ಆದಿ ಶಂಕರಾಚಾರ್ಯರ ಸ್ಮರಿಸುತ್ತಾ...

ಆದಿ ಶಂಕರಾಚಾರ್ಯರ ಸ್ಮರಿಸುತ್ತಾ...

ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವ ಅವರಿಗೆ. ತಮ್ಮ ಅದ್ಭುತ ಪ್ರತಿಭೆ, ಅಮೋಘ ಜ್ಞಾನ,ತಿಳುವಳಿಕೆಯಿಂದಾಗಿ ತನ್ನ ೮ನೇ ವಯಸ್ಸಿಗೆ ಓಂಕಾರೇಶ್ವರದಲ್ಲಿ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರಿಂದ ಸನ್ಯಾಸ ಸ್ವೀಕಾರ ಮಾಡಿದರು. ಎಲ್ಲವೂ ಸಾಕ್ಷಾತ್ ಪರಶಿವನೇ ಎಂದು ಪ್ರತಿಪಾದಿಸಿದವರು.

ಜಗತ್ ಮಿಥ್ಯಾ ಬ್ರಹ್ಮ್ಯೆವ ಸತ್ಯಂ ಸಂದೇಶ ಎಂದವರು. ಉಪನಿಷತ್, ಭಗವದ್ಗೀತೆ, ಬ್ರಹ್ಮಸೂತ್ರ ಇದಕ್ಕೆ ಭಾಷ್ಯವನ್ನು ಬರೆದವರು. ದಾರ್ಶನಿಕರೂ, ಲೋಕಕ್ಕೆ ಅರ್ಥವತ್ತಾದ ಧಾರ್ಮಿಕ ತತ್ವ ಚಿಂತನೆಗಳನ್ನು, ನೀಡಿದ ಮಹಾನುಭಾವರು. ಧರ್ಮ ಜಾಗೃತಿ ಮೂಡಿಸಿದವರು. ಸಮಾಜ ಸುಧಾರಕರು, ಮಹಾಸಂತರು, ಅನುಭವಿಗಳು, ಹಿಂದೂಧರ್ಮದ ಮುಕುಟಪ್ರಾಯರು, ಜೊತೆಗೆ ಅನ್ಯಧರ್ಮಕ್ಕೂ ನ್ಯಾಯ ಒದಗಿಸಿದವರು, ಜ್ಞಾನಿ, ಸಂಘಟಕ, ಸಮಾಜ ಸುಧಾರಕರು. ನಾಲ್ಕು ವೇದಗಳನ್ನು ಕರಗತ ಮಾಡಿಕೊಂಡವರು.

ತಮ್ಮ ೧೨ನೇ ವಯಸ್ಸಿಗೆ ಸರ್ವಶಾಸ್ತ್ರ ಪಂಡಿತರು. ೧೬ನೇ ವಯಸ್ಸಿಗೆ ಭಾಷ್ಯವನ್ನು ಬರೆದ ಜ್ಞಾನಿಗಳು. ಮನುಕುಲದ ಉದ್ಧಾರಕ್ಕಾಗಿ ಬಂದ ಭಗವಂತನ ಅವತಾರವೇ ಇವರು. ಧರ್ಮ ಸ್ಥಾಪನೆಗಾಗಿ ತ್ಯಾಗ, ವೈರಾಗ್ಯ, ಆದರ್ಶಪ್ರಾಯರಾಗಿ ಮೆರೆದವರು. ಮೌಲ್ಯಯುತವಾದ, ಸಾರವತ್ತಾದ ಧರ್ಮಾಚರಣೆಯ ತತ್ವಗಳು, ಉಪನಿಷತ್ತಿನ ಸಾರವನ್ನು ಲೋಕಕ್ಕೆ ನೀಡಿದ ಮಹಾನುಭಾವರು.

ಮಠಾಧಿಪತಿಗಳು ಧರ್ಮದ  ಚೌಕಟ್ಟಿನಲ್ಲಿ ಉತ್ತಮ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದವರು. ಧಾರ್ಮಿಕ ಪ್ರತಿ ನಿಧಿಗಳಾಗಿ ದುಡಿಯಬೇಕು, ಚಿಂತನ ಮಂಥನ ಮಾಡಬೇಕು, ಧರ್ಮ ಬೋಧನೆ ಮಾಡಬೇಕು ಎಂದವರು. ಕೇವಲ ೩೨ ವರುಷಗಳ ಜೀವಿತಾವಧಿಯಲ್ಲಿ ಭಾರತದ ಉದ್ದಗಲ ಸಂಚರಿಸಿ, ದೇಶದ ಭಾವೈಕ್ಯತೆಗೆ, ಧರ್ಮಕ್ಕೆ ಭದ್ರ ಬುನಾದಿಯನ್ನು ಹಾಕಿದ ಘನ ಮಹಿಮರು. ಮನುಕುಲಕ್ಕೆ ಅತ್ಯಂತ ಉನ್ನತ ಜ್ಞಾನವನ್ನು ನೀಡಿದ ಮಹಿಮರು. ಇಡೀ ಭಾರತದೇಶವನ್ನು ಧರ್ಮ ಮಾರ್ಗದಲ್ಲಿ ಒಗ್ಗೂಡಿಸುವುದು ಸಾಹಸವೇ ಸರಿ, ಅದೂ ಅಷ್ಟು ಚಿಕ್ಕ ವಯಸ್ಸಿಗೆ. ಒಂದೆಡೆ ಸತ್ಯಾನ್ವೇಷಣೆ, ಇನ್ನೊಂದೆಡೆ ಧರ್ಮದ ಅಡಿಗಟ್ಟು, ಎರಡನ್ನೂ ಸಾಧಿಸಿದವರು.

