ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ....!

ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ....!

ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಅಕ್ಟೋಬರ್ 16 " ವಿಶ್ವ ಆಹಾರ ದಿನ "... 1945 ರಲ್ಲಿ ವಿಶ್ವಸಂಸ್ಥೆಯ " Food and agriculture organization (FAO) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು ‌80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ‌ ಆಹಾರ ಪ್ರಮಾಣ ಶೇಕಡಾ ‌25%. ಈಗ ಬಹುಶಃ ‌ನಿಜವಾದ ಸಮಸ್ಯೆ ಅರ್ಥವಾಗಿರಬಹುದು. ಇದಕ್ಕೆ ವಿವಿಧ ಆಯಾಮಗಳು ಇವೆ.

ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಅಥವಾ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು ಅಥವಾ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು ಅಥವಾ ಭೂ ಪ್ರದೇಶಗಳ ಅಸಮಾನತೆ ಅಥವಾ ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು ಅಥವಾ ಆಹಾರದ ದುರುಪಯೋಗ. ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರಿಕರಿಗು ಸಾಧ್ಯವಿದೆ. ‌ಆ ನಿಟ್ಟಿನಲ್ಲಿ ಯೋಚಿಸಿದಾಗ..

ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ‌ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ.

ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ. ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.

ರೈತರು ಬಿತ್ತನೆ ಮಾಡಿ ಅದು ಬೆಳೆದು ಫಸಲಾಗಿ ಕಟಾವು ಮಾಡಿ ಸಂಗ್ರಹಿಸಿ ಸಾಗಾಣಿಕೆ ಮಾಡಿ ಮಾರಾಟ ಮಾಡಿ ಅದು ಮನೆ ಮನೆಗೆ ಸೇರಿ ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ ಶೇಕಡಾ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ.

ಭಾರತದಲ್ಲಿ ‌25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅವಶ್ಯಕವಾಗಿ ಒತ್ತಡ ಏರಿದಂತೆ ಆಗುತ್ತದೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ.

ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ - ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರದ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸೋಣ. ಇದು‌ ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ. ಈ ನಿಟ್ಟಿನಲ್ಲಿ ಸುಮಾರು ‌10 ವರ್ಷಗಳಿಂದ ಸತತವಾಗಿ ಪ್ರಯತ್ನಿಸುತ್ತಿರುವ ನನ್ನ ‌ಆತ್ಮೀಯ ಗೆಳೆಯರಾದ ಎಂ. ಯುವರಾಜ್ ರವರು ಈ‌ ಅಕ್ಟೋಬರ್ 16 ರ ದಿನವನ್ನು ಅತ್ಯಂತ ಗಂಭೀರವಾಗಿ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಉತ್ಸುಕರಾಗಿದ್ದಾರೆ. ಬೆಂಗಳೂರು ನಗರದ ಕೆಲವು ಹೋಟೆಲುಗಳು, ಮದುವೆ ಮಂಟಪಗಳು, ಪಾರ್ಟಿ ಹಾಲ್ ಗಳ ಬಳಿ ಅಕ್ಟೋಬರ್ 16 ರ ಹಿಂದಿನ ನಾಲ್ಕೈದು ದಿನ ಕರಪತ್ರ ಘೋಷಣೆ ಭಾಷಣ ಮತ್ತು ಪ್ರತಿಜ್ಞಾವಿಧಿ ಭೋದಿಸುವ ಮೂಲಕ ‌ಆಹಾರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ನಾನು‌ ಸಹ ಅಷ್ಟೂ‌ ದಿನ ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವೆ. 16 ಭಾನುವಾರದಂದು  ಒಂದು ಸಾರ್ವಜನಿಕ ಕಾರ್ಯಕ್ರಮ. 

ಆಸಕ್ತ ಎಲ್ಲರೂ ಸಹ ಬೆಳಗ್ಗೆ 10 ಗಂಟೆಯಿಂದ ಸಂಜೆ‌ 6 ರವರೆಗೆ ಪ್ರತಿದಿನ ಅಥವಾ ಯಾವುದಾದರೂ ಒಂದು ದಿನ ಎಷ್ಟು ಸಾಧ್ಯವೋ ಅಷ್ಟು ಭಾಗವಹಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ಹಣದ ಕೊಡು ಕೊಳ್ಳುವಿಕೆಯ ವ್ಯವಹಾರ ಇರುವುದಿಲ್ಲ. ನಿಮ್ಮ ‌ಆಗಮನವೇ ನಿಮ್ಮ ಸಹಕಾರ. ಅದುವೇ ನಮ್ಮ ಹೆಮ್ಮೆ.

ಹಾಗೆಯೇ ಇಡೀ ರಾಜ್ಯಾದ್ಯಂತ ಎಲ್ಲಾ ಮನಸ್ಸುಗಳ ಅಂತರಂಗದ ಚಳವಳಿಯ ಪ್ರಬುದ್ಧ ಮನಸ್ಸುಗಳು ಅಕ್ಟೋಬರ್ 16 ರಂದು ಒಂದು ದಿನ‌ ತಾವು ನೆಲೆಸಿರುವ ಊರುಗಳಲ್ಲಿ ಒಂದು ಕಾಲ್ನಡಿಗೆ ಜಾಥಾ ಅಥವಾ ಸಮಾರಂಭ ಅಥವಾ ವಿಚಾರ ಸಂಕಿರಣ ಹೀಗೆ ಯಾವುದು ಸಾಧ್ಯವೋ ಅದನ್ನು ಮಾಡಿದರೆ ಈ‌ ದೇಶದ ಅನ್ನದಾತರಿಗೆ ಮತ್ತು ಕಡು ಬಡವರಿಗೆ ಹಾಗು ಈ ಪ್ರಕೃತಿಗೆ ಒಂದು ಕೃತಜ್ಞತೆ ಸಲ್ಲಿಸಿದಂತೆ ಆಗುತ್ತದೆ. ಇದಕ್ಕೆ ಯಾವುದೇ ಒತ್ತಡವಿಲ್ಲ. ಸ್ವಯಂ ಇಚ್ಛಾಶಕ್ತಿ ಇದ್ದವರು ಪ್ರಯತ್ನಿಸಬಹುದು.

ಇದು ಯಾರ ವಿರುದ್ಧದ ಪ್ರತಿಭಟನೆಯೂ ಅಲ್ಲ‌. ನಮ್ಮ ಆತ್ಮಸಾಕ್ಷಿಯ ಕರೆ ಮಾತ್ರ. ಸರ್ಕಾರಗಳು, ಮಾಧ್ಯಮಗಳು ಈ ಬಗ್ಗೆ ಯೋಚಿಸುವುದಿಲ್ಲ. ಅವು ಹಣ ಮಾಡುವ ಸ್ಪರ್ಧೆಯಲ್ಲಿ ಮುಂದಿದ್ದಾರೆ. ಕನಿಷ್ಠ ಜವಾಬ್ದಾರಿಯುತ ನಾಗರಿಕರು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನಿಸೋಣ. ಇನ್ನೂ ಹೆಚ್ಚಿನ ಸಮಯ - ಸ್ಥಳ - ದಿನಾಂಕ - ಕಾರ್ಯಕ್ರಮದ ರೂಪುರೇಷೆ ಮುಂತಾದ ವಿಷಯಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಇದೇ ವೇದಿಕೆಯ ಮೂಲಕ ಹಂಚಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ. ಎಂ. ಯುವರಾಜ್ (+91 80508 02019)

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