ಅಭಿಷೇಕ ಪ್ರಿಯ
ಕವನ
ಜಯ ಜಯ ಶಂಕರ ಸಾಂಬ ಸದಾಶಿವ
ಭಕ್ತರ ಪೊರೆಯುವ ಮಹಾದೇವ
ಕರವನು ಮುಗಿಯುತ ನಮಿಸುವೆ ಶಂಕರ
ನೀನಿಹ ಭೂಮಿಯೆ ಕೈಲಾಸ/
ಭಕ್ತಿಗೆ ಒಲಿಯುವ ಕರುಣಾ ಸಾಗರ
ಭಕ್ತರ ಮನದಲಿ ಸಾಕಾರ
ಮಣಿದಿಹ ಶರಣರ ಪೊರೆಯುವ ಈಶ್ವರ
ಭಜಿಸಿದೆ ಭಕ್ತರ ಪರಿವಾರ/
ಹಸಿರಿನ ಬನದಲಿ ಹಕ್ಕಿಗಳಿಂಚರ
ಶಂಕರ ನಾಮದ ಝೇಂಕಾರ
ಬಿಲ್ವವನರ್ಪಿಸಿ ಛಮೆಯನು ಪಠಿಸುತ
ಮಾಡುವೆ ಪೂಜೆ ಪುನಸ್ಕಾರ/
ಓಂಕಾರ ರೂಪಿ ತ್ರಿಶೂಲ ಪಾಣಿ
ಅಭಿಷೇಕ ಪ್ರಿಯನೆ ಗಂಗಾಧರ
ಚರಣಕೆ ಎರಗುತ ಕಷ್ಟವನರುಹಲು
ಮಾಡುವೆ ಕ್ಷಣದಲಿ ಪರಿಹಾರ/
ಜಗದಲಿ ದುರ್ಜನ ಮೆರೆಯುತಲಿರುವರು
ಕಾಟವು ಹೆಚ್ಚಿದೆ ಮಿತಿ ಮೀರಿ
ಪಾರ್ವತಿ ರಮಣನೆ ನಂದಿ ವಾಹನನೆ
ಶಿಷ್ಟರ ಕಾಯೋ ಮದನಾರಿ/
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್