ಇಂತಹ ಅನುಭವ ನಿಮಗೂ ಆಗಿರಬೇಕಲ್ಲವೇ?!

ಕೆಲವರಲ್ಲಿ ನಾನು ನನ್ನ ಸಂತೋಷದ ವಿಷಯ ಹಂಚಿಕೊಳ್ಳಲು ಆರಂಭಿಸಿದಾಗ ತಕ್ಷಣ ಅವರೂ ಅದೇ ಬಗೆಯ ಅವರ ಸಂತೋಷದ ವಿಷಯ ನನ್ನಲ್ಲಿ ಹೇಳುವುದಕ್ಕೆ ಶುರುವಿಡುತ್ತಾರೆ! ನನ್ನ ಕಥೆ ಪೂರ್ಣ ಹೇಳಿ ಮುಗಿಸುವುದಕ್ಕೂ ಬಿಡದೆ ಅವಸರವಸರವಾಗಿ ಆತುರದಿಂದ ಕುದಿಯುವ ಸಾಂಬಾರಿಗೆ ಹೊಗೆಯಾಡುವ ಬಿಸಿ ಬಿಸೀ ಒಗ್ಗರಣೆ ಹೊಯ್ದಂತೆ ಹೇಳಿ ಬಿಡುತ್ತಾರೆ! ಅದೇ ರೀತಿ ನನ್ನ ಕಷ್ಟದ ವಿಷಯ ಹಂಚಿಕೊಳ್ಳುವಾಗಲೂ ತಕ್ಷಣ ಅವರೂ ಅವರ ಕಷ್ಟದ ವಿಷಯ ಹೇಳುತ್ತಾರೆ! ಮತ್ತು ಕೆಲವೊಮ್ಮೆ ನಡುನಡುವೆ ಅಳುವುದನ್ನೂ ಮಾಡಿ ನನ್ನನ್ನು ಇನ್ಯಾವುದೋ ಭಾವನಾ ಲೋಕಕ್ಕೆ ಎಳೆದೊಯ್ಯುತ್ತಾರೆ! ಆದರೆ ಅವರಾಗಿ ಎಂದೂ ಎಂತದೂ ಹೇಳುವುದಿಲ್ಲ! ಎಂದೂ ಮಾತು ಪ್ರಾರಂಭಿಸುವುದಿಲ್ಲ! ಒಮ್ಮೆ ನಾನು ಬಾಯಿ ತೆರೆದರೆ ಸಾಕು ಅವರ ಸಂಪೂರ್ಣ ಇತಿಹಾಸ ಮಂಡನೆ ಮಾಡಿ ಕೊನೆಯಲ್ಲಿ ನಾನು ಯಾವ ಉದ್ದೇಶ ಇಟ್ಟುಕೊಂಡು ಅವರಲ್ಲಿ ಮಾತು ಆರಂಭಿಸಿದೆನೋ ಆ ಉದ್ದೇಶವೇ ನನಗೆ ಮರೆತು ಹೋಗುವಂತೆ ಆಗಿರುತ್ತದೆ!
ಇಂತಹ ಅನುಭವ ನಿಮಗೂ ಆಗಿರಬೇಕಲ್ಲವೇ?! ನನ್ನವರು ಕೆಲವರ ಇಂತಹ ಅಭ್ಯಾಸ ಒಳ್ಳೆಯದೋ ಕೆಟ್ಟದೋ ಎಂಬ ಬಗ್ಗೆ ನಾನೇನನ್ನೂ ಇಲ್ಲಿ ಹೇಳದೆ ನಿಮ್ಮ ನಿಮ್ಮ ವಿವೇಚನೆಯ ತೀರ್ಮಾನಕ್ಕೆ ಬಿಡುತ್ತೇನೆ! ಆದರೆ ನನಗಂತೂ ಅಂತವರು ತುಂಬಾ ಸ್ವಾರ್ಥಿಗಳು ಹಾಗೂ ಸಂಕುಚಿತ ಮನೋಭಾವ ಉಳ್ಳವರು ಅಂತ ಅನ್ನಿಸುತ್ತಿರುತ್ತದೆ. ನನ್ನ ಅನಿಸಿಕೆಯೂ ತಪ್ಪಿರಬಹುದೆಂತಲೂ ಕೆಲವೊಮ್ಮೆ ನಾನೂ ಯೋಚಿಸುವುದಿದೆ! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ
(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