೨೭. ಶ್ರೀ ಲಲಿತಾ ಸಹಸ್ರನಾಮ ೬೬ ಮತ್ತು ೬೭ನೇ ನಾಮಗಳ ವಿವರಣೆ

೨೭. ಶ್ರೀ ಲಲಿತಾ ಸಹಸ್ರನಾಮ ೬೬ ಮತ್ತು ೬೭ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೬೬, ೬೭

Sampatkarī-samārūḍha-sindhura-vraja-sevitā सम्पत्करी-समारूढ-सिन्धुर-व्रज-सेविता (66)

೬೬. ಸಂಪತ್ಕರೀ-ಸಮಾರೂಢ-ಸಿಂಧುರ-ವ್ರಜ-ಸೇವಿತಾ

        ದೇವಿಯು ಸಂಪತ್ಕರೀ ದೇವಿಯ ಮುಂದಾಳತ್ವದಲ್ಲಿ ಆನೆಗಳ ಹಿಂಡಿನಿಂದ ಪೂಜಿಸಲ್ಪಡುತ್ತಾಳೆ. ಸಂಪತ್ಕರೀ ದೇವಿಯ ಕುರಿತಾಗಿ ೯ನೇ ನಾಮದಲ್ಲಿ ಇದುವರೆಗೆ ಚರ್ಚಿಸಲಾಗಿದೆ. ’ಸಂಪತ್ಕರೀ ವಿದ್ಯಾ’ ಎನ್ನುವ ಒಂದು ವಿದ್ಯೆಯಿದ್ದು ಅದು ಬಹಳ ಶಕ್ತಿಯುತವಾದದ್ದೆಂದು ಪರಿಗಣಿತವಾಗಿದೆ. ಈ ನಾಮದಲ್ಲಿ ಸಂಪತ್ಕರೀ ವಿದ್ಯೆಯಲ್ಲಿ ಬಳಸಲ್ಪಡುವ ಮೂರು ಅಕ್ಷರಗಳನ್ನೊಳಗೊಂಡ ಬೀಜಾಕ್ಷರವು ಅಡಗಿದೆ. ಬೀಜಾಕ್ಷರವನ್ನು ಬಹಳ ನಿಗೂಢವಾದುದೆಂದು ಈ ಹಿಂದೆ ೯ನೇ ನಾಮಾವಳಿಯ ಚರ್ಚೆಯಲ್ಲಿ ವಿವರಿಸಲಾಗಿದೆ.

      ಕ್ರೋಂ (क्रों) ಎನ್ನುವ ಬೀಜಾಕ್ಷರವು ಮೂರು ಅಕ್ಷರಗಳಾದ ಕ+ರ+ಮ ಗಳೊಂದಿಗೆ ಬಿಂದುವನ್ನೂ ಹೊಂದಿದೆ. ‘ಕ’ ಅಕ್ಷರವು ಸಂತೋಷ ಹಾಗೂ ಕೀರ್ತಿಗಳನ್ನು ಪ್ರತಿನಿಧಿಸುತ್ತದೆ. ’ರ’ ಬೀಜಾಕ್ಷರವು ಅಗ್ನಿಯ ಬೀಜವಾಗಿದ್ದು ಅದರಷ್ಟೇ ಶಕ್ತಿಯುತವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಯಾವುದೇ ಮಂತ್ರದಲ್ಲಿ ’ರ’ ಅಕ್ಷರವಿದ್ದರೆ ಅದು ನಮಗೆ ಅತೀಂದ್ರಿಯ ಶಕ್ತಿಗಳನ್ನು ದಯಪಾಲಿಸುತ್ತದೆ. ’ಮ’ ಅಕ್ಷರವು ಈಗಿನ ಜನ್ಮದಲ್ಲಿ ಮತ್ತು ಮುಂಬರುವ ಜನ್ಮಗಳಲ್ಲಿ ಸುಖ ಜೀವನವನ್ನು ಉಂಟು ಮಾಡುತ್ತದೆ. ಪುನಃ ಪುನಃ ’ಕ್ರೋಂ’ ಬೀಜವನ್ನು ಜಪಿಸುವುದರಿಂದ ಎಲ್ಲಾ ವಿಧವಾದ ಸುಖಸಮೃದ್ಧಿಗಳನ್ನು ಮತ್ತು ಸಂತೋಷವನ್ನು ಕೊಡುತ್ತದೆ. ಯಾವುದೇ ಮಂತ್ರವು ಫಲಕೊಡಬೇಕಾದರೆ ಅದಕ್ಕೆ ಆತ್ಮಬೀಜವು ಅತ್ಯಾವಶ್ಯಕ ಅದನ್ನು ಗುರುವಿನ ಮೂಲಕ ದೀಕ್ಷೆಯಿಂದ ಪಡೆಯಬೇಕು.

