ಅವರು ಆಕೆಯ ಪಾದಗಳನ್ನು ಮುಟ್ಟಿದರು... ಮತ್ತು ಪ್ರಪಂಚವನ್ನೂ...

ಅವರು ಆಕೆಯ ಪಾದಗಳನ್ನು ಮುಟ್ಟಿದರು... ಮತ್ತು ಪ್ರಪಂಚವನ್ನೂ...

ಅದೊಂದು ಆಹ್ಲಾದಕರ ಸಂಜೆ. ದೆಹಲಿಯ ವೈಭವೋಪೇತ ಕನ್ವೆನ್ಷನ್ ಸೆಂಟರ್. ಕ್ಯಾಮರಾಗಳ ಜಗಮಗಿಸುವ ಬೆಳಕು ಎಲ್ಲೆಡೆ ಬೀಳುತ್ತಿತ್ತು. ಭದ್ರತಾ ಅಧಿಕಾರಿಗಳು ತಮ್ಮ ವಾಕಿ-ಟಾಕಿಯಲ್ಲಿ ಮಾತನಾಡುತ್ತಿದ್ದರು. ಸೂಟು ಧರಿಸಿದ ಜನರ ಸಂಭ್ರಮವೋ ಸಂಭ್ರಮ. ಮಂತ್ರಿಗಳು, ಉದ್ಯಮಪತಿಗಳು, ಗಣ್ಯರು ಹಾಗೂ ವಿದೇಶಿ ಅತಿಥಿಗಳಿಂದ ಆ ಸಭಾಂಗಣ ತುಂಬಿಹೋಗಿತ್ತು. ಮೊದಲನೇ ಸಾಲಿನಲ್ಲಿ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಕುಳಿತಿದ್ದರು. ಮೂರನೇ ಸಾಲಿನ ಒಂದು ಮೂಲೆಯಲ್ಲಿ ಸಾಧಾರಣ ನೂಲಿನ ಸೀರೆಯುಟ್ಟ ಸ್ವಲ್ಪ ವಯಸ್ಸಾದ ಮಹಿಳೆಯೊಬ್ಬರು ಕುಳಿತಿದ್ದರು. ಅವರು ಕ್ಯಾಮರಾಗಳ ಗಮನ ಸೆಳೆಯುವಷ್ಟು ಆಕರ್ಷಕವಾಗಿರಲಿಲ್ಲ. ಅವರೇ ಲಕ್ಷ್ಮಿ ಪಿಚಾಯಿ. 

ಅವರು ಯಾರು ಎಂಬುದು ಗೊತ್ತಿದ್ದವರು ಕೆಲವರು ಮಾತ್ರ. ಸ್ಪಾಟ್ ಲೈಟ್ ಬೀಳುತ್ತಿದ್ದುದ್ದು ಆಕೆಯ ಮಗ, ವಿಶ್ವದ ದೈತ್ಯ ಸಾಫ್ಟ್ವೇರ್ ಸಂಸ್ಥೆ ಗೂಗಲ್‌ನ  ಸಿಇಓ  ಆದ, ಭಾರತದ ಹೆಮ್ಮೆಯ - ಸುಂದರ ಪಿಚಾಯಿ ಮೇಲೆ. ಸುಂದರ ಪಿಚಾಯಿ, ಇವರೇ ಅನೇಕ ಕಠಿಣಾತಿಕಠಿಣ ಪರೀಕ್ಷೆಗಳನ್ನ ಎದುರಿಸಿ, ಗೆದ್ದು ಈ ಅತ್ಯುಚ್ಚ ಸ್ಥಾನವನ್ನು ಗಳಿಸಿದಾತ. ಅಂದು ಭಾರತ ಸರ್ಕಾರವು ಈ ಮಾತೃಭೂಮಿಯ ಮಗನನ್ನು ಸತ್ಕರಿಸುವ ಸಮಾರಂಭವನ್ನು ಏರ್ಪಡಿಸಿತ್ತು. 

