ಅಕ್ಷಯ ತೃತೀಯ- ಒಂದು ವೈಚಾರಿಕ ಲೇಖನ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು .ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು. ವೈಶಾಖ ಮಾಸದ, ಶುಕ್ಲಪಕ್ಷದ ತದಿಗೆ ದಿನವೆ ‘ಅಕ್ಷಯ ತೃತೀಯ’ . ಈ ದಿನ ಯಾವ ಕೆಲಸಕ್ಕೆ ಕೈಹಾಕಿದರೂ, ಪ್ರಾರಂಭಿಸಿದರೂ ಅದು ಅಕ್ಷಯವಾಗುತ್ತದೆ, ಯಶಸ್ವಿಯಾಗಿ ನೆರವೇರುವುದು ಎಂಬ ನಂಬಿಕೆ. ಮಂಗಳಕರವಾದ ಕಾರ್ಯಕ್ಕೆ ಪ್ರಶಸ್ತವಾದ ದಿನ. ಇಷ್ಟಾರ್ಥ ಈಡೇರುತ್ತದೆ ಎನ್ನುತ್ತಾರೆ. ಮನುಜ ಕುಲಕೆ ಅತ್ಯಂತ ಶುಭಪ್ರದವಾದ ದಿನ. ಕೃತಯುಗದ ಆರಂಭ ದಿನ ಅಂತಲೂ ಓದುತ್ತೇವೆ.
ಮಹಾಭಾರತ ರಚಿಸಲು ಪ್ರಾರಂಭ ಮಾಡಿದ ದಿನ. ಇದೇ ದಿನ ಲೋಕಮಾತೆ ಸೀತೆ ಅಗ್ನಿಪರೀಕ್ಷೆಗೆ ಒಳಗಾಗಿ ಪರಿಶುದ್ಧತೆಯನ್ನು ಪ್ರಕಟಪಡಿಸಿ, ಪ್ರಭು ಶ್ರೀ ರಾಮಚಂದ್ರ ಮರಳಿ ಸೀತಾಮಾತೆಯನ್ನು ಸ್ವೀಕರಿಸಿದ್ದು , ರಾಮಾಯಣದಲ್ಲಿ ಓದಿದ್ದೇವೆ. ಬಲರಾಮ ಜಯಂತಿ ಇದೇ ದಿನವಂತೆ. ಮಹಾಭಾರತದಲ್ಲಿ ಧರ್ಮರಾಯ ಸಂಕಟದಿಂದ ತತ್ತರಿಸಿದಾಗ, ದ್ರೌಪದಿಯ ಮನೋರಥದ ಅರಿವನ್ನು ಅರ್ಥೈಸಿದ ಭಗವಾನ್ ಶ್ರೀ ಕೃಷ್ಣ ಒಲಿದು ‘ಅಕ್ಷಯಪಾತ್ರೆ’ ನೀಡಿ ಹರಸಿದ ಶುಭದಿನ ಈ ದಿನವಂತೆ. ಕುಬೇರ ಅಷ್ಟ್ಯೆಶ್ವರ್ಯಕ್ಕಾಗಿ ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸಿದ ದಿನ. ವರಾಹ ನರಸಿಂಹ ಸ್ವಾಮಿ ಮೂಲ ವಿಗ್ರಹ ದರುಶನ ಮಾಡಿದ ದಿನವೆಂದೂ ಪ್ರತೀತಿ ಇದೆ. ಭಕ್ತ ಸುಧಾಮ ಬಡವನಾದರೂ, ಬಹಳ ಹೃದಯ ಶ್ರೀಮಂತಿಕೆ ಇದ್ದ ಸಂಭಾವಿತ, ಆತ ತನ್ನ ಬಾಲ್ಯದ ಗೆಳೆಯ ಶ್ರೀ ಕೃಷ್ಣನಿಗೆ ಮುಷ್ಟಿ ಅವಲಕ್ಕಿಯ ಗಂಟನ್ನು ನೀಡಿದ ದಿನವಂತೆ. ಪರಶುರಾಮ ಜಯಂತಿಯಂತೆ. ಪವಿತ್ರಳಾದ ಗಂಗಾಮಾತೆ ಭೂಸ್ಪರ್ಶ ಮಾಡಿದ ದಿನ.