     ತಿಳಿಯಬೇಕಾದದ್ದು (ಜ್ಞಾನ), ತಿಳಿಯುವವನು (ಜ್ಞಾತೃ) ಮತ್ತು ತಿಳಿದವನು (ಜ್ಞಾನಿ) ಈ ಮೂರನ್ನೂ ಸೇರಿಸಿ ತ್ರಿಕೋಣವೆಂದಿದ್ದಾರೆ. ಈ ಮೂರು ಒಂದೇ ಎನ್ನುವದನ್ನು ಜ್ಞಾನದ ಮೂಲಕ ಸಾಕ್ಷಾತ್ಕರಿಸಿಕೊಳ್ಳುವುದನ್ನು ’ಸುಖ-ಸಂಪತ್ಕರ’ ಎನ್ನುತ್ತಾರೆ. ಶಿವ ಸೂತ್ರದ ೧.೧೯ನೇ ಶ್ಲೋಕವು, "ಶಕ್ತಿಸಂಧಾನೆ ಶರೀರೋಪತ್ತಿಃ" ಎನ್ನುತ್ತದೆ. ಇದರ ಅರ್ಥವೇನೆಂದರೆ ಶಕ್ತಿಯೊಂದಿಗೆ ಏಕರೂಪವಾದ ಐಕ್ಯತೆ (ಗಾಢವಾದ ಮತ್ತು  ನಿರಂತರ ಪ್ರಜ್ಞೆಯಿಂದ ಉಂಟಾಗುವ ಐಕ್ಯತೆ). ಶಕ್ತಿಸಂಧಾನವೆಂದರೆ ಒಬ್ಬನು ತನ್ನ ಬಯಕೆಗಳನ್ನು ಪೂರೈಸಿಕೊಳ್ಳಲು ಶಿವನನ್ನು ಪ್ರಾರ್ಥಿಸಬೇಕಾಗಿಲ್ಲ. ಆದರೆ ಒಬ್ಬನು ತನ್ನ ಆಲೋಚನೆಗಳನ್ನು ಶಕ್ತಿಯುತವಾದ ತರಂಗಗಳನ್ನಾಗಿ ಮಾರ್ಪಡಿಸಲು ಸಾಧ್ಯವಾದರೆ ಅವನಿಗೇನು ಬೇಕೋ ಅದು ದೊರೆಯುತ್ತದೆ. ಸಂಧಾನವೆನ್ನುವುದು ಆಧ್ಯಾತ್ಮಿಕ ಸಾಧನೆಗೆ ಇರಬೇಕಾದ ಒಂದು ಮುಖ್ಯ ಲಕ್ಷಣ. ಏಕಾಗ್ರತೆ ಮತ್ತು ಪ್ರಜ್ಞೆಯ ತೀವ್ರತೆಯನ್ನು ಒಂದಾಗಿಸಿಕೊಳ್ಳುವುದು ಆಧ್ಯಾತ್ಮಿಕ ಉನ್ನತಿಗೆ ಬೇಕಾಗಿರುವ ಮೂಲಭೂತ ಅಂಶಗಳು. ಸಂಧಾನದ (ಕ್ರೋಢೀಕರಣದ) ಸಾಮರ್ಥ್ಯವನ್ನು ಬೆಳೆಸಿಕೊಳ್ಳದೇ ಇದ್ದರೆ ದೀಕ್ಷೆ ಪಡೆದುಕೊಂಡ ಮಂತ್ರದಿಂದ ಫಲವುಂಟಾಗುವುದಿಲ್ಲ ಮತ್ತು ಆ ಮಂತ್ರದ ಉದ್ದೇಶವು ಈಡೇರುವುದಿಲ್ಲ.

