ಅಕ್ಕಿ, ಬೇಳೆ ಡಬ್ಬಗಳಲ್ಲಿ ನುಸುಳುವ ಸೊರಬಿ ಕೀಟ

ನಿಮ್ಮ ಅಡುಗೆ ಮನೆಯ ಡಬ್ಬಿಗಳಲ್ಲಿ ಬಹು ಸಮಯದ ಹಿಂದೆ ತುಂಬಿಸಿ ಇಟ್ಟಿದ್ದ ಅಕ್ಕಿ ಅಥವಾ ಬೇಳೆ ಕಾಳುಗಳನ್ನು ಗಮನಿಸಿದರೆ ಹಲವಾರು ಪುಟ್ಟದಾದ ಕೀಟಗಳು ಓಡಾಡುವುದು ಕಣ್ಣಿಗೆ ಬಿದ್ದೇ ಬೀಳುತ್ತದೆ. ಇದನ್ನು ಸೊರಬಿ ಎಂದು ಕೆಲವೆಡೆ ಕರೆದರೆ, ಇನ್ನು ಕೆಲವೆಡೆ ಗುಗ್ಗುರು ಎನ್ನುತ್ತಾರೆ. ಈ ಸೊರಬಿ (Weevils) ಕೀಟಗಳಲ್ಲಿ ಹಲವಾರು ಪ್ರಭೇಧಗಳಿವೆ. ಆದರೆ ಎಲ್ಲವೂ ಉಪಟಳ ಜೀವಿಗಳು. ನೀವು ಸಂಗ್ರಹಿಸಿಟ್ಟ ಅಕ್ಕಿ, ಗೋಧಿ ಮೊದಲಾದ ಧಾನ್ಯಗಳಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಅಂತಹ ಧಾನ್ಯಗಳಿಗೆ ಒಂದು ರೀತಿಯ ವಾಸನೆ ಬರುತ್ತದೆ. ಬಳಕೆಗೆ ಅನರ್ಹವಾಗಿಬಿಡುತ್ತವೆ.
ಈ ಸೊರಬಿಗಳು ಸುಮಾರು ೩-೪ ಮಿಲಿಮೀಟರ್ ನಷ್ಟು ಉದ್ದವಾಗಿರುತ್ತವೆ. ಇವುಗಳ ಬಾಯಿಯು ಚೂಪಾದ ಕೊಂಬಿನ ಆಕಾರದಲ್ಲಿರುತ್ತದೆ. ಇದರ ಮೈಬಣ್ಣ ಕಪ್ಪು ಅಥವಾ ಕಡು ಕಂದು. ಇವುಗಳು ಧಾನ್ಯಗಳು ಮತ್ತು ಬೇಳೆ ಕಾಳುಗಳನ್ನು ತಿಂದು ಅದರಲ್ಲಿ ಮೊಟ್ಟೆ ಇರಿಸಿ ಸಂತಾನಾಭಿವೃದ್ಧಿ ಮಾಡುತ್ತವೆ. ಇವುಗಳ ಚೂಪಾದ ಮೂತಿಯ ಮೂಲಕ ಧಾನ್ಯವನ್ನು ಕೊರೆದು ಅದರ ಒಳಗೆ ತಮ್ಮ ಮೊಟ್ಟೆಯನ್ನು ಇರಿಸುತ್ತದೆ. ಬೇರೆ ಬೇರೆ ಪ್ರಬೇಧದ ಸೊರಬಿಗಳು ಬೇರೆ ಬೇರೆ ಸಂಖ್ಯೆಯ ಮೊಟ್ಟೆಗಳನ್ನು ಇಡುತ್ತವೆ. ಒಂದರಿಂದ ೩೦-೪೦ ಮೊಟ್ಟೆಗಳನ್ನು ಇಡುವ ಸೊರಬಿಗಳೂ ಇವೆ. ಹೀಗೆ ಮೊಟ್ಟೆಯನ್ನು ಧಾನ್ಯದ ಒಳಗೆ ಇಟ್ಟ ಬಳಿಕ ತಮ್ಮ ಬಾಯಿಯಿಂದ ಸ್ರವಿಸುವ ಒಂದು ಅಂಟಾದ ದ್ರವದಿಂದ ಆ ಕೊರೆದ ತೂತನ್ನು ಮುಚ್ಚಿ ಬಿಡುತ್ತವೆ. ಧಾನ್ಯ ಅಥವಾ ಬೇಳೆ ಕಾಳುಗಳ ಒಳಗಿರುವ ಮೊಟ್ಟೆಯು ಒಡೆದು ಮರಿಯಾಗಿ ಆ ಧಾನ್ಯವನ್ನು ಕೊರೆದು ತಿನ್ನಲು ಶುರು ಮಾಡುತ್ತದೆ. ಹೀಗೆ ತಿಂದು ಹೊಟ್ಟೆ ತುಂಬಿಸಿಕೊಂಡು ಗಾತ್ರದಲ್ಲಿ ದೊಡ್ಡದಾಗುತ್ತದೆ. ಅಲ್ಲೇ ತಮ್ಮ ಕೋಶಾವಸ್ಥೆಯನ್ನೂ ಮುಗಿಸಿ ಬೆಳೆದ ಪ್ರೌಢ ಸೊರಬಿಗಳು ಆ ಧಾನ್ಯದಿಂದ ಹೊರ ಬರುತ್ತವೆ. ಮತ್ತೆ ಅದರ ಜೀವನ ಚಕ್ರ ಯಥಾ ರೀತಿಯಲ್ಲಿ ಮುಂದುವರೆಯುತ್ತದೆ.
ಸೊರಬಿಗಳು ಧಾನ್ಯದ ಒಳಗೆ ಇರುವಾಗ ಅವುಗಳ ಇರುವಿಕೆಯ ಬಗ್ಗೆ ಗೊತ್ತೇ ಆಗುವುದಿಲ್ಲ. ಆದರೆ ಕೆಲವೊಮ್ಮೆ ನಾವು ಡಬ್ಬವನ್ನು ತೆರೆಯುವಾಗ ಈ ಪುಟ್ಟ ಕೀಟಗಳು ಧಾನ್ಯದಿಂದ ಹೊರಬಂದು ಓಡಾಟ ನಡೆಸುತ್ತಿರುವುದು ಗಮನಕ್ಕೆ ಬರುತ್ತದೆ. ಈ ಕೀಟಗಳಿರುವ ಧಾನ್ಯಗಳು ಮತ್ತು ಬೇಳೆ ಕಾಳುಗಳನ್ನು ಆಹಾರಕ್ಕೆ ಬಳಸದಿರುವುದು ಉತ್ತಮ. ಸೊರಬಿ ಕೀಟಗಳು ಬಹುಬೇಗನೇ ಹೊಸ ಪೀಳಿಗೆಗೆ ಜನ್ಮ ನೀಡಬಲ್ಲವು. ಅಂದರೆ ಒಂದೆರಡು ವಾರಗಳಲ್ಲೇ ಅಸಂಖ್ಯಾತ ಸೊರಬಿಗಳ ಸೃಷ್ಟಿಯಾಗುವ ಸಾಧ್ಯತೆ ಇದೆ. ಇವುಗಳು ವಿಷಕಾರಿಯಲ್ಲದೇ ಹೋದರೂ ಕೆಲವರಲ್ಲಿ ಸಣ್ಣ ಮಟ್ಟಿನ ಅನಾರೋಗ್ಯದ ಸಮಸ್ಯೆ ಕಾಡಬಹುದು. ಕೆಲವರಿಗೆ ಅಜೀರ್ಣ ಮತ್ತು ಅಲರ್ಜಿಯ ಸಮಸ್ಯೆ ಉಂಟಾಗಬಹುದು.
