ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 1)

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 1)

‘ವಿಫಲತೆ ' ಯನ್ನು ‘ಯಶಸ್ಸು’ ಆಗಿ ಪರಿವರ್ತಿಸುವ ಪ್ರಬಲ ಅಸ್ತ್ರ ಆತ್ಮವಿಶ್ವಾಸ. ತನ್ನಲ್ಲಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳುವುದೇ ಆತ್ಮವಿಶ್ವಾಸ. ಅದೊಂದು ತನ್ನೊಳಗೆ ಬಡಿದೆಬ್ಬಿಸಬೇಕಾದ ಅಗೋಚರ ಶಕ್ತಿ. ಆತ್ಮವಿಶ್ವಾಸಕ್ಕೆ ಬಾಹ್ಯ ಪ್ರೇರಣೆಗಳು ಪೂರಕ ಇಲ್ಲವೇ ಮಾರಕವಾಗಬಹುದು. ಆದರೆ ಅದು ಸೆಟೆದು ನಿಲ್ಲಬೇಕಾಗಿರುವುದು ನಮ್ಮೊಳಗೆ. ಕೆಟ್ಟ ಗಳಿಗೆಯಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಅದೆಷ್ಟೋ ಮಂದಿಯ ಬದುಕನ್ನು ಬದಲಿಸಿದೆ. 

ನೆಲದ ಮೇಲೆ ಇಟ್ಟಿರುವ ಹಲಗೆಯೊಂದರಲ್ಲಿ ನಾವು ಸರಾಗವಾಗಿ ನಡೆಯಬಲ್ಲೆವು. ಅಲ್ಲಿ ಯಾವುದೇ ಅಳುಕು ಅಥವಾ ಭಯವಿರದು. ಅದೇ ಹಲಗೆಯನ್ನು 15 ಅಡಿ ಎತ್ತರದಲ್ಲಿ ಇಟ್ಟಾಗ ನಾವು ನಡೆಯಲಾರೆವು. ಎಲ್ಲಾ ಪರಿಸ್ಥಿತಿಗಳು ಮೊದಲಿನಂತೆಯೇ ಇದೆ. ಆದರೆ ಎತ್ತರ ಮಾತ್ರ ಬದಲಾಗಿದೆ. ಬದಲಾದ ಎತ್ತರ ನಮ್ಮಲ್ಲಿ ಕೆಳಗೆ ಬೀಳುವ ಭಯ ಹುಟ್ಟಿಸಿದೆ. ಆ ಕಾರಣಕ್ಕಾಗಿ ನಾವು ಅದರ ಮೇಲೆ ನಡೆಯಲಾರೆವು ಅಥವಾ ನಡೆದರೂ ಕುಸಿದು ಬೀಳುವೆವು. ಇಲ್ಲಿ ಗಮನಿಸಬೇಕಾದದ್ದು ಬದಲಾದ ಎತ್ತರವು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಸಿಯುವಂತೆ ಮಾಡಿದೆ. 

ಆತ್ಮವಿಶ್ವಾಸ ನಮ್ಮಲ್ಲಿ ಹಾಗೂ ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ಅಪೂರ್ವ ಬದಲಾವಣೆಯನ್ನು ತರುತ್ತದೆ. ಅವರನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಆತ್ಮವಿಶ್ವಾಸ ಮೂಡಿದಲ್ಲಿ ಪ್ರಯತ್ನ ಆರಂಭಗೊಳ್ಳುತ್ತದೆ. ಅದರಿಂದ ಯಶಸ್ಸು ನಮ್ಮದಾಗುತ್ತದೆ. ಆತ್ಮವಿಶ್ವಾಸದ ಕೊರತೆ ಕೇವಲ ವಿಫಲತೆಯನ್ನು ಮಾತ್ರವಲ್ಲ, ವ್ಯಕ್ತಿಯ ಆತ್ಮಹತ್ಯೆಗೂ ಕಾರಣವಾಗುತ್ತದೆ. 2021ರಲ್ಲಿ 48,183 ಸಾವುಗಳು ಆತ್ಮಹತ್ಯೆಯಿಂದ ಸಂಭವಿಸಿದೆ. ಇದು ಅಧಿಕೃತ. ಅಧಿಕೃತವಲ್ಲದ ಅದೆಷ್ಟೋ ಸಾವುಗಳಿರಬಹುದು. ಅಧಿಕೃತವಾಗಿಯೇ ಲೆಕ್ಕಾಚಾರ ಮಾಡಿದರೂ ಪ್ರತಿ 11 ನಿಮಿಷಕ್ಕೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಅಲ್ಲದೆ ಆತ್ಮಹತ್ಯೆಯ ಪ್ರಯತ್ನಗಳು ಅದೆಷ್ಟೋ ಹೆಚ್ಚಿದೆ.