     ಒಂದು ವೇಳೆ ಶ್ರೀ ಲಲಿತೆಯನ್ನು ಕ್ರೋಂ (क्रों) ಬೀಜದ ಮೂಲಕ ಉಪಾಸನೆ ಮಾಡಿದರೆ ಧ್ಯಾನವನ್ನು ಕೈಗೊಂಡವನ ಎಲ್ಲಾ ಕೋರಿಕೆಗಳು ಈಡೇರುತ್ತವೆ. ಇದನ್ನು ಆಧ್ಯಾತ್ಮಿಕ ಸಾಧನೆಯಲ್ಲಿ ಉನ್ನತ ಸ್ಥಿತಿಗಳನ್ನು ತಲುಪುವುದೆಂತಲೂ ಅರ್ಥೈಸಬಹುದು.

Āśvārūḍhā-dhiṣṭhitāśva-koṭikoṭibhi-rāvṛtā आश्वारूढा-धिष्ठिताश्व-कोटिकोटिभि-रावृता (67)

೬೭. ಆಶ್ವಾರೂಢಾ-ಧಿಷ್ಠಿತಾಶ್ವ-ಕೋಟಿಕೋಟಿಭಿ-ರಾವೃತಾ

        ಲಲಿತಾಂಬಿಕೆಯು ಅಶ್ವಾರೂಢಾ ದೇವಿಯ ಮುಖಂಡತ್ವದಲ್ಲಿ ಬಹಳಷ್ಟು ಕುದುರೆಗಳಿಂದ ಆವೃತಳಾಗಿರುತ್ತಾಳೆಂದು ೮ನೇ ನಾಮದಲ್ಲಿ ಚರ್ಚಿಸಿದ್ದೆವು. ಅಶ್ವಾರೂಢಾ ದೇವಿಯು ಯುದ್ಧದಲ್ಲಿ ಪಾಲ್ಗೊಳ್ಳುವ ಕುದುರೆಗಳ ಮುಖ್ಯಸ್ಥೆಯಾಗಿದ್ದು ಈ ದೇವಿಯ ಮುಖವೂ ಕೂಡಾ ಕುದುರೆಯಂತೆಯೇ ಇರುತ್ತದೆ. ಅಶ್ವಾರೂಢಾ ಮಂತ್ರವು ೧೩ ಬೀಜಾಕ್ಷರಗಳನ್ನು ಒಳಗೊಂಡಿದ್ದು ಅತ್ಯಂತ ಶಕ್ತಿಯುತವಾದುದೆಂದು ಪರಿಗಣಿತವಾಗಿದೆ. ಈ ಹದಿಮೂರು ಬೀಜಾಕ್ಷರಗಳಲ್ಲಿ ನಾಲ್ಕನ್ನು ಸಾಮಾನ್ಯ ಪದ್ಧತಿಯಂತೆ (ಎಡದಿಂದ ಬಲಕ್ಕೆ) ಉಚ್ಛರಿಸಿ ಅವೇ ನಾಲ್ಕು ಬೀಜಾಕ್ಷರಗಳನ್ನು ಕಡೆಯಲ್ಲಿ ವಿರುದ್ಧ ಕ್ರಮದಲ್ಲಿ ಉಚ್ಛರಿಸುತ್ತಾರೆ (ಬಲದಿಂದ ಎಡಕ್ಕೆ). ಇದನ್ನೇ ಮಂತ್ರ ಸಂಪುಟವೆನ್ನುತ್ತಾರೆ. ಸಂಪುಟವೆಂದರೆ ಕವಚ. ಈ ರೀತಿಯಾದ ಮಂತ್ರಗಳು ಬಹುಬೇಗನೇ ಫಲವನ್ನೀಯುತ್ತವೆ.

