ಅತಿಯಾಸೆ ಗತಿಕೇಡು...

ಅತಿಯಾಸೆ ಗತಿಕೇಡು...

ಚೈನ್ ಲಿಂಕ್ ಅಥವಾ ಹಣ ದುಪ್ಪಟ್ಟು ಮಾಡುವ ಅಥವಾ ಅತಿಹೆಚ್ಚು ಬಡ್ಡಿ ಕೊಡುವ ಅಥವಾ ಕಡಿಮೆ ಬೆಲೆಗೆ ಅತಿಹೆಚ್ಚು ವಸ್ತುಗಳನ್ನು ನೀಡುವ ಅಥವಾ ನೀವು ಇತರರಿಂದ ಹಣ ಕೂಡಿಸಿ ಕೊಡುವ ಕೆಲಸಕ್ಕೆ ಅತಿಹೆಚ್ಚು ಕಮೀಷನ್ ಮತ್ತು ಕೊಡುಗೆಗಳನ್ನು ಕೊಡುವ...!

ಬ್ಲೇಡ್ ಕಂಪನಿಗಳೆಂದು ಹೆಸರು ಪಡೆದಿರುವ ಈ ಸಂಸ್ಥೆಗಳು ಈಗಲೂ ನಿರಂತರ ಯಶಸ್ಸು ಕ್ರಿಯಾಶೀಲತೆ, ಮತ್ತೆ ಮತ್ತೆ ಹೊಸಹುಟ್ಟು ಹೊಸ ರೂಪ ಪಡೆಯುತ್ತಿರುವ ಉದಾಹರಣೆಗಳೇ ಸಾಕು ನಾವು ಎಂತಹ ಗುಣಮಟ್ಟದ ಜ್ಞಾನ ಹೊಂದಿದ್ದೇವೆ, ನಮ್ಮ ದುರಾಸೆ ಮತ್ತು ಅಜ್ಞಾನ ಯಾವ ಮಟ್ಟದಲ್ಲಿ ಇದೆ, ನಮ್ಮ ಕಾನೂನು ಮತ್ತು ಪೋಲೀಸ್ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ, ಕೆಲವು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಗಳ ಜನರ ಮೆದುಳಿನಲ್ಲಿ ಬುದ್ದಿಯ ಗಾತ್ರ ಎಷ್ಟಿದೆ ಎಂದು ಅಳತೆ ಮಾಡಲು...

ಗೆಳೆಯ ಗೆಳತಿಯರೆ ಆರ್ಥಿಕ ವ್ಯವಹಾರಗಳಲ್ಲಿ ನನಗಿರುವ ಅಲ್ಪ ತಿಳಿವಳಿಕೆಯಲ್ಲಿ ಕೆಲವು ಅಭಿಪ್ರಾಯ ನಿಮ್ಮೊಂದಿಗೆ.......

ಇಡೀ ವಿಶ್ವದಲ್ಲೇ ಅದು ಯಾವುದೇ ವಾಣಿಜ್ಯ ವ್ಯವಹಾರವಾಗಿರಲಿ ಸಾಮಾನ್ಯವಾಗಿ ಮತ್ತು ಸಹಜವಾಗಿ ಲಾಭದ ಪ್ರಮಾಣ ಕನಿಷ್ಟ ವಾರ್ಷಿಕ ಶೇ 1% ನಿಂದ ಗರಿಷ್ಠ 2೦% ವರೆಗೂ ಇರುತ್ತದೆ. ಕೆಲವು ವಿಶೇಷ ವ್ಯವಹಾರಗಳಲ್ಲಿ ಇದು 25% ಸಹ ತಲುಪಬಹುದು.

ತೀರಾ ತೀರಾ ಅಪರೂಪದ ಪ್ರಕರಣಗಳಲ್ಲಿ ತಾತ್ಕಾಲಿಕವಾಗಿ ಇನ್ನೂ ಹೆಚ್ಚಿನ ಲಾಭ ಬರಬಹುದು ಆದರೆ ಅದರಲ್ಲಿ ವಾಸ್ತವಕ್ಕಿಂತ ಭ್ರಮೆಯೇ ಹೆಚ್ಚಾಗಿರುವ ಸಾಧ್ಯತೆ ಇದೆ ಮತ್ತು ಜೂಜಿನಂತ ರಿಸ್ಕ್ ಇರುತ್ತದೆ . ಅದರ ಮೇಲೆ ಒಂದು ಅನುಮಾನದ ದೃಷ್ಟಿ ನೆಟ್ಟು ಅದರ ಕಾನೂನು ಮತ್ತು ನೈತಿಕತೆಯ ಕೂಲಂಕಷ ಪರಿಶೀಲನೆ ಮಾಡಬೇಕು. ಅಲ್ಲದೆ ಶೇಕಡಾ 25% ಗಿಂತ ಹೆಚ್ಚಿನ ಲಾಭ ಶ್ರೀಮಂತ ವ್ಯವಹಾರಗಳಲ್ಲಿ ಮಾತ್ರ ಕಾಣಬಹುದಾಗಿದ್ದು ನಮ್ಮಂತ ಸಾಮಾನ್ಯರ ವ್ಯವಹರಿಸುವ ಕಂಪನಿಗಳಲ್ಲಿ ಲಾಭದ ಪ್ರಮಾಣ 2೦% ಒಳಗೇ ಇರುತ್ತದೆ.

ಕನಿಷ್ಠ ಇಷ್ಟು ಮಾತ್ರದ ಸಾಮಾನ್ಯ ಜ್ಞಾನ ನಮ್ಮ ಸುತ್ತ ಮುತ್ತಲಿನ ಸಮುದಾಯಗಳಲ್ಲಿ ಇದ್ದರೆ ಎಷ್ಟೋ ಕುಟುಂಬಗಳು ಅಜ್ಞಾನ ದುರಾಸೆಯಿಂದ ನಾಶವಾಗುವುದನ್ನು ತಪ್ಪಿಸಬಹುದು. ಯಾವುದೋ ಪೂಜೆಯಿಂದ ನಮ್ಮಲ್ಲಿರುವ ಚಿನ್ನ ಸಂಪತ್ತು ದ್ವಿಗುಣವಾಗುತ್ತದೆ, ಎಂತೆಂಥ ಶ್ರೀಮಂತರೂ/ ಬುದ್ದಿವಂತರೂ ಈ ಕಂಪನಿಯಲ್ಲಿ ಹಣ ಹೂಡಿದ್ದಾರೆ, ನಮ್ಮ ಪಕ್ಕದ ಮನೆಯ ಸರ್ಕಾರಿ ಅಧಿಕಾರಿಗಳು ಸಹ ಈ ಸಂಸ್ಥೆಗಳಲ್ಲಿ ಹಣ ತೊಡಗಿಸಿದ್ದಾರೆ ಎಂಬ ಕುರುಡು ನಂಬಿಕೆಯಿಂದ ನಾವುಗಳು ಕುರಿಗಳಂತೆ ಹಣ ಹಾಕಿದರೆ ಅದೃಷ್ಟದ ಕೆಲವು ಘಟನೆಗಳನ್ನು ಬಿಟ್ಟರೆ ಬಹುತೇಕ ಶೇಕಡಾ ೯೦% ನೀವು ದುರಾದೃಷ್ಟವಂತರೇ ಆಗುವುದು ಖಚಿತ. 

ಕಪಟ ಮತ್ತು ಆಕರ್ಷಕವಾದ ಮಾತುಗಳಿಗೆ ದುರಾಸೆಯ ಮನಸ್ಸನ್ನು ಒಪ್ಪಿಸಿದರೆ ಒಂದಲ್ಲಾ ಒಂದು ದಿನ ಅದು ನಿಮ್ಮನ್ನು  ಅಧಃಪತನಕ್ಕೆ ತಳ್ಳುವುದು ಶತಸಿದ್ದ. ಹೌದು, ಅನೇಕರಿಗೆ  ಸುಲಭವಾಗಿ ಹಣ ಮಾಡುವ ಆಸೆ ಇರುತ್ತದೆ, ಇರಲಿ ಸಂತೋಷ, ಆದರೆ ಕಾನೂನು ಮತ್ತು ನೈತಿಕತೆಯ ಹಿನ್ನೆಲೆಯಲ್ಲಿ ನಿಮ್ಮ ಸ್ವಂತ ಪ್ರಜ್ಞೆಯನ್ನು ಮಾತ್ರ ನಿಮ್ಮೆಲ್ಲಾ ವಿಲ್ ಪವರ್ ಉಪಯೋಗಿಸಿ ಮತ್ತೆ ಮತ್ತೆ ಯೋಚಿಸಿ ನಿರ್ಧಾರ ಕೈಗೊಳ್ಳಿ ಮತ್ತು ಅದರ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಿಗೆ ಮಾನಸಿಕವಾಗಿ ಸಿದ್ದವಾಗಿರಿ. ಗೆಲುವಾದರೆ ಓಕೆ ಸೋಲಾದರೆ ಮಾತ್ರ ಪಶ್ಚಾತ್ತಾಪ ಪಡದೆ ಬಂದದ್ದನ್ನು ಸ್ವೀಕರಿಸಿ ಮತ್ತು ಎದುರಿಸಿ. 

ಮತ್ತೆ ಎಚ್ಚರಿಸುತ್ತಿದ್ದೇನೆ, ಲಾಭದ ಪ್ರಮಾಣ ಅತಿಹೆಚ್ಚು ಇದ್ದರೆ ನಿಮ್ಮ ಅನುಮಾನ ಮತ್ತು ರಿಸ್ಕ್ ಹೆಚ್ಚಾಗಿರುತ್ತದೆ. ಅವರು ಮಾಡುವ ವ್ಯವಹಾರ ಮತ್ತು ಅದರ ಪರಿಣಾಮಗಳನ್ನು ನೀವೇ ಯೋಚಿಸಿ ನಿರ್ಧಾರ ಕೈಗೊಳ್ಳಿ.

  • ಜ್ಞಾನ ಭಿಕ್ಷಾ ಪಾದಯಾತ್ರೆಯ  204 ನೆಯ ದಿನ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡು ಗ್ರಾಮದಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ ಹೆಗ್ಗೋಡುವಿನ ನೀನಾಸಂ ಕೇಂದ್ರ