ಆದರ್ಶ ಮತ್ತು ವಾಸ್ತವ…!

ಆದರ್ಶ ಮತ್ತು ವಾಸ್ತವ…!

ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ…

ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ?

ಒಬ್ಬ " ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳರನ್ನು ಹಿಡಿದು ಜನರಿಗೆ ಭದ್ರತೆ ನೀಡುತ್ತೇನೆ."

ಇನ್ನೊಬ್ಬ " ನಾನು ಐಎಎಸ್‌ ಪಾಸು ಮಾಡಿ ಬಡವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. "

ಮತ್ತೊಬ್ಬ" ನಾನು ಡಾಕ್ಟರ್ ಆಗಿ ಹಣವಿಲ್ಲದ ಬಡ  ರೋಗಿಗಳಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡುತ್ತೇನೆ."

ಮಗದೊಬ್ಬ " ನಾನು ಸೈನ್ಯ ಸೇರಿ ದೇಶ ರಕ್ಷಣೆ ಮಾಡುತ್ತೇನೆ "

ಅವನೊಬ್ಬ " ನಾನು ಪತ್ರಕರ್ತನಾಗಿ ಸಮಾಜದ ಹುಳುಕುಗಳನ್ನು ತೋರಿಸಿ ಅದರ ಕಾವಲುಗಾರನಾಗುತ್ತೇನೆ. "

ಇವನೊಬ್ಬ " ನಾನು ಕೃಷಿ ವಿಜ್ಞಾನಿಯಾಗಿ ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಹಿಡಿಯುತ್ತೇನೆ "

ಅವರೊಲ್ಲೊಬ್ಬ " ನಾನು ಸಮಾಜ ಸೇವಕನಾಗಿ ನಿಸ್ವಾರ್ಥದಿಂದ ಜನರ ಸೇವೆ ಮಾಡುತ್ತೇನೆ."

ಇಲ್ಲೊಬ್ಬ " ನಾನು ರಾಜಕಾರಣಿಯಾಗಿ ಪ್ರಾಮಾಣಿಕತೆಯಿಂದ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ. "

ಯಾರೋ ಒಬ್ಬ " ನಾನು ಇಂಜಿನಿಯರ್ ಆಗಿ ಅತ್ಯುತ್ತಮ ಗುಣಮಟ್ಟದ ರಸ್ತೆ ಸೇತುವೆ ನಿರ್ಮಿಸುತ್ತೇನೆ ."

ಕೆಲವರು ಕ್ರೀಡೆ ಸಂಗೀತ ಶಿಕ್ಷಣ ಸಾಹಿತ್ಯ ವ್ಯಾಪಾರ ಉದ್ಯಮ ವಿಜ್ಞಾನ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಕನಸು ಕಾಣುತ್ತಾರೆ. ಅದೃಷ್ಟವಶಾತ್ ಅವರಲ್ಲಿ ಕೆಲವರು ತಾವು ಅಂದು ಆಸೆ ಪಟ್ಟ ಗುರಿ ತಲುಪುತ್ತಾರೆ. ಆದರೆ, ಅವರು ಗುರಿ ತಲುಪಿದ ನಂತರ ತಾವು ಶಾಲೆಯಲ್ಲಿದ್ದಾಗ ಮುಗ್ದತೆಯಿಂದ ಕನಸು ಕಂಡ ಆ " ಸೇವೆಯನ್ನು " ನಿಜವಾಗಿಯೂ ಕಾರ್ಯರೂಪಕ್ಕೆ ತರುವರೇ ? ಆ ವ್ಯವಸ್ಥೆ ನಮ್ಮಲ್ಲಿ ಇದೆಯೇ ?

ನನಗೆ ತಿಳಿದಿರುವಂತೆ ಶೇಕಡಾ 10% ಜನ ಆ ಬಾಲ್ಯದ ನೆನಪುಗಳನ್ನು ಹಾಗೇ ಉಳಿಸಿಕೊಂಡು ಸಂಪೂರ್ಣ ಅಲ್ಲದಿದ್ದರೂ ಸಾಧ್ಯವಾದ ಮಟ್ಟಿಗೆ ಜೀವನ ಪೂರ್ತಿ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಾರೆ. ಉಳಿದವರು, ಕೆಲವರು, ಪ್ರಾರಂಭದಲ್ಲಿ ಸ್ವಲ್ಪ ಪ್ರಯತ್ನಿಸಿ ನಂತರ ವ್ಯವಸ್ಥೆಯೊಳಗೆ ಒಬ್ಬರಾಗುತ್ತಾರೆ.

ಇನ್ನೊಬ್ಬರು, ಕೌಟುಂಬಿಕ -  ಸಾಂಸಾರಿಕ ಬಂಧನದಲ್ಲಿ ಸಿಲುಕಿ ಹಳೆಯದನ್ನು ಮರೆಯುತ್ತಾರೆ.

ಮತ್ತೊಬ್ಬರು, ಹಣ ಅಧಿಕಾರದ ದುರಾಸೆಗೆ ಬಿದ್ದು ಗತಕಾಲದ ದಿನಗಳನ್ನು ಮರೆತು ಭ್ರಷ್ಟರಾಗುತ್ತಾರೆ.

