ಅಪ್ಪನ ನೆನಪಿನಲ್ಲಿ…
ನೆನಪಾಗಿ ಉಳಿದವ
ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ
ಆಗಸದಷ್ಟು ವಿಶಾಲವಾದ ರಣಧೀರ
ಅಳತೆ ಮಾಡಲಾಗದ ಹಮ್ಮೀರ
ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ//
ಬಡತನದ ಬೇಗೆಯಲಿ ಬೆಂದು ನೊಂದವ
ಒಂಬತ್ತು ಕುಡಿಗಳ ಸಾಕಿದವ
ಸಂಸ್ಕೃತಿ ಸಂಸ್ಕಾರಗಳ ಅರೆದು ಕುಡಿಸಿದವ
ಸತ್ತರೂ ಸಟೆಯಾಡದಿರಿ ಎಂದವ//
ಹೆಣ್ಣು ಮಕ್ಕಳ ಕಲಿಕೆಗೆ ಒತ್ತು ನೀಡಿದವ
ಇದ್ದುದರಲ್ಲೇ ಸಂತೃಪ್ತಿ ಜೀವನ ಸಾಗಿಸಿದವ
ಅಮ್ಮನ ಹೃದಯ ಸಾಮ್ರಾಜ್ಯದಿ ನೆಲೆ ನಿಂತವ
ಬದುಕನ್ನು ಸವಾಲಾಗಿ ಸ್ವೀಕರಿಸಿ ಗೆದ್ದವ//
ಹೆಗಲ ಮೇಲೆ ಕುಳ್ಳಿರಿಸಿ ಮೆರೆದವ
ಬೆನ್ನಿಗಾನಿಸಿ ಉಪ್ಪು ಮೂಟೆ ಹೇಳಿದವ
ಪೆಟ್ಟು ಬೈಗುಳಗಳ ಜೊತೆ ಪ್ರೀತಿ ಶರಧಿಯ ಸುರಿಸಿದವ
ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂದವ//
ವಿಶಾಲವಾದ ಆಲದ ಮರದಂತೆ ನೆರಳಾದವ
ಹೆತ್ತ ಹೊತ್ತ ತಾಯಿಯರ ಋಣವ ತೀರಿಸಲಾಗದು ಎಂದವ
ದುಡಿಮೆಯ ಸಾರವ ಕಲಿಸಿ ಮರೆಯಾದವ
ಅಕಾಲದಿ ಅಗಲಿ ಮನದಲಿ ನೆನಪಾಗಿ ಉಳಿದವ//
***
ಅಪ್ಪ--ಟಂಕಾ
ಅಪ್ಪನೆಂದರೆ
ಹೃದಯ ವೈಶಾಲ್ಯತೆ
ಹೆಗಲಭಾರ
ತೋಳ ಬಂಧಿಯಾಸರೆ
ಮೌನದ ಪ್ರತಿರೂಪ
***
ಗಝಲ್
*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ*
*ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ*
*ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ*
*ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ*
*ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು*
*ಬಡತನದ ಕುಲುಮೆಯಲಿ ಬೆಂದವನು ಅಪ್ಪ*
*ಸತ್ಯ ನ್ಯಾಯ ಧರ್ಮವು ಅಡಿಪಾಯಗಳೆಂದನು*
*ಪಥ್ಯವಾಗದಿರೆ ದೂರವಿದ್ದು ಸಾಧಿಸೆಂದವನು ಅಪ್ಪ*
*ಹುಟ್ಟುಆಕಸ್ಮಿಕ ಸಾವು ನಿಶ್ಚಿತ ರತ್ನ*
*ಹೊಟ್ಟೆ ಹಸಿವನ್ನು ನೀಗಿಸಿದವನು ಅಪ್ಪ*
***
ಮುಕ್ತಕ
ಅಪ್ಪನೆಂದರೆ ಜೀವ ನೀಡುತಲಿ ಸಲಹಿದನು
ತಪ್ಪನ್ನು ಮಾಡಿದರೆ ಬುದ್ಧಿ ಪೇಳಿದನು/
ತುಪ್ಪನ್ನ ತಿನ್ನಿಸುತ ದಿನದಿನವು ಬೆಳೆಸಿದನು
ಅಪ್ಪುತಲಿ ಗೌರವಿಸು-ಕೃಷ್ಣಕಾಂತೆ//
***
ಚುಟುಕು- ಅಪ್ಪ
ಬಾಳ ದಾರಿ ಪಯಣಕೆ ನೀನಾದೆ ಮರದ ನೆರಳು
ಕೂಳನಿತ್ತು ಸಲಹಲು ಕಷ್ಟಗಳ ಸಹಿಸಿದೆ ಹಗಲು ಇರುಳು
ಹೇಳಲಾರೆ ಹೊಗಳಲಾರೆ ಅಪ್ಪ ನಿನ್ನನು ಬಾಯಿ ಮಾತಿನೊಳು
ಸೋಲದಿರು ಭಗವಂತನ ಹಸ್ತವಿರಲು ಬಾಳ ಹಾದಿಯೊಳು
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
