ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!


ಅಗ್ಗದ ಸ್ಮಾರ್ಟ್‌ಫೋನುಗಳು ಟೆಲಿಕಾಂ ಕಂಪೆನಿಗಳಿಗೆ ದುಬಾರಿಯಾಗುವುದಿದೆ.ಅದರಲ್ಲೂ ಆಂಡ್ರಾಯಿಡ್ ಫೋನುಗಳ ಮಟ್ಟಿಗೆ ಈ ಮಾತು ಹೆಚ್ಚು ಸತ್ಯವೆನ್ನುವುದು,ಈಗ ಹೆಚ್ಚಿನ ಸೇವಾದಾತೃಗಳಿಗೆ ಅನುಭವಕ್ಕೆ ಬಂದಿದೆ.ಅಗ್ಗದ ಸ್ಮಾರ್ಟ್‌ಫೋನುಗಳ ಯಂತ್ರಾಂಶ ಬಹು ಸರಳವಾಗಿರಬೇಕು.ಅದರಲ್ಲಿ ಹೊಸ ನಮೂನೆಯ ಯಂತ್ರಾಂಶಗಳಿಗೆ ಅವಕಾಶ ಇಲ್ಲ.ಆಂಡ್ರಾಯಿಡ್ ಸ್ಮಾರ್ಟ್‌ಫೋನ್ ನಿರ್ವಹಣಾ ತಂತ್ರಾಂಶವಾದರೋ,ಆಗಾಗ ಹೊಸ ಆವೃತ್ತಿಯಾಗಿ ಬಿಡುಗಡೆಯಾಗುತ್ತದೆ.ಗೂಗಲ್ ಕಂಪೆನಿ ಅಭಿವೃದ್ಧಿ ಪಡಿಸುವ ಈ ಆಂಡ್ರಾಯಿಡ್ ಓಎಸ್,ಹೊಸ ಯಂತ್ರಾಂಶಗಳ ಬಳಕೆಗೆ ಸೂಕ್ತವಾಗುವ ಹಾಗೆ ಅಭಿವೃದ್ಧಿಯಾಗುತ್ತದೆ.ಇದಕ್ಕೆ ಸರಿಯಾಗಿ ಯಂತ್ರಾಂಶ ಲಭ್ಯವಿರುವ ಸ್ಮಾರ್ಟ್‌ಫೋನುಗಳಲ್ಲಿ,ಇವು ಅತ್ಯುತ್ತಮ ಫಲಿತಾಂಶ,ಕಾರ್ಯದಕ್ಷತೆ ಒದಗಿಸುತ್ತದಾದರೂ,ಹಳೆಯ ಅಥವಾ ಅಗ್ಗದ ಸ್ಮಾರ್ಟ್‌ಫೋನುಗಳಿಗೆ ಹೊಸ ಆಂಡ್ರಾಯಿಡ್ ಓಎಸ್,ತ್ರಾಸ ಕೊಡುತ್ತದೆ.ಕೆಲವೊಮ್ಮೆ ಯಂತ್ರಾಂಶವನ್ನು ಕೆಡಿಸುತ್ತದೆ.ಇವುಗಳನ್ನು ಸರಿಪಡಿಸಲು ಸೇವಾದಾತೃಗಳು ಬಹಳಷ್ಟು ಖರ್ಚು ಮಾಡಬೇಕಾಗಿ ಬರುತ್ತದೆ.ಎರಡು ಬಿಲಿಯನ್ ಡಾಲರುಗಳ ಖರ್ಚು ಇದಕ್ಕೆ ಬಂದಿರುತ್ತದೆ  ಎನ್ನುವುದು ಒಂದು ವರ್ಷದ ಅಂದಾಜು ಮೊತ್ತ.ಇತರ ಓಎಸ್‌ಗಳ ಮಟ್ಟಿಗೆ ಇಷ್ಟು ಸಮಸ್ಯೆಯಿಲ್ಲ-ಅವು ಹೊಸ ಅವೃತ್ತಿ ತರುವುದು ನಿಧಾನವಾಗಿರುವುದೇ ಇದಕ್ಕೆ ಕಾರಣ.


--------------------------------


ಇಂಜೆಕ್ಷನ್ ಟ್ರೈನರ್

ವೃದ್ಧರ ಕೈಯ ಬೆರಳು ಕೆಲವೊಮ್ಮೆ ಮಡಚಿದ ಹಾಗೆ ಆಗುವುದಿದೆ.ಹೀಗಾದಾಗ,ಅದಕ್ಕೆ ಕಿಣ್ವದ ಇಂಜೆಕ್ಷನ್ ಕೊಡಬೇಕಾಗುತ್ತದೆ.ಈ ಇಂಜೆಕ್ಷನ್‌ನೂ ಬಹು ಜಾಗ್ರತೆಯಿಂದ ,ಸರಿಯಾದ ಸ್ಥಳಕ್ಕೆ ಚುಚ್ಚಬೇಕಾಗುತ್ತದೆ.ಈ ಇಂಜೆಕ್ಷನ್ ನೀಡಲು ಅಭ್ಯಾಸ ಮಾಡಿಕೊಳ್ಳಲು ಅನುವು ಮಾಡುವ ಟ್ರೈನಿಂಗ್ ಹಸ್ತ ಇದೀಗ ಲಭ್ಯ.ಹೀಗೆ "ಹೆಣ" ಕೊಯ್ಯಲು ಅಭ್ಯಾಸ  ಮಾಡುವ "ಕೃತಕ ಹೆಣ"ವೂ ಈಗ ಲಭ್ಯವಿದೆ.ಈ ಬೆಳವಣಿಗೆಗಳು ವೈದ್ಯಕೀಯ ಪ್ರಪಂಚ ಮುಂದುವರಿಯುತ್ತಿರುವ ರೀತಿಯನ್ನು ತೋರಿಸುತ್ತದೆ.


---------------------------------------


ಐಫೋನ್4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆ


ಐಫೋನಿನ ಹೊಸ ಮಾದರಿಯಾದ 4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆಯಂತೆ.ಈ ದೂರು ಬಳಕೆದಾರರಿಂದ ಕೇಳಿ ಬರಹತ್ತಿದೆ.ಆದರೆ ಆಪಲ್ ಇದಕ್ಕೆ ನೇರವಾದ ಪ್ರತಿಕ್ರಿಯೆ ನೀಡದೆ ಮೌನವಹಿಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.ಸ್ಥಾನ ಪತ್ತೆ ಮಾಡುವ ಸೇವೆಯನ್ನು ಚಾಲೂ ಇಟ್ಟರೆ,ಐಫೋನು ಬ್ಯಾಟರಿ ಖರ್ಚಾಗುವುದು ಬಹು ಬೇಗ ಎಂದು ಕೆಲವರ ಅನುಭವ.ಅಲ್ಲದೆ ಹೊಸ ಐಫೋನ್‌ನಲ್ಲಿ ಹೊಸ ಸಂಸ್ಕಾರಕ ಇರುವ ಕಾರಣ,ಇದೂ ಬ್ಯಾಟರಿ ತೀವ್ರಗತಿಯಲ್ಲಿ ಖರ್ಚಾಗಲು ಕಾರಣವಾಗಿರಬಹುದು ಎಂದು ಅಂದಾಜು.ಆದರೆ ಇವೆಲ್ಲಾ ಊಹಾಪೋಹಗಳು ಮಾತ್ರಾ.ಅಧಿಕೃತವಾಗಿ,ಈ ಬಗ್ಗೆ ಮಾಹಿತಿಯಿಲ್ಲ.ಬ್ಯಾಟರಿಯು ಎಂಟು ಗಂಟೆ ಮಾತನಾಡಲು,ಆರು ಗಂಟೆ ಅಂತರ್ಜಾಲ ಜಾಲಾಡಲು ಮತ್ತು ಹತ್ತು ಗಂಟೆ ವಿಡಿಯೋ ನೋಡಲು ಸಾಕಾಗಬೇಕು.ಆದರೆ ಕೆಲವು ಬಳಕೆದಾರರಿಗೆ ಇದಕ್ಕಿಂತ ಬಹು ಕಡಿಮೆ ಬ್ಯಾಟರಿ ಬಾಳಿಕೆಯ ಅನುಭವಾಗಿದೆ.ಆಪಲ್‌ನ  ಹೊಸ ಓಎಸ್ ತಂತ್ರಾಂಶ ಬಳಕೆಯಾಗುತ್ತಿದೆ.ಇದೂ ಈ ವ್ಯತ್ಯಾಸಕ್ಕೆ ಕಾರನವೆನ್ನುವ ಗುಮಾನಿಯಿದೆ.


ಆಪಲ್ ಕಂಪೆನಿಯು ತನ್ನ ಐಸ್ಟೋರುಗಳಲ್ಲಿ ತಂತ್ರಾಂಶ ಅಭಿವೃದ್ಧಿ ಪಡಿಸುವವರು ಲಭ್ಯವಾಗಿಸುವ ತಂತ್ರಾಂಶಗಳು ಭದ್ರತಾ ಕೋರೆಯನ್ನು ಹೊಂದಿಲ್ಲ ಎಂದು ಖಾತರಿ ಪಡಿಸಿಕೊಳ್ಳಲೋಸುಗ ಸ್ಯಾಂಡ್‌ಬಾಕ್ಸ್ ಎನ್ನುವ ತಂತ್ರಜ್ಞಾನವನ್ನು ಬಳಸುವುದನ್ನು ಕಡ್ಡಾಯಗೊಳಿಸಿದ್ದಾರೆ.ಅದರ ಪ್ರಕಾರ ಪ್ರತಿ ತಂತ್ರಾಂಶವನ್ನೂ ಆಪಲ್ ಕಂಪೆನಿಯು ತನ್ನದೇ ಅಂಶವನ್ನು ಸೇರಿಸಿದ ಬಳಿಕವಷ್ಟೇ ಒಪ್ಪಿಗೆ ನೀಡುತ್ತದೆ.ಹೀಗಾಗಿ ತಂತ್ರಾಂಶಗಳನ್ನು ಐಫೋನು ಅಥವಾ ಐಪ್ಯಾಡುಗಳಲ್ಲಿ ಬಳಸಿದಾಗ,ಅವು ಕಂಪ್ಯೂಟರ್ ಜಾಲ,ಸ್ಮರಣಕೋಶ,ಕಡತಗಳನ್ನು ಬಳಸುವ ಮುನ್ನ ಬಳಕೆದಾರನ ಅನುಮತಿ ಪಡೆಯಬೇಕಾಗುತ್ತದೆ.ಅವುಗಳ ದುರ್ಬಳಕೆ ಅಗುವುದು,ಅವುಗಳಿಗೆ ಹಾನಿ ಆಗುವುದು ತಪ್ಪಿಸಲು ಹೀಗೆ ಮಾಡಲಾಗಿದೆ.ತಂತ್ರಾಂಶಕ್ಕೆ ವ್ಯವಸ್ಥೆಯ ಸರ್ವಸ್ವವನ್ನೂ ಬಿಟ್ಟುಕೊಡದೆ,ಬಳಕೆದಾರ ಅನುಮತಿಸಿದರೆ ಮಾತ್ರಾ ಅವನ್ನು ನೀಡುವ ಈ ತಂತ್ರಜ್ಞಾನವೇ ಸ್ಯಾಂಡ್‌ಬಾಕ್ಸ್ ತಂತ್ರಜ್ಞಾನ.