ನಾವು ನಮ್ಮ ಮಕ್ಕಳಲ್ಲಿ ಮುಖ್ಯವಾಗಿ ಬೆಳೆಸಬೇಕಾಗಿರುವುದು ಆತ್ಮವಿಶ್ವಾಸ. ನಮ್ಮ ಮಗು ಎತ್ತರದ ಕಿಟಕಿಗೆ ಹತ್ತಿದರೆ ನಾವು ಭಯ ಹೊಂದುತ್ತೇವೆ. ಮಗು ಬೀಳಬಹುದೆಂಬ ಭಯ. ಅದರಿಂದಾಗಿಯೇ ನಾವು ಮಕ್ಕಳನ್ನು ಎತ್ತರಕ್ಕೆ ಹತ್ತಲು ಬಿಡಲಾರೆವು. ನಂತರ ಆತ ಮತ್ತೆಂದೂ ಎತ್ತರಕ್ಕೆ ಹತ್ತುವ ಪ್ರಯತ್ನ ಮಾಡಲಾರ. ರಸ್ತೆ ದಾಟುವಾಗ ಮಗನನ್ನು ಕೈಹಿಡಿದು ಎಳೆಯುವ ಅಪ್ಪ, ಒಂಟಿಯಾಗಿ ರಸ್ತೆ ದಾಟುವ ಧೈರ್ಯವನ್ನು ಮಗನಿಂದ ಕಸಿದುಕೊಳ್ಳುತ್ತಾನೆ. 

ಒಮ್ಮೆ ಅಪ್ಪ ಮತ್ತು ಮಗ ಸರ್ಕಸ್ ನೋಡಲು ತೆರಳುತ್ತಾರೆ. ಈ ಸಂದರ್ಭ ಮಗ ಕಂಬಕ್ಕೆ ಹಗ್ಗದಿಂದ ಕಟ್ಟಿದ ಆನೆಯನ್ನು ಗಮನಿಸುತ್ತಾನೆ. ಅಪ್ಪನಲ್ಲಿ ಮಗ ‘ಅಪ್ಪಾ ಆನೆಗೆ ಅದೆಷ್ಟು ಶಕ್ತಿಯಿದೆ. ಆದರೂ ಕಟ್ಟಿದ ಆ ಹಗ್ಗದಿಂದ ಬಿಡಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ?’ ಎಂದು ಸಹಜವಾಗಿ ಪ್ರಶ್ನಿಸುತ್ತಾನೆ. ಅದಕ್ಕೆ ಅಪ್ಪ, "ಮಗ ಆನೆ ಚಿಕ್ಕ ಮರಿಯಿದ್ದಾಗ ಅದನ್ನು ಹಗ್ಗದಿಂದ ಕಟ್ಟಿ ಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಬಹಳನೇ ಪ್ರಯತ್ನಿಸಿದೆ. ಆದರೆ ಮರಿಯಾಗಿದ್ದ ಆನೆಗೆ ಅದು ಸಾಧ್ಯವಾಗಿಲ್ಲ. ಇಂದು ಅದು ಬೆಳೆದು ಶಕ್ತಿಶಾಲಿಯಾಗಿದೆ. ಆದರೆ ಅದಕ್ಕೆ ಆ ಹಗ್ಗದಿಂದ ಬಿಡಿಸಿಕೊಳ್ಳಲು ಸಾಧ್ಯ ಎಂಬ ಅರಿವಿಲ್ಲ. ಆದ್ದರಿಂದ ಅದೆಂದೂ ಬಿಡಿಸಿಕೊಳ್ಳುವ ಪ್ರಯತ್ನ ಮಾಡದು" ಎಂದನು. ಹೌದು ಈ ಕಥೆಯಿಂದ ನಮಗೆ ಆತ್ಮವಿಶ್ವಾಸ ಕಳೆದು ಕೊಂಡರೆ ಬಲಶಾಲಿ ಆನೆಯೂ ಬಲಹೀನವಾಗುತ್ತದೆ ಎಂಬುವುದು ವೇದ್ಯವಾಗುತ್ತದೆ.

ಮಕ್ಕಳಿಗೆ ಅವರ ಶಕ್ತಿಯ ಅರಿವಿರಬೇಕು. “ನೀನು ಈ ಜಗತ್ತಿನ ಅನನ್ಯ ಸೃಷ್ಟಿ” ಎಂಬ ಜ್ಞಾನ ಅವರಿಗಿರಬೇಕು. ತಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡದೆ ತನ್ನ ಶಕ್ತಿಯಿಂದ ಪ್ರಪಂಚದಲ್ಲಿ ಎದ್ದು ನಿಲ್ಲುವ ಪ್ರಯತ್ನ ಮಾಡಬೇಕು. ಹುಟ್ಟು ದರಿದ್ರವಿರಬಹುದು. ಆದರೆ ಸಾವು ಚರಿತ್ರೆಯಾಗುವ ರೀತಿ ಬದುಕಬೇಕು. ಆತ್ಮವಿಶ್ವಾಸವು ವ್ಯಕ್ತಿಯನ್ನು ಭಯಮುಕ್ತಗೊಳಿಸುತ್ತದೆ. ಆಗ ಮಾತ್ರ ಸಾಧಕನಾಗಬಹುದು. ಭಯಪಟ್ಟರೆ ಅಲ್ಸರ್ ರೋಗಿಯೂ ಸಾಯಬಲ್ಲ, ಭಯಬಿಟ್ಟರೆ ಕ್ಯಾನ್ಸರ್ ರೋಗಿಯೂ ಬದುಕಬಲ್ಲ.

(ಇನ್ನೂ ಇದೆ)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ. 

ಚಿತ್ರ ಕೃಪೆ: ಇಂಟರ್ನೆಟ್ ತಾಣ