ಹಲವರು, ರಾಜಕೀಯ, ವಾಣಿಜ್ಯೋದ್ಯಮಿಗಳ ಒತ್ತಡಕ್ಕೆ ಮಣಿದು ಈ ಕೆಟ್ಟ ವ್ಯವಸ್ಥೆಯೊಳಗೆ ಸೇರಿ ಹೋಗುತ್ತಾರೆ.

ಇನ್ನೊಂದಿಷ್ಟು, ತೋರಿಕೆಗೆ ಒಳ್ಳೆಯವರಂತೆ ನಟಿಸುತ್ತಾ ಒಳಗೊಳಗೆ ಅಪಾರ ಭ್ರಷ್ಟರಾಗಿರುತ್ತಾರೆ.

ಮತ್ತೊಂದಿಷ್ಟು, ಸ್ವಲ್ಪ ಆ ಕಡೆ, ಸ್ವಲ್ಪ ಈ ಕಡೆ ತೊಳಲಾಡುತ್ತಾ ಎರಡನ್ನೂ ಮಾಡಲು ಧೈರ್ಯ ಸಾಲದೆ ಒಳಗೊಳಗೆ ಅಸಹಾಯಕತೆಯಿಂದ ನರಳುತ್ತಾ ಸಾಗುತ್ತಿರುತ್ತಾರೆ. ಹೀಗೆ ಬಾಲ್ಯದ ಕನಸುಗಳು ಕಮರಿ ಹೋಗುತ್ತಾ ಇಡೀ ವ್ಯವಸ್ಥೆ ವಿನಾಶದ ಅಂಚಿಗೆ ನೂಕಲ್ಪಡುತ್ತಿದೆ.

ನಮ್ಮ ಸೋಷಿಯಲ್ ಸ್ಟ್ರಕ್ಚರ್ ನ ( ಸಾಮಾಜಿಕ ಮೌಲ್ಯಗಳ ರಚನೆ ) ಒಳ್ಳೆಯ  ಅಡಿಪಾಯ ವೇದಿಕೆಯ ಮಟ್ಟಕ್ಕೆ ಬರುವ ಹೊತ್ತಿಗೆ ಶಿಥಿಲವಾಗಿರುತ್ತದೆ. ಆ ಶಿಥಿಲ ವೇದಿಕೆಯ ಮೇಲೆ Perform ಮಾಡುವ ಹೊತ್ತಿಗೆ ವ್ಯಕ್ತಿ ಆಸಕ್ತಿಯನ್ನೇ ಕಳೆದುಕೊಂಡು ನಿಸ್ತೇಜಿತನಾಗಿರುತ್ತಾನೆ. ವೀಕ್ಷಕರು ಪ್ರಾರಂಭದಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಂತರ  ಕ್ರಮೇಣ ಎಲ್ಲರ ಸಾಮರ್ಥ್ಯವೂ ತೃಪ್ತಿ ತರದೇ ಇದ್ದಾಗ ನಿರಾಸೆಯಿಂದ ವ್ಯವಸ್ಥೆಗೆ ಹೊಂದಿಕೊಳ್ಳತೊಡಗುತ್ತಾರೆ.

ಯಾರಾದರೂ ಅಷ್ಟೆ ಎಂದು ನಿರಾಸಕ್ತರಾಗುತ್ತಾರೆ. ಬಹುತೇಕ ಭಾರತೀಯ ಸಮಾಜದ ಇಂದಿನ ಸ್ಥಿತಿ ಹೀಗೇ ಆಗಿದೆ. ಬದಲಾವಣೆ ಅಡಿಪಾಯದಿಂದಲೇ ಪ್ರಾರಂಭವಾಗಬೇಕಿದೆ ಮತ್ತು ಕೊನೆಯವರೆಗೂ ಅದೇ ಗುಣಮಟ್ಟ ಕಾಪಾಡಬೇಕಿದೆ.

ಅದಕ್ಕೆ ಅನುಸರಿಸಬೇಕಾದ ಕ್ರಮಗಳು ಹಲವಾರು ಇವೆ. ಆದರೆ ಅದೆಲ್ಲದರ ಮೂಲ ಆತ್ಮಸಾಕ್ಷಿ ಎಂಬ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳ ಪುನರುತ್ಥಾನ. ಒಳ್ಳೆಯವರಾಗುತ್ತಾ, ಒಳ್ಳೆಯದನ್ನು ಪ್ರೋತ್ಸಾಹಿಸುತ್ತಾ, ಕೆಟ್ಟದ್ದನ್ನು ನಿರ್ಲಕ್ಷಿಸುತ್ತಾ ಸಾಗುವ ಪ್ರಕ್ರಿಯೆ ನಿಧಾನವಾಗಿ ನಮ್ಮೊಳಗೆ ಪ್ರಾರಂಭವಾಗಲಿ… ಅದನ್ನು ನಾವೆಲ್ಲರೂ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ದಿನಗಳು ಶೀಘ್ರವಾಗಿ ಬರಲಿ ಎಂದು ಆಶಿಸುತ್ತಾ...

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