ಸುಂದರ ಪಿಚಾಯಿ, ತನ್ನ ತಾಯಿಯ ಕಡೆ ಗಮನ ಹರಿಸುತ್ತಿದ್ದರು. ಆದರೆ ಆಕೆಗೆ ಅದು ಇಷ್ಟ ಆಗುವಂತೆ ಕಾಣುತ್ತಿರಲಿಲ್ಲ.  ಪ್ರಧಾನಿ ನರೇಂದ್ರ ಮೋದಿ ವೇದಿಕೆ ಏರಿದಾಗ ಅಬ್ಬರದ ಜಯಘೋಷ ಕೇಳಿ ಬಂತು. ಅವರ ಮಾತುಗಳು ಅತ್ಯಂತ ಪ್ರಭಾವಶಾಲಿ ಆಗಿದ್ದವು.  ಅವರ ಮಾತು ನಿಷ್ಠೆ, ಕನಸುಗಳು, ಹೋರಾಟ ಮತ್ತು ಆಳವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದವು. ಅವರು ತಮ್ಮ ಮಾತಿನಲ್ಲಿ, ಸಭೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನಿಗಳು, ಕಲಾವಿದರು, ಉದ್ಯಮಪತಿಗಳು ಮುಂತಾದವರ ಹೆಸರನ್ನು ಉಲ್ಲೇಖಿಸಿದರು. 

ಕಡೆಗೆ ಅವರ ಧ್ವನಿ ಸ್ವಲ್ಪ ಮೆತ್ತಗಾಯಿತು. ಅವರು ಹೇಳಿದರು: "ನಾವು ಈ ದಿನ ಕೇವಲ ಸುಂದರ ಪಿಚಾಯಿ ಅವರನ್ನು ಗೌರವಿಸುತ್ತಿಲ್ಲ. ತನ್ನ ಮಗನ ಅಧ್ಯಯನಕ್ಕಾಗಿ ತನ್ನ ಊಟವನ್ನು ತ್ಯಾಗ ಮಾಡಿದ ಮಹಾತಾಯಿ ಒಬ್ಬಳ ಜೀವನ ಪ್ರಯಾಣವನ್ನೂ ಗೌರವಿಸುತ್ತಿದ್ದೇವೆ". ಸುಂದರ ಪಿಚಾಯಿಯ ಹೃದಯದ ಬಡಿತ ಈ ಮಾತನ್ನು ಕೇಳಿ ಹೆಚ್ಚಾಯಿತು. ಅವರು ಎಂದೂ ಈ ವಿಷಯವನ್ನ ಸಾರ್ವಜನಿಕವಾಗಿ ಹೇಳಿರಲಿಲ್ಲ. ತಕ್ಷಣ ನೆರದಿದ್ದ ಸಭಿಕರಲ್ಲಿ ಗುಸುಗುಸು ಮಾತು ಆರಂಭವಾಯಿತು. ಕ್ಯಾಮೆರಾಗಳು ಈ ಕ್ಷಣವನ್ನು ಸೆರೆಹಿಡಿಯಲು ತಿರುಗಿದವು. ಸಭಿಕರು ಮೌನವಾಗಿ ನೋಡತೊಡಗಿದರು.

ಮೋದಿಯವರು ವೇದಿಕೆಯ ಮೆಟ್ಟಿಲನ್ನು ಇಳಿಯತೊಡಗಿದರು. ಅವರು ನೇರವಾಗಿ ಸುಂದರ ಪಿಚಾಯಿ ಕಡೆ ಹೋಗಲಿಲ್ಲ! ಅದಕ್ಕೆ ಬದಲಾಗಿ ಮೂರನೇ ಸಾಲಿನಲ್ಲಿ ತಣ್ಣಗೆ ಕುಳಿತಿದ್ದ ಅವರ ತಾಯಿಯ ಕಡೆ ಹೆಜ್ಜೆ ಹಾಕಿದರು. ಲಕ್ಷ್ಮಿ ಅವರಿಗೆ ಒಂದು ಕ್ಷಣ ದಿಗ್ಭ್ರಮೆ ಉಂಟಾಯಿತು. ನಮಸ್ಕರಿಸಲೆಂದು ಎತ್ತಿದ ಕೈಗಳು ನಡುಗುತ್ತಿದ್ದವು! ನೋಡುತ್ತಿದ್ದವರು ಒಂದು ಕ್ಷಣ ಉಸಿರಾಟವನ್ನೇ ನಿಲ್ಲಿಸಿಬಿಟ್ಟರು!

