ಇಂತವರ ಇತಿಹಾಸ ನಮಗೆಲ್ಲೂ ಸಿಗಲೇ ಇಲ್ಲವಲ್ಲ....!

ಇಂತವರ ಇತಿಹಾಸ ನಮಗೆಲ್ಲೂ ಸಿಗಲೇ ಇಲ್ಲವಲ್ಲ....!

“ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ  ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. ಅಲ್ಲಿ ಚಾಪೆ ಕಂಬಳಿಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ  ಅಜ್ಞಾತ ದ್ವೀಪದಲ್ಲಿ ಕೊಳೆಯುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಹೇಗೆ ದೊರಕೀತು..? ಎಂಬ ಚಿಂತೆ ಕಂಬಳಿ ಚಾಪೆಯ ಚಿಂತೆಯನ್ನು  ದೂರ ಮಾಡಿತ್ತು. ಹೇಗೂ ಆಯಾಸದಿಂದ ಕಲ್ಲು ಚಪ್ಪಡಿಯ ಮೇಲೆ ಒರಗಿದಂತೆಯೇ ನಿದ್ದೆ ಬಂದಿತ್ತು. ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಒಬ್ಬ ಗಾರ್ಡ್ ಕಂಬಳಿ ತೆಗೆದುಕೊಂಡು ಬಂದು ಏನೊಂದೂ ಮಾತಾಡದೆ ಮಲಗಿದ್ದವರ ಮೇಲೆಸೆದು ಹೋದ. 

ಸೂರ್ಯೋದಯದ ನಂತರ ತಿನ್ನಲು ನನಗೆ ಕಿಚಡಿ ದೊರಕಿತು. ಸ್ವಲ್ಪ ಸಮಯದ ನಂತರ ಕಮ್ಮಾರ ಬಂದಿದ್ದ. ಕೈಗಳಿಗೆ ತೊಡಿಸಿದ ಸಂಕೋಲೆಯನ್ನು ತುಂಡರಿಸುವಾಗ ಕೈಯ ಚರ್ಮವೇ ಕಿತ್ತುಬಂದಿತ್ತು. ಕಾಲಿನ ಬೇಡಿ ತುಂಡರಿಸುವಾಗಂತೂ ಸುತ್ತಿಗೆ ಏಟು ಕಾಲಿನ ಗಂಟಿಗೆ ಬಡಿದಿತ್ತು. ಒಮ್ಮೆಯಂತೂ ನೋವಿನಿಂದ ತಡೆಯಲಾರದೆ ಹೇಳಿದೆ  "ಕಾಲಿನ ಮೇಲೆಯೇ ಸುತ್ತಿಗೆ ಬಡಿಯುತ್ತಿದ್ದೀಯಲ್ಲಾ .. ನೀನೇನು ಕುರುಡನೇ..?"

"ಕಾಲೇನು? ನಿನ್ನ ಎದೆಗೂ ಬಡಿಯಬಲ್ಲೆ.". ಎಂದು ದರ್ಪದಿಂದ ಹೇಳಿದನವ.

ನನಗೆ ಕೋಪ ತಡೆಯಲಾಗಲಿಲ್ಲ. ತಲೆಯೆತ್ತಿ ಅವನ ಮುಖಕ್ಕೆ ಉಗುಳಿದೆ..! "ಮಹಿಳೆಯರಿಗೆ ಗೌರವ ಕೊಡಲು ಕಲಿತುಕೋ" ಎಂದೆ.  

ಜೈಲರನೂ ಅವರೊಂದಿಗಿದ್ದ. ಅವನು ದನಿ ಎತ್ತರಿಸಿ ಹೇಳಿದ "ನಿನ್ನನ್ನು ಬಿಡುಗಡೆ ಮಾಡಲಾಗುವುದು. ಆದರೆ ನಿನ್ನ ನೇತಾಜಿ ಸುಭಾಷ್ ಎಲ್ಲಿದ್ದಾರೆ ಎಂದು ಹೇಳಿದರೆ ಮಾತ್ರ."