ಹಿಂದೂ ಧರ್ಮಕ್ಕೆ ಸತ್ಯಯುಗದಲ್ಲಿ ಬ್ರಹ್ಮ ದೇವ, ತ್ರೇತಾಯುಗದಲ್ಲಿ ವಸಿಷ್ಠರು, ದ್ವಾಪರದಲ್ಲಿ ವ್ಯಾಸರು, ಕಲಿಯುಗದಲ್ಲಿ ಬುದ್ಧ-ಶಂಕರ-ವಿವೇಕಾನಂದರು ಮಾರ್ಗದರ್ಶಿಗಳು. ಶೃಂಗೇರಿ, ಕಾಶ್ಮೀರ, ಪುರಿ, ದ್ವಾರಕಾಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಶಿಷ್ಯರೆಂದರೆ ಸದ್ಗುರು ಸೇವಾತತ್ಪರರಾಗಿರಬೇಕು, ಸಾಧಕರಾಗಿರಬೇಕು, ಭಕ್ತಿಯಿಂದ ಆರಾಧನೆ ಮಾಡುವವರಾಗಿರಬೇಕು ಮುಖ್ಯವಾಗಿ ನಿಷ್ಠೆ ಇರಬೇಕು. ಸಕಲ ವ್ಯವಹಾರಗಳಿಂದ ದೂರವಿದ್ದು, ಎಲ್ಲ ಭೋಗಲಲಾಸೆಗಳನ್ನು ತ್ಯಜಿಸಿ, ಅಹಂಕಾರವನ್ನು ಬಿಟ್ಟವರು, ವೇದಾಂತ ಚಿಂತಕರು, ಆತ್ಮಾನು ಸಂಧಾನಮಾಡುವವರು, ಮುಕ್ತಿ, ಬ್ರಾಹ್ಮೀಸ್ಥಿತಿ, ಕೈವಲ್ಯ ಅಥವಾ ಅಮೃತತ್ವ  ಇರುವಂಥವನೇ ಯತಿವರೇಣ್ಯ ಎನಿಸಿಕೊಳ್ಳಲು ಯೋಗ್ಯನು.

*ನ ಜಾಯತೇ ಮ್ರಿ ಯತೇವಾ*

*ಕದಾಚಿನ್ನಾಹಂ ಭೂತ್ವಾ ಭವಿತಾವಾನ ಭೂಯಃ/*

*ಅಜೋ ನಿತ್ಯಃ ಶಾಶ್ವತೋ* *ಯಂ ಪುರಾಣೋ*

*ನಹನ್ಯತೇ ಹನ್ಯಮಾನೇ ಶರೀರೇ//*

ಈ ಆತ್ಮವು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಶರೀರ ಸತ್ತರೂ ಆತ್ಮ ಸಾಯುವುದಿಲ್ಲ. ಆತ್ಮವನ್ನು ಆತ್ಮಾವಲೋಕನ ಮಾಡಿ ಅರಿಯಿರಿ, ಅದುವೇ ಪರಮಾತ್ಮ.ಈ ಜಗತ್ತಿಗೆ ತಂದೆ ಈಶ್ವರ. ಅವನ ಅನುಗ್ರಹ ಬೇಕೇ ಬೇಕು. ಧರ್ಮ ಈಶ್ವರನ ಕಟ್ಟಳೆ. ಧರ್ಮವನ್ನು ಪಾಲಿಸಿದರೆ ಈಶ್ವರ ಕೃಪೆಗೆ ಒಳಗಾಗುತ್ತೇವೆ. ಎಲ್ಲಿ ‘ಆತ್ಮಜ್ಞಾನ ಇದೆಯೋ ಅಲ್ಲಿ ಮೋಕ್ಷ, ಮುಕ್ತಿ ಖಂಡಿತ’ ಎಂದು ಸಾರಿದರು. ಇಂಥ ಮಹಿಮರಾದ ಶ್ರೀ ಆದಿ ಶಂಕರಾಚಾರ್ಯರು ಎಲ್ಲಾ ಯತಿಗಳಿಗೂ ಮೂಲಪುರುಷರು. ಭಾಷ್ಯಕಾರ ಶ್ರೀ ಶಂಕರರಿಗೆ ನಮೋ ನಮಃ

-ರತ್ನಾ ಕೆ.ಭಟ್, ತಲಂಜೇರಿ

(ಆಕರ ಗ್ರಂಥ; ಉಪದೇಶಾಮೃತ ಮತ್ತು ವಂದೇ ಶಂಕರ ಸದ್ಗುರುಮ್)