ಮೋದಿಯವರು ಮೆಲ್ಲನೆ ಹೇಳಿದರು  "ಕೇವಲ ನಿಮ್ಮ ತ್ಯಾಗದಿಂದ ಅಷ್ಟೇ ಇದು ಸಾಧ್ಯವಾಯಿತು!" ಇಷ್ಟು ಹೇಳಿದ ಮೋದಿ ತಲೆ ತಗ್ಗಿಸಿ ಲಕ್ಷ್ಮಿ ಅವರ ಪಾದಗಳಿಗೆ ನಮಸ್ಕರಿಸಿದರು! ಇಡೀ ಸಭಾಂಗಣದಲ್ಲಿ ನೆರೆದಿದ್ದ ಜನ ನಿಶ್ಶಬ್ಧವಾಗಿ ಮೇಲೆದ್ದು ಈ ಗೌರವಾರ್ಪಣೆಯಲ್ಲಿ ಭಾಗಿಯಾದರು. ಈ ದೃಶ್ಯವನ್ನು ಸೆರೆಹಿಡಿಯಲು ಅಲ್ಲಿದ್ದ ಕ್ಯಾಮರಾಗಳೆಲ್ಲವೂ ಚುರುಕಾದವು. ಸುಂದರ ಪಿಚಾಯಿ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತು. ಹೀಗಾಗಬಹುದು ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ! 

ಅವರು ಹಲವಾರು ವರ್ಷ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಳೆದಿದ್ದರು. ಬೇಕಾದಷ್ಟು ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜರುಗಳನ್ನ ಭೇಟಿ ಮಾಡಿದ್ದರು. ಆದರೆ ಅವರಾರೂ ಮೋದಿಯವರು ಅವರ ತಾಯಿಯನ್ನು ಗೌರವಿಸಿದಷ್ಟು ಗೌರವಿಸಿರಲಿಲ್ಲ! ಆ ತಾಯಿ ಏಳಲು ಪ್ರಯತ್ನಿಸಿದರು. ಮೋದಿಯವರೇ ಆಕೆಗೆ ಕೈ ನೀಡಿ, ಆಸರೆ ಕೊಟ್ಟು, ಕೈ ಹಿಡಿದು, ವೇದಿಕೆಗೆ ಕರೆದೊಯ್ದರು. ಆಕೆ ಒಲ್ಲೆ ಎಂದರು. ಆದರೂ ಕೈ ಬಿಡದ ಮೋದಿ, ಆಕೆಯನ್ನು ಧೈರ್ಯವಾಗಿ ಪ್ರೇಕ್ಷಕರ ಎದುರು ನಿಲ್ಲಲು ಸಹಕರಿಸಿದರು. ಆಗ ಕೇಳಿ ಬಂದಿದ್ದು ಪ್ರೇಕ್ಷಕರ ಗಡಚಿಕ್ಕುವ ಚಪ್ಪಾಳೆ !

ಸುಂದರ ಪಿಚಾಯಿ ತನ್ನ ತಾಯಿಯ ಪಕ್ಕದಲ್ಲಿ ನಿಂತರು. ಅವರ ಕಣ್ಣುಗಳಲ್ಲಿ ಸುರಿಯುತ್ತಿತ್ತು- ಆನಂದಬಾಷ್ಪ ! ಹಿಂದೆ ನಡೆದ ಘಟನೆಗಳೆಲ್ಲ ಪ್ರವಾಹದಂತೆ ಅವರ ಮನಸ್ಸಿನ ಪರದೆಯ ಮೇಲೆ ಒಮ್ಮೆ ಹಾದುಹೋದವು.