--------------------------------------------


ಜಿಮೇಲ್ ಹೊಸ ಲುಕ್-ಕ್ಷಣದಲ್ಲಿ ಗೂಗಲಿಸಿ

ಜಿಮೇಲ್ ಮಿಂಚಂಚೆಯಲ್ಲಿ ಗೂಗಲ್ ಹೊಸ ಲುಕ್ ನೀಡಿದೆ.ಬಳಕೆದಾರರಿಗೆ ಹೆಚ್ಚು ಆಯ್ಕೆಗಳನ್ನು ನೀಡುವ,ಚುರುಕುಗತಿಯಲ್ಲಿ ಶೋಧಿಸುವ ಹೊಸ ಸೇವೆ-ಜತೆಗೆ ಬಳಕೆದಾರರಿಗೆ ಜಿಮೇಲ್ ಹೇಗೆ ಕಾಣಿಸಬೇಕು,ಎಷ್ಟು ಮಿಂಚಂಚೆಗಳು ಒಂದು ಬಾರಿಗೆ ಕಾಣಿಸಿಕೊಳ್ಳಬೇಕು ಮುಂತಾದ ನಿಯಂತ್ರಣ ಸಾಧ್ಯವಾಗುವುದು ಆಗಿರುವ ಬದಲಾವಣೆ.



ಗೂಗಲ್ ತನ್ನ ಶೋಧ ಕ್ರಮವನ್ನು ಬದಲಿಸಿದೆ.ಹೀಗಾಗಿ,ಈಗ ನಿಮಗೆ ಅತಿ ಬೇಗ ಮಾತ್ರವಲ್ಲದೆ,ಅಂತರ್ಜಾಲದ ಕೊನೆಯ ಕ್ಷಣದ ಬದಲಾವಣೆಗಳನ್ನೂ ಗಮನಿಸಿ ಶೋಧಿಸಲು ಸಾಧ್ಯ.ಟ್ವಿಟರ್,ಫೇಸ್‌ಬುಕ್ ಬಳಕೆದಾರರು ಸುದ್ದಿ ಸಮಾಚಾರಗಳನ್ನು ಶೋಧಿಸಲು ಸಮರ್ಥರಾದ ನಂತರ ಗೂಗಲ್ ಶೋಧ ತುಸು ಮುಲೆಗುಂಪಾಗಿತ್ತು-ಜತೆಗೆ ಬಿಂಗ್ ಸ್ಪರ್ಧೆ ಬೇರೆ.ಹೀಗಾಗಿ ಗೂಗಲ್ ಹೆಚ್ಚು ಸಮರ್ಥವಾದ ಶೋಧ ಫಲಿತಾಂಶ ನೀಡುವ ವಿಧಾನವನ್ನು ಆವಿಷ್ಕರಿಸಬೇಕಾಯಿತು.


