ಆರ್ ಸಿ ಬಿಯ ಐಪಿಎಲ್ ಜಯದ ಸಂಭ್ರಮ ಕಸಿದ ಕಾಲ್ತುಳಿತ

೨೦೨೫ ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ಮೊತ್ತಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ತಂಡದ ೧೮ ವರ್ಷಗಳ ಸುದೀರ್ಘ ಕನಸು ನನಸಾಗಿದೆ. ಇದು ಕಳೆದ ೧೮ ವರ್ಷಗಳಿಂದಲೂ ಬೆಂಗಳೂರು ತಂಡವನ್ನು ಬೆಂಬಲಿಸಿಕೊಂಡುಬಂದಿದ್ದ ಬಂದಿದ್ದ ಕರ್ನಾಟಕ ಸೇರಿದಂತೆ ವಿಶ್ವಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು. ಆದರೆ ಈ ಸಂಭ್ರಮ ಒಂದೇ ದಿನದಲ್ಲಿ ಕರಗಿ ಹೋಯಿತು. ಆರ್ಸಿಬಿಯ ಅಭಿಮಾನಿಗಳು ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಬಲಿಯಾಗಿದ್ದರಿಂದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕಾಲ್ತುಳಿತ ಪ್ರಕರಣಗಳು ನಡೆದಿರಲಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಸರ್ಕಾರ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. ಕಾಲ್ತುಳಿತ ವಿಷಯದ ಬಗ್ಗೆ ರಾಜಕೀಯ ಜಟಾಪಟಿಯೂ ನಡೆದಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶಿಸಿದೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ.
೧೮ ವರ್ಷಗಳ ಬಳಿಕ ಆರ್ಸಿಬಿ ಐಪಿಎಲ್ ಕಪ್ ಗೆಲ್ಲುವ ಮೂಲಕ ಪ್ರಪಂಚಾದ್ಯಂತ ಸುದ್ದಿ ಮಾಡಿತ್ತು. ಇದಾದ ಒಂದೇ ದಿನಕ್ಕೆ ಕಾಲ್ತುಳಿತ ದುರಂತ ನಡೆದು ದೇಶಾದ್ಯಂತ ಸುದ್ದಿಯಾಯಿತು. ಈ ಹಿಂದೆ ೧೯೮೧ರಲ್ಲಿ ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ದುರಂತ ನಡೆದಿತ್ತು. ಅಂದು ಕಾಲ್ತುಳಿತ ಮತ್ತು ಬೆಂಕಿಗೆ ೯೨ ಜನ ಬಲಿಯಾಗಿದ್ದರು. ೪೪ ವರ್ಷಗಳ ಬಳಿಕ ಮತ್ತೊಂದು ಘೋರ ಘಟನೆ ಬೆಂಗಳೂರಿನಲ್ಲಿ ನಡೆದು ಹೋಗಿದೆ. ಈ ಘಟನೆ ನಡೆಯಬಾರದಿತ್ತು. ಕ್ರಿಕೆಟ್ ಎಂದರೆ ನಮ್ಮ ದೇಶದ ಜನರಿಗೆ ಹುಚ್ಚು ಅಭಿಮಾನ. ಅದರಲ್ಲೂ ಆರ್ಸಿಬಿ ತಂಡಕ್ಕೆ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚೇ ಎನ್ನಬಹುದು. ಆರ್ಸಿಬಿ ಗೆಲ್ಲಲಿ, ಸೋಲಲಿ ಎಂದೂ ಅಭಿಮಾನಿಗಳು ತಮ್ಮ ತಂಡವನ್ನು ಬಿಟ್ಟುಕೊಟ್ಟವರಲ್ಲ. ಇಂಥ ಅಭಿಮಾನಿಗಳಿಗೆ ತಮ್ಮ ತಂಡ ಮೊದಲ ಬಾರಿಗೆ ಕಪ್ ಗೆದ್ದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಇದರ ಪರಿಣಾಮವೇ ತಮ್ಮ ತಂಡವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಜನ ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಆದ ಕಾಲ್ತುಳಿತ, ನೂಕುನುಗ್ಗಲು ಕಪ್ಪುಚುಕ್ಕಿಯಾಗಿ ಉಳಿಯಿತು. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಹಾಗೆಯೇ ಇದು ಮುಂದೆಂದೂ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸುವ ಪಾಠವಾಗಲಿ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೫-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