ಅಮ್ಮನ ನೆನಪಿನಲ್ಲೊಂದು ಚಿಂತನೆ
ಅನುದಿನವೂ "ಮಾತೃದೇವೋ ಭವ" ಎಂದು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದು.
ಅಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ.
ಮಾತೆಯರೆಲ್ಲರಿಗೂ "ಮಾತೆಯರ ದಿನ" ದ ಶುಭಾಶಯಗಳು.
ಅಮ್ಮನ ನೆನಪಿನಲ್ಲೊಂದು ಚಿಂತನೆ
--------------------------------------
ಬೆಂಗಳೂರಿನ ವಾಹನದ ದಟ್ಟಡವಿಯಲ್ಲಿ ದಾರಿ ಹುಡುಕಿ ಕಚೇರಿಯಿಂದ ಬಂದಾಗ ಆಗಲೇ ಎಂಟರ ಮೇಲಾಗಿತ್ತು.
ಎಂದಿನಂತೆ, ಅಮ್ಮ "ಕಾಲ್ ತೊಳ್ಕೊಂಡು ಬಾ, ಊಟ ಮಾಡುವಿಯಂತೆ" ಎಂದರು.
ಏನನಿಸಿತೋ ನನಗೆ. "ಅಮ್ಮ ಇವತ್ತು ಪಾನಿ ಪೂರಿ ತಿಂದ್ಕೊಂಡ್ ಬರ್ತೀನಿ" ಅಂದೆ. ಮರು ಮಾತಿಲ್ಲದೆ "ಸರಿನಪ್ಪ, ಮನೆನಲ್ಲಿ ಅಡುಗೆ ಇದೆ, ಹೇಳ್ದೆ ಅಷ್ಟೇ" ಎಂದು ಸುಮ್ಮನಾದರು.
ಆಚೆ ಹೋಗಿ ಸ್ನೇಹಿತರ ಜೊತೆ ಚೆನ್ನಾಗಿ ಚಾಟ್ಸ್ ತಿಂದು ವಾಪಸ್ ಬಂದಾಗ ರಾತ್ರಿ ಹತ್ತಾಗಿತ್ತು. ಅಮ್ಮ ಹಾಸಿಕೊಂಡು ಮಲಗಿದ್ದರು. ಎಚ್ಚರ ಮಾಡಿಕೊಂಡು, "ಇವತ್ತು ದೇವಸ್ತಾನದಲ್ಲಿ ಪೊಂಗಲ್ ಕೊಟ್ಟಿದ್ದಾರೆ, ನಿಂಗೆ ಇಷ್ಟ ಅಲ್ವ, ಊಟದ ಜೊತೆ ಹಾಕ್ಕೋ" ಎಂದರು. ಸರಿ ಎಂದು ಹೇಳಿ ಕಾಲು ತೊಳೆಯದೇ ರೂಮು ಸೇರಿ ಕಂಪ್ಯೂಟರ್ ನಲ್ಲಿ ಏನೋ ಕುಟ್ಟುತ್ತ ಕೂತೆ.
ಹನ್ನೊಂದೋ ಅಥವಾ ಹನ್ನೆರಡೋ ಆಯಿತು ನಿದ್ದೆ ಎಳೆಯತೊಡಗಿದಾಗ ಆರಿಸಿ ಮಲಗಿದೆ.
ಬೆಳಿಗ್ಗೆ ಎದ್ದಾಗ ಅಮ್ಮ "ನಿಂಗೆ ಇಟ್ಟಿದ್ದ ಪೊಂಗಲ್ ಫ್ರಿಡ್ಜ್ ನಲ್ಲಿ ಇಟ್ಟಿದ್ದೀನಿ", ಸ್ನಾನ ಮಾಡಿ ತೊಗೊ ಅಂದರು.
ಹತ್ತು ಹನ್ನೆರಡು ವರುಷಗಳ ನಂತರದ ಸ್ಥಿತಿ.
ಕೆಲಸ ನಿಮಿತ್ತ ಬೇರೆ ಊರಿನಲ್ಲಿ ನೆಲಸಿ, ಒಂದು ಸಂಸಾರದ ಸಾರಥ್ಯ ವಹಿಸಿದೆ.
ಈ ನಡುವೆ ಅಮ್ಮನ ನೆನಪಿಗಿಂತ ಆ ಸ್ಥಾನದ ಮಹತ್ವ ಹೆಚ್ಚು ಹೆಚ್ಚಾಗಿ ನೆನಪಾಗುತ್ತಿದೆ.
ಅಡುಗೆ ಮಾಡುವ ಸರದಿ ನನದು. ಮನೆಯಲ್ಲಿ ಅಡುಗೆ ಮಾಡಿಟ್ಟ ದಿನ ಅಡುಗೆ ಖಾಲಿ ಆಗಲಿಲ್ಲವೆಂದರೆ ಮನಸಿಗೆ ಆಗುವ ನೋವು ಅರಿವಾಗುತ್ತಿದೆ.
ಒಂದೇ ವ್ಯತ್ಯಾಸ, ಅಮ್ಮ ಎಲ್ಲವನು ಸಹಿಸಿಕೊಂಡು ಪ್ರೀತಿ ಹರಡುತ್ತಿದ್ದರು. ನಾನು ಮನಸು ಕಸಿವಿಸಿ ಮಾಡಿಕೊಂಡು ಕೊರಗುತ್ತಿದ್ದೇನೆ.
ಸುಮ್ಮನೆ ಹೇಳಿರುವರೆ "ಕ್ಷಮಯ ಧರಿತ್ರಿ ... " ಎಂದು.
ಭೂಮಿಯಷ್ಟು ವಿಶಾಲವಾದ ಕ್ಷಮಾ ಗುಣ ಸಂಪನ್ನ ಮಾತೆಗೆ ನನ್ನ ಹೃದಯಾಂತರಾಳದ ನಮನ ...
ಅಮ್ಮ ನ ಮೇಲೊಂದು ಕಾವ್ಯ
------------------------------
ಜೀವದಲಿ ಜೀವ ಹೊತ್ತು
ನೋವಿನಳುವಿನಲಿ ನಗುವ ಹೊದ್ದು
ಭುವಿಗೆ ನನ್ನವತರಿಸಿದವಳು ಅಮ್ಮ
ಕಾಲಗರ್ಭದಿ ನನ್ನ ಚಿಗುರೊಡೆಸಿ
ನನ್ನ ಧ್ವನಿಗೆ ಅವಳ ಹೃದಯ ಮಿಡಿಸಿ
ನನ್ನಸ್ತಿತ್ವವ ಸಾರಿದವಳು ಅಮ್ಮ
ದೀಪದಂತೆ ತನ್ನನೆ ಉರಿಸಿ
ಹಗಲಿರುಳು ನನ್ನ ಸಾಕಿ ಬೆಳಸಿ
ಸುಸ್ತಾಗಿದ್ದರೂ ನನ್ನ ಸಹಿಸಿ
ಮಡಿಲ ನೀಡಿದವಳು ಅಮ್ಮ
ಕಾಲಚಕ್ರವು ಉರುಳಿದಂತೆ
ಮುಗಿದಾಗ ಜೀವನದ ನಾಟಕದ ಕಂತೆ
ಕಾಲದಲ್ಲಿ ಲೀನವಾದಾಗಲೂ
ಪ್ರಕೃತಿ ಮಾತೆಯಾಗಿ ಬರುವಳು ಅಮ್ಮ