ವಚನಗಳ ಹರಿಕಾರ, ಕಾಯಕವೇ ಕೈಲಾಸವೆಂದು ಸಾರಿದ ಅಣ್ಣ ಬಸವಣ್ಣನವರ ಜಯಂತಿ ಇದೇ ದಿನ. ಒಟ್ಟಿನಲ್ಲಿ ಪುರಾಣದ ಕಾವ್ಯ, ಇತಿಹಾಸ ಓದಿದಾಗ ಸಿಗುವಂಥ ಮಾಹಿತಿ ಇದಾಗಿದೆ, ಈ ದಿನದ ವಿಶೇಷತೆಯಾಗಿದೆ.
ಜೈನಧರ್ಮದಲ್ಲಿ ಜೈನಮುನಿಗಳಿಗೆ ಆಹಾರ ಪಾನೀಯಗಳನ್ನು ದಾನ ಮಾಡಿದರೆ ಬಹಳ ಪುಣ್ಯವಂತೆ. ಅದು ಅತ್ಯಂತ ಅತಿಶಯವಾದ ಕೆಲಸವಂತೆ. ಅತಿಶಯವೇ ಅಕ್ಷಯವಾಗಿ ಪುಣ್ಯ ಸಂಪಾದನೆಗೆ ಕಾರಣ. ಜೈನ ತೀರ್ಥಂಕರರಾದ ವೃಷಭನಾಥ ಸ್ವಾಮಿಯವರು ಉಪವಾಸ ಮಾಡಿ, ಮೊದಲು ಆಹಾರ(ಪಾರಣಾ)ವಾದ ದಿವಸ ವೈಶಾಖ ಶುಕ್ಲ ತೃತೀಯ ದಿನದಂದು. ಇದೇ ‘ಅಕ್ಷಯ ತೃತೀಯ’. ಜೈನ ಮುನಿಗಳಿಗೆ ಕಬ್ಬಿನ ಹಾಲು ನೀಡುವುದರಿಂದ ಸುಖ ಸಮೃದ್ಧಿ ,ಧನಧಾನ್ಯಾದಿಗಳ ಅಕ್ಷಯವಾಗುತ್ತದೆ ಎನ್ನುತ್ತಾರೆ ,ನಂಬಿಕೆ ಸಹ.
ಈ ದಿನ ಮನೆಗಳಿಗೆ ವಸ್ತುಗಳನ್ನು ತಂದರೆ ಒಳ್ಳೆಯದಂತೆ .ನಾವು ದಾನ ಸಹ ಮಾಡಬೇಕು. ಇದು ಆಸ್ತಿಕರ ನಂಬಿಕೆ. ಮಹಾಲಕ್ಷ್ಮೀ ಮಾತೆ ಈ ದಿನ ಭೂಸಂಚಾರಕ್ಕೆ ಬರುತ್ತಾಳೆ, ಬಂದವಳು ಮನೆಯ ಈಶಾನ್ಯ ಕೋನದಲ್ಲಿ ಕುಳಿತುಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಶುಭ, ಸುಖ, ಸಮೃದ್ಧಿಯ ಸಂಕೇತವಾಗಿ ಭಗವಾನ್ ವಿಷ್ಣು ಮತ್ತು ಮಹಾಲಕ್ಷ್ಮೀ ದೇವಿಯ ಆರಾಧನೆ ಮಾಡುವುದು ಇದೇ ದಿನದ ಮಹಾವಿಶೇಷ.
ಈ ದಿನ ನಮ್ಮ ಮನೆಗಳಿಗೆ ಅತ್ಯಂತ ಅಮೂಲ್ಯವಾದ ೭ ವಸ್ತುಗಳನ್ನು ತಂದರೆ ತುಂಬಾ ಒಳ್ಳೆಯದು ಹೇಳುತ್ತಾರೆ. ಮಣ್ಣಿನ ಕಳಸ, ಶಂಖ, ಕವಡೆ(ಹಳದಿಬಣ್ಣದ), ತೆಂಗಿನಕಾಯಿ, ಲಕ್ಷ್ಮೀ ಚರಣ ಪಾದುಕೆಗಳು, ಲೋಹದ ಆಮೆ, ಕೊಳಲು ಇದೇ ೭ ವಸ್ತುಗಳು.
