ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು!!! (ಕವನ)

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು!!! (ಕವನ)

ಬರಹ

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !!!

ಈ ಪದಗಳು ಸ್ವಲ್ಪ ಸ್ವಲ್ಪನೇ ಮಾಯವಾಗಿ ಮರೆತಂತೆ ಆಗುತ್ತಿದೆ. ಪೂರ್ತಿ ಮರೆಯುವ ಮುನ್ನ ಎಲ್ಲಾದರೂ ಬರೆಯುವುದು ಒಳಿತು ಎಂದು ಈ ಪ್ರಯತ್ನ. ನಿಮ್ಮಗಳ ಅನಿಸಿಕೆ ತಪ್ಪದೇ ತಿಳಿಸಿ ಎಂದು ನಮ್ರತೆಯ ಕೋರಿಕೆ.

ಅಣ್ಣ ಕಲಿಸಿದ ಕನ್ನಡ ಪದಗಳು !
ಅಣಿಅಣಿಯಾದ ಕರುನಾಡ ಪದಗಳು !

ಎನಾದ್ರೂ ತೊಂದ್ರೆ ಆದ್ರೇ,
"ಎಡವಟ್-ಎಂಗರವಟ್" ಅಂದ್ರೆ,
ಎಡವಟ್ "ಶಾನೆ" ಆಗಿದೆ ಕಂಡ್ರೇ !

"ಒಬ್ಬಟ್" ತಿಂದ್ರಲ್ಲಾ,
"ಇಬ್ಬಟ್" ಆಡ್ಕೋಳ್ರಲ್ಲಾ,
"ದಿಟ" ಹೇಳ್ಬೇಕಲ್ರಾ !

"ಆನಾಡಿ" ಒಂದ್ ಮಾತು,
"ಅಚ್ಚೌಟ್ಲ ಕಾಯಿ" ಮರದಿಂದ ಬಿದ್ದೇಬಿತ್ತು,
"ಅನಾಹುತ" ಆಗೇ ಹೋಯ್ತು !

ಅವನದ್ದೆಲ್ಲಾ ಬರೀ "ಅಟಾಟೋಪು"
ಹಾಕಬಾರ್ದು ಅವನ ಮಾತಿಗೆ ಸ್ವಲ್ಪನೂ ಸೊಪ್ಪು,
ಅವನು ಒಂಥರಾ ಸ್ವಲ್ಪ "ಎಪ್ಪೆಪ್ರು" !

ಪರೀಕ್ಷೇಲಿ ಪಾಸಾಗಿರೋದು "ಅಡ್ಡೇಟಿನಮೇಲೆ-ಗುಡ್ಡೇಟು",
ಓದಲಿಲ್ಲ ಪೆದ್ ಮುಂಡೇದು ಕಷ್ಟಪಟ್ಟು,
ಇನ್ನೇನಿದ್ರೂ ಗತಿ, "ಅಂಗಡಿ-ಮುಂಗಟ್ಟು" !

"ವ್ಯಾಜ್ಯ" ಗಳಿಲ್ಲದ ರಾಜ್ಯ,
ಅದುವೇ ರಾಮ ರಾಜ್ಯ.
ಅವನಿಗೆ ತಿಳಿದಿರಲಿಲ್ಲ "ಕುಚೋದ್ಯ",
ಅವನಿಗೆ (ಸುಲಭವಾಗಿ) ಸಿಗಲಿಲ್ಲ ಅಯೋಧ್ಯ. !

ಶಾನುಭೋಗ್ರು ಆಗಿದ್ದಾರೆ "ಗುರ್-ಗುರ",
ಏಕೇಂದ್ರೇ ಕಳೆದ್-ಹೋಗಿದೆ ಅವರ "ದಫ್ತರ" !

ದಾಸಯ್ಯ ಕೇಳ್ತಾನೆ ಅಕ್ಕಿ ಹಾಕಿ ಒಸಿ,
ಇಗೋ ಇಲ್ಲಿದೆ ನನ್ನ "ಭವನಾಸಿ" !

(ಪದಾರ್ಥಕೋಶ : ಎಡವಟ್-ಎಂಗರವಟ್ = ಎಡವಟ್ ಗಿಂತ ಜಾಸ್ತಿ ತೊಂದರೆ ಆಗುವುದು. ಶಾನೆ = ಜಾಸ್ತಿ,
ಬಹಳ, ವಿಪರೀತ. ಒಬ್ಬಟ್ = ಹೋಳಿಗೆ. ಇಬ್ಬಟ್ = ಇನ್ಮೇಲೆ, ಇನ್ನು ಮೇಲೆ. ದಿಟ = ನಿಜ, ಸತ್ಯ. ಆನಾಡಿ = ತುಂಬಾ, ಜಾಸ್ತಿ,
ವಿಪರೀತ, ಸಿಕ್ಕಾಪಟ್ಟೆ. ಅಚ್ಚೌಟ್ಲ ಕಾಯಿ = ಪರಂಗಿ ಕಾಯಿ. ಅನಾಹುತ = ಆಕ್ಸಿಡೆಂಟ್, ಅಘಾತ. ಅಟಾಟೋಪು
= ಆಟ ಆಡುವನು, ( ಕೆಲಸ ಮಾಡದೆ ಆಟ ಆಡುವನು ). ಎಪ್ಪೆಪ್ರು = ಸ್ವಲ್ಪ ಬುದ್ಧಿ ಮಾಂದ್ಯ, ಕ್ರಾಕ್. ದಫ಼್ತರ
= ಶಾನುಭೋಗರ ಮುಖ್ಯವಾದ ಕಾಗದ ಪತ್ರಗಳ ಗಂಟು (ಬಂಡಲ್). ಅಡ್ಡೇಟಿನ ಮೇಲೆ ಗುಡ್ಡೇಟು = ಒಂದು ತರ ಅಪ್ಪಿ
ತಪ್ಪಿ ಆಗುವ ಕೆಲಸ. ಅಂಗಡಿ-ಮುಂಗಟ್ಟು = ಅಂಗಡಿ, ವ್ಯಾಪಾರ. ವ್ಯಾಜ್ಯ = ಕದನ, ಜಗಳ, ಕಿತ್ತಾಡುವುದು.
ಕುಚೋದ್ಯ = ಕೆಟ್ಟ ಕೆಲಸಗಳು. ಭವನಾಸಿ = ದಾಸಯ್ಯ ಬಿಕ್ಷಕ್ಕೆ ತರುವ ಲೋಹದ (ತಾಮ್ರ ಸಾಮಾನ್ಯವಾಗಿ)
ಪಾತ್ರೆ(ಕೆಳಗೆ ಅಗಲವಾಗಿ, ಮೇಲೆ ಸಣ್ಣಗಿರುವ ಪಾತ್ರೆ).