"ಅವರು ವಿಮಾನ ದುರ್ಘಟನೆಯಲ್ಲಿ ತೀರಿಕೊಂಡರು." ನಾನು ಉತ್ತರಿಸಿದೆ. ಪ್ರಪಂಚಕ್ಕೆಲ್ಲಾ ತಿಳಿದಿದೆ. ನಿನಗೆ ತಿಳಿದಿಲ್ಲವೇ ?"

"ಇಲ್ಲ.ನೇತಾಜಿ ಬದುಕಿದ್ದಾರೆ. ನೀನು ಸುಳ್ಳು ಹೇಳುತ್ತಿರುವೆ." ಜೈಲರ್ ಅಬ್ಬರಿಸಿದ.

"ಹೌದು ನೇತಾಜಿ ಬದುಕಿದ್ದಾರೆ..!"

"ಎಲ್ಲಿ ಬೇಗ ಹೇಳು..?"

"ನನ್ನ ಹೃದಯದಲ್ಲಿ..!"

ನನ್ನ ಮಾತನ್ನು ಕೇಳಿದ ಜೈಲರನಿಗೆ ಸಿಟ್ಟು ತಡೆಯಲಾಗಲಿಲ್ಲ. 

"ನೋಡುತ್ತಿರು.. ನಿನ್ನ ಹೃದಯದಿಂದ ನೇತಾಜಿಯನ್ನು  ಹೊರಗೆಳೆಯುತ್ತೇನೆ." ಎನ್ನುತ್ತಾ ನನ್ನ ಎದೆಗೆ ಕೈ ಹಾಕಿ ತೊಟ್ಟಿದ್ದ ಅಂಗವಸ್ತ್ರವನ್ನು ಹರಿದುಹಾಕಿದ. ನಂತರ ಕಮ್ಮಾರನಿಗೆ ಸನ್ನೆ ಮಾಡಿದ.  

ಕಮ್ಮಾರ ಎಲ್ಲಿಂದಲೋ ತೋಟ ಮಾಲಿಗಳು ಉಪಯೋಗಿಸುವ ದೊಡ್ಡ ಕತ್ತರಿ ಒಂದನ್ನು ತಂದ. ಅದನ್ನು ನನ್ನೆದೆಗೆ ಒತ್ತಿ ಹಿಡಿದು ಬಲ ಸ್ತನವನ್ನು ಕತ್ತರಿಸತೊಡಗಿದ..!

ಕತ್ತರಿ ಹರಿತವಿಲ್ಲದ ಕಾರಣ ಚರ್ಮ ಸಿಲುಕಿ ಕೊಂಡು ರಕ್ತ ಸುರಿಯುತ್ತಾ ಅಸಹನೀಯ ನೋವು ಕೊಡುತ್ತಿತ್ತು.  

ಇನ್ನೊಂದುಕಡೆ ಜೈಲರ್ ನನ್ನ ಕತ್ತನ್ನು ಒತ್ತಿಹಿಡಿದು "ಇನ್ನೊಮ್ಮೆ ಬಾಯಿ ತೆರೆದರೆ ಎರಡು ಸ್ತನಗಳನ್ನೂ ಎದೆಯಿಂದ ಕಿತ್ತು ಹಾಕಲಾಗುವುದು." ಎಂದು ಗರ್ಜಿಸಿದ..!

ಜೈಲರ್ ಮತ್ತೆ  ಚಿಮ್ಮಟದಂತಹ ಆಯುಧದಿಂದ ನನ್ನ ಮೂಗಿನ ಮೇಲೆ ಹೊಡೆಯುತ್ತಾ ಹೇಳಿದ "ಇದನ್ನು ಬೆಂಕಿಯಲ್ಲಿ ಕಾಯಿಸದಿದ್ದುದು ನಿನ್ನ ಭಾಗ್ಯವೆಂದು ತಿಳಿದುಕೋ, ಇಲ್ಲದಿದ್ದರೆ ನಿನ್ನ ಎರಡು ಸ್ತನಗಳು ಎದೆಯಿಂದ ಕಿತ್ತು ಹೋಗಿರುತ್ತಿತ್ತು." ಎನ್ನುತ್ತಾ ಹೊರಟುಹೋದ.