       ಇಂದ್ರಿಯಗಳನ್ನು ಕುದುರೆಗಳಿಗೆ ಹೋಲಿಸಲಾಗಿದೆ ಏಕೆಂದರೆ ಅವುಗಳನ್ನು ನಿಯಂತ್ರಿಸದೇ ಬಿಟ್ಟರೆ ಅವು ಕುದುರೆಗಳಂತೆ ಬಹಳ ವೇಗವಾಗಿ ಓಡುತ್ತವೆ. ಮನಸ್ಸೇ ಇಂದ್ರಿಯಗಳ ಸಾರಥಿ; ಏಕೆಂದರೆ ಮನಸ್ಸಿನಿಂದ ಮಾತ್ರವೇ  ಇಂದ್ರಿಯಗಳ ನಿಗ್ರಹವು ಸಾಧ್ಯವಾಗುತ್ತದೆ. ಶಿವ ಸೂತ್ರದ ೧.೧೨ನೇ ಶ್ಲೋಕವು, " ವಿಸ್ಮಯೋ ಯೋಗಭೂಮಿಕಾಃ" ಎನ್ನುತ್ತದೆ. ಇದರ ಅರ್ಥವು ಸ್ವಲ್ಪ ಕ್ಲಿಷ್ಟವಾಗಿದ್ದರೂ ಕೂಡಾ ಇದನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ. ಇದರ ಶಬ್ದಶಃ ಅರ್ಥವೆಂದರೆ ಯೋಗದ ವಿವಿಧ ಹಂತಗಳು ವಿಸ್ಮಯಕಾರಕವಾಗಿವೆ ಎನ್ನುವುದು. ಇಲ್ಲಿ ಹಂತಗಳೆಂದರೆ ವಿವಿಧ ಚಕ್ರಗಳೆಂದು ತಿಳಿಯಬೇಕು. ಈ ಚಕ್ರಗಳಲ್ಲಿ ಪ್ರಜ್ಞೆಯು ಒಂದು ಹಂತಕ್ಕೆ ಬಂದು ತಲುಪಿ ಮುಂದಿನ ಹಂತಕ್ಕೆ ಪಯಣಿಸುತ್ತದೆ. ಸಹಸ್ರಾರಕ್ಕಿಂತ ಉನ್ನತವಾದ ಅಥವಾ ಈ ಭೌತಿಕ ದೇಹದ ಆಚೆಗಿನ ಯೋಗಿಯ ಪ್ರಜ್ಞೆಯನ್ನು ತುರಿಯಾವಸ್ಥೆ ಎಂದು ಕರೆದಿದ್ದಾರೆ. ಈ ಹಂತದಲ್ಲಿ ಯೋಗಿಯ ಎಲ್ಲಾ ಇಂದ್ರಿಯಗಳು ಸಂಪೂರ್ಣವಾಗಿ ಅಂತರಾತ್ಮದ ನಿಯಂತ್ರಣದಲ್ಲಿರುತ್ತದೆ. ಈ ಅಂತರಾತ್ಮವನ್ನು ಪರಮಾತ್ಮವೆಂದೂ ಕರೆಯಲಾಗಿದೆ. ಈ ಹಂತದಲ್ಲಿ ಯೋಗಿಯು ಪರಮಾನಂದವನ್ನು ಅನುಭವಿಸುತ್ತಾನೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ನಮ್ಮ ಒಳಗಿರುವ ಅಂತರಾತ್ಮವನ್ನು ಅರಿತುಕೊಳ್ಳುವುದೇ ಅತ್ಯುನ್ನತವಾದ ಸಂತೋಷವನ್ನು ಉಂಟುಮಾಡಿ ಪರಮಾನಂದದ ಸ್ಥಿತಿಗೆ ಒಯ್ಯುತ್ತದೆ. ಹಂತವೆಂದರೆ ಇಲ್ಲಿ ಸಕ್ರಿಯವಾಗಿರುವ ಆಜ್ಞಾ ಚಕ್ರವೆಂದೂ ತಿಳಿಯಬಹುದು ಏಕೆಂದರೆ ಈ ಹಂತದಲ್ಲಿ ಒಬ್ಬನು ತನ್ನ ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬಹುದು. ಹಂತಗಳೆಂದರೆ ಪ್ರಜ್ಞೆಯ ಅವಸ್ಥೆಗಳಾಗಿದ್ದು