cricket

cricket

ಭಾರತ ಕ್ರಿಕೆಟ್ ತಂಡದವರು ’ ವಿಶ್ವಕಪ್’ ಗೆದ್ದು ನಮ್ಮ ದೇಶಕ್ಕೆ ಅಪರಿಮಿತವಾದ ಗೌರವವನ್ನು ಘನತೆಯನ್ನು ತಂದುಕೊಟ್ಟಿದ್ದಾರೆ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥ ಗೆಲುವು ಇದು. ನಮ್ಮ ಕ್ರಿಕೆಟ್ ಕ್ರ‍ೀಡಾಪಟುಗಳಿಗೆ ಭಾರತದ ಸಮಸ್ತ ನಾಗರಿಕರು ಅವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಭಾರತದ ವಿವಿಧ ನಗರಗಳಲ್ಲಿ ಪಟ್ಟಣಗಳಲ್ಲಿ ಸನ್ಮಾನಗಳನ್ನು ಏರ್ಪಡಿಸಿ ಅವರಿಗೆ ಗೌರವ ಸಲ್ಲಿಸಿ ಸಂತಸಪಡುವ ಸೌಭಾಗ್ಯ ದೊರಕಿದೆ.
 
ನಮ್ಮ ಕ್ರಿಕೆಟ್ ತಂಡದವರ ಅಭೂತಪೂರ್ವ ಗೆಲುವನ್ನು ಗೌರವಿಸಿ ಕ್ರಿಕೆಟ್ ಸಂಸ್ಥೆಗಳು, ವಿವಿಧ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಕೋಟ್ಯಂತರ ಹಣವನ್ನು ನೀಡುತ್ತಿವೆ; ಭವ್ಯವಾದ ಮನೆಗಳನ್ನು ನಿವೇಶನಗಳನ್ನು ಕೊಡಲು ಮುಂದೆ ಬಂದಿವೆ. ಈ ಕೋಟ್ಯಾಂತರ ಹಣ ಯಾರದು? ಸಹಸ್ರ, ಸಹಸ್ರ ಬಡ ನಾಗರಿಕರ ಸ್ವತ್ತಲ್ಲವೇ! 15-20 ಜನರಿಗೆ ಕೋಟಿಕೋಟಿ ಹಣವನ್ನು ಕೊಟ್ಟು ಅವರನ್ನು ಶ್ರೀಮಂತರನ್ನಾಗಿ ಮಾಡಿದರೆ ಮಾತ್ರ ಅವರಿಗೆ ಗೌರವವನ್ನು ಸಲ್ಲಿಸಿದಂತೆ ಆಗುತ್ತದೆಯೆ? ಈ ಕ್ರೀಡಾಪಟುಗಳು ಇದುವರೆಗೆ ಆಡಿರುವ ಅನೇಕ ಪಂದ್ಯಗಳಲ್ಲಿ ಲಕ್ಷಾಂತರ ರೂಪಾಯಿಗಳ ಬಹುಮಾನವನ್ನು ಪಡೆದವರಾಗಿದ್ದಾರೆ. ಅಂಥವರಿಗೆ ಈಗ ಕೋಟ್ಯಂತರ ರೂಪಾಯಿಗಳ ಹಣವನ್ನು ನೀಡುವುದು ಉಚಿತವೇ! ಎಷ್ಟೋ ಜನ ನಿರಾಶ್ರಿತರು, ನೆರೆಸಂತ್ರಸ್ತರು ತಲೆಯಮೇಲೆ ಸೂರಿಲ್ಲದೆ, ಎರಡುಹೊತ್ತು ಊಟಕ್ಕೆ ಪರದಾಡುತ್ತಿರುವಾಗ ಅವರ ಕಡೆ ಗಮನಕೊಡದೆ ರಾಜಕೀಯ ವ್ಯಕ್ತಿಗಳು, ಸಂಸ್ಥೆಗಳು ಸಾರ್ವಜನಿಕರ ಹಣವನ್ನು ಈ ರೀತಿ ಪೋಲುಮಾಡುವುದು ಉಚಿತವೇ! ತಮ್ಮ ಕೈಯಿಂದ ಹಣವನ್ನು ಹಾಕಿ ಕ್ರೀಡಾಪಟುಗಳನ್ನು ಸಭೆಸಮಾರಂಭಗಳನ್ನು ಏರ್ಪಡಿಸಿ ಗೌರವಿಸಬಹುದಲ್ಲವೇ!
 
ಇದೇ ರೀತಿಯ ಗೌರವ ಸನ್ಮಾನಗಳು ಒಲಿಂಪಿಕ್ಸ್ ಏಷ್ಯನ್ ಗೇಮ್ಸ್ ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಭಾರತಕ್ಕೆ ಗೆಲುವನ್ನು ಪದಕಗಳನ್ನು ತಂದ ಬೇರೆ ಕ್ರೀಡಾಪಟುಗಳಿಗೆ ಸಲ್ಲುತ್ತಿದೆಯೆ?