ಈ ಕೀಟಗಳನ್ನು ಓಡಿಸುವುದು ಬಹಳ ಸುಲಭ. ಬಿಸಿ ವಾತಾವರಣದಲ್ಲಿ ಈ ಕೀಟಗಳು ಉಳಿದುಕೊಳ್ಳುವುದಿಲ್ಲ. ಅದಕ್ಕೇ ನಮ್ಮ ಅಜ್ಜಿ, ಅಮ್ಮನವರು ಇಂತಹ ಕೀಟಗಳನ್ನು ಡಬ್ಬದಲ್ಲಿ ಕಂಡ ಕೂಡಲೇ ಅದರಲ್ಲಿರುವ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಲು ಹಾಕುತ್ತಿದ್ದರು. ಒಂದೇ ಬಿಸಿಲಿಗೆ ಆ ಡಬ್ಬದ ಧಾನ್ಯಗಳಲ್ಲಿರುವ ಕೀಟದ ಎಲ್ಲಾ ಜೀವನ ಚಕ್ರದ ಹಂತಗಳು ನಿವಾರಣೆಯಾಗುತ್ತಿದ್ದವು. ಧಾನ್ಯಗಳನ್ನು ಮತ್ತು ಬೇಳೆ ಕಾಳುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟರೆ ಸೊರಬಿಗಳ ಕಾಟ ಇರಲಾರದು. ಮಲೆನಾಡಿನಲ್ಲಿ ಕಟ್ಟಿಗೆ ಒಲೆಗಳು ಇದ್ದಲ್ಲಿ ಹೊಗೆ ಹೋಗುವ ಸ್ಥಳದಲ್ಲಿ ಈ ಧಾನ್ಯಗಳನ್ನು ಇಡುತ್ತಿದ್ದರು. ಹೊಗೆಯ ಬಿಸಿಗೆ ಕೀಟಗಳು ಮಂಗಮಾಯವಾಗುತ್ತಿದ್ದವು.
ಇವೆಲ್ಲಾ ಸರಳವಾದ ಉಪಾಯಗಳು. ಆದರೆ ಈಗ ಸೊರಬಿಯಂತಹ ಕೀಟಗಳ ನಿವಾರಣೆಗಾಗಿ ರಾಸಾಯನಿಕಗಳನ್ನು ಆಹಾರ ಧಾನ್ಯಗಳಿಗೆ ಬಳಸುತ್ತಾರೆ. ಇದರಿಂದ ಎರಡು ಬಗೆಯ ಸಮಸ್ಯೆ. ಒಂದು ಸೊರಬಿಗಳದ್ದು, ಮತ್ತೊಂದು ಈ ಹಾನಿಕಾರಕ ರಾಸಾಯನಿಕದ್ದು. ಕೀಟಭಾಧೆಯಿಂದ ಆಹಾರ ಧಾನ್ಯಗಳು ಹಾಳಾಗದೇ ಹೋದರೂ ಅದರಲ್ಲಿ ಉಳಿಯುವ ರಾಸಾಯನಿಕಗಳ ಪರಿಣಾಮವಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದಕ್ಕಾಗಿ ರಾಸಾಯನಿಕ ಮುಕ್ತ ಆಹಾರವನ್ನೇ ಸೇವಿಸುವುದು ಉತ್ತಮ. ಸೊರಬಿಗಳನ್ನು ದೂರ ಮಾಡಲು ನಮ್ಮ ಅಜ್ಜಿಯರು ಮತ್ತು ಅಮ್ಮಂದಿರು ಬಳಸುತ್ತಿದ್ದ ಬಿಸಿ ಮಾಡುವ ಅಥವಾ ಬಿಸಿಲಲ್ಲಿ ಒಣಗಿಸುವ ಕಾರ್ಯವನ್ನು ಮಾಡುವುದು ಅತ್ಯುತ್ತಮ ವಿಧಾನ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