ಅಮೇರಿಕಕ್ಕೆ ಭಾರತದ ಸಖ್ಯ ಈಗ ಅನಿವಾರ್ಯ

ಅಮೇರಿಕಕ್ಕೆ ಭಾರತದ ಸಖ್ಯ ಈಗ ಅನಿವಾರ್ಯ

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕ ಪ್ರವಾಸ ಹಲವು ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ನಿರ್ಮಾಣವಾಗುತ್ತಿರುವ ದ್ವೇಷಮಯ ಸನ್ನಿವೇಶದಲ್ಲಿ ಮೋದಿ ಹಾಗೂ ಬೈಡನ್ ಭಾಯೀ ಭಾಯಿಗಳಾಗಿ ಕೈಕುಲುಕಿರುವುದು ಸಹಜವಾಗಿ ಜಾಗತಿಕ ಗಮನ ಸೆಳೆದಿದೆ. ಇದಕ್ಕೆ ಕಾರಣಗಳು ಹಲವು. ಒಂದೆಡೆ ದಿನದಿಂದ ದಿನಕ್ಕೆ ಭಾರತದ ವಿಡೆಶಾಂಗ ನೀತಿ ಗಮನ ಸೆಳೆಯುತ್ತಿದ್ದು, ಭಾರತ ಎಲ್ಲ ದೃಷ್ಟಿಯಿಂದಲೂ ವಿಶ್ವದ ಬಲಿಷ್ಟ ರಾಷ್ಟ್ರಗಳ ಸಾಲಿನಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಅಮೇರಿಕಕ್ಕೆ ಸಡ್ಡು ಹೊಡೆದು ಬೆಳೆಯುತ್ತಿರುವ ಚೀನಾ ಜಗತ್ತಿನ ಸೂಪರ್ ಪವರ್ ಆಗಲು ಪೈಪೋಟಿಗೆ ಬಿದ್ದಿದೆ. ಇದೇ ಸಂದರ್ಭದಲ್ಲಿ ಚೀನಾ ಹಾಗೂ ಪಾಕಿಸ್ತಾನಗಳ ಜತೆಗಿನ ಸಂಘರ್ಷವನ್ನು ಎದುರಿಸಲು ಶಸ್ತ್ರಾಸ್ತ್ರ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತಕ್ಕೂ ಅಮೇರಿಕದಂಥ ಬಲಿಷ್ಟ ರಾಷ್ಟ್ರದ ನೆರವು ಅಗತ್ಯ. ಇಂಥ ಸನ್ನಿವೇಶದಲ್ಲಿ ಪ್ರಸ್ತುತ ಅಮೇರಿಕ ಪ್ರವಾಸದಲ್ಲಿರುವ ಮೋದಿಯವರ ಭೇಟಿ, ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ಸಂಘರ್ಷಕ್ಕೆ ಹಾಡುತ್ತಿರುವ ನಾಂದಿ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಭಾರತ ಮೊದಲಿನಿಂದಲೂ ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಯುದ್ಧದ ವಿಚಾರದಲ್ಲಿ ತಟಸ್ಥ ನೀತಿಯನ್ನೇ ಪಾಲಿಸಿಕೊಂಡುಡು ಬರುತ್ತಿದೆ. ಹಾಗಿದ್ದಾಗ್ಯೂ ಹೊರಗಿನ ದಾಳಿ ಎದುರಾದಲ್ಲಿ, ದಿಟ್ಟ ಉತ್ತರ ನೀಡುವಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯುವ ಅಥವಾ ಹಿಂದಿನಂತೆ ಬೇರೆಯವರ ಮರ್ಜಿ ಕಾಯಬೇಕಾದ ಸ್ಥಿತಿಯಲ್ಲಿ ಈಗ ಭಾರತ ಉಳಿದಿಲ್ಲ. ಇನ್ನೊಂದೆಡೆ ಉಕ್ರೇನ್ ಜತೆಗಿನ ಯುದ್ಧದಿಂದ ಕಂಗಾಲಾಗಿರುವ ರಷ್ಯಾ, ಭಾರತಕ್ಕೆ ಅಗತ್ಯ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಉಳಿದಿಲ್ಲ. ಹೀಗಾಗಿ ನೆರೆಯ ಬೆದರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಅಮೇರಿಕದ ನೆರವು ಬೇಕೇಬೇಕಿದೆ. ಸಮರವಲ್ಲದೆ ವ್ಯಾಪಾರದ ದೃಷ್ಟಿಯಿಂದಲೂ ಭಾರತವು ಅಮೇರಿಕಕ್ಕೆ ಮಹತ್ವದ ಗೆಳೆಯನಾಗಿ ನಿಲ್ಲುವುದು ಅನಿವಾರ್ಯ. ಚೀನಾ ಈಗಾಗಲೇ ದಕ್ಷಿಣ ಸಮುದ್ರದ ಜಪಾನ್, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ ಮತ್ತು ಮ್ಯಾನ್ಮಾರ್ ಜೊತೆ ಸಂಘರ್ಷ ಸಾರಿದ್ದು, ಸಹಜವಾಗಿ ಅದರ ಆಕ್ರಮಣಕಾರಿ ನಡೆ ಭಾರತ ಮಾತ್ರವಲ್ಲ, ಅಮೇರಿಕ, ಆಸ್ಟ್ರೇಲಿಯಾಕ್ಕೂ ಬೆದರಿಕೆಯೊಡ್ಡುತ್ತಿದೆ. ಇದರ ಫಲವೇ ಭಾರತವನ್ನೂ ಒಳಗೊಂಡ ಕ್ವಾಡ್ ಒಪ್ಪಂದ ಹೇಗೆ ನೋಡಿದರೂ ಕಾಲ-ಸನ್ನಿವೇಶ ಬದಲಾಗಿದೆ. ಶೀತಲ ಸಮರ ಕಾಲದಲ್ಲಿ ಪಾಕ್ ಕಡೆ ನಿಂತಿದ್ದ ಅಮೇರಿಕ ಈಗ ಅನಿವಾರ್ಯವಾಗಿ ಭಾರತವನ್ನು ಹೊಗಳಲೇ ಬೇಕು. ಮೋದಿ ನಾಯಕತ್ವದಲ್ಲಿ ಅಮೇರಿಕವೊಂದೇ ಅಲ್ಲಾ ಅದರ ನಾಯಕತ್ವದಲ್ಲಿನ ಬಲಾಢ್ಯ ದೇಶಗಳೆಲ್ಲರಿಗೆ ಮೋದಿ ನೇತೃತ್ವದ ಭಾರತದ ಸಖ್ಯ ಅನಿವಾರ್ಯ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೩-೦೬-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