---------------


ಮಂಗಳ ಯಾತ್ರೆಗೆ ಮಂಗಳ

ಮಂಗಳ ಗ್ರಹಕ್ಕೆ ಹೋಗಿ ಮರಳುವ ಬಾಹ್ಯಾಕಾಶ ಯಾತ್ರೆಯ "ಅನುಭವ" ಪಡೆಯಲು ಸಂಶೋಧಕರಿಗೆ ಸಾಧ್ಯವಾಗಿದೆ.ಐನೂರ ಇಪ್ಪತ್ತು ದಿನಗಳ ಯಾತ್ರೆಯನ್ನವರು ಜತೆಗೆ ಕೈಗೊಂಡು ಬಾಹ್ಯಾಕಾಶ ವಾಹನದಿಂದ ಹೊರ ಬಂದಾಗ,ಉತ್ಸಾಹ ಭರಿತರಾಗಿದ್ದರೂ ,ದೀರ್ಘಾವಧಿಯ ಏಕಾಂತವಾಸ ಅವರನ್ನು ಕಂಗೆಡಿಸಿದ್ದು ಒಂದು ಮೂಲೆಯಿಂದ  ಇಣುಕುತ್ತಿತ್ತು.ರಶ್ಯನ್,ಪ್ರೆಂಚ್,ಇಟೆಲಿ-ಕೊಲಂಬಿಯಾ,ಚೀನೀ ಮೂಲದಗಗನಯಾತ್ರಿಗಳು ಮಂಗಳಗ್ರಹ ಯಾತ್ರೆಯ ಅನುಭವ ಪಡೆಯಲು ಕಳೆದ ಸುಮಾರು ಎರಡು ವರ್ಷಗಳಿಂದ ಈ ವಾಹನದಲ್ಲಿ ಕಳೆದರು.ಅವರಿಗೆ ಗುರುತ್ವಬಲ,ಭಾರರಹಿತ ಸ್ಥಿತಿ ಮುಂತಾದ ಬಾಹ್ಯಾಕಾಶ ಯಾನದ ನೈಜ ಅನುಭವ ನೀಡುವ ಪರಿಸರವನ್ನು ವಾಹನದೊಳಗೆ ನಿರ್ಮಿಸಲಾಗಿತ್ತು.ಮಂಗಳಗ್ರಹದಲ್ಲಿ ಇಳಿದು,ಧ್ವಜ ನೆಡುವ,ಅನುಭವವನ್ನೂ ಅವರು ಪಡೆದರು.ಬಾಹ್ಯಕಾಶಯಾನಿಗಳು ಧರಿಸುವ ಭಾರದ ಸೂಟನ್ನೂ ಅವರು ಧರಿಸಿದ್ದರು.ನಿಜ ಹೇಳಬೇಕೆಂದರೆ,ನೈಜ ಯಾನಕ್ಕಿಂತ ಈ ಯಾನ ಕಷ್ಟಕರ-ಯ್ಯಕೆಂದರೆ,ನೈಜ ಯಾನದಲ್ಲಿ ಅವರಿಗೆ ಅಪಾಯ,ಅನುಭವಗಳ ತ್ರಿಲ್ ಸಿಗುತ್ತದೆ.ಆದರಿಲ್ಲಿ ಎಲ್ಲವೂ ಕ್ರುತಕ ಎನ್ನುವುದು ಅವರಿಗೆ ತಿಳಿದಿರುತ್ತದೆ.ತಮ್ಮ ಕುಟುಂಬದವರ ಜತೆ ಬೆರೆಯಲು ಅವರುಗಳಿಗೆ ಅಂತರ್ಜಾಲ ಸಂಪರ್ಕ ನೀಡಲಾಗಿತ್ತಾದರೂ,ಕೆಲವು ಸಂದೇಶಗಳನ್ನು ಉದ್ದೇಶ ಪೂರ್ವಕವಾಗಿ ಕಳೆದು ಹೋಗುವಂತೆ ಮಾಡಿ,ಅವರಿಗೆ ನೈಜ ಸನ್ನಿವೇಶದಲ್ಲಿ ಆಗಬಹುದಾದ ಅನುಭವವನ್ನು ನೀಡಲಾಗಿತ್ತು.ಪ್ರತಿಯೋರ್ವನೂ ಒಂದು ಲಕ್ಷ ಡಾಲರು ಮೊತ್ತ ಪಡೆಯಲಿದ್ದಾನೆ.ಯಾತ್ರೆಯಲ್ಲಿ ಮಹಿಳೆಯರನ್ನು ಬಳಸಲು ಯೋಜಿಸಿತ್ತಾದರೂ,ಕೊನೆಗದು ಗಂಡಸರ ಗುಂಪೇ ಆಯಿತು.ಯಾತ್ರೆಯನ್ನು ರಶ್ಯನ್ ಸಮ್ಶೋಧಕರು ಹಮ್ಮಿಕೊಂಡಿದ್ದರು.


Udayavani
*ಅಶೋಕ್‌ಕುಮಾರ್ ಎ