ಇದು ಯಾವುದೋ ಹಾರರ್ ಕಥೆಯಲ್ಲ. ದೇಶಭಕ್ತಿಯನ್ನು ತನ್ನ ರಕ್ತದ ಕಣಕಣದಲ್ಲೂ ತುಂಬಿಕೊಂಡಿದ್ದ ನೀರಾ ಆರ್ಯ ಎಂಬ ಆಜಾದ್ ಹಿಂದ್ ಫೌಜ್ ನ ಝಾನ್ಸಿರಾಣಿ ರೆಜಿಮೆಂಟ್ ನ ಸಿಪಾಯಿ ಬರೆದ ತನ್ನ ಆತ್ಮಕಥೆಯ ಒಂದು ಹಾಳೆ ಅಷ್ಟೇ..!

ತಂದೆಯ ದೇಶಾದ್ಯಂತ ಹರಡಿದ್ದ ವ್ಯಾಪಾರ ಮತ್ತು ಸಂಪತ್ತನ್ನು ಬಿಟ್ಟು ನೀರಾ ಆರ್ಯರ ಸಹೋದರ ಬಸಂತ್ ಕುಮಾರ್ ಕೂಡಾ ನೇತಾಜಿಯವರ ಸೈನ್ಯವನ್ನು ಸೇರಿದ್ದರು. ಈ ಇಬ್ಬರು ಅಣ್ಣ ತಂಗಿಯರ ಜೀವನ ಚರಿತ್ರೆಯನ್ನು ಕಾವ್ಯವಾಗಿ ಲೋಕಗೀತಾ ಗಾಯಕರು ಹಾಡುತ್ತಿದ್ದರೆಂದರೆ ಇವರ ಪರಾಕ್ರಮದ ಅರಿವಾದೀತು..!

ನೀರಾ ಅರ್ಯರ ವಿವಾಹ ಬ್ರಿಟಿಷ್ ಭಾರತದ ಸಿಬಿಐ ಆಫೀಸರ್ ಶ್ರೀಕಾಂತ್ ಜಯರಂಜನ್ ರೊಡನೆ ಆಗಿತ್ತು. ಅದ್ಯಾವುದೋ ಘಳಿಗೆಯಲ್ಲಿ ನೇತಾಜಿಯವರ ಗುಪ್ತಸ್ಥಾನದ ಸುಳಿವು ಶ್ರೀಕಾಂತ್ ಗೆ ತಿಳಿದುಬಿಟ್ಟಿತ್ತು. ಇದನ್ನು ತಿಳಿದ ನೀರಾ ಅರ್ಯರಿಗೆ ನೇತಾಜಿಯವರನ್ನು ಎಚ್ಚರಿಸಲು ಸಮಯವಿರಲಿಲ್ಲ. ಅವರ ಪ್ರಾಣ ಉಳಿಸಿಕೊಳ್ಳಲು ಒಂದೇ ದಾರಿ ಉಳಿದಿತ್ತು. ಅದೇನೇಂದರೆ ತನ್ನ ಪತಿ ಸಿಬಿಐ ಆಫೀಸರ್ ನನ್ನು ಕೊಲ್ಲುವುದು.! ನೇತಾಜಿ ಮತ್ತು ದೇಶದ ಸ್ವಾತಂತ್ರ್ಯಕ್ಕಿಂತಲೂ ಮಿಗಿಲಾದದ್ದು ಯಾವುದೂ ಇಲ್ಲ ಎಂಬ ಯೋಚನೆ ಬಂದದ್ದೇ ತಡ, ಪತಿ ಶ್ರೀಕಾಂತ್ ಜಯರಂಜನ್ ನನ್ನು ಕೊಂದೇಬಿಡುತ್ತಾರೆ ಶಿಸ್ತಿನ ಸಿಪಾಯಿ ನೀರಾ ಆರ್ಯ

ಸ್ವರಾಜ್ ಹಿಂದ್ ಫೌಜ್ ನ ಸಮರ್ಪಣೆಯ ನಂತರ ಕೆಂಪುಕೋಟೆಯಲ್ಲಿ ಮೊಕದ್ದಮೆ ನಡೆದು ಎಲ್ಲ ಬಂಧಿತ ಸೈನಿಕರನ್ನು ಬಿಡುಗಡೆ ಮಾಡಲಾಯಿತು. ಆದರೆ ತನ್ನ ಪತಿಯ ಹತ್ಯೆ ಮಾಡಿದ್ದಕ್ಕಾಗಿ ಕಾಲಾಪಾನಿ ಶಿಕ್ಷೆ ಯನ್ನು ನೀರಾ ಆರ್ಯರಿಗೆ ನೀಡಲಾಯಿತು. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ನೀರಾ ಆರ್ಯ ಹೂ ಮಾರಾಟ ಮಾಡಿ ಜೀವನ ಸಾಗಿಸಿದರು. ಆದರೆ ಯಾವುದೇ ಸರಕಾರಿ ಪಿಂಚಣಿಗಾಗಲಿ ಸಹಾಯಧನಕ್ಕಾಗಿ ಕೈಚಾಚಲೇ ಇಲ್ಲ..! ನೀರಾ ಆರ್ಯರಂತಹ ಮಹಾನ್ ಪರಾಕ್ರಮಿ ದೇಶಪ್ರೇಮಿಗಳು ದೇಶಕ್ಕಾಗಿ ಸಹಿಸಿದ ನೋವು ಕಷ್ಟಗಳನ್ನು ಓದುತ್ತಿರುವಂತೆ ಮೆದುಳು ಸ್ತಬ್ಧಗೊಳ್ಳುತ್ತದೆ. ಮನಸ್ಸು ಮೂಕವಾಗುತ್ತದೆ. ರಕ್ತ ಕುದಿಯತೊಡಗುತ್ತದೆ..! ಇಂತಹ ನೀರಾ ಅರ್ಯರಂಥಹ ಮಹಾನ್ ತ್ಯಾಗಮೂರ್ತಿಗಳನ್ನು ನೆನಪಿಸಿಕೊಂಡರೆ ಸ್ವಾತಂತ್ರ್ಯ ದಿನಾಚರಣೆಗೆ ಮತ್ತು ಮಹಿಳಾದಿವಸಕ್ಕೆ ನಿಜವಾಗಿಯೂ ಅರ್ಥ ಬಂದೀತು..!

ಇಂತವರ ಇತಿಹಾಸ ನಮಗೆಲ್ಲೂ ಸಿಗಲೇ ಇಲ್ಲವಲ್ಲ. ಪ್ರತಿಕ್ರಿಯೆ ಕೊಡುವ ಸರ್ವರಲ್ಲಿ ವಿನಂತಿ ಇದನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ.ನಮ್ಮ ದೇಶದ ಪುಟಗಳಲ್ಲಿ ರಾರಾಜಿಸಿ ನಮ್ಮ ತನು ಮನಗಳಲ್ಲಿ ನೆಲೆಸಬೇಕಾದ ಇಂತಹ ಮಹನೀಯರನ್ನು ಇತಿಹಾಸದಿಂದ ಅಳಿಸಿ ಹಾಕಿದ್ದು ದುರ್ಭಾಗ್ಯವೇ ಸರಿ

(ಸಂಗ್ರಹ ಮಾಹಿತಿ)

-ದೀಪಾ ಉಚ್ಚಿಲ 

ಚಿತ್ರ ಕೃಪೆ: ಇಂಟರ್ನೆಟ್ ತಾಣ