ಅಕ್ಷಯ ತೃತೀಯ ದಿನದಂದು ಹಳದಿ ಲೋಹ ಖರೀದಿಸಿದರೆ ಒಳ್ಳೆಯದು ಎಂದು ಪ್ರತೀತಿ ಇದೆ. ಪುರಾಣ ಕಾವ್ಯಗಳಲ್ಲಿ ಇದಕ್ಕೆ ಥಳಕು ಹಾಕಿದ್ದಾರೆ. ಚಿನ್ನ ಎನ್ನುವುದು ಒಂದು ಆಭರಣವಾಗಿ ಬಳಕೆ. ಇನ್ನೊಂದು ಕಷ್ಟ ಕಾಲದಲ್ಲಿ ನಮಗೆ ಆಧಾರ, ಕೈ ಹಿಡಿದು ಕಾಪಾಡುತ್ತದೆ. ಇತ್ತೀಚೆಗೆ ಇದನ್ನೇ ಬಂಡವಾಳ ಮಾಡಿಕೊಂಡು ಎಲ್ಲಾ ಬಂಗಾರದ ಅಂಗಡಿಗಳೂ ಆಮಿಷಗಳನ್ನು ಒಡ್ಡುವುದು ಕಳೆದ ೪-೫ ವರ್ಷಗಳಿಂದ ಕಂಡು ಬರುತ್ತದೆ.
ಏನೇ ಇರಲಿ ಅದು ಅವರವರ ಚಾಕಚಕ್ಯತೆ. ನಮ್ಮ ಹತ್ತಿರ ಹಣವಿದೆಯೋ ತರುವ, ಇಲ್ಲದಿದ್ದರೆ ಏನಾದರೂ ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು, ವಸ್ತುಗಳನ್ನು, ದಾನಮಾಡುವ. ‘ಅಕ್ಷಯ ತೃತೀಯ’ ವನ್ನು ಇದ್ದುದರಲ್ಲಿಯೇ ಆಚರಿಸಿ ಸಂಭ್ರಮಿಸೋಣ. ನಮ್ಮಲ್ಲಿರುವ ದುರ್ಗುಣಗಳನ್ನು ಕ್ಷಯವಾಗಿಸೋಣ. ಉತ್ತಮತೆಯನ್ನು ಮೈಗೂಡಿಸಿಕೊಳ್ಳೋಣ.
‘ಅಕ್ಷಯ ತೃತೀಯ’ ಎಲ್ಲರಿಗೂ ಸುಖ -ಶಾಂತಿ-ಸಮೃದ್ಧಿಯನ್ನು, ಸ್ನೇಹ-ಸಂಪತ್ತು-ಪ್ರೀತಿ-ವಿಶ್ವಾಸಗಳನ್ನು ಮೂಡಿಸಿ ಅಕ್ಷಯವಾಗಲಿ ಎಂಬ ಹಾರೈಕೆ. ‘ಸರ್ವೇ ಜನಾಃ ಸುಖಿನೋ ಭವಂತು’
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರದಲ್ಲಿ: ಕನಕಧಾರ ಸ್ತೋತ್ರವನ್ನು ಪಠಿಸುತ್ತಿರುವ ಆದಿ ಶಂಕರಾಚಾರ್ಯ.
ಭಿಕ್ಷೆಯನ್ನು ಬೇಡಿಕೊಂಡು ಬಂದ ಶಂಕರಾಚಾರ್ಯರಿಗೆ ಬಡ ಹೆಂಗಸು ತನ್ನ ಬಳಿ ಇದ್ದ ಒಂದು ಸಣ್ಣ ತುಂಡು ಒಣ ನೆಲ್ಲಿಕಾಯಿಯನ್ನು ನೀಡುತ್ತಾಳೆ. ಆ ಹೆಂಗಸಿನ ಕಷ್ಟಗಳ ಬಗ್ಗೆ ದಿವ್ಯದೃಷ್ಟಿಯಿಂದ ತಿಳಿದುಕೊಂಡ ಶಂಕರಾಚಾರ್ಯರು ಕನಕಧಾರಾ ಸ್ತೋತ್ರವನ್ನು ಪಠಿಸಿ ಸುವರ್ಣ ಮುದ್ರೆಗಳನ್ನು ಆ ಹೆಂಗಸಿನ ಮನೆಯ ಮೇಲೆ ಸುರಿಸುತ್ತಾರೆ. ಆ ದಿನ ಅಕ್ಷಯ ತದಿಗೆ ಆಗಿತ್ತೆಂದು ಪ್ರತೀತಿ ಇದೆ.
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು