ಅನುಬಂಧ
ಕವನ
ಬಂಧ ಬಂಧದಲಿ ಅನುಬಂಧ
ಭಾವದ ಬೆಸುಗೆಯ ಸಂಬಂಧ
ಬೆಸೆದ ಕೊಂಡಿಯಲಿ ಈ ಬಂಧ
ಭವ ಸಾಗರದಲಿ ರಾಗಾನುಬಂಧ.
ಭೂರಮೆ ಮಡಿಲಿನ ಮಕ್ಕಳು ನಾವು
ಹರಡಿ ಬೆಳೆದ ಬಳ್ಳಿಯ ಹೂಗಳು ನಾವು
ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ
ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ
ನೆತ್ತರು ಹಂಚಿದ ಈ ಬಂಧನವು
ಅಣ್ಣ, ತಂಗಿ, ಅಕ್ಕ, ತಮ್ಮರ ಸಂಬಂಧವು
ಭಾತೃತ್ವದ ಬೆಸುಗೆಯ ಹೊಸ ರಾಗದಲಿ
ಬೆಳಕಿನ, ಬೆರಗಿನ ಬಾಳದು ನಮಗಿಲ್ಲಿ.
ಶ್ರಾವಣ ಮಾಸದ ಪೌರ್ಣಿಮೆಯಂದು
ರಕ್ಷಾ ಬಂಧನ ಭಾಗ್ಯವು ನಮಗೆಂದೂ
ಸೋದರ- ಸೋದರಿಯರು ಸಂಭ್ರಮದಲ್ಲಿ
ಸಂಸ್ಕೃತಿ,ಸಂಸ್ಕಾರದ ಸಾರವಿಹುದಿಲ್ಲಿ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ್
