ಅಗ್ನಿ ಚಾಮುಂಡಿ/ ಮುಕಾಂಬಿ ಗುಳಿಗ (ಭಾಗ 3)

ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ. ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ ಬೀಡಿಗೆ ಕರೆದೊಯ್ಯುತ್ತಾರೆ. ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ "ಕೇರಳ ಹೆಣ್ಣು ಮಕ್ಕಳು ಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದಾರೆ.ಎಂಟು ಕಲ್ಲಿನ ಗುಂಡಗಳಿವೆ ಎಂಟನೆಯ ಗುಂಡದಲ್ಲಿ ಮುಕಾಂಬಿ ಜೇವು ಇರಲಿ.ನೀವು ಹೋಗಿ ಬರುವ ತನಕ ಬಾರಿ ಜೋಕೆಯಿಂದ ನಾನು ನೋಡಿಕೊಳ್ಳುತ್ತೇನೆ "ಎಂದು ಹೇಳಿದಾಗ ಕಡಂಬಾರು ಮಯ್ಯರನ್ನು ನಂಬಿದ ವಾಸುಭಟ್ಟರು ಮುಕಾಂಬಿಗೆ ಸಮ್ಮತವಿಲ್ಲದಿದ್ದರೂ ಕಡಂಬಾರು ಮಯ್ಯರ ಬೀಡಿನಲ್ಲಿ ಬಿಟ್ಟು ಮುಂದೆ ಸಾಗುತ್ತಾರೆ.
ವಾಸು ಭಟ್ಟರು (ತಂತ್ರಿ ಪಡ್ವನರು) ಹೋದ ನಂತರ, ಮಯ್ಯರು ಮುಕಾಂಬಿಜೇವು ಇರುವ ಕೋಣೆಯ ಸಮೀಪ ಬಂದು ನಾನು ನಿನ್ನ ಗಂಡ, ಬಾಗಿಲು ತೆಗೆ ಎಂದು ಹೇಳುತ್ತಾರೆ. ಆಗ ಮುಕಾಂಬಿ ನೀನು ನನ್ನ ಗಂಡನ್ನಲ್ಲ ಎಂದು ಹೇಳುತ್ತಾಳೆ. ಆಗ ರಾತ್ರಿ ಇಬ್ಬನಿ ಬಿದ್ದು, ಹಗಲಿನ ಬಿಸಿಲು ಬಡಿದು ಸ್ವರ ಬದಲಿದೆ ಎಂದು ಮಯ್ಯರು ಸುಳ್ಳು ಹೇಳುತ್ತಾರೆ. ಆಗ ಮುಕಾಂಬಿ ಸುಳ್ಳು ಹೇಳಬೇಡಿ, ನನ್ನ ಗಂಡ ಬರುವಾಗ ಆರಿದ ನಂದಾದೀಪ ಉರಿದೀತು, ಮಲಗಿದ ಹಸುಳೆಗಳು ಎಚ್ಚೆತ್ತು ಕೂಗಿಯಾವು. ಕೊಟ್ಟಿಗೆ ಕರುಗಳು ಅರಚಿಯಾವು, ಬಂಗಾರದ ಬಾಚಣಿಗೆ, ಬೆಳ್ಳಿ ಸೀರಣಿಗೆ ತರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವ ಮಾತಿಗೂ ಬಾಗಿಲು ತೆಗೆಯುವುದಿಲ್ಲ, ಅಂದು ಸೊಸೆ ಎಂದು ಹೇಳಿದಿರಿ ಈಗ ಮೋಸ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಮಯ್ಯರು ಬಾಗಿಲನ್ನು ತುಳಿದು ಒಡೆದು ಒಳ ಬರುತ್ತಾರೆ. ಕಡಂಬಾರ ಮಯ್ಯರು ನಂಬಿಕೆಗೆ ದ್ರೋಹ ಮಾಡಿ ಬಲಾತ್ಕಾರದಿಂದ ಮುಕಾಂಬಿ ಜೇವಿನ ಸಂಗ ಮಾಡುತ್ತಾರೆ.ಅಸಹಾಯಕ ಹುಡುಗಿ ಮೂಕಾಂಬಿ ಜೇವು ಕಡಮ್ಬಾರ ಮಯ್ಯನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .ಅವಳನ್ನು ಬಲಾತ್ಕರಿಸಲು ಬಂದಾಗ ನನ್ನ ಮೈ ಮುಟ್ಟಿದರೆ ನಿಮ್ಮ ತಾಯಿಯನ್ನು ಮುಟ್ಟಿದ ದೋಷ ಇದೆ ಎಂದು ಹೇಳುತ್ತಾಳೆ. ಆಗ ಅವನು ತಾಯಿ ಮುಟ್ಟಿದ ದೋಷ ತಾಯ ಎದೆ ಹಾಲು ಕುಡಿದಾಗ ಹೋಗುತ್ತದೆ ಎನ್ನುತ್ತಾನೆ.ನನ್ನ ಮೈ ಮುಟ್ಟಿದರೆ ಕಾಶಿಯಲ್ಲಿ ಕಪಿಲೆ ಹಸುವನ್ನು ಕೊಂದ ದೋಷ ಬರುವುದು ಎಂದು ಹೇಳಿದಾಗ ಆತ ಕಪಿಲೆ ಕೊಂದ ದೋಷವನ್ನು ಕಾಶಿಗೆ ಹೋಗಿ ಕಳೆದು ಕೊಳ್ಳುತ್ತೇನೆ ಎಂದು ಹೇಳಿ ಅವಳನ್ನು ಬಲಾತ್ಕಾರದಿಂದ ಭೋಗಿಸುತ್ತಾನೆ. ಅವಳ ಪ್ರತಿರೋಧವನ್ನು ಲೆಕ್ಕಿಸದೆ ಅವಳ ದೇಹ ಸಂಗವನ್ನು ಮಾಡುತ್ತಾರೆ.
ಸ್ವಲ್ಪ ಸಮಯ ಕಳೆದಾಗ ಅವಳು ಗರ್ಭಿಣಿಯಾಗುತ್ತಾಳೆ. ಒಂದು ದಿನ ಅವಳು ಕಟ್ಟಡ ನೀರಿಗೆ ನೀರು ತರಲೆಂದು ಹೋಗುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರು ಅವಳನ್ನು ನೋಡಿ ಕಡಂಬಾರ ಮಯ್ಯನಿಂದಾಗಿ ಇವಳು ಹೊಟ್ಟೆ ಹೊತ್ತು ಕೊಂಡಿದ್ದಾಳೆ ಎಂದು ಅಪಹಾಸ್ಯ ಮಾಡಿ ನಗಾಡುತ್ತಾರೆ.ಲೋಕ ನಿಂದೆಯನ್ನು ತಾಳಲಾರದೆ ಮೂಕಾಂಬಿ ಜೇವು ಪ್ರಾಣ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
ಮುಕಾಂಬಿ ಜೇವು ತನ್ನ ಗಂಡನ ಮನೆಯ ನಂಬಿಕೆಯ ದೈವ ಗುಳಿಗನನ್ನು ನೆನೆದು ಕಡಂಬಾರ ನೀರಿನ ಕಟ್ಟಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಕಾಂಬಿಜೇವು ಅಣೆಕಟ್ಟಿಗೆ ಹೋಗಿ ಮೂರು ಮುಳುಗು ಹಾಕಿ, ಮುಕಾಂಬಿ ಗುಳಿಗ ಇದ್ದಲ್ಲಿ ಗಿಳಿ ಚಾಮೆ ಭತ್ತದ ತೆನೆಯನ್ನು ತೆಗೆದುಕೊಂ ಕಡಂಬಾರ ಡು ಹೋಗುವಂತೆ (ಗಿಣಿ ಚಾಮೆದ ಕುರಲುನು ಕೊಂಡೋಪಿ ಲೆಕ್ಕೋ ಎನ್ನನು ಕೊಂಡೋವೊಡು) ನನ್ನ ಪ್ರಾಣ ತೆಗೆಯಲಿ. ನನ್ನ ಗಂಡ ಬಂದ ಬಳಿಕ ಸತ್ಯವನ್ನು ಗಿಳಿ ನುಡಿದಂತೆ ನುಡಿಯಬೇಕು ಎಂದು ಹೇಳಿ ನೀರಿನಲ್ಲಿ ಮುಳುಗುತ್ತಾಳೆ. ಮೂಕಾಂಬಿ ನೀರಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ ಕಡಂಬಾ ಮಯ್ಯ ಏನು ಅರಿಯದವನಂತೆ ಮುಕಾಂಬಿ ಜೇವಿನ ತಂದೆ ಮುದ್ದುಲ್ಲ ಭಟ್ಟರಿಗೆ ಹಾಗೂ ತಾಯಿ ಅರ ಕ್ಕೆ ಮದಿಮಾಳರಲ್ಲಿಗೆ ಆಳುಗಳನ್ನು ಕಳುಹಿಸಿ, "ಪಡ್ವನರು ಮುಕಾಂಬಿಯನ್ನು ಕಡಂಬಾರ ಬೀಡಿನಲ್ಲಿ ನಿಲ್ಲಿಸಿದ್ದು, ಅವಳು ಹುಡುಗಿ ಹೋಗಿ ಹೆಂಗಸಾಗಿದ್ದಾಳೆ. ನೀವು ಕರೆದುಕೊಂಡು ಹೋಗಿ "ಎಂದು ಹೇಳಿ, ಕಳುಹಿಸುತ್ತಾರೆ. ತಂದೆ-ತಾಯಿ ಸಂತೋಷದಿಂದ ಅವಲಕ್ಕಿಯ ಮುಡಿ, ತೆಂಗಿನಕಾಯಿ ತೆಗೆದುಕೊಂಡು ಹೊರಡುತ್ತಾರೆ.
ಇತ್ತ ತಂತ್ರಿ ಪಡ್ವನರಿಗೆ/ವಾಸುಲ್ಲ ಭಟ್ಟರಿಗೆ ಕನಸಿನಲ್ಲಿ ಗಳಿಗೆಯೊಳಗೆ ಬರಬೇಕೆಂದು ಗುಳಿಗ ದೈವ ತಿಳಿಸುತ್ತದೆ. ಪಡ್ವನರು ಕಡಂಬಾರ ಬೀಡಿಗೆ ಬಂದು ನೋಡುವಾಗ ಮುಕಾಂಬಿಜೇವಿನ ಜೀವ ಹೋಗಿದೆ. ತಲೆ ತಲೆ ಬಡಿದುಕೊಂಡು ಅಳುತ್ತಾರೆ. ಪಡ್ವನರು ಕಾಷ್ಠ ಸಿದ್ಧಪಡಿಸಿ, ಮೂರು ಸುತ್ತು ಬಂದು ಮುಕಾಂಬಿಯ ದೇಹವನ್ನು ಚಿತೆಯಲ್ಲಿ ಇರಿಸುತ್ತಾರೆ. ಯಾರು ಮುಕಾಂಬಿಯೇ ಕೇಳಿದೆಯಾ? ಇದ್ದರೆ ನನಗೂ ನಿನಗೂ ಒಂದೇ ಬೀಡು, ಸತ್ತರೆ ನನಗೂ ನಿನಗೂ ಒಂದೇ ಕಾಷ್ಠ. ಮೋಸ ಮಾಡಿ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ, ತಗಟೆ ಮೊಳೆಯಲಿ ಎಂದು ಶಾಪ ಕೊಟ್ಟ ಪಡ್ವನರು ಚಿತೆಗೆ ಹಾರುತ್ತಾರೆ.
ಏರ್ಯ ಮುಕಾಂಬಿಯೆ ಕೇನಿದನ
ಇತ್ತ್ಂಡ ನಿಕ್ಕೆಂಕ್ ಒಂಜಿ ಬೂಡು
ಸೈತ್ಂಡ್ ನಿಕ್ಕೆಂಕ್ ಒಂಜಿ ಕಾಟ
ಮೋಸಗಾತರ ಮಲ್ತಿ ಮಯ್ಯೆರೆ ಬೂಡುಗು ಕೊಟ್ಟು ಗುದ್ದೋಲಿ ಬೂರಡು
ತಜಂಕ್ ಕೊಡಿಪಡ್ ಪಂಡ್ದ್
ಕೊರನ ಪಾಪ ಕೊರಿಯೆರ್ ಜಂತಿರಿ ಪಡ್ವನಾರ್
ಕಾಟೊಗು ಮೂಜಿ ಸುತ್ತು ಬತ್ತೆರ್
ಕಾಟೊಗು ದಿಡ್ಕಪ್ಪಲಾಗಿಯೆರ್
ಕಾಟೊಡು ಪಡ್ವನಾಯೆರ್ಲ ಮುಕಾಂಬಿಲ ಪೊತ್ತೊವೆರ್
ಕನ್ನಡ ಅನುವಾದ:
ಓ ಮುಕಾಂಬಿಯೇ ಕೇಳಿದೆಯ
ಇದ್ದರೆ ನನಗೂ ನಿನಗೂ ಒಂದೇ ಬೀಡು
ಸತ್ತರೆ ನನಗೂ ನಿನಗೂ ಒಂದೇ ಕಾಷ್ಟ
ವಿಶ್ವಾಸಘಾತ ಮಾಡಿದ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ
ತಗತೆ ಬೆಳೆಯಲಿ ಎಂದು
ಕೊಡಬಾರದ ಶಾಪ ಕೊಟ್ಟರು ತಂತ್ರಿ ಪಡ್ವನಾರ್
ಕಾಷ್ಠಕ್ಕೆ ಮೂರು ಸುತ್ತು ಬರುವರು
ಕಾಷ್ಠಕ್ಕೆ ದಡಕ್ಕನೆ ಹಾರುವರು
ಕಾಷ್ಠದಲ್ಲಿ ವಾಸುಭಟ್ಟರು ಮುಕಾಂಬಿಯು ಉರಿಯುವರು
ಹೆಂಡತಿಯ ಮೇಲಿನ ಪ್ರೀತಿಯಿಂದ ಗಂಡ ವಾಸುಭಟ್ಟರು ಹಾರಿ ಸಾಯುತ್ತಾರೆ. ದುಃಖ ತಡೆಯದ ಮುಕಾಂಬಿಯ ತಾಯಿ-ತಂದೆಯೂ ಚಿತೆಗೆ ಹಾರಿ ಸಾಯುತ್ತಾರೆ. ಮುಕಾಂಬಿ ತೀರಿಕೊಂಡ ಕ್ರಿಯೆ ಕಳೆದ ಮೂರನೆಯ ದಿನ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳುತ್ತದೆ. ತಗಟೆ ಬೆಳೆಯುತ್ತದೆ. ಸತ್ತ ಮುಕಾಂಬಿಜೇವು ದೈವವಾಗಿ ದ್ವೇಷ ತೀರಿಸಿದರೆ ಎಂಬ ಭಯದಿಂದ ಅವಳ ಆರಾಧನೆ ಆರಂಭವಾಗಿರಬೇಕು. ಕಡಂಬಾರ ಮಯ್ಯರ ಬೀಡನ್ನು ಮುಕಾಂಬಿಯ ಬಂಧುಗಳು ಹಾಳು ಮಾಡಿರಬಹುದು ಅಥವಾ ಕಾಲಾಂತರದಲ್ಲಿ ಹಾಳು ಬಿದ್ದಿರಬಹುದು. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.
ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಪಡೆಯುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ.ಇಲ್ಲಿ ಅಂತು ಮೂಕಾಂಬಿ ಕಡಂಬಾರ ಮಯ್ಯನಿಂದ ದೌರ್ಜನ್ಯಕ್ಕೆ ಒಳಗಾದದ್ದು ಮಾತ್ರವಲ್ಲ ತನ್ನ ಗಂಡನ ಮನೆಯ ಗುಳಿಗನನ್ನು ನಂಬಿ ಕಟ್ಟದ ನೀರಿಗೆ ಹಾರಿದ್ದಾಳೆ. ಆದ್ದರಿಂದ ಅವಳು ಗುಳಿಗ ದೈವದ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದದ್ದು ಅಸಹಜ ವಿಚಾರವೇನು ಅಲ್ಲ. ಅವಳು ಕಟ್ಟದ ನೀರಿಗೆ ಹಾರುವುದು ಪುರುಷ ದೌರ್ಜನ್ಯಕ್ಕೆ ತೋರಿದ ಪ್ರತಿಭಟನೆಯಾಗಿದೆ. ಅದರೊಂದಿಗೆ ಗುಳಿಗ ದೈವದ ನಂಬಿಕೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಅವಳು ಗುಳಿಗನ ಸೇರಿಗೆಯ ದೈವವಾಗಿ ಮೂಕಾಂಬಿ ಗುಳಿಗನಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .
ವೈದಿಕ ಪರಂಪರೆಯ ದೇವರುಗಳ ಪ್ರಭಾವದಿಂದಾಗಿ ಮೂಕಾಂಬಿ ಗುಳಿಗ ಅಗ್ನಿ ಚಾಮುಂಡಿ ಗುಳಿಗನಾಗಿ ಪರಿವರ್ತನೆ ಹೊಂದಿದೆ. ಮೂಕಾಂಬಿ ಎಂಬ ಹೆಸರನ್ನು ಅನುಲಕ್ಷಿಸಿ ಈ ದೈವದ ಆರಾಧನೆಯ ಸಂದರ್ಭದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಿಯ ಪುರಾಣದ ಕಥೆಯನ್ನು ಸೇರಿಸಿ ಹೇಳುತ್ತಾರೆ. ಆದರೆ ಮಾರಿ ಸೂಟೆಯ ಮೇಲೆ ನಡೆಯುವಾಗ ಮುಕಾಂಬಿ ಗುಳಿಗನ ಮೂಲ ಪಾಡ್ದನವನ್ನು ಹಾಡುತ್ತಾರೆ. ಚಾಮುಂಡಿಯೊಂದಿಗೆ ಸಮನ್ವಯಗೊಂಡಿರುವುದರಿಂದ ಮೂಕಾಂಬಿ ಗುಳಿಗನ ಸೇರಿಗೆಯ ದೈವವಾಗಿದ್ದರೂ ಕೂಡ ಕಾಲಾಂತರದಲ್ಲಿ ಗುಳಿಗನನ್ನು ಮೀರಿ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ. ವೈದಿಕ ಪ್ರಭಾವದಿಂದ ಮುಂದೊಂದು ದಿನ ಮುಕಾಂಬಿ ಗುಳಿಗ/ಅಗ್ನಿ ಚಾಮುಂಡಿ ದೈವದ ಮೂಲವಾಗಿರುವ ಮೂಕಾಂಬಿ ಜೇವಿನ ಕಥಾನಕ ಜನ ಮಾನಸದಿಂದ ದೂರವಾಗಿ ಬಿಡುವ ಸಾಧ್ಯತೆ ಇದೆ.ಮುಕಾಂಬಿ/ ಅಗ್ನಿ ಚಾಮುಂಡಿ ಗುಳಿಗ ಶುದ್ಧ ವೈದಿಕ ದೇವತೆಯಾಗಿ ಪರಿಗಣಿಸಲ್ಪಡುವ ದಿನಗಳು ಹೆಚ್ಚು ದೂರವಿಲ್ಲ.
ಒರಿ ಮಾಣಿ ಗುಳಿಗ ,ಕೋಚು ಗುಳಿಗ ಸುಬ್ಬಿಯಮ್ಮ ಗುಳಿಗ ಸೇರಿದಂತೆ ಇತರ ಗುಳಿಗ ದೈವಗಳ ಮಾಹಿತಿ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿದೆ.
(ಮುಗಿಯಿತು)
-ಡಾ.ಲಕ್ಷ್ಮೀ ಜಿ ಪ್ರಸಾದ್, ಕಾಸರಗೋಡು