ಅದರ ಅತ್ಯುನ್ನತ ಅವಸ್ಥೆಯು ತುರಿಯಾವಸ್ಥೆಯಾಗಿದೆ. ಯೋಗಿಯು ಶಿವನೊಂದಿಗೆ ತಾದಾತ್ಮ್ಯ ಭಾವವನ್ನು ಏರ್ಪಡಿಸಿಕೊಳ್ಳುವುದನ್ನು ಉಮಾ ಅಥವಾ ಕುಮಾರೀ ಎನ್ನುತ್ತಾರೆ. ಆಗ ಯೋಗಿಯು ಬಾಹ್ಯ ಮತ್ತು ಅಂತರ, ನಾನು ಮತ್ತು ನೀನು, ಒಳ್ಳೆಯದು ಮತ್ತು ಕೆಟ್ಟದ್ದು ಎಂದು ಭೇದವನ್ನು ಎಣಿಸುವುದಿಲ್ಲ. ಈ ವಿವರಣೆಯು ಇಲ್ಲಿ ಅಸಾಂಧರ್ಭಿಕವೆನಿಸುವುದಿಲ್ಲ ಏಕೆಂದರೆ ಈ ನಾಮವು ಕುದುರೆಗಳಂತೆ ಅಲೆಯುತ್ತಿರುವ ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡುವುದರ ಕುರಿತು ಮಾತನಾಡುತ್ತದೆ. ಇಂದ್ರಿಯ ನಿಗ್ರಹದಿಂದ ನಮಗೆ ಅನೇಕ ವಿಧವಾದ ಆಧ್ಯಾತ್ಮಿಕ ಫಲಗಳು ದೊರೆಯುತ್ತವೆ. ಕೇವಲ ಶಕ್ತಿ ಮಾತ್ರಳೇ ನಮ್ಮನ್ನು ಪರಬ್ರಹ್ಮನಾದ ಶಿವನ ಬಳಿಗೆ ಕೊಂಡೊಯ್ಯಲು ಸಮರ್ಥಳು. ಶಕ್ತಿಯು ಮಾಯೆಯಾಗಿದ್ದಾಳೆ ಎಲ್ಲಿಯವರೆಗೆ ನಾವು ಮಾಯೆಯನ್ನು ಜಯಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲಾಗುವುದಿಲ್ಲ. ಶಿವನೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಲು ಅವಶ್ಯವಕವಾದ ದೃಢ ಸಂಕಲ್ಪ ಶಕ್ತಿಯನ್ನು ಶಿವ ಸೂತ್ರಗಳಲ್ಲಿ ಉಮೆಯೆಂದು ಕರೆಯಲ್ಪಡುವ ’ಶಕ್ತಿ’ ಮಾತ್ರಳಿಂದಲೇ ಪಡೆಯುವುದು ಸಾಧ್ಯ. ಆದ್ದರಿಂದ ವಿವಿಧ ರೂಪ-ನಾಮಗಳಲ್ಲಿ ಅವತರಿಸಿರುವ ಶ್ರೀ ಲಲಿತೆಯು ಇಂದ್ರಿಯಗಳಿಂದುಂಟಾಗುವ ಗುರುತುಗಳನ್ನು ಮೂಡಿಸಲು ಕಾರಣಳಾಗಿರುವವಳು ಮತ್ತು ಆಕೆಯೊಬ್ಬಳೇ ಇಂದ್ರಿಯಗಳಿಂದ ಮೂಡುವ ಗುರುತುಗಳನ್ನು ಅಳಸಿಹಾಕಲು ಸಾಮರ್ಥ್ಯವುಳ್ಳವಳಾಗಿದ್ದು ನಮ್ಮನ್ನು ಉನ್ನತ ಸ್ತರಗಳಿಗೆ ಕೊಂಡೊಯ್ದು ಶಿವನೊಂದಿಗೆ ತಾದಾತ್ಮ್ಯವನ್ನು ಹೊಂದುವಂತೆ ಮಾಡುತ್ತಾಳೆ. ಒಮ್ಮೆ ಶಿವನ ಸಾಕ್ಷಾತ್ಕಾರವಾದರೆ ಒಬ್ಬನು ನಿರಂತರ ಪರಮಾನಂದದಲ್ಲಿ ಇರುತ್ತಾನೆ.

