಯಲ್ಲಿ" ಎಂದು ಉತ್ತರವಿತ್ತೆ.
"ಓ ಹಾಗೇನು.... ಹರಪನಹಳ್ಳಿಯಲ್ಲಿ ಯಾರ ಮನೆ ?" "ಕೂಡ್ಲಿಗಿ ಕೃಷ್ಣಮೂರ್ತಿರಾಯರು ಅಂತಾ ನಮ್ಮ ಮಾವನವರ ಹೆಸರು. ನಮ್ಮವರ ತಾತ ನಾಗೇಶ ಭಟ್ಟರು.." ಎಂದೆ.
"ಓಹೋಹೋ....ಕೂಡ್ಲಿಗಿ ಕಿಟ್ಟೀ ಸೊಸೆ ಅನ್ನು. ತವರು ಮನೆ ಯಾವ್ದು ?" "ನಮ್ಮ ತಂದೆ ಕರ್ನೂಲು ಸೀತಾರಾಮ ರಾಯರು..." ಎಂದು ನಾನು ಹೇಳುವುದೇ ತಡ,
"ಓ...ಹಾಗನ್ನೂ...ನಾನಾಗಲೇ ಅಂದುಕೊಳ್ತಾ ಇದ್ದೆ. ನಿನ್ನ ನೋಡಿದ ತಕ್ಷಣ ಗುಂಡಮ್ಮಾ ಇಲ್ಲಿ ಯಾಕೆ ಬಂದಳೂ ಅಂತಾ.... ನಾನು ಇಲ್ಲಿ ಬರ್ತಿದ್ದೀನಿ ಅಂತ ಗೊತ್ತಾಗಿ, ಇಲ್ಲಿಯ ಜನರಿಗೆ ನನ್ನ ಕಥೆ ಹೇಳಲಿಕ್ಕೆ ಬಂದಿರಬಹುದು ಅಂದುಕೋತಾ ಇದ್ದೆ..." ಎಂದರು. ಅದಕ್ಕೆ ನಾವಿಬ್ಬರೂ ಜೋರಾಗಿ ನಗೋದಿಕ್ಕೆ ಶುರುಮಾಡಿದೆವು. ಆಗ, ಪ್ರೊಫೆಸರ್ ಚೆನ್ನಬಸಪ್ಪಾ ಅವರು,
"ಸ್ವಾರಸ್ಯ ಏನೂ ಅಂತಾ ಹೇಳಿದರೆ ನಾವೂ ನಿಮ್ಮ ನಗುವಿನಲ್ಲಿ ಭಾಗಿಗಳಾಗಬಹುದು..." ಎಂದರು.
"ಎನಿಲ್ಲಾ...ನಾನೂ ಕೂಡಾ ನನ್ನ ತಾಯಿಯ ಹಾಗೆ ದಪ್ಪಗಿದ್ದೀನಿ ಎಂಬುದನ್ನು ಸೂಚ್ಯವಾಗಿ ಹೇಳಿದರು...ನನ್ನನ್ನು ನೋಡಿದವರು ನಮ್ಮ ತಾಯಿ ಹೇಗಿದ್ದರು ಎಂದು ಸುಲಭವಾಗಿ ತಿಳಿಯಬಹುದು" ಎಂದೆ.
"ಇರಲಿ ಬಿಡು. ಓಟ್ಟಿಗೆ ನೀನು ನಮ್ಮ ಹುಡುಗಿ ಅಂತಾಯ್ತು. ಎಲ್ಲಿ ನಿಮ್ಮ ಯಜಮಾನರು..?" ಎಂದು ಬೀಚಿಯವರು ಕೇಳಿದರು. "ಅವರು ಕೆಲಸದ ಮೇಲೆ ಮದ್ರಾಸಿಗೆ ಹೋಗಿದ್ದಾರೆ. ನಾಳೆ ಬೆಳಿಗ್ಗೆ ಬರುತ್ತಾರೆ. ಅದಕ್ಕೆ ನಾಳೆ ನಮ್ಮ ಮನೆಗೆ ಊಟಕ್ಕೆ ನಿಮ್ಮನ್ನು ಕರೆಯೋಣ ಎಂದು ಬಂದೆ. ದಯಮಾಡಿ ಬರಬೇಕು" ಎಂದೆ.
"ನೋಡವ್ವಾ... ದಯಮಾಡಿ...ಗಿಯಮಾಡಿ.. ಅಂಬೋ ಬಡಿವಾರದ ಮಾತ್ಯಾಕೆ ? ನನಗೂ ಹರಪನಹಳ್ಳೀ ಅಡುಗೆ ರುಚಿ ನೋಡಿ ಬಹಳ ದಿನವಾಗಿವೆ. ಖಂಡಿತಾ ಬರುತ್ತೀನಿ. ಇನ್ನೊಂದು ಮಾತು. ನನ್ನ ಆರೋಗ್ಯ ಅಷ್ಟು ಸರಿ ಇಲ್ಲ. ಪಥದ ಅಡುಗಿ ಮಾಡು. ಚಪಾತಿ, ಅನ್ನ ತಿಳೀ ಸಾರು. ಅಷ್ಟೇ ಮಾಡು ಸಾಕು"
ಅವರೆಲ್ಲಾ ಮಾತನಾಡಿಕೊಳ್ಳುತ್ತಿರುವಾಗ ನನ್ಯಾಕೆ ಅಲ್ಲಿ ಇರೋದು ಎಂದು ಅಲ್ಲಿಂದ ಹೊರಟು ಬಂದೆ. ಮಾರನೇ ದಿನ ಬೆಳಿಗ್ಗೆ ನಮ್ಮವರು ಊರಿಗೆ ಬಂದರು. ಅವರಿಗೆ ಎಲ್ಲಾ ವಿಷಯ ಹೇಳಿ,
"ನೀವೂ ಕಾಲೇಜಿಗೆ ಹೋಗಿ ಒಮ್ಮೆ ಅವರನ್ನು ಕಂಡು ಮಧ್ಯಾಹ್ನ ಒಂದೂವರೆ ಹೊತ್ತಿಗೆ ಊಟಕ್ಕೆ ಕರೆದು ಬನ್ನಿ. ಹಾಗೆಯೇ ಅವರ ಜೊತೆಗೆ ಬರಲು ಇನ್ನೂ ಯಾರನ್ನಾದರೂ ಕರೆಯುವುದಿದ್ದರೆ ಕರೆಯಿರಿ" ಎಂದು ಹೇಳಿ ಕಳುಹಿಸಿದೆ.
ಅವರು ಕಾಲೇಜಿಗೆ ಹೊರಟು ನಿಂತಾಗ,
"ಅಂದಹಾಗೆ, ಬೀಚಿಯವರ ಆರೋಗ್ಯ ಸರಿ ಇಲ್ಲವಂತೆ. ಅದಕ್ಕೆ ಅನ್ನ ತಿಳಿಸಾರು ಮಾತ್ರ ಮಾಡು ಎಂದರು ? ಏನು ಅಡಿಗೆ ಮಾಡಲಿ?" ಎಂದು ಕೇಳಿದೆ.
"ಅವರು ಹಾಗೆ ಹೇಳಿದಾಕ್ಷಣ ಅದೇ ನಿಜ ಅಂತಾ ಭಾವಿಸಬೇಡ. ಹರಪನಹಳ್ಳಿ ಅಡುಗೆ ರುಚಿ ನೋಡೋದಕ್ಕೆ ಅವರು ಬರ್ತಾ ಇರೋದು. ಹೋಳಿಗೆ, ಕಟ್ಟಿನ ಸಾರು ಮಾಡು. ಬೇಕಾದ್ರೆ ಒಂದೆರಡು ಚಪಾತೀನೂ ಮಾಡು. ಅವರಿಗೆ ಏನು ಬೇಕೋ ಅದನ್ನು ತೆಗೆದುಕೋತಾರೆ. ನನಗನ್ನಿಸೋ ಮಟ್ಟಿಗೆ ಚಪಾತೀನ ನೀನೇ ತಿನ್ನಬೇಕಾಗಬಹುದು. ಒಂದೂವರೆ ಹೊತ್ತಿಗೆ ಬರಲು ಹೇಳುತ್ತೀನಿ" ಎಂದು ಹೊರಟು ಹೋದರು.
ಮಧ್ಯಾಹ್ನ ಒಂದೂವರೆ ಹೊತ್ತಿಗೆ, ಬೀಚಿಯವರೂ, ಅವರ ಜೊತೆ ಇಬ್ಬರೂ ಪ್ರೊಫೆಸರ್ ಗಳೂ ಬಂದರು. ಬೀಚಿಯವರನ್ನು ನೋಡಬೇಕೆಂದು ನನ್ನ ಕೆಲವು ಸ್ನೇಹಿತೆಯರು ಬಂದಿದ್ದರಲ್ಲದೇ ಅಡುಗೆ ಮಾಡುವುದಕ್ಕೂ ಸಹಾಯ ಮಾಡಿದರು. ಎಲ್ಲರೂ ಊಟಕ್ಕೆ ಕುಳಿತರು. ಬಾಳೆ ಎಲೆ ಹಾಕಿ, ಮೊದಲಿಗೆ ಪಾಯಸ, ಹೋಳಿಗೆ, ಪಲ್ಯ ಕೋಸಂಬರಿ ಚಿತ್ರಾನ್ನ, ಎಲ್ಲರ ಎಲೆಗೂ ಬಡಿಸಿ, ಬೀಚಿಯವರ ಚಪಾತಿ ಬಡಿಸಲು ಹೋದೆ.
"ಏ..ಏ..ಏನಿದೂ ? ಅಲ್ಲವ್ವಾ ಅತ್ತೆ ಮನೆ ಹರಪನಹಳ್ಳೀ ಅಂತೀ. ಹೋಳಿಗೆ ಚಪಾತಿ ಒಂದೇ ಸಲ ಯಾರಾದರೂ ಮಾಡುತ್ತಾರಾ ? ಹೋಳಿಗಿ ಮಾಡೀ ಅಂದ್ರೆ ಕಟ್ಟಿನ ಸಾರೂ ಮಾಡಿರಬೇಕಲ್ಲಾ. ಮೊದಲು ಎರಡು ಹೋಳಿಗೆ, ಅದಕ್ಕೆ ಹಾಲು ತುಪ್ಪಾ ಹಾಕು. ಆಮೇಲೆ ಕಟ್ಟಿನ ಸಾರು, ಆಮೇಲೆ ಪಥ್ಯದ ಅಡುಗೆ. ಅದೂ ಹೊಟ್ಟೆಯಲ್ಲಿ ಜಾಗ ಇದ್ದರೆ ಮಾತ್ರ" ಎಂದರು ಬೀಚಿ ! ನಮ್ಮವರಿಗೆ ಅಷ್ಟೇ ಸಾಕಾಗಿತ್ತು.
"ನಾನಾಗ್ಲೇ ಅವಳಿಗೆ ಹೇಳಿದ್ದೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ" ಎಂದರು.
ನನ್ನವರು ಹೇಳಿದ ಹಾಗೆ ತಿಳಿ ಸಾರು, ಅನ್ನ ನನ್ನ ಪಾಲಿಗೆ ಉಳಿಯಿತು. ಊಟವಾದ ಮೇಲೆ ಎನೇನೋ ಜೋಕ್ಸ್ ಹೇಳಿ ಹೊಟ್ಟೆ ಹುಣ್ಣಾಗುವ ಹಾಗೆ ನಗಿಸಿದರು. ಅದರಲ್ಲಿ ಒಂದನ್ನು ನಿಮಗೆ ಹೇಳಲೇ ಬೇಕು.
" ನಮ್ಮ ಸೊಸೆ ತಿಂಗಳ ರಜೆ ತೆಗೆದುಕೊಂಡಾಗ, ಅವಳ ಏಳು ತಿಂಗಳ ಮಗುವಿಗೆ ಹಾಲು ಕುಡಿಸಲು ಸೊಸೆಯ ಬಳಿ ಬಿಡುವಾಗ, ನನ್ನ ಹೆಂಡತಿ ಸೀತಾ ಆ ಮಗುವಿನ ಬಟ್ಟೆಯೆನ್ನೆಲ್ಲಾ ಬಿಚ್ಚಿ, ಬೆತ್ತಲೆ ಮಾಡಿ, ನೆಲದ ಮೇಲೆ ಮಲಗಿಸುತ್ತಾಳೆ. ಸೊಸೆ ಮಗುವನ್ನು ಎತ್ತಿಕೊಂಡು ತೊಡೆಯಮೇಲೆ ಮಲಗಿಸಿಕೊಂಡು, ಮೊಲೆಯೂಡಿಸಿ, ಮಗುವಿಗೆ ನಿದ್ದೆ ಬಂದ ಮೇಲೆ ತೊಟ್ಟಿಲಲ್ಲಿ ಮಲಗಿಸಲು, ಅತ್ತೆಯ ಕೈಗೆ ಕೊಡಲು ಪುನಃ ಮಗುವನ್ನು ನೆಲದ ಮೇಲೆ ಮಲಗಿಸುತ್ತಾಳೆ. ಅತ್ತೆ ಮಗುವನ್ನು ಎತ್ತಿಕೊಂಡು ಬಟ್ಟೆ ಹಾಕಿ ತೊಟ್ಟಿಲಿಗೆ ಹಾಕುತ್ತಾಳೆ. ಹೀಗೆ ಈ ನಾಟಕ ದಿನದಲ್ಲಿ ನಾಲ್ಕೈದು ಬಾರಿ ನಡೆಯುತ್ತಿತ್ತು. ನೋಡೋ ತನಕ ನೋಡಿದೆ. ಈ ಮಡಿಯ ನೆಪದಲ್ಲಿ ಮಗುವಿಗೆ ಎಷ್ಟು ಹಿಂಸೆ ಕೊಡುತ್ತಾರಲ್ಲಾ ಎಂದು ರೇಗಿ ಹೋಯಿತು. ಅದಕ್ಕೆ ನಾನು ಅವರಿಬ್ಬರಿಗೆ ಹೇಳಿದೆ. ಸೀತಾ, ಬಾ ಇಲ್ಲಿ. ನಿನಗೆ ಸ್ವಲ್ಪ ಪಾಠ ಹೇಳಿಕೊಡಬೇಕಾಗಿದೆ. ಎಂದು ಕರೆದೆ. ಆಕೆ ಬಂದ ಮೇಲೆ, ಈಗ ಬೆಂಗಳೂರಿನ ಚಳಿಗೆ ಮೈ ಸೆಟೆದು ಹೋಗುತ್ತದೆ. ಇಂಥಾ ಚಳಿಯಲ್ಲಿ ಮಗುವನ್ನು ಬೆತ್ತಲೆ ಮಾಡಿ ನೆಲದ ಮೇಲೆ ಮಲಗಿಸುತ್ತೀಯಲ್ಲಾ, ನಿನಗೇನು ಬುದ್ಧಿಗಿದ್ಧಿ ಇದೆಯಾ ? ಪಾಪ, ಆ ಕೂಸಿಗೆ ಹೇಳ್ಕೋಳ್ಳೋದಕ್ಕೆ ಆಗೋದಿಲ್ಲಾ ಅಂದ್ರೆ ಮಕ್ಳ ತಾಯಿಯಾದ ನಿನಗಾದ್ರೂ ತಿಳೀಬಾರ್ದಾ. ಅದಕ್ಕೆ ಒಂದು ಕೆಲಸ ಮಾಡ್ರೀ... ಪ್ರತಿಸಾರ್ತಿನೂ ಮಗುವಿನ ಬಟ್ಟೆ ಕಳಚೋ ಬದಲು ನೀವಿಬ್ರೂ ಬಟ್ಟೆ ಕಳಚಿದರೆ, ಕೂಸೂ ಬಚಾವಾಗ್ತದೆ, ನಿಮ್ಮ ಮಡೀನೂ ಉಳಿದು ಸೀದಾ ಸ್ವರ್ಗಕ್ಕೆ ಹೋಗಬಹುದು ಅಂತ ಹೇಳಿದೆ. ಈಗ ನೀನು ಹೇಳವ್ವಾ ನೀನೇನಂತೀ..?" ಅವರು ಹೇಳಿದುದು ನಮ್ಮಿಂದ ನಗೆ ಬುಗ್ಗೆ ಚಿಮ್ಮಿಸಿದರೂ ಅವರು ಹೇಳಿದುದರಲ್ಲಿ ಎಷ್ಟು ಅರ್ಥವಿದೆ, ನಮ್ಮ ಕೆಲವು ಗೊಡ್ಡು ಆಚಾರಗಳು ನಿಜಕ್ಕೂ ಅಗತ್ಯವೇ ಎಂದು ಚಿಂತನೆಗೂ ದೂಡಿತು. "ನಾನು ಮಾತ್ರ ನಿಮ್ಮ ಪಾರ್ಟೀನೇ.......ಸರಿಯಾಗಿ ಹೇಳಿದಿರಿ...." ಎಂದೆ ಎಲ್ಲರ ನಗೆಯಲ್ಲಿ ಭಾಗಿಯಾಗುತ್ತಾ. **** ******
Comments
ಉ: ಹಾಸ್ಯರ್ಷಿ ಬೀchi ಯವರೊಡನೆ ಒಂದೆರಡು ರಸಘಳಿಗೆ.......
ಉ: ಹಾಸ್ಯರ್ಷಿ ಬೀchi ಯವರೊಡನೆ ಒಂದೆರಡು ರಸಘಳಿಗೆ.......
ಉ: ಹಾಸ್ಯರ್ಷಿ ಬೀchi ಯವರೊಡನೆ ಒಂದೆರಡು ರಸಘಳಿಗೆ.......