ಅವರು ಇದ್ದದ್ದು ಚೆನ್ನೈನ ಎರಡು ಕೋಣೆಗಳ ಒಂದು  ಸಾಧಾರಣ ಮನೆಯಲ್ಲಿ. ಅದರ ಗೋಡೆಗಳು ಮಂಕಾಗಿ ಬಣ್ಣ ಕಳೆದುಕೊಂಡಿದ್ದವು. ಅವರ ಮನೆಯಲ್ಲಿ ಆಗ ರೆಫ್ರಿಜಿರೇಟರ್ ಕೂಡ ಇರಲಿಲ್ಲ! ತಂದೆ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಅವರು ಮನೆಗೆ ಸರ್ಕ್ಯೂಟ್ ಡಯಾಗ್ರಮ್ ಗಳು ಮತ್ತು ಸೋಲ್ಡರಿಂಗ್ ವೈರ್‌ಗಳನ್ನು ಅಷ್ಟೇ ತರುತ್ತಿದ್ದರು. ಮಕ್ಕಳಿಗೆ ಆಟಿಕೆಗಳನ್ನು ತರುವಷ್ಟು ಶ್ರೀಮಂತರಾಗಿರಲಿಲ್ಲ ಅವರು. ಕೆಟ್ಟು ಹೋದ, ಯಾರೋ ನೀಡಿದ ರೇಡಿಯೋಗಳನ್ನು ಅವರು ಮನೆಗೆ ತರುತ್ತಿದ್ದರು. ಸುಂದರ್ ಗಂಟೆಗಳ ಕಾಲ ತನ್ನ ಅಪ್ಪನನ್ನು ಪ್ರಶ್ನಿಸುತ್ತಿದ್ದರು.

ತಾಯಿ ಅಕ್ಕಿ ಕಾಳುಗಳನ್ನು ಉಪಯೋಗಿಸಿ ಮಗನಿಗೆ ಗಣಿತ ಕಲಿಸುತ್ತಿದ್ದರು. ಸುಂದರ್ ಕಾಲೇಜಿಗೆ ಸೇರಿದಾಗ, ಫೀಸು ನೀಡಲು  ಆ ತಾಯಿ ತನ್ನ ಮದುವೆಯಲ್ಲಿ ನೀಡಲಾಗಿದ್ದ ಬಂಗಾರದ ಬಳೆಗಳನ್ನು ಮಾರಿದ್ದರು! ಇದನ್ನು ಅವರು ಯಾರಿಗೂ ಹೇಳಿರಲಿಲ್ಲ. "ಹೇಗೋ ಸರಿದೂಗಿಸಿದರೆ ಆಯಿತು" ಎಂದಷ್ಟೇ ಹೇಳುತ್ತಿದ್ದರು.

ಶಾಲೆಯಲ್ಲಿ ಸುಂದರ ತಂಟೆ ಮಾಡದ ಹುಡುಗ. ಆದರೆ ಅವನಿಗೆ ವಿಷಯವನ್ನು ತಿಳಿದುಕೊಳ್ಳಲು ಅಪಾರ ಕುತೂಹಲ. ಅವನ ಶಿಕ್ಷಕರು ಅವನ ಬಗ್ಗೆ ಹೇಳುತ್ತಿದ್ದರು "ಇವನ ನೆನಪಿನ ಶಕ್ತಿ ಅದ್ಭುತ! ಇವನು ಒಮ್ಮೆ ಡಯಲ್ ಮಾಡಿದ ಟೆಲಿಫೋನ್ ನಂಬರ್‌ಗಳನ್ನು ಮತ್ತೆಂದೂ ಮರೆಯುತ್ತಿರಲಿಲ್ಲ". ಅವನ ಸಹಪಾಠಿಗಳು ಅವನ ಹಳೆಯ ಸವೆದು ಹೋದ ಶೂಗಳ ಬಗ್ಗೆ ಅಥವಾ ಅವನು ತರುತ್ತಿದ್ದ ಊಟದ ಡಬ್ಬಿಯ ಬಗ್ಗೆ ಅವನನ್ನು ಕಿಚಾಯಿಸುತ್ತಿದ್ದರು. ಅದಕ್ಕೆಲ್ಲ ಸುಂದರ್ ನಸುನಕ್ಕು ಸುಮ್ಮನೆ ದೂರ ಹೋಗುತ್ತಿದ್ದ. ಬಿರುಬೇಸಿಗೆಯಲ್ಲಿ, ರಾತ್ರಿ ವಿದ್ಯುತ್ ಹೊರಟು ಹೋಗಿ ಫ್ಯಾನ್ ತಿರುಗದಿದ್ದಾಗ, ಬೆವರಿನಿಂದ ನೆನೆದ ನೆಲದಲ್ಲಿ ಸುಂದರ ಮತ್ತು ಅವರ ಅಣ್ಣ ಮಲಗುತ್ತಿದ್ದರು. ಎಷ್ಟೋ ರಾತ್ರಿಗಳು ಅವರ ತಾಯಿ ಒಂದು ರಟ್ಟಿನ ತುಂಡಿನಿಂದ ಮಕ್ಕಳಿಗೆ ಗಾಳಿ ಬೀಸುತ್ತಿದ್ದರು. ರಾತ್ರಿ ಮಲಗದಿದ್ದರೂ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಆಹಾರ ಸಿದ್ಧಪಡಿಸುತ್ತಿದ್ದರು.

ಸುಂದರ್ ಅಮೇರಿಕಾದಲ್ಲಿ ಉನ್ನತ ಅಧ್ಯಯನ ಮಾಡಲು ವಿದ್ಯಾರ್ಥಿವೇತನವೇನೋ ಸಿಕ್ಕಿತು. ಆದರೆ ವಿಮಾನಯಾನದ ಖರ್ಚನ್ನು ನೆನೆಸಿಕೊಂಡು ಸುಂದರ್ ಅಮೆರಿಕಾಗೆ ಹೋಗಲು ಹಿಂಜರಿದ. "ನೀನು  ಅಮೆರಿಕಾಗೆ ಹೋಗು. ನಾನು ಬ್ಯಾಂಕಿನವರೊಡನೆ ಮಾತನಾಡುತ್ತೇನೆ" ಎಂದು ಹೇಳಿದರು ಅಮ್ಮ. ಆದರೆ ಅವರು ಮಾಡಿದ್ದೇನೆಂದರೆ ತಮ್ಮಲ್ಲಿದ್ದ ಚಿನ್ನದ ಕಡೆಯ ಒಡವೆಯ ಮಾರಾಟ!

ಈಗ ಸುಂದರ ಪಿಚಾಯಿ, ದೆಹಲಿಯ ಪ್ರತಿಷ್ಠಿತ ಸಭಾಂಗಣದಲ್ಲಿ ಪ್ರಧಾನಮಂತ್ರಿ ಹಾಗೂ ತನ್ನ ತಾಯಿಯೊಡನೆ ನಿಂತಿದ್ದರು! ಆ ಕ್ಷಣ, ಸುಂದರ ಪಿಚಾಯಿಗೆ ಸುತ್ತಲಿನ ಪ್ರಪಂಚವೇ ಮಸುಕಾಯಿತು. ಕೇವಲ ತಾಯಿಯ ಉಸಿರಾಟ ಮತ್ತು ಆಪ್ತತೆಯ ಕೈಯ ಹಿಡಿತ ಇವಿಷ್ಟು ಮಾತ್ರ ಅನುಭವ ಆಯಿತು. ಚಿಕ್ಕ ಹುಡುಗ ಇದ್ದಾಗ ಮಗನ ಕೈಹಿಡಿಹಿಡಿಯುವಂತೆ ಇತ್ತು ಆ ತಾಯಿಯ ಹಿಡಿತ. ಆಕೆ ಮೆಲ್ಲನೆ ಮಗನ ಕಿವಿಯಲ್ಲಿ ಉಸುರಿದರು "ನೀನು ಹಿಂದಿನದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಲ್ಲ ಅಷ್ಟೇ ಸಾಕು. ಇವೆಲ್ಲಾ ಪ್ರದರ್ಶನ ಯಾಕೆ?"

ಆಗ ಸುಂದರ ಪಿಚಾಯಿ ಹೇಳಿದರು "ಅಮ್ಮಾ, ನೀನು ಯಾವತ್ತೂ ಏನನ್ನೂ ಕೇಳಲಿಲ್ಲ. ಆದ್ದರಿಂದಲೇ ನಾನು ಯಾವುದನ್ನೂ ಮರೆತಿಲ್ಲ!"

(ಜಯಂತಿ ಜೋಶಿ ಅವರು ಮರಾಠಿಯಲ್ಲಿ ಬರೆದ ನಿರೂಪಣೆಯ ಕನ್ನಡ ಭಾವಾನುವಾದ)

-ಶ್ರೀವತ್ಸ ಜೋಶಿಯವರ ‘ಅಕ್ಷರ ತೋರಣ’ ವಾಟ್ಸಾಪ್ ಬಳಗದಿಂದ ಸಂಗ್ರಹಿತ