        ಕಠೋಪನಿಷತ್ತು ಹೇಳುತ್ತದೆ; ಇಂದ್ರಿಯಗಳೇ ಕುದುರೆಗಳು ಮತ್ತು ದೇಹವೇ ರಥವೆಂದು. ವಿಷಯ ವಸ್ತುಗಳೇ ಮಾರ್ಗಗಳಾಗಿದ್ದು ಆತ್ಮನೇ ಆನಂದಿಸುವವನು (ಏಕೆಂದರೆ ಆತ್ಮನು ರಥ ಮತ್ತು ಕುದುರೆಗಳೆರಡರ ಒಡೆಯನಾಗಿದ್ದಾನೆ).  ಒಬ್ಬನು ಒಳ್ಳೆಯದು ಮತ್ತು ಕೆಟ್ಟದ್ದು ಇವುಗಳ ನಡುವೆ ವ್ಯತ್ಯಾಸವನ್ನು ಕಂಡುಕೊಳ್ಳಲು ಅಸಾಧ್ಯ ಮತ್ತು ಅವನಿಗೆ ಮನಸ್ಸಿನ ಮೇಲೆ ಹತೋಟಿಯಿಲ್ಲದಿದ್ದರೆ ಅದು ಪಳಗಿಸಲಾಗದ ಕುದುರೆಗಳನ್ನು ರಥಕ್ಕೆ ಕಟ್ಟಿರುವ ಸಾರಥಿಯಂತೆ ಅವನ ಪರಿಸ್ಥಿತಿಯಿರುತ್ತದೆ. ಮನಸ್ಸಿನ ಮೇಲೆ ಹತೋಟಿಯಿಲ್ಲದಿದ್ದರೆ ಅದು ಎಲ್ಲಾ ವಿಧವಾದ ದುಃಖ ಮತ್ತು ಕ್ಲೇಶಗಳಿಗೆ ಕಾರಣವಾಗುತ್ತದೆ. ಈ ರೀತಿಯ ವಿವರಣೆಗಳು ನಮಗೆ ದೇವಿ ಮಹಾತ್ಮ್ಯ (ದುರ್ಗಾ ಸಪ್ತಶತಿ) ಮತ್ತು ಭಗವದ್ಗೀತೆಗಳಲ್ಲಿಯೂ ದೊರೆಯುತ್ತವೆ. 

******

 

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 66, 67 http://www.manblunder.com/2009/07/lalitha-sahasranamam-6667.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
ಚಿತ್ರಕೃಪೆ: http://www.search.ask.com/picdetails?o=APN10370&gct=bar&q=bhagavadgita&surl=http%3A%2F%2Fwww.search.ask.com%2Fpictures%3Fq%3Dbhagavadgita%26o%3DAPN10370%26odn%3D%26tpr%3D10%26gct%3Dbar&purl=http%3A%2F%2Fveda.wikidot.com%2Fbhagavad-gita&iurl=http%3A%2F%2Fveda.wikidot.com%2Flocal--files%2Fbhagavad-gita%2FBhagavadGita.jpg&iw=411&ih=415&turl=http%3A%2F%2Fmedia4.picsearch.com%2Fis%3FpzQE6Dc171bE2HuismGhehsxhtBrRAQL7WkGNPO39Ac&tw=164&th=166
Rating
Average: 5 